
ಲಾಹೋರ್: ಭಾರತ ಹಾಗೂ ಶ್ರೀಲಂಕಾ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ನಿಂದ ಬಾಂಗ್ಲಾದೇಶವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು(ಐಸಿಸಿ) ಹೊರಗಿಟ್ಟಿದ್ದಕ್ಕೆ ಕ್ಯಾತೆ ತೆಗೆಯುತ್ತಿರುವ ಪಾಕಿಸ್ತಾನ, ಟಿ20 ವಿಶ್ವಕಪ್ನಲ್ಲಿ ಪಾಲ್ಗೊಂಡರೂ ಭಾರತ ವಿರುದ್ಧ ಪಂದ್ಯ ಆಡದಿರಲು ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಬಾಂಗ್ಲಾದೇಶಕ್ಕೆ ತನ್ನ ಬೆಂಬಲ ಘೋಷಿಸಿರುವ ಪಾಕಿಸ್ತಾನವು, ಬಾಂಗ್ಲಾವನ್ನು ಹೊರಗಿಟ್ಟರೆ ತಾನೂ ವಿಶ್ವಕಪ್ನಿಂದ ಹೊರಗುಳಿಯುವುದಾಗಿ ಬೆದರಿಸಿತ್ತು. ಇದಕ್ಕೆ ಐಸಿಸಿ ಈಗಾಗಲೇ ತೀಕ್ಷ್ಣವಾಗಿ ಉತ್ತರಿಸಿದ್ದು, ಕಠಿಣ ಕ್ರಮದ ಎಚ್ಚರಿಕೆ ನೀಡಿತ್ತು. ಇದಾದ ಬಳಿಕ ತನ್ನ ನಿರ್ಧಾರವನ್ನು ಅಲ್ಪ ಬದಲಿಸಿದಂತಿರುವ ಪಾಕ್, ವಿಶ್ವಕಪ್ನಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದೆ ಎನ್ನಲಾಗುತ್ತಿದೆ. ಆದರೆ ಫೆ.15ಕ್ಕೆ ನಿಗದಿಯಾಗಿರುವ ಭಾರತ ವಿರುದ್ಧ ಪಂದ್ಯವನ್ನು ಬಹಿಷ್ಕರಿಸಬೇಕೇ ಬೇಡವೇ ಎಂಬ ಗೊಂದಲದಲ್ಲಿದೆ.
ಈ ನಡುವೆ ಸೋಮವಾರ ವಿಶ್ವಕಪ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ‘ಪ್ರಧಾನ ಮಂತ್ರಿ ಶೆಹಬಾಜ್ ಶರೀಫ್ ಜೊತೆ ಸಭೆ ನಡೆಸಿ, ವಿಶ್ವಕಪ್ ವಿಚಾರವನ್ನು ಅವರಿಗೆ ವಿವರಿಸಿದ್ದೇನೆ. ಎಲ್ಲಾ ಆಯ್ಕೆಯನ್ನು ಮುಂದಿಟ್ಟುಕೊಂಡಿರುವ ಅವರು ಶೀಘ್ರದಲ್ಲೇ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. ಶುಕ್ರವಾರ ಅಥವಾ ಮುಂದಿನ ಸೋಮವಾರ ಅಂತಿಮ ನಿರ್ಧಾರ ಪ್ರಕಟಿಸುತ್ತೇವೆ’ ಎಂದಿದ್ದಾರೆ.
ಬಾಂಗ್ಲಾ ವೇಗಿ ಮುಸ್ತಾಫಿಜುರ್ ರಹ್ಮಾನ್ರನ್ನು ಐಪಿಎಲ್ನಿಂದ ಹೊರಗಿಟ್ಟಿದ್ದಕ್ಕೆ ಬಾಂಗ್ಲಾದೇಶ ತಂಡ ಟಿ20 ವಿಶ್ವಕಪ್ ಬಹಿಷ್ಕರಿಸಿದೆ. ಭಾರತದಲ್ಲಿ ಪಂದ್ಯ ಆಡಲ್ಲ ಎಂದು ಪಟ್ಟುಹಿಡಿದಿದ್ದರಿಂದ ಬಾಂಗ್ಲಾವನ್ನು ವಿಶ್ವಕಪ್ನಿಂದಲೇ ಹೊರಗಿಟ್ಟಿರುವ ಐಸಿಸಿ, ಸ್ಕಾಟ್ಲೆಂಡ್ಗೆ ಅವಕಾಶ ನೀಡಿದೆ. ಟೂರ್ನಿ ಫೆ.7ರಿಂದ ಮಾ.8ರ ವರೆಗೆ ನಡೆಯಲಿದೆ. ಒಟ್ಟು 20 ತಂಡ ಪಾಲ್ಗೊಳ್ಳಲಿವೆ.
ಭಾರತ-ಪಾಕ್ ಪಂದ್ಯ ಆರ್ಥಿಕವಾಗಿ ಐಸಿಸಿಗೆ ಬಹಳ ಪ್ರಾಮುಖ್ಯವಾದದ್ದು. ಈ ಪಂದ್ಯದ ಪ್ರಸಾರದಿಂದಲೇ ಬಹುಕೋಟಿ ಲಾಭ ಸಿಗಲಿದೆ. ಪ್ರಾಯೋಜಕರು, ಪ್ರಸಾರಕರು, ಜಾಹೀರಾತುದಾರರಿಗೂ ವಿಶ್ವಕಪ್ನಲ್ಲೇ ಈ ಪಂದ್ಯ ಹೆಚ್ಚು ಮಹತ್ವದ್ದು. ಒಂದು ವೇಳೆ ಪಾಕ್ ತಂಡ ಭಾರತ ವಿರುದ್ಧ ಆಡದಿದ್ದರೆ ಐಸಿಸಿಗೆ ಆರ್ಥಿಕ ನಷ್ಟವಾಗುವುದು ಖಚಿತ. ಪ್ರಸಾರಕರಿಗೂ ಇದರಿಂದ ನಷ್ಟ ಉಂಟಾಗಲಿದೆ. ಹಾಗಾಗಿ ಐಸಿಸಿ ಕೂಡ ಪಿಸಿಬಿ ಮೇಲೆ ಹಲವು ನಿರ್ಬಂಧ ಹೇರಬಹುದು. ವಾರ್ಷಿಕವಾಗಿ ನೀಡುವ ಲಾಭಾಂಶದಲ್ಲೂ ಪಾಕಿಸ್ತಾನಕ್ಕೆ ಹಣ ಕಡಿತಗೊಳಿಸುವ ಸಾಧ್ಯತೆ ಇದೆ.
ಫೆಬ್ರವರಿ 07: ಪಾಕಿಸ್ತಾನ-ನೆದರ್ಲೆಂಡ್ಸ್
ಫೆಬ್ರವರಿ 10: ಪಾಕಿಸ್ತಾನ - ಯುಎಸ್ಎ
ಫೆಬ್ರವರಿ 15: ಪಾಕಿಸ್ತಾನ- ಭಾರತ
ಫೆಬ್ರವರಿ 18: ಪಾಕಿಸ್ತಾನ- ನಮೀಬಿಯಾ
ಸಲ್ಮಾನ್ ಅಲಿ ಆಘಾ (ನಾಯಕ), ಬಾಬರ್ ಅಜಂ, ಶಾಹೀನ್ ಶಾ ಆಫ್ರಿದಿ, ಫಖರ್ ಜಮಾನ್, ಶಾದಾಬ್ ಖಾನ್, ನಸೀಮ್ ಶಾ, ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಖವಾಜಾ ಮೊಹಮ್ಮದ್ ನಫಯ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ಸಲ್ಮಾನ್ ಮಿರ್ಜಾ, ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್, ಉಸ್ಮಾನ್ ಖಾನ್, ಉಸ್ಮಾನ್ ತಾರಿಖ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.