
ಬೆಂಗಳೂರು: ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಕ್ಯಾಪ್ಟನ್ ಇಶಾನ್ ಕಿಶನ್ರ ಸ್ಫೋಟಕ ಬ್ಯಾಟಿಂಗ್ಗೆ ಬ್ರೇಕ್ ಹಾಕಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫಿಲ್ ಸಾಲ್ಟ್ ಹಿಡಿದ ಒಂದು ಅದ್ಭುತ ಕ್ಯಾಚ್. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಬೆರಗುಗೊಳಿಸಿದ ಈ ಒಂಟಿ ಕೈ ಕ್ಯಾಚ್ನಿಂದಾಗಿ, ಕ್ಯಾಪ್ಟನ್ ಆಗಿ ಮೊದಲ ಪಂದ್ಯದಲ್ಲೇ ಸೆಂಚುರಿ ಬಾರಿಸುವ ಇಶಾನ್ ಕಿಶನ್ರ ಕನಸು ಭಗ್ನವಾಯಿತು.
ಕೇವಲ 37 ಎಸೆತಗಳಲ್ಲಿ 80 ರನ್ ಗಳಿಸಿ ಶತಕದತ್ತ ಸಾಗುತ್ತಿದ್ದ ಇಶಾನ್ ಕಿಶನ್, 16ನೇ ಓವರ್ನಲ್ಲಿ ಔಟಾದರು. ಅಭಿನಂದನ್ ಸಿಂಗ್ ಬೌಲ್ ಮಾಡಿದ ಓವರ್ನ ಕೊನೆಯ ಎಸೆತದಲ್ಲಿ ಕಿಶನ್ ದೊಡ್ಡ ಹೊಡೆತಕ್ಕೆ ಕೈಹಾಕಿದರು. ಆದರೆ ಅವರ ಲೆಕ್ಕಾಚಾರ ತಪ್ಪಿತು. ಬೌಂಡರಿ ಲೈನ್ ಬಳಿ ಗಾಳಿಯಲ್ಲಿ ಹಾರಿ ಫಿಲ್ ಸಾಲ್ಟ್ ಒಂಟಿ ಕೈಯಲ್ಲಿ ಚೆಂಡನ್ನು ಹಿಡಿದುಬಿಟ್ಟರು. ಇದರೊಂದಿಗೆ, ಅಭಿನಂದನ್ ಸಿಂಗ್ ತಮ್ಮ ಐಪಿಎಲ್ ವೃತ್ತಿಜೀವನದ ಮೊದಲ ವಿಕೆಟ್ ಪಡೆದರು.
ಐಪಿಎಲ್ನಲ್ಲಿ ಕ್ಯಾಪ್ಟನ್ ಆಗಿ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಶತಕ ಗಳಿಸಿದ ಎರಡನೇ ಆಟಗಾರನಾಗುವ ಅವಕಾಶವನ್ನು ಇಶಾನ್ ಕಿಶನ್ ಸ್ವಲ್ಪದರಲ್ಲೇ ಕಳೆದುಕೊಂಡರು. ಈ ಹಿಂದೆ, ರಾಜಸ್ಥಾನ್ ರಾಯಲ್ಸ್ ನಾಯಕನಾಗಿ ಸಂಜು ಸ್ಯಾಮ್ಸನ್ ಮಾತ್ರ ಈ ಸಾಧನೆ ಮಾಡಿದ್ದಾರೆ. 2021ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸಂಜು 119 ರನ್ ಗಳಿಸಿ ಈ ದಾಖಲೆ ಬರೆದಿದ್ದರು.
ಇದಕ್ಕೂ ಮುನ್ನ, ಹೈದರಾಬಾದ್ ಇನ್ನಿಂಗ್ಸ್ನ 14ನೇ ಓವರ್ನಲ್ಲಿ ಹೆನ್ರಿಚ್ ಕ್ಲಾಸೆನ್ರನ್ನು ಔಟ್ ಮಾಡಲು ಸಾಲ್ಟ್ ಹಿಡಿದಿದ್ದ ಕ್ಯಾಚ್ ವಿವಾದಕ್ಕೆ ಕಾರಣವಾಗಿತ್ತು. ಬೌಂಡರಿ ಲೈನ್ನಲ್ಲಿ ಕ್ಯಾಚ್ ಹಿಡಿದಾಗ ಸಾಲ್ಟ್ ದೇಹ ಬೌಂಡರಿ ರೋಪ್ಗೆ ತಗುಲಿದೆ ಎಂಬ ಅನುಮಾನವಿತ್ತು. ಆದರೂ, ಟಿವಿ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಕಿಶನ್ರನ್ನು ಔಟ್ ಮಾಡಲು ಸಾಲ್ಟ್ ಹಿಡಿದ ಈ ಕ್ಯಾಚ್, ಈ ಸೀಸನ್ನ ಅತ್ಯುತ್ತಮ ಕ್ಯಾಚ್ಗಳಲ್ಲಿ ಒಂದಾಗಲಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಇನ್ನು 19ನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಜತ್ ಪಾಟೀದಾರ್ ನೇತೃತ್ವದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿಯಾಗಿಯೇ ಶುಭಾರಂಭ ಮಾಡಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡವು ಜೇಕಬ್ ಡಫಿ ಮಾರಕ ದಾಳಿಯ ಹೊರತಾಗಿಯೂ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 201 ರನ್ ಕಲೆಹಾಕುವ ಮೂಲಕ ಆರ್ಸಿಬಿಗೆ ಕಠಿಣ ಸವಾಲು ನೀಡಿತು.
ಇನ್ನು ಗುರಿ ಬೆನ್ನತ್ತಿದ ಆರಂಭಿಕ ತಂಡವು ಆರಂಭದಲ್ಲೇ ಫಿಲ್ ಸಾಲ್ಟ್ ವಿಕೆಟ್ ಕಳೆದುಕೊಂಡಿತಾದರೂ, ಆ ಬಳಿಕ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಜೋಡಿ ಎರಡನೇ ವಿಕೆಟ್ಗೆ ಕೇವಲ 45 ಎಸೆತಗಳಲ್ಲಿ 101 ರನ್ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಪಡಿಕ್ಕಲ್ ಕೇವಲ 26 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 61 ರನ್ ಸಿಡಿಸಿದರೆ, ಮಾಜಿ ನಾಯಕ ವಿರಾಟ್ ಕೊಹ್ಲಿ 38 ಎಸೆತಗಳಲ್ಲಿ ಅಜೇಯ 69 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇನ್ನು ನಾಯಕ ರಜತ್ ಪಾಟೀದಾರ್ ಕೇವಲ 12 ಎಸೆತಗಳಲ್ಲಿ 31 ರನ್ ಚಚ್ಚಿ ತಂಡದ ಗೆಲುವನ್ನು ಮತ್ತಷ್ಟು ಸುಗಮ ಮಾಡಿಕೊಟ್ಟರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.