ನಾಳೆಯೇ ಅವನನ್ನು ಮನೆಗೆ ಕಳಿಸಿ: ಸಹ ಆಟಗಾರನ ಮೇಲೆ ಕಿಡಿಕಾರಿದ್ದ ಧೋನಿ..! ರೋಚಕ ಸ್ಟೋರಿ ಬಿಚ್ಚಿಟ್ಟ ಅಶ್ವಿನ್

By Naveen KodaseFirst Published Jul 13, 2024, 1:05 PM IST
Highlights

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಹ ಆಟಗಾರನ ಮೇಲೆ ಕಿಡಿಕಾರಿದ ಇಂಟ್ರೆಸ್ಟಿಂಗ್ ಸಂಗತಿಯನ್ನು ರವಿಚಂದ್ರನ್ ಅಶ್ವಿನ್, ತಮ್ಮ ಪುಸ್ತಕದಲ್ಲಿ ಬಿಚ್ಚಿಟ್ಟಿದ್ದಾರೆ. ಈ ಕುರಿತಾದ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.

ನವದೆಹಲಿ: ಭಾರತದ ಹಿರಿಯ ಸ್ಪಿನ್ನರ್ ಆರ್.ಅಶ್ವಿನ್ 'ಐ ಹ್ಯಾವ್ ದಿ ಸ್ಟೇಟ್ಸ್-ಎ ಕುಟ್ಟಿ ಕ್ರಿಕೆಟ್ ಸ್ಟೋರಿ' ಎನ್ನುವ ಹೆಸರಿನ ತಮ್ಮ ಆತ್ಮಕಥನವನ್ನು ಬಿಡುಗಡೆಗೊಳಿ ಸಿದ್ದು, ತಮ್ಮ ಕ್ರಿಕೆಟ್ ಬದುಕಿನ ಹಲವು ರೋಚಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. 

ಎಂ.ಎಸ್.ಧೋನಿಯೊಂದಿಗೆ ಪ್ರಸಂಗವೊಂದನ್ನು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿರುವ ಅಶ್ವಿನ್, ಧೋನಿ ಆಟದ ನಡುವೆಯೂ ಹೇಗೆ ತಮ್ಮ ಎಲ್ಲ ಸಹ ಆಟಗಾರರ ಮೇಲೆ ಕಣ್ಣಿಡುತ್ತಿದ್ದರು ಎನ್ನುವುದನ್ನು ಬರೆದಿದ್ದಾರೆ. ತಮ್ಮ ಪುಸ್ತಕದ 184ನೇ ಪುಟದಲ್ಲಿ ಶ್ರೀಶಾಂತ್ ಮೇಲೆ ಧೋನಿ ಕೆಂಡಾಮಂಡಲವಾಗಿದ್ದ ವಿಚಾರವನ್ನು ಅಶ್ವಿನ್ ಬಹಿರಂಗ ಪಡಿಸಿದ್ದಾರೆ. 2010ರಲ್ಲಿ ದ.ಆಫ್ರಿಕಾ ಪ್ರವಾಸದ ವೇಳೆ ಪಂದ್ಯ ವೊಂದರಲ್ಲಿ ಶ್ರೀಶಾಂತ್ ಮೀಸಲು ಆಟಗಾರರಾಗಿದ್ದರು. ಉಳಿದ ಮೀಸಲು ಆಟಗಾರರ ಜೊತೆ ಡಗೌಟ್‌ನಲ್ಲಿ ಕೂರುವಂತೆ ಶ್ರೀಶಾಂತ್‌ಗೆ ಧೋನಿ ಸೂಚಿಸಿದ್ದರು. ಆದರೆ ಶ್ರೀಶಾಂತ್, ಡ್ರೆಸ್ಸಿಂಗ್ ಕೋಣೆಯಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು. 

Latest Videos

ಭಾರತ-ಜಿಂಬಾಬ್ವೆ 4ನೇ ಟಿ20 ಪಂದ್ಯ: ಸರಣಿ ಜಯದ ಕಾತರದಲ್ಲಿ ಭಾರತ

ಧೋನಿ ಬ್ಯಾಟಿಂಗ್ ಮಾಡುವ ವೇಳೆ ಒಮ್ಮೆ ನೀರು ತಂದುಕೊಟ್ಟೆ. ಇದಾಗಿ ಎರಡು ಓವರ್‌ ಬಳಿಕ ಮತ್ತೆ ನಾನು ತೆಗೆದುಕೊಂಡು ಹೋಗಿ ಧೋನಿಗೆ ನೀಡಿದೆ. ಮತ್ತೆ ಮತ್ತೆ ನಾನೇ ನೀರು ತಂದು ಧೋನಿಗೆ ಕೊಡುತ್ತಿದ್ದೆ. ಬಹುಶಃ ನಾನು ಧೋನಿಗೆ ನೀರು ತಂದು ಕೊಟ್ಟಷ್ಟು, ಮತ್ತ್ಯಾರು ಕೊಟ್ಟಿಲ್ಲ ಅನಿಸತ್ತೆ. ಡ್ರಿಂಕ್ಸ್ ಬ್ರೇಕ್ ವೇಳೆಗೆ ಧೋನಿ, ಎಲ್ಲಿ ಶ್ರೀ ಎಂದರು ಎಂದು ಅಶ್ವಿನ್ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. 

ಡ್ರಿಂಕ್ಸ್ ವೇಳೆ ಶ್ರೀಶಾಂತ್ ಎಲ್ಲಿ ಎಂದು ಕೇಳಿದರು. ಡ್ರೆಸಿಂಗ್ ರೂಂನಲ್ಲಿದ್ದಾರೆ ಎಂದೆ. ಆಗ ಶ್ರೀಶಾಂತ್‌ಗೆ ಮೀಸಲು ಆಟಗಾರರ ಜತೆ ಕೂರುವಂತೆ ಹೇಳು ಎಂದು ಹೇಳಿದ್ದರು. ಇದಾದ ಬಳಿಕವೂ ಶ್ರೀಶಾಂತ್ ಮೀಸಲು ಆಟಗಾರರ ಜತೆ ಕುಳಿತಿರಲಿಲ್ಲ ಎನ್ನುವುದನ್ನು ಗಮನಿಸಿದ ಧೋನಿ, ಆತನಿಗೆ ಇಲ್ಲಿ ಇರುವುದು ಇಷ್ಟವಿಲ್ಲ ಎಂದೆನಿಸುತ್ತಿದೆ, ರಂಜೀಬ್ ಸರ್ (ತಂಡದ ಮ್ಯಾನೇಜರ್)ಗೆ ಶ್ರೀಶಾಂತ್‌ರನ್ನು ನಾಳೆಯೇ ಭಾರತಕ್ಕೆ ವಾಪಸ್ ಕಳುಹಿಸಿ ಎಂದು ಹೇಳು ಎಂದು ನನಗೆ ಧೋನಿ ಸೂಚಿಸಿದ್ದರು' ಎಂದು ಅಶ್ವಿನ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ದಿಗ್ಗಜ ಬೌಲರ್‌ ಜೇಮ್ಸ್‌ ಆ್ಯಂಡರ್‌ಸನ್‌ ಟೆಸ್ಟ್‌ ವೃತ್ತಿ ಬದುಕು ಮುಕ್ತಾಯ..!

ಆಗ ನಾನು ಧೋನಿ ಮಾತು ಕೇಳಿ ಏನು ಪ್ರತಿಕ್ರಿಯೆ ನೀಡಬೇಕು ಎನ್ನುವುದನ್ನು ತಿಳಿಯದೇ ಅವಕ್ಕಾಗಿ ನಿಂತೆ. ಆಗ ಧೋನಿ, ಏನಾಯ್ತು? ನಿನಗೆ ಇಂಗ್ಲಿಷ್‌ನಲ್ಲಿ ಹೇಳಿದ್ದು ಅರ್ಥವಾಗಲಿಲ್ಲವಾ ಅಥವಾ? ಎಂದು ಪ್ರಶ್ನಿಸಿದರು ಎಂದು ಅಶ್ವಿನ್ ತಮ್ಮ ಪುಸ್ತಕದಲ್ಲಿ ಆ ಘಟನೆಯನ್ನು ಮೆಲುಕು ಹಾಕಿದ್ದಾರೆ.

ಧೋನಿ ಹೀಗೆ ಹೇಳಿದ್ದಾಗಿ ಶ್ರೀಶಾಂತ್‌ಗೆ ತಿಳಿಸಿದ ತಕ್ಷಣವೇ ಬೆಚ್ಚಿಬಿದ್ದು ಕೇರಳ ವೇಗಿ ಮೀಸಲು ಆಟಗಾರರು ಇರುವ ಜಾಗಕ್ಕೆ ಓಡೋಡಿ ಬಂದರು ಎಂದು ರವಿಚಂದ್ರನ್ ಅಶ್ವಿನ್ ಇಂಟ್ರೆಸ್ಟಿಂಗ್ ಸ್ಟೋರಿ ಬಿಚ್ಚಿಟ್ಟಿದ್ದಾರೆ.
 

click me!