ರಕ್ಷಾಬಂಧನ ವಿಶೇಷ: ಸಹೋದರಿಯರಿಂದಲೇ ಸ್ಟಾರ್‌ ಪ್ಲೇಯರ್‌ಗಳಾದ ಐವರು ಕ್ರಿಕೆಟಿಗರು!

By Santosh NaikFirst Published Aug 11, 2022, 12:10 PM IST
Highlights

ಇಂದು ದೇಶದೆಲ್ಲೆಡೆ ರಾಖಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅದನ್ನು ಸಂಭ್ರಮಿಸುವಲ್ಲಿ ಭಾರತದ ಆಟಗಾರರೂ ಹಿಂದೆ ಬಿದ್ದಿಲ್ಲ. ಇಂದು ತಮ್ಮ ಸಹೋದರಿಯರ ಸಹಾಯ ಹಾಗೂ ಬೆಂಬಲದಿಂದಲೇ ಸ್ಟಾರ್‌ ಆಟಗಾರರಾದ ಐವರು ಕ್ರಿಕೆಟಿಗರ ಬಗ್ಗೆ ಮಾಹಿತಿ ಇಲ್ಲಿದೆ. ಈ ಕ್ರಿಕೆಟಿಗರ ಜೀವನ ರೂಪಿಸುವಲ್ಲಿ ಅವರ ಶ್ರಮದೊಂದಿಗೆ ಅವರ ಸಹೋದರಿಯರ ಬೆಂಬಲ ಕೂಡ ಇದ್ದವು.

ಬೆಂಗಳೂರು (ಆ.11): ಇಂದು ದೇಶದ ಎಲ್ಲೆಡೆ ರಕ್ಷಾಬಂಧನವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಸಹೋದರ-ಸಹೋದರಿಯರ ನಡುವಿನ ಬಾಂಧವ್ಯದ ಸಂಕೇತವಾಗಿ ಕೈಗೆ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ. ಇದರ ನಡುವೆ ಭಾರತ ಕ್ರಿಕೆಟ್‌ ತಂಡದ ಪ್ರಖ್ಯಾತ ಕ್ರಿಕೆಟಿಗರೆನಿಸಿಕೊಂಡಿರುವ ಇವರುಗಳ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಅವರನ್ನು ಕ್ರಿಕೆಟ್‌ ದೇವರು ಎಂದೇ ಕರೆಯುತ್ತಾರೆ. ಇವರಿಗೆ ಮೊದಲ ಬಾರಿಗೆ ಕಾಶ್ಮೀರಿ ಬ್ಯಾಟ್‌ಅನ್ನು ನೀಡಿದ್ದು ಅವರ ಸಹೋದರಿ ಸವಿತಾ. ಇನ್ನ ಹರ್ಭಜನ್‌ ಸಿಂಗ್‌ ಪಾಲಿಗೆ ಅವರ ಐವರು ಸಹೋದರಿಯರೇ ದೊಡ್ಡ ಶಕ್ತಿ. ತನ್ನ ಕ್ರಿಕೆಟ್‌ ಜೀವನಕ್ಕೆ ಆಸರೆಯಾಗಿ ನಿಂತಿದ್ದ ಐವರು ಸಹೋದರಿಯರ ವಿವಾಹವನ್ನು ತಂದೆಯ ಸ್ಥಾನದಲ್ಲಿ ನಿಂತು ಹರ್ಭಜನ್‌ ಸಿಂಗ್‌ ಮಾಡಿದ್ದರು. ಇನ್ನು ಟೀಮ್‌ ಇಂಡಿಯಾ ಕಂಡ ಶ್ರೇಷ್ಠ ನಾಯಕರ ಪೈಕಿ ಒಬ್ಬರಾದ ಎಂಎಸ್ ಧೋನಿಯಲ್ಲಿ ಕ್ರಿಕೆಟ್‌ನ ಶಕ್ತಿ ಇದೆ ಎಂದು ಮೊದಲಿಗೆ ಗುರುತಿಸಿದ್ದೇ ಧೋನಿಯ ಸಹೋದರಿ. ಇಡೀ ಕುಟುಂಬದ ಎದುರು ನಿಂತು ಧೋನಿ ಕ್ರಿಕೆಟರ್‌ ಆಗಬೇಕು ಎಂದು ಧೈರ್ಯದಿಂದ ತಿಳಿಸಿದ್ದರು. ಇನ್ನು ಕಿಂಗ್‌ ಕೊಹ್ಲಿ ಪಾಲಿಗೂ ಆತನ ಸಹೋದರಿ ಭಾವನಾ ದೊಡ್ಡ ಆಸ್ತಿ. ತಂದೆಯ ಸಾವಿನ ಬಳಿಕ, ಕೊಹ್ಲಿ ಪಾಲಿಗೆ ಶಕ್ತಿಯಾಗಿ ನಿಂತಿದ್ದ ಭಾವನಾ, ಇಂದು ಕೊಹ್ಲಿಯ ಎಲ್ಲಾ ವಾಣಿಜ್ಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ. ರಿಷಭ್‌ ಪಂತ್ ಆರಂಭಿಕ ದಿನಗಳಲ್ಲಿ, ಸಹೋದರಿ ಸಾಕ್ಷಿ ದೇಶೀಯ ಪಂದ್ಯಗಳಲ್ಲಿ ಕ್ರೀಡಾಂಗಣಕ್ಕೆ ಭೇಟಿ ನೀಡುವ ಮೂಲಕ ಸಹೋದರನನ್ನು ಪ್ರೋತ್ಸಾಹಿಸುತ್ತಿದ್ದರು.

ಸಚಿನ್‌ ತೆಂಡುಲ್ಕರ್‌: ಕ್ರಿಕೆಟ್ ದೇವರು ಎಂದೇ ಬಿಂಬಿತವಾಗಿರುವ ಸಚಿನ್ ಜೀವನ ತಂಗಿಯ ಪ್ರೀತಿ ಇಲ್ಲದೆ ಅಪೂರ್ಣ. ಅವರ ಸಹೋದರಿಯ ಹೆಸರು ಸವಿತಾ ಮತ್ತು ಅವರು ಸಚಿನ್ ಅವರ ತಂದೆ ರಮೇಶ್ ತೆಂಡುಲ್ಕರ್ ಅವರ ಮೊದಲ ಹೆಂಡತಿಯ ಮಗಳು. ಸಚಿನ್ ಅನೇಕ ಬಾರಿ ತಮ್ಮ ಯಶಸ್ಸನ್ನು ಅವರಿಗೆ ಸಲ್ಲಿಸಿದ್ದಾರೆ. 200 ಟೆಸ್ಟ್ ಪಂದ್ಯಗಳನ್ನು ಆಡಿದ ನಂತರ ಸಚಿನ್ ಕ್ರಿಕೆಟ್‌ಗೆ ವಿದಾಯ ಹೇಳಿದಾಗ, ಅವರು ತಮ್ಮ ಭಾಷಣದಲ್ಲಿ ತಮ್ಮ ಸಹೋದರಿಯ ಬಗ್ಗೆ ಮಾತನಾಡುತ್ತಾ, ನನಗೆ ಮೊದಲು ಬ್ಯಾಟ್‌ ಅನ್ನು ಉಡುಗೊರೆಯಾಗಿ ನೀಡಿದ್ದು ನನ್ನ ಅಕ್ಕ ಸವಿತಾ, ಕಾಶ್ಮೀರಿ ಬ್ಯಾಟ್‌ ಅನ್ನು ನೀಡಿದ್ದರು ಎಂದು ನೆನಪಿಸಿಕೊಂಡಿದ್ದರು. ಅಲ್ಲದೆ, ಸಚಿನ್‌ ಕ್ರಿಕೆಟ್‌ ಪಂದ್ಯದ ಪ್ರತಿ ದಿನವೂ ಆಕೆ ಉಪವಾಸ ಮಾಡುತ್ತಿದ್ದರು. ಮೈದಾನದಲ್ಲಿ ಸಚಿನ್‌ನ ಬ್ಯಾಟ್‌ ಮಿಂಚಬೇಕು ಎನ್ನುವ ಆಸೆ ಅವರದಾಗಿತ್ತು.

ಹರ್ಭಜನ್‌ ಸಿಂಗ್‌: ಟೀಮ್‌ ಇಂಡಿಯಾದ ಮಾಜಿ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌, ಭಾರತ ತಂಡ ಶ್ರೇಷ್ಠ ಸ್ಪಿನ್ನರ್‌ಗಳ ಪೈಕಿ ಒಬ್ಬರು. ಪಂಜಾಬ್‌ ಮೂಲದ ಹರ್ಭಜನ್‌ಗೆ ಐವರು ಸಹೋದರಿಯರು. ಇವರ ಪೈಕಿ ನಾಲ್ವರು ಅಕ್ಕ ಹಾಗೂ ಒಬ್ಬಳು ತಂಗಿ. 1998ರಲ್ಲಿಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಹರ್ಭಜನ್‌ ಕೆಲ ದಿನಗಳಲ್ಲೇ ತಂಡದಿಂದ ಹೊರಬಿದ್ದಿದ್ದರು. ಬಹುಶಃ ಈ ಮಾಹಿತಿ ಹೆಚ್ಚಿವರಿಗೆ ತಿಳಿದಿಲ್ಲ. ತಂಡದಿಂದ ಹೊರಬಿದ್ದ ಈ ಅವಧಿಯಲ್ಲಿ ಕ್ರಿಕೆಟ್‌ಅನ್ನು ಬಿಟ್ಟ ಟ್ರಕ್‌ ಡ್ರೈವರ್‌ ಆಗಲು ಹರ್ಭಜನ್‌ ಬಯಸಿದ್ದರು. ಇದರ ನಡುವೆ 2000 ಇಸವಿಯಲ್ಲಿ ಅವರ ತಂದೆ ಕೂಡ ನಿಧನರಾದರು. ನಂತರ ತಾಯಿ ಹಾಗೂ ಐವರು ಸಹೋದರಿಯರ ಜವಾಬ್ದಾರಿ ಇವರ ಮೇಲೆ ಬಿದ್ದಿತ್ತು.  ಹೀಗಿರುವಾಗ ಕೆನಡಾಕ್ಕೆ ಹೋಗಿ ಟ್ರಕ್ ಓಡಿಸಿ ಹಣ ಸಂಪಾದಿಸಬೇಕು ಎಂದು ನಿರ್ಧರಿಸಿದ್ದ. ಆದರೆ, ಸಹೋದರಿಯ ಸಲಹೆಯ ಮೇರೆಗೆ ತನ್ನ ನಿರ್ಧಾರವನ್ನು ಬದಲಿಸಿದ ಹರ್ಭಜನ್‌ ಕ್ರಿಕೆಟ್‌ ಆಡುವುದನ್ನು ಮುಂದುವರಿಸಿದ್ದರು. 2000ನೇ ಇಸವಿಯಲ್ಲಿ ರಣಜಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾದಲ್ಲಿ ಸ್ಥಾನ ಗಳಿಸಿದ್ದರು. ಆ ನಂತರ ನಡೆದಿದ್ದು ಇತಿಹಾಸ. ಅಂದು ಆತನ ಸಹೋದರಿಯರು ಹರ್ಭಜನ್‌ರನ್ನು ತಡೆಯದೇ ಇದ್ದಿದ್ದರೆ, ಇಂದು ಭಜ್ಜಿಯಂಥ ಶ್ರೇಷ್ಠ ಸ್ಪಿನ್ನರ್‌ ಭಾರತಕ್ಕೆ ಸಿಗುತ್ತಿರಲಿಲ್ಲ.

ಎಂಎಸ್ ಧೋನಿ: ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಹಲವು ದೊಡ್ಡ ಮೈಲಿಗಲ್ಲುಗಳನ್ನು ಸಾಧಿಸಿದೆ. ಮಹಿಯ ಯಶಸ್ಸಿನ ಹಿಂದೆ ಸಹೋದರಿ ಜಯಂತಿ ಅವರ ಪಾತ್ರ ಬಹಳ ದೊಡ್ಡದು. ಒಂದು ಕಡೆ ಧೋನಿ ತಂದೆಗೆ ಆತ ಕ್ರಿಕೆಟಿಗನಾಗುವುದು ಇಷ್ಟವಿರಲಿಲ್ಲ. ಅದೇ ಸಮಯದಲ್ಲಿ, ಧೋನಿ ಸಹೋದರಿ ಜಯಂತಿ ಪ್ರತಿ ಹಿನ್ನಡೆಯಲ್ಲಿಯೂ ತನ್ನ ಸಹೋದರನ ಬೆಂಬಲಕ್ಕೆ ನಿಂತಿದ್ದರು. ಶಾಲಾ ಸಮಯದಲ್ಲಿ, ತಂದೆ ಟೀಮ್ ಇಂಡಿಯಾದ ಮಾಜಿ ನಾಯಕನಿಗೆ ಅಧ್ಯಯನದತ್ತ ಗಮನ ಹರಿಸುವಂತೆ ಕೇಳಿದಾಗ, ಜಯಂತಿ ಅವರು ಆಡುವಂತೆ ಸಲಹೆ ನೀಡುತ್ತಿದ್ದರು. ತನ್ನ ಸಹೋದರಿಯ ನಿರಂತರ ಬೆಂಬಲದೊಂದಿಗೆ, ಮೈದಾನದಲ್ಲಿ ಮಿಂಚಿದ ಎಂಎಸ್‌ಡಿ ಕ್ಯಾಪ್ಟನ್‌ ಕೂಲ್‌ ಎನಿಸಿಕೊಂಡರು. ಮಹಿಯ ಸಹೋದರಿ ಜಯಂತಿ ಇಂದು ಶಾಲಾ ಶಿಕ್ಷಕಿಯಾಗಿದ್ದಾರೆ.

 

Asia Cup T20 ಏಷ್ಯಾಕಪ್‌ ಟೂರ್ನಿಗೆ ಭಾರತ ತಂಡ ಪ್ರಕಟ, ಬುಮ್ರಾ ಔಟ್‌, ರಾಹುಲ್‌ ಉಪನಾಯಕ

ವಿರಾಟ್‌ ಕೊಹ್ಲಿ: ವಿರಾಟ್ ಕೊಹ್ಲಿ ತನ್ನ ಅಕ್ಕ ಭಾವನಾ ಕೊಹ್ಲಿಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆ. 2006 ರಲ್ಲಿ, ವಿರಾಟ್ ಕೇವಲ 18 ವರ್ಷ ವಯಸ್ಸಿನವನಾಗಿದ್ದಾಗ, ಅವರ ತಂದೆ ಬ್ರೈನ್ ಸ್ಟ್ರೋಕ್‌ನಿಂದ ನಿಧನರಾದರು. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ವಿರಾಟ್ ಕ್ರಿಕೆಟ್‌ನ ಮೇಲೆ ಆಸ್ತಿ ಇಲ್ಲದಂತೆ ಇದ್ದರು. ಇದನ್ನು ಗಮನಿಸಿದ ಅಕ್ಕ ಭಾವನಾ ಕೊಹ್ಲಿಗೆ ಪ್ರತಿ ಹೆಜ್ಜೆಯಲ್ಲೂ ಬೆಂಬಲ ನೀಡಿದರು. ಇದನ್ನು ಕೊಹ್ಲಿ ಕೂಡ ಹಲವು ಸಂದರ್ಭದಲ್ಲಿ ಹೇಳಿಕೊಂಡಿದ್ದರು. ತಂದೆಯ ಸಾವಿನ ಬಳಿಕ, ನಾನು ಕ್ರಿಕೆಟಿಗನಾಗಿ ಮುಂದುವರಿಯಲು ಅಕ್ಕ ಭಾವನಾ ಹಾಗೂ ತಾಯಿಯೇ ಕಾರಣ ಎಂದಿದ್ದರು. ಭಾವನಾ ಎಂದಿಗೂಸ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುವುದಿಲ್ಲ. ತನ್ನ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಇರಲು ಇಷ್ಟಪಡುತ್ತಾರೆ. ಕೊಹ್ಲಿಯ ಕ್ರಿಕೆಟ್‌ ಜೀವನ ಮಾತ್ರವಲ್ಲ ಕೊಹ್ಲಿಯ ವಾಣಿಜ್ಯ ವ್ಯವಹಾರವನ್ನೂ ಭಾವನಾ ನೋಡಿಕೊಳ್ಳುತ್ತಾರೆ. ಕೊಹ್ಲಿಯ ಫ್ಯಾಷನ್‌ ಜಗತ್ತಿನ ಎಲ್ಲಾ ವ್ಯವಹಾರಗಳನ್ನು ಭಾವನಾ ನೋಡಿಕೊಳ್ಳುತ್ತಿದ್ದರೆ, ಕೊಹ್ಲಿ ಕ್ರಿಕೆಟ್‌ ಮೈದಾನದಲ್ಲಿ ಬ್ಯುಸಿ ಆಗಿದ್ದಾರೆ.

ಸತತ ವೈಫಲ್ಯಗಳ ನಡುವೆ ವಿರಾಟ್‌ ಕೊಹ್ಲಿಗೆ ಮತ್ತೊಂದು ಶಾಕ್‌!

ರಿಷಭ್‌ ಪಂತ್‌: ತಂದೆಯ ಮರಣದ ನಂತರ ರಿಷಭ್‌ ಪಂತ್‌ಗೆ ದೊಡ್ಡ ಬೆಂಬಲವಾಗಿ ನಿಂತಿದ್ದು ಅವರ ಸಹೋದರಿ ಸಾಕ್ಷಿ.  ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಹರಸಾಹಸ ಪಡುತ್ತಿದ್ದ ಸಮಯದಲ್ಲಿ ಪ್ರತಿ ತವರಿನ ಪಂದ್ಯದ ವೇಳೆ ಸಾಕ್ಷಿ ಸ್ಟೇಡಿಯಂಗೆ ಹೋಗುತ್ತಿದ್ದರು. ಪ್ರೇಕ್ಷಕರ ಗ್ಯಾಲರಿಯಲ್ಲಿ ನಿಂತು ಸಹೋದರನ ಪ್ರತಿ ಆಟಕ್ಕೂ ಚಪ್ಪಾಳೆ ತಟ್ಟುತ್ತಿದ್ದರು. ಟೀಮ್‌ ಇಂಡಿಯಾ ಪ್ಲೇಯರ್‌ ಆದ ಬಳಿಕವೂ ಇದು ಮುಂದುವರಿದಿದೆ.  ಐಪಿಎಲ್ ಮತ್ತು ಟೀಮ್ ಇಂಡಿಯಾ ಪಂದ್ಯಗಳಲ್ಲಿ, ಪ್ರೇಕ್ಷಕರ ಗ್ಯಾಲರಿಯಲ್ಲಿ ಪಂತ್ ಸಹೋದರಿ ಸಹೋದರನನ್ನು ಪ್ರೋತ್ಸಾಹಿಸುವುದನ್ನು ಕಾಣಬಹುದು. ಸೋಷಿಯಲ್ ಮೀಡಿಯಾದಲ್ಲಿ ತನ್ನ ಸಹೋದರನಿಗೆ ಬೆಂಬಲವಾಗಿ ಪೋಸ್ಟ್ ಮಾಡುವುದನ್ನು ಮುಂದುವರಿಸಿದ್ದಾರೆ. ರಿಷಭ್ ಪಂತ್‌ ಪೋಸ್ಟ್‌ಗಳಿಗೆ ಕಾಮೆಂಟ್‌ನಲ್ಲಿಯೇ ಹಲವಾರು ಬಾರಿ ಕಾಲೆಳೆದಿದ್ದಾರೆ.  ಸಹೋದರಿಯ ಬೆಂಬಲವೇ ನನ್ನ ದೊಡ್ಡ ಶಕ್ತಿ ಎಂದು ಪಂತ್ ಪದೇ ಪದೇ ಹೇಳಿದ್ದಾರೆ.

click me!