
ಆಕ್ಲೆಂಡ್(ಮಾ.26): ರನೌಟ್ ಆಗಿದ್ದರೂ ಬೇಲ್ಸ್ ದೀಪ ಉರಿಯದ ಕಾರಣಕ್ಕೆ ಅಂಪೈರ್ಗಳು ಔಟ್ ನೀಡದ ಪ್ರಸಂಗ ಲಂಕಾ-ಕಿವೀಸ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ನಡೆಯಿತು. 18ನೇ ಓವರ್ನ 4ನೇ ಎಸೆತದಲ್ಲಿ ಲಂಕಾದ ಕರುಣರತ್ನೆ ಅವರನ್ನು ಕಿವೀಸ್ ಬೌಲರ್ ಟಿಕ್ನರ್ ರನೌಟ್ ಮಾಡಿದರು. ಟಿಕ್ನರ್ ಚೆಂಡನ್ನು ವಿಕೆಟ್ಸ್ಗೆ ತಗುಲಿಸಿದಾಗ ಬ್ಯಾಟರಿ ಸಮಸ್ಯೆಯಿಂದಾಗಿ ಬೇಲ್ಸ್ನ ದೀಪ ಉರಿಯಲಿಲ್ಲ.
ಆದರೆ ವಿಕೆಟ್ ನೆಲಕ್ಕೆ ಬೀಳುವ ಹೊತ್ತಿಗೆ ಕರುಣರತ್ನೆ ಕ್ರೀಸ್ ತಲುಪಿದ್ದರು. ಬೇಲ್ಸ್ ದೀಪ ಉರಿಯಲಿಲ್ಲ ಎನ್ನುವ ಕಾರಣಕ್ಕೆ 3ನೇ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದು ಸಾಮಾಜಿಕ ತಾಣಗಳಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ.
ಕಿವೀಸ್ ವಿರುದ್ಧ 198 ಸೋಲು ಕಂಡ ಲಂಕಾ!
ಆಕ್ಲಂಡ್: ಹ್ಯಾರಿ ಶಿಪ್ಲೆ(31ಕ್ಕೆ 5 ವಿಕೆಟ್) ಮಾರಕ ಬೌಲಿಂಗ್ ತುತ್ತಾದ ಶ್ರೀಲಂಕಾ ತಂಡ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 198 ರನ್ ಹೀನಾಯ ಸೋಲುಂಡಿದೆ. ಇದರೊಂದಿಗೆ ಲಂಕಾ 2023ರ ಏಕದಿನ ವಿಶ್ವಕಪ್ಗೆ ನೇರ ಅರ್ಹತೆ ಪಡೆಯಲು ರೇಸ್ನಲ್ಲಿ ಉಳಿಯಬೇಕಿದ್ದರೆ ಉಳಿದ 2 ಪಂದ್ಯಗಳನ್ನೂ ಗೆಲ್ಲಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಸದ್ಯ 10ನೇ ಸ್ಥಾನದಲ್ಲಿರುವ ಲಂಕಾ ಉಳಿದೆರಡು ಪಂದ್ಯ ಸೋತರೆ ಜುಲೈನಲ್ಲಿ ಜಿಂಬಾಬ್ವೆಯಲ್ಲಿ ನಡೆಯಲಿರುವ ಅರ್ಹತಾ ಸುತ್ತಿನಲ್ಲಿ ಆಡಬೇಕಿದೆ. ಶನಿವಾರದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಿವೀಸ್ 49.3 ಓವರಲ್ಲಿ 274ಕ್ಕೆ ಆಲೌಟಾಯಿತು. ಲಂಕಾ 19.5 ಓವರಲ್ಲಿ 76ಕ್ಕೆ ಸರ್ವಪತನ ಕಂಡಿತು.
ಪಾಕ್ ವಿರುದ್ಧ ಆಫ್ಘನ್ಗೆ ಮೊದಲ ಟಿ20 ಗೆಲುವು
ಶಾರ್ಜಾ: ಟಿ20 ಕ್ರಿಕೆಟ್ನಲ್ಲಿ ಪಾಕಿಸ್ತಾನ ವಿರುದ್ಧ ಆಫ್ಘಾನಿಸ್ಥಾನ ಮೊದಲ ಗೆಲುವು ದಾಖಲಿಸಿದೆ. ಶುಕ್ರವಾರ ಶಾರ್ಜಾದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನವನ್ನು ಆಫ್ಘನ್ 6 ವಿಕೆಟ್ಗಳಿಂದ ಮಣಿಸಿತು. ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಪಾಕ್ ಮೊದಲು ಬ್ಯಾಟ್ ಮಾಡಿ 9 ವಿಕೆಟ್ಗೆ ಕೇವಲ 92 ರನ್ ಕಲೆಹಾಕಿತು.
ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್ಶಿಪ್: ಚಿನ್ನಕ್ಕೆ ಕೊರಳೊಡ್ಡಿದ ನೀತು & ಸ್ವೀಟಿ
ಇಮಾದ್ ವಾಸಿಂ ಬಾರಿಸಿದ 18 ರನ್ ತಂಡದ ಪರ ದಾಖಲಾದ ಗರಿಷ್ಠ ಮೊತ್ತ. ನಬಿ, ಮುಜೀಬ್, ಫಾರೂಕಿ ತಲಾ 2 ವಿಕೆಟ್ ಕಿತ್ತರು. ಸುಲಭ ಗುರಿ ಬೆನ್ನತ್ತಿದ ಆಫ್ಘನ್ 17.5 ಓವರಲ್ಲಿ ಜಯಗಳಿಸಿತು. ನಬಿ 38 ರನ್ ಸಿಡಿಸಿದರು.
ದಕ್ಷಿಣ ಆಫ್ರಿಕಾ ಎದುರು ವಿಂಡೀಸ್ಗೆ 3 ವಿಕೆಟ್ ಜಯ
ಸೆಂಚೂರಿಯನ್: ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು 3 ವಿಕೆಟ್ ರೋಚಕ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಚುಟುಕು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮಳೆಯಿಂದಾಗಿ ಪಂದ್ಯವನ್ನು 11 ಓವರ್ಗಳಿಗೆ ಸೀಮಿತಗೊಳಿಸಲಾಯಿತು. ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು 8 ವಿಕೆಟ್ ಕಳೆದುಕೊಂಡು 131 ರನ್ ಕಲೆಹಾಕಿತು. ಸವಾಲಿನ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು 10.3 ಓವರ್ಗಳಲ್ಲಿ ಗೆಲುವಿನ ನಗೆ ಬೀರಿತು. ರೋವ್ಮನ್ ಪೋವೆಲ್ ಕೇವಲ 18 ಎಸೆತಗಳಲ್ಲಿ 43 ರನ್ ಸಿಡಿಸಿ ವಿಂಡೀಸ್ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇಂಗ್ಲೆಂಡ್ನ ದಿ ಹಂಡ್ರೆಡ್ಗೆ ಹರ್ಮನ್ಪ್ರೀತ್, ಸ್ಮೃತಿ
ಲಂಡನ್: ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಹಾಗೂ ಸ್ಮೃತಿ ಮಂಧನಾ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ(ಇಸಿಬಿ) ಆಯೋಜಿಸುವ ದಿ ಹಂಡ್ರೆಡ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹರ್ಮನ್ಪ್ರೀತ್ರನ್ನು ಟ್ರೆಂಟ್ ರಾಕೆಟ್ಸ್ ತಂಡ, ಮಂಧನಾರನ್ನು ಸದ್ರನ್ ಬ್ರೇವ್ ತಂಡ ಆಯ್ಕೆ ಮಾಡಿಕೊಂಡಿದೆ. 2023ರ ಆವೃತ್ತಿಯು ಆ.1ರಿಂದ ಆರಂಭಗೊಳ್ಳಲಿದೆ. ಟೂರ್ನಿಯಲ್ಲಿ 8 ತಂಡಗಳು ಪಾಲ್ಗೊಳ್ಳಲಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.