National Women's ODI Championship: ಚೊಚ್ಚಲ ಬಾರಿಗೆ ಕರ್ನಾಟಕ ಫೈನಲ್‌ಗೆ ಲಗ್ಗೆ

By Suvarna NewsFirst Published Nov 19, 2021, 8:37 AM IST
Highlights

* ಮಹಿಳಾ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕ

* ಕರ್ನಾಟಕ-ಪಂಜಾಬ್‌ ನಡುವಿನ ಮೊದಲ ಸೆಮಿಫೈನಲ್‌ ಪಂದ್ಯ ಮಳೆಯಿಂದ ರದ್ದು

* ಉತ್ತಮ ನೆಟ್‌ ರನ್‌ರೇಟ್‌ ಹೊಂದಿದ್ದ ಕಾರಣ ಫೈನಲ್‌ಗೆ ಲಗ್ಗೆ

ಬೆಂಗಳೂರು(ನ.19): ರಾಷ್ಟ್ರೀಯ ಮಹಿಳಾ ಏಕದಿನ ಟೂರ್ನಿಯಲ್ಲಿ (National Women's ODI Championship) ಕರ್ನಾಟಕ ತಂಡ ಚೊಚ್ಚಲ ಬಾರಿ ಫೈನಲ್‌ ಪ್ರವೇಶಿಸಿದೆ. ಗುರುವಾರ ಇಲ್ಲಿನ ಆಲೂರು ಮೈದಾನದಲ್ಲಿ ನಿಗದಿಯಾಗಿದ್ದ ಕರ್ನಾಟಕ-ಪಂಜಾಬ್‌ ನಡುವಿನ ಮೊದಲ ಸೆಮಿಫೈನಲ್‌ ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದುಗೊಂಡಿತು. ಹೀಗಾಗಿ ಉತ್ತಮ ನೆಟ್‌ ರನ್‌ರೇಟ್‌ ಹೊಂದಿದ್ದ ಕಾರಣ ಪಂಜಾಬ್‌ ತಂಡವನ್ನು ಹಿಂದಿಕ್ಕಿದ ರಾಜ್ಯ ತಂಡ ಫೈನಲ್‌ಗೆ ಅರ್ಹತೆ ಪಡೆಯಿತು. 

ಗುಂಪು ಹಂತದಲ್ಲಿ ವೇದಾ ಕೃಷ್ಣಮೂರ್ತಿ ನೇತೃತ್ವದ ಕರ್ನಾಟಕ (Karnataka) ಐದೂ ಪಂದ್ಯಗಳಲ್ಲಿ ಗೆದ್ದಿದ್ದರೆ, ಪಂಜಾಬ್‌ ಒಂದು ಪಂದ್ಯದಲ್ಲಿ ಸೋತು ನಾಲ್ಕರಲ್ಲಿ ಗೆದ್ದಿತ್ತು. ಮತ್ತೊಂದೆಡೆ, ರೈಲ್ವೇಸ್‌ ಹಾಗೂ ಬೆಂಗಾಲ್‌ ನಡುವೆ ನಡೆಯಬೇಕಿದ್ದ ಇನ್ನೊಂದು ಸೆಮಿಫೈನಲ್‌ ಪಂದ್ಯ ಕೂಡಾ ಮಳೆಯಿಂದಾಗಿ ರದ್ದಾಗಿದ್ದು, ರೈಲ್ವೇಸ್‌ ತಂಡ ಉತ್ತಮ ನೆಟ್‌ ರನ್‌ರೇಟ್‌ ಆಧಾರದಲ್ಲಿ ಫೈನಲ್‌ ಪ್ರವೇಶಿಸಿತು. 

Punjab vs Karnataka - Match Abandoned Scorecard:https://t.co/D3iywm9j6B

— BCCI Women (@BCCIWomen)

Syed Mushtaq Ali Trophy: ಸೂಪರ್ ಓವರ್ ಗೆದ್ದು, ಸೆಮೀಸ್‌ಗೆ ಎಂಟ್ರಿ ಕೊಟ್ಟ ಕರ್ನಾಟಕ ಹುಡುಗರು

ಚೊಚ್ಚಲ ಬಾರಿಗೆ ಚಾಂಪಿಯನ್‌ ಆಗುವ ಉತ್ಸಾಹದಲ್ಲಿರುವ ಕರ್ನಾಟಕ ತಂಡ ನವೆಂಬರ್ 20ರಂದು ಬೆಂಗಳೂರಿನಲ್ಲಿರುವ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (M Chinnaswamy Stadium) ನಡೆಯಲಿರುವ ಫೈನಲ್‌ನಲ್ಲಿ 12 ಬಾರಿಯ ಚಾಂಪಿಯನ್‌ ರೈಲ್ವೇಸ್‌ ವಿರುದ್ಧ ಸೆಣಸಾಡಲಿದೆ.

Railways vs Bengal - Match Abandoned Scorecard:https://t.co/x3Z64BAGLj

— BCCI Women (@BCCIWomen)

Syed Mushtaq Ali Trophy ಟೂರ್ನಿಯಲ್ಲಿ ಸೆಮೀಸ್‌ಗೆ ಲಗ್ಗೆಯಿಟ್ಟ ಕರ್ನಾಟಕ, ತಮಿಳುನಾಡು:

ದೆಹಲಿ: ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮನೀಶ್ ಪಾಂಡೆ (Manish Pandey) ನೇತೃತ್ವದ ಕರ್ನಾಟಕ ತಂಡವು ಕ್ವಾರ್ಟರ್‌ ಫೈನಲ್‌ನಲ್ಲಿ ಬೆಂಗಾಲ್ (Bengal) ವಿರುದ್ದ ಸೂಪರ್‌ ಓವರ್‌ನಲ್ಲಿ ರೋಚಕ ಜಯ ಸಾಧಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ.

161 ರನ್‌ಗಳ ಗುರಿ ಪಡೆದ ಬೆಂಗಾಲ್ ತಂಡವು 160 ರನ್‌ ಗಳಿಸಿ ಪಂದ್ಯ ಟೈ ಮಾಡಿಕೊಂಡಿತು ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋದಾಗ ಮೊದಲು ಬ್ಯಾಟ್‌ ಮಾಡಿದ ಬೆಂಗಾಲ್ ಕೇವಲ 5 ರನ್‌ ಗಳಿಸಷ್ಟೇ ಶಕ್ತವಾಯಿತು. ಕೇವಲ 2 ಎಸೆತಗಳಲ್ಲೇ ಈ ಗುರಿಯನ್ನು ತಲುಪುವ ಮೂಲಕ ಕರ್ನಾಟಕ ಅಂತಿಮ ನಾಲ್ಕರಘಟ್ಟ ಪ್ರವೇಶಿಸಿತು. ಇದೀಗ ಫೈನಲ್‌ ಸ್ಥಾನಕ್ಕಾಗಿ ಕರ್ನಾಟಕ ತಂಡವು ವಿದರ್ಭ ಎದುರು ಕಾದಾಟ ನಡೆಸಲಿದೆ.

ಮೊದಲ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ತಮಿಳುನಾಡು (Tamil Nadu) ತಂಡವು ಕೇರಳ ವಿರುದ್ದ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸೆಮೀಸ್‌ಗೆ ಲಗ್ಗೆಯಿಟ್ಟಿದೆ. ಗೆಲ್ಲಲು 182 ರನ್‌ಗಳ ಕಠಿಣ ಗುರಿ ಪಡೆದ ತಮಿಳುನಾಡು ತಂಡವು ಇನ್ನೂ 3 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ. ಇನ್ನೊಂದಡೆ ಎರಡನೇ ಕ್ವಾರ್ಟರ್‌ಫೈನಲ್‌ನಲ್ಲಿ ಕರ್ನಾಟಕ ತಂಡ ಕೂಡ ರೋಚಕ ಜಯ ಸಾಧಿಸಿತು. ಇನ್ನು ಮೂರನೇ ಕ್ವಾರ್ಟರ್ ಫೈನಲ್‌ನಲ್ಲಿ ರಾಜಸ್ಥಾನ ವಿರುದ್ದ ವಿದರ್ಭ ತಂಡವು 9 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿ ಸೆಮೀಸ್‌ಗೆ ಲಗ್ಗೆಯಿಟ್ಟಿದ್ದರೆ, ನಾಲ್ಕನೇ ಕ್ವಾರ್ಟರ್‌ ಫೈನಲ್‌ನಲ್ಲಿ ಗುಜರಾತ್ ಎದುರು ಹೈದರಾಬಾದ್ ತಂಡವು 30 ರನ್‌ಗಳ ಗೆಲುವು ದಾಖಲಿಸಿ ಅಂತಿಮ ನಾಲ್ಕರಘಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ.

ನವೆಂಬರ್ 20ರಂದು ಸೆಮೀಸ್ ಕಾದಾಟ: ಮಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ತಮಿಳುನಾಡು, ಹೈದರಾಬಾದ್, ಕರ್ನಾಟಕ ಹಾಗೂ ವಿದರ್ಭ ತಂಡಗಳು ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಿವೆ. ಶನಿವಾರ(ನ.20) ನಡೆಯಲಿರುವ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ದಕ್ಷಿಣ ಭಾರತದ ಎರಡು ಪ್ರಬಲ ತಂಡಗಳಾದ ತಮಿಳುನಾಡು ಹಾಗೂ ಹೈದರಾಬಾದ್ ತಂಡಗಳು ಸೆಣಸಾಟ ನಡೆಸಲಿವೆ. ಇನ್ನೊಂದೆಡೆ ಅದೇ ದಿನ ನಡೆಯುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು ವಿದರ್ಭ ತಂಡದ ಸವಾಲನ್ನು ಸ್ವೀಕರಿಸಲಿದೆ. ಈ ಎರಡೂ ಮಹತ್ವದ ಪಂದ್ಯಗಳಿಗೆ ದೆಹಲಿಯ ಅರುಣ್ ಜೇಟ್ಲಿ ಮೈದಾನ ಸಾಕ್ಷಿಯಾಗಲಿದೆ.

click me!