Ranji Trophy: ರಣಜಿ ಟ್ರೋಫಿ ಪಂದ್ಯಕ್ಕೆ ಮಳೆ ಅಡ್ಡಿ

By Naveen KodaseFirst Published Jun 6, 2022, 10:31 AM IST
Highlights

* ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ ಪಂದ್ಯಗಳಿಗೆ ಮಳೆ ಅಡ್ಡಿ

* ಕರ್ನಾಟಕ ಕ್ರಿಕೆಟ್ ತಂಡಕ್ಕೆ ಉತ್ತರ ಪ್ರದೇಶ ಸವಾಲು

* ಬೆಂಗಳೂರಿನಲ್ಲೇ ನಡೆಯಲಿವೆ ನಾಕೌಟ್ ಪಂದ್ಯಗಳು

ಬೆಂಗಳೂರು(ಜೂ.06) 2022ನೇ ಸಾಲಿನ ರಣಜಿ ಟ್ರೋಫಿ ದೇಸಿ ಕ್ರಿಕೆಟ್‌ ಟೂರ್ನಿಯ ನಾಕೌಟ್‌ (Ranji Trophy Knock out) ಹಂತಕ್ಕೆ ಸೋಮವಾರ ಚಾಲನೆ ಸಿಗಲಿದ್ದು, ಆತಿಥೇಯ ಕರ್ನಾಟಕ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ಉತ್ತರ ಪ್ರದೇಶ ಸವಾಲನ್ನು ಎದುರಿಸಲಿದೆ. ಈಗಾಗಲೇ ಫೆ.17ರಿಂದ ಮಾರ್ಚ್‌ 16ರ ವರೆಗೆ ಲೀಗ್‌ ಹಂತದ ಪಂದ್ಯಗಳು ನಡೆದಿದ್ದು, ಐಪಿಎಲ್‌ನಿಂದಾಗಿ ನಾಕೌಟ್‌ ಪಂದ್ಯಗಳು ತಡವಾಗಿ ನಡೆಯುತ್ತಿದೆ. ಇದೀಗ ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು, ಟಾಸ್ ಕೊಂಚ ತಡವಾಗಿ ಆಯ್ಕೆಯಾಗಲಿದೆ

ಮನೀಶ್‌ ಪಾಂಡೆ (Manish Pandey) ನಾಯಕತ್ವದ ರಾಜ್ಯ ತಂಡ ಎಲೈಟ್‌ ‘ಸಿ’ ಗುಂಪಿನಲ್ಲಿ ಆಡಿದ 3 ಪಂದ್ಯಗಳಲ್ಲಿ 2ರಲ್ಲಿ ಗೆಲುವು ಸಾಧಿಸಿತ್ತು. ಮೊದಲ ಪಂದ್ಯದಲ್ಲಿ ರೈಲ್ವೇಸ್‌ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡಿದ್ದ ತಂಡ ಬಳಿಕ ಜಮ್ಮು ಮತ್ತು ಕಾಶ್ಮೀರ, ಪುದುಚೇರಿ ವಿರುದ್ಧ ಗೆದ್ದು ಕ್ವಾರ್ಟರ್‌ಗೆ ಲಗ್ಗೆ ಇಟ್ಟಿತ್ತು. ಅತ್ತ ಉತ್ತರ ಪ್ರದೇಶ ಕೂಡಾ ಎಲೈಟ್‌ ‘ಜಿ’ ಗುಂಪಿನಲ್ಲಿ 2 ಪಂದ್ಯಗಳಲ್ಲಿ ಗೆದ್ದು, ಒಂದರಲ್ಲಿ ಡ್ರಾ ಮಾಡಿಕೊಂಡಿತ್ತು. ರಾಜ್ಯ ತಂಡದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಹಲವು ಆಟಗಾರರಿದ್ದು, ತಂಡಕ್ಕೆ ಬಲ ಒದಗಿಸಲಿದೆ. ಕರುಣ್‌ ನಾಯರ್‌, ಮಯಾಂಕ್‌ ಅಗರ್‌ವಾಲ್‌ (Mayank Agarwal), ದೇವದತ್ತ ಪಡಿಕ್ಕಲ್‌ (Devdutt Padikkal) ಸೇರಿದಂತೆ ಪ್ರಮುಖ ಬ್ಯಾಟರ್‌ಗಳ ದಂಡೇ ಇದ್ದು, ಯುವ ಬೌಲರ್‌ಗಳೂ ತಂಡದ ಆಧಾರಸ್ತಂಭ ಎನಿಸಿಕೊಂಡಿದ್ದಾರೆ.

ಸೋಮವಾರವೇ ನಡೆಯಲಿರುವ ಮತ್ತೆ ಮೂರು ಕ್ವಾರ್ಟರ್‌ ಫೈನಲ್‌ನಲ್ಲಿ ಬೆಂಗಾಳ್‌ಗೆ ಜಾರ್ಖಂಡ್‌ ಸವಾಲು ಎದುರಾಗಲಿದ್ದು, 41 ಬಾರಿ ಚಾಂಪಿಯನ್‌ ಮುಂಬೈ ತಂಡ ಉತ್ತರಾಖಂಡ ವಿರುದ್ಧ ಸೆಣಸಾಡಲಿದೆ. ಮತ್ತೊಂದು ಕ್ವಾರ್ಟರ್‌ನಲ್ಲಿ ಪಂಜಾಬ್‌ ಹಾಗೂ ಮಧ್ಯಪ್ರದೇಶ ಮುಖಾಮುಖಿಯಾಗಲಿವೆ. ಕರ್ನಾಟಕ ಈ ಪಂದ್ಯದಲ್ಲಿ ಗೆದ್ದರೆ ಸೆಮೀಸ್‌ನಲ್ಲಿ ಮುಂಬೈ ಅಥವಾ ಉತ್ತರಾಖಂಡ ಸವಾಲು ಎದುರಾಗಲಿದೆ.

IPL Slapgate ನಾನು ತಪ್ಪು ಮಾಡಿದೆ, ಶ್ರೀಶಾಂತ್ ಕಪಾಳಮೊಕ್ಷ ಕುರಿತು ಮೊದಲ ಬಾರಿಗೆ ಹರ್ಭಜನ್ ಮಾತು!

ನಾಲ್ಕು ಕ್ವಾರ್ಟರ್ ಫೈನಲ್‌ ಪಂದ್ಯಗಳ ಪೈಕಿ ಮೊದಲ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಬೆಂಗಾಲ್ ಹಾಗೂ ಜಾರ್ಖಂಡ್‌ ತಂಡಗಳು ಮುಖಾಮುಖಿಯಾಗಿದ್ದು, ಈ ಪಂದ್ಯಕ್ಕೆ ಬೆಂಗಳೂರಿನ ಜಸ್ಟ್‌ ಕ್ರಿಕೆಟ್ ಅಕಾಡೆಮಿ ಆತಿಥ್ಯವನ್ನು ವಹಿಸಿದ್ದು, ಟಾಸ್ ಗೆದ್ದ ಜಾರ್ಖಂಡ ಮೊದಲು ಫೀಲ್ಡಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಮೊದಲ 9 ಓವರ್‌ ಅಂತ್ಯದ ವೇಳೆಗೆ ಜಾರ್ಖಂಡ ವಿಕೆಟ್ ನಷ್ಟವಿಲ್ಲದೇ 27 ರನ್‌ ಗಳಿಸಿದೆ. 

ಇತರೆ 3 ಕ್ವಾರ್ಟರ್‌ ಪಂದ್ಯಗಳು

ಬೆಂಗಾಳ್‌-ಜಾರ್ಖಂಡ್‌

ಮುಂಬೈ-ಉತ್ತರಾಖಂಡ

ಪಂಜಾಬ್‌-ಮಧ್ರ ಪ್ರದೇಶ

ಏಕಕಾಲದಲ್ಲಿ ಒಂದೇ ಕಡೆ ಮೂರು ಪಂದ್ಯ!

4 ಕ್ವಾರ್ಟರ್‌ ಫೈನಲ್‌ ಪಂದ್ಯಗಳಿಗೂ ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಆದರೆ ಬೆಂಗಾಳ್‌-ಜಾರ್ಖಂಡ್‌ ನಡುವಿನ ಪಂದ್ಯ ಹೊರತುಪಡಿಸಿ ಉಳಿದ ಎಲ್ಲಾ 3 ಪಂದ್ಯಗಳು ಆಲೂರು ಎಂಬಲ್ಲಿ ಒಂದೇ ಸ್ಥಳದಲ್ಲಿರುವ 3 ಕ್ರೀಡಾಂಗಣಗಳಲ್ಲಿ ನಡೆಯಲಿವೆ. ಸುಮಾರು 28 ಎಕರೆ ಪ್ರದೇಶದಲ್ಲಿ ಈ ಮೂರು ಕ್ರೀಡಾಂಗಣಗಳಿದ್ದು, ಒಂದಕ್ಕೊಂದು ತುಂಬಾ ಹತ್ತಿರದಲ್ಲೇ ಇದೆ. ಈ ರೀತಿ ಒಂದೇ ಕಡೆ ಏಕಕಾಲದಲ್ಲಿ ಮೂರು ಪಂದ್ಯಗಳು ಅಂತಾರಾಷ್ಟ್ರೀಯ ಮಟ್ಟದಲ್ಲೇ ಮೊದಲ ಬಾರಿ ನಡೆಯುತ್ತಿದೆ ಎಂದು ಹೇಳಲಾಗಿದೆ. ಆಶ್ಚರ್ಯದ ಸಂಗತಿ ಏನೆಂದರೆ ಈ ಮೊದಲು ಇಲ್ಲಿನ ಕ್ರೀಡಾಂಗಣಗಳಲ್ಲಿ ಕೇವಲ 2 ರಣಜಿ ಪಂದ್ಯಗಳು ಮಾತ್ರ ನಡೆದಿವೆ.

click me!