
ಬೆಂಗಳೂರು (ಜೂನ್ 6): ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ಬ್ಯಾಟ್ಸ್ ಮನ್ ಗಳು ವೈಫಲ್ಯ ಕಂಡ ಹಿನ್ನಲೆಯಲ್ಲಿ ಕರ್ನಾಟಕ (Karnataka) ತಂಡ 2021-22ರ ಸಾಲಿನ ರಣಜಿ ಟ್ರೋಫಿ (Ranaji Trophy) ದೇಶೀಯ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ (Quarter Final) ಪಂದ್ಯದಲ್ಲಿ ಉತ್ತರ ಪ್ರದೇಶ (Uttar Pradesh) ವಿರುದ್ಧ ಸಾಧಾರಣ ಮೊತ್ತಕ್ಕೆ ಕುಸಿಯುವ ಹಾದಿಯಲ್ಲಿದೆ.
ಆಲೂರಿನ ಕೆಎಸ್ ಸಿಎ ಮೈದಾನದಲ್ಲಿ ಸೋಮವಾರ ಆರಂಭಗೊಂಡ ಪಂದ್ಯಕ್ಕೆ ಮಳೆ ಕೆಲ ಸಮಯ ಅಡ್ಡಿಪಡಿಸಿತು. ಉತ್ತರ ಪ್ರದೇಶದ ತಂಡ್ ನಾಯಕ ಕರ್ಣ್ ಶರ್ಮ ಟಾಸ್ ಗೆದ್ದು ಬೌಲಿಂಗ್ ಅಯ್ಕೆ ಮಾಡಿಕೊಂಡಿದ್ದನ್ನು ಸರ್ಮಥಿಸುವಂತೆ ಸ್ಪಿನ್ನರ್ ಸೌರಭ್ ಕುಮಾರ್ (67ಕ್ಕೆ 4) ಹಾಗೂ ಶಿವಂ ಮಾವಿ (40ಕ್ಕೆ 3) ದಾಳಿ ನಡೆಸಿದರು. ಇದರಿಂದಾಗಿ ಮೊದಲ ದಿನದಾಟದ ಅಂತ್ಯಕ್ಕೆ ಕರ್ನಾಟಕ ತಂಡ 7 ವಿಕೆಟ್ ಗೆ 213 ರನ್ ಪೇರಿಸಿದೆ. ಶ್ರೇಯಸ್ ಗೋಪಾಲ್ (26) ಹಾಗೂ ವೈಶಾಖ್ ವಿಜಯ್ ಕುಮಾರ್ (12) ಮಂಗಳವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಭಾನುವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಔಟ್ ಫೀಲ್ಡ್ ಪೂರ್ತಿ ಒದ್ದೆಯಾಗಿದ್ದರಿಂದ 45 ನಿಮಿಷ ತಡವಾಗಿ ಪಂದ್ಯ ಆರಂಭವಾಯಿತು. ಅಚ್ಚರಿ ಎನ್ನುವಂತೆ ಎಡಗೈ ಬ್ಯಾಟ್ಸ್ ಮನ್ ದೇವದತ್ ಪಡಿಕ್ಕಲ್ ಅವರನ್ನು ಕರ್ನಾಟಕ ತಂಡ ಕೈಬಿಟ್ಟಿತ್ತು. ಮಯಾಂಕ್ ಅಗರ್ವಾಲ್ ಜೊತೆಯಾಗಿ ಇನ್ನಿಂಗ್ಸ್ ಆರಂಭಿಸಿದ ರವಿಕುಮಾರ್ ಸಮರ್ಥ್ ಮೊದಲ ವಿಕೆಟ್ ಗೆ 57 ರನ್ ಗಳ ಉತ್ತಮ ಜೊತೆಯಾಟವಾಡಿದ್ದರು. 41 ಎಸೆತಗಳಲ್ಲಿ 1 ಬೌಂಡರಿಯೊಂದಿಗೆ 10 ರನ್ ಬಾರಿಸಿ ತಾಳ್ಮೆಯ ಆಟವಾಡುತ್ತಿದ್ದ ಮಯಾಂಕ್ ಅಗರ್ವಾಲ್, ಮೊದಲ ಒಂದು ಗಂಟೆಯ ಆಟದ ಬಳಿಕ ಶಿವಂ ಮಾವಿ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಯಶವಂತ್ ಬ್ರಾಡೆ ನೀಡಿದ ಕೆಟ್ಟ ತೀರ್ಪಿನಿಂದಾಗಿ ಮಯಾಂಕ್ ಪೆವಿಲಿಯನ್ ಸೇರಿದರು. ಮಾವಿ ಎಸೆತದಲ್ಲಿ ಮಯಾಂಕ್ ಅಗರ್ವಾಲ್ ಅವರ ಮೊಣಕೈಗೆ ತಾಕಿದ ಚೆಂಡು ವಿಕೆಟ್ ಕೀಪರ್ ಧ್ರುವ್ ಜರೇಲ್ ಕೈಸೇರಿತ್ತು. ಆದರೆ, ಅಂಪೈರ್ ಔಟ್ ತೀರ್ಪು ನೀಡಿದ್ದರು. ಇದರಿಂದಾಗಿ ಕೆಲ ಕ್ಷಣ ಮೈದಾನದಲ್ಲೇ ಇದ್ದು ಮಯಾಂಕ್ ಬೇಸರ ವ್ಯಕ್ತಪಡಿಸಿದರು.
ತಂಡದ ಮೊತ್ತ 95 ರನ್ ಆಗಿದ್ದಾಗ ಆಕರ್ಷಕ ಅರ್ಧಶತಕ ಬಾರಿಸಿದ್ ರವಿಕುಮಾರ್ ಸಮರ್ಥ್ (57ರನ್, 81 ಎಸೆತ, 10 ಬೌಂಡರಿ) ಸೌರಭ್ ಕುಮಾರ್ ಗೆ ದಿನದ ಮೊದಲ ವಿಕೆಟ್ ಆಗಿ ನಿರ್ಗಮಿಸಿದರು. 74 ಎಸೆತಗಳಲ್ಲಿ 5 ಬೌಂಡರಿಯೊಂದಿಗೆ 29 ರರನ್ ಬಾರಿಸಿದ್ದ ಅನುಭವಿ ಕರುಣ್ ನಾಯರ್ ಕೂಡ ಇದರ ಬೆನ್ನಲ್ಲೇ ಔಟಾದಾಗ ಕರ್ನಾಟಕ ಆಘಾತ ಕಂಡಿತ್ತು.
ಈ ಹಂತದಲ್ಲಿ ಜೊತೆಯಾದ ಮನೀಷ್ ಪಾಂಡೆ (27ರನ್, 70 ಎಸೆತ, 2 ಬೌಂಡರಿ, 1 ಸಿಕ್ಸರ್) ಹಾಗೂ ಕೆವಿ ಸಿದ್ಧಾರ್ಥ್ (37ರನ್, 84 ಎಸೆತ, 4 ಬೌಂಡರಿ) ನಾಲ್ಕನೇ ವಿಕೆಟ್ ಗೆ ಅಮೂಲ್ಯ 63 ರನ್ ಗಳ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ಮಾಡಿದ್ದರು. ಉತ್ತರ ಪ್ರದೇಶದ ಬೌಲರ್ ಗಳನ್ನು ಎಚ್ಚರಿಕೆಯಿಂದ ಎದುರಿಸಿದ ಈ ಜೋಡಿ ತಂಡದ ಮೊತ್ತವನ್ನು ಏರಿಸುವಲ್ಲಿ ಯಶ ಕಂಡಿತು.
Ranji Trophy: ರಣಜಿ ಟ್ರೋಫಿ ಪಂದ್ಯಕ್ಕೆ ಮಳೆ ಅಡ್ಡಿ
ದಿನದ ಕೊನೇ 10 ಓವರ್ ಗಳಲ್ಲಿ ಕುಸಿದ ಕರ್ನಾಟಕದ: ರಾಜ್ಯ ತಂಡದ ಬ್ಯಾಟಿಂಗ್ ಚೇತರಿಕೆ ಕಾಣುತ್ತಿದ್ದ ಹಂತದಲ್ಲಿ ದಾಳಿಗಿಳಿದ ಸೌರಭ್ ಕುಮಾರ್, ಅನುಭವಿ ಮನೀಷ್ ಪಾಂಡೆ ವಿಕೆಟ್ ಉರುಳಿಸಿದರು. ಮನೀಷ್ ಪಾಂಡೆ ಔಟಾದ ಮೊತ್ತಕ್ಕೆ ವಿಕೆಟ್ ಕೀಪರ್ ಶರತ್ ಶ್ರೀನಿವಾಸ್ ಮೊದಲ ಎಸೆತದ ಶೂನ್ಯ ಗಳಿಸಿದ್ದ ಕರ್ನಾಟಕದ ದೊಡ್ಡ ಇನ್ನಿಂಗ್ಸ್ ಆಸೆಯನ್ನು ಇನ್ನಷ್ಟು ಹಾಳು ಮಾಡಿತು. ವಿಕೆಟ್ ಉರುಳುತ್ತಿದ್ದರೂ, ಒಂದೆಡೆ ಬಂಡೆಗಲ್ಲಿನಂತೆ ನಿಂತು ಬ್ಯಾಟಿಂಗ್ ಮಾಡುತ್ತಿದ್ದ ಕೆವಿ ಸಿದ್ಧಾರ್ಥ್, 6ನೇ ವಿಕೆಟ್ ಗೆ ಶ್ರೇಯಸ್ ಗೋಪಾಲ್ ಜೊತೆ 22 ರನ್ ಜೊತೆಯಾಟವಾಡಿ ಶಿವಂ ಮಾವಿ ಎಸೆತದಲ್ಲಿ ಬೌಲ್ಡ್ ಆದರು.
Ranji Trophy: ಕರ್ನಾಟಕ ಕ್ರಿಕೆಟ್ ತಂಡಕ್ಕೆ ಮಯಾಂಕ್, ಪಡಿಕ್ಕಲ್ ಬಲ
182 ರನ್ ಗೆ 6 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ತಂಡ, 200ರ ಗಡಿ ದಾಟಲು ಇನ್ನೊಂದು ರನ್ ಬೇಕಿದ್ದಾಗ ಕೆ. ಗೌತಮ್ (12 ರನ್, 13 ಎಸೆತ, 1 ಸಿಕ್ಸರ್) ಕೂಡ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಶ್ರೇಯಸ್ ಗೋಪಾf ಹಾಗೂ ವೈಶಾಖ್ ವಿಜಯ್ ಕುಮಾರ್ ತಂಡಕ್ಎ ಹೆಚ್ಚಿನ ಆಘಾತವಾಗದಂತೆ ತಡೆದು ಮೊತ್ತವನ್ನು 200ರ ಗಡಿ ದಾಟಿಸಿದ್ದಲ್ಲದೆ, 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.