KSCA 1st ಡಿವಿಶನ್‌ ಲೀಗ್‌: ನಿಹಾಲ್‌ ನೇತೃತ್ವದ ರಾಜಾಜಿನಗರ ಕ್ರಿಕೆಟರ್ಸ್‌ ಚಾಂಪಿಯನ್‌

By Suvarna NewsFirst Published Sep 3, 2021, 3:52 PM IST
Highlights

* KSCA 1st ಡಿವಿಷನ್‌ ಲೀಗ್‌ನಲ್ಲಿ ರಾಜಾಜಿನಗರ ಚಾಂಪಿಯನ್‌

* ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ನಾಯಕ ನಿಹಾಲ್ ಉಲ್ಲಾಳ್

* ರಾಜ್ಯ ತಂಡಕ್ಕೆ ಕಮ್‌ಬ್ಯಾಕ್‌ ಮಾಡುವ ಪ್ರಯತ್ನದಲ್ಲಿ ಶರತ್ ಎಚ್ ಎಸ್‌

ಬೆಂಗಳೂರು(ಸೆ.03): ನಾಯಕ ನಿಹಾಲ್ ಉಲ್ಲಾಳ್ ಹಾಗೂ ಯುವ ವೇಗಿ ಎಚ್ ಎಸ್ ಶರತ್ ಅಮೋಘ ಪ್ರದರ್ಶನದ ನೆರವಿನಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ಯ ಫಸ್ಟ್‌ ಡಿವಿಶನ್‌ ಲೀಗ್‌ ಕ್ರಿಕೆಟ್ ಟೂರ್ನಿಯಲ್ಲಿ ರಾಜಾಜಿನಗರ ಕ್ರಿಕೆಟರ್ಸ್‌ ಕ್ಲಬ್‌ ಚಾಂಪಿಯನ್ ಆಗಿ ಹೊರಹೊಮ್ಮಿದೆ. 

ಗ್ರೂಪ್‌ 'ಎ'ನಲ್ಲಿ ಸ್ಥಾನ ಪಡೆದಿದ್ದ ರಾಜಾಜಿನಗರ ಕ್ರಿಕೆಟರ್ಸ್‌ ಕ್ಲಬ್‌ ಆಡಿದ 11 ಪಂದ್ಯಗಳ ಪೈಕಿ 10 ಗೆಲುವು ಹಾಗೂ ಏಕೈಕ ಸೋಲು ಕಂಡಿದ್ದು, ಲೀಗ್ ಹಂತದ ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ. ಇನ್ನುಳಿದಂತೆ ಬೆಂಗಳೂರು ಯುನೈಟೆಡ್ ಕ್ಲಬ್(1)‌, ಸ್ವಸ್ಥಿಕ್‌ ಯೂನಿಯನ್‌ ಕ್ರಿಕೆಟ್ ಕ್ಲಬ್‌(2) ಹಾಗೂ ವಲ್ಚರ್ ಕ್ರಿಕೆಟ್‌ ಕ್ಲಬ್‌ ಕ್ರಮವಾಗಿ ಮೊದಲ 4 ಸ್ಥಾನ ಪಡೆದಿವೆ.

ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಆಗಿರುವ ನಾಯಕ ನಿಹಾಲ್‌ ಉಲ್ಲಾಳ್‌ ರಾಜಾಜಿನಗರ ಕ್ರಿಕೆಟರ್ಸ್‌ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆಡಿದ 11 ಪಂದ್ಯಗಳ ಪೈಕಿ ಒಂದು ಶತಕ ಹಾಗೂ ಒಂದು ಅರ್ಧಶತಕ ಸಹಿತ 427 ರನ್‌ ಬಾರಿಸಿದ್ದರು. ಇನ್ನು ವಿಕೆಟ್‌ ಕೀಪಿಂಗ್‌ನಲ್ಲಿ 14 ಕ್ಯಾಚ್‌ ಹಾಗೂ ಸ್ಟಂಪಿಂಗ್‌ ಮಾಡುವ ಮೂಲಕ ಗಮನಾರ್ಹ ಪ್ರದರ್ಶನ ತೋರಿದ್ದಾರೆ.

Ind vs Eng ಓವಲ್‌ ಟೆಸ್ಟ್‌ನಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಕಂಗಾಲು..!

ಇನ್ನು ಗಾಯದಿಂದ ಚೇತರಿಸಿಕೊಂಡ ಬಳಿಕ ಕರ್ನಾಟಕ ಕ್ರಿಕೆಟ್ ತಂಡಕ್ಕೆ ಕಮ್‌ಬ್ಯಾಕ್‌ ಮಾಡುವ ಪ್ರಯತ್ನದಲ್ಲಿರುವ ಶರತ್ ತಮ್ಮ ಮೊನಚಾದ ದಾಳಿಯ ಮೂಲಕ ಗಮನ ಸೆಳೆದಿದ್ದಾರೆ. 20 ವಿಕೆಟ್ ಕಬಳಿಸುವ ಮೂಲಕ ಶರತ್ ಲೀಗ್‌ನ ಎರಡನೇ ಗರಿಷ್ಠ ವಿಕೆಟ್ ಕಬಳಿಸಿದ ರಾಜಾಜಿನಗರ ಕ್ರಿಕೆಟ್ ತಂಡದ ಬೌಲರ್ ಎನಿಸಿದರು. ಇದಷ್ಟೇ ಅಲ್ಲದೇ 326 ಡಾಟ್ ಹಾಕಿ ಎದುರಾಳಿ ಬ್ಯಾಟ್ಸ್‌ಮನ್‌ಗಳ ರನ್‌ ವೇಗಕ್ಕೆ ಕಡಿವಾಣ ಹಾಕಿದರು. ಇನ್ನು ರಾಜಾಜಿನಗರ ಕ್ರಿಕೆಟರ್ಸ್‌ ಪರ ಪಂದ್ಯವೊಂದರಲ್ಲಿ 5 ವಿಕೆಟ್‌ ಕಬಳಿಸಿದ ಏಕಮಾತ್ರ ಬೌಲರ್ ಎನ್ನುವ ಕೀರ್ತಿಯು ಶರತ್ ಹೆಸರಿನಲ್ಲಿದೆ.

ರಾಜಾಜಿನಗರ ಕ್ರಿಕೆಟ್ ತಂಡದ ಕಿರು ಪರಿಚಯ

ನಾಯಕ: ನಿಹಾಲ್ ಉಲ್ಲಾಳ್‌
ಉಪನಾಯಕ: ಕ್ರಾಂತಿ ಕುಮಾರ್
ವಿಕೆಟ್ ಕೀಪರ್: ನಿಹಾಲ್ ಉಲ್ಲಾಳ್‌
ಕಾರ್ಯದರ್ಶಿ: ಆರ್ ಕುಮಾರ್
 

click me!