RCB ಎದುರು CSK ಸೋಲುತ್ತಿದ್ದಂತೆಯೇ ಟಿವಿ ಒಡೆದು ಹಾಕಿದ ಧೋನಿ; ಕ್ಯಾಪ್ಟನ್ ಕೂಲ್ ಮುಖವಾಡ ಬಿಚ್ಚಿಟ್ಟ ಭಜ್ಜಿ

By Naveen KodaseFirst Published Oct 3, 2024, 3:20 PM IST
Highlights

17ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಆರ್‌ಸಿಬಿ ಎದುರು ಸೋಲುತ್ತಿದ್ದಂತೆಯೇ ಧೋನಿ ತಾಳ್ಮೆ ಕಳೆದುಕೊಂಡು ಟಿವಿ ಒಡೆದುಹಾಕಿದ ಘಟನೆಯನ್ನು ಹರ್ಭಜನ್ ಸಿಂಗ್ ಬಿಚ್ಚಿಟ್ಟಿದ್ದಾರೆ

ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ, ಮೈದಾನದಲ್ಲಿ ಎಂತಹದ್ದೇ ಒತ್ತಡದ ಪರಿಸ್ಥಿತಿ ಎದುರಾದರೂ ತಾಳ್ಮೆ ಕಳೆದುಕೊಂಡವರಲ್ಲ. ಆದರೆ ಧೋನಿ, ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರಿನ ಪಂದ್ಯದ ವೇಳೆಯಲ್ಲಿ ಸಿಎಸ್‌ಕೆ ಸೋಲುತ್ತಿದ್ದಂತೆಯೇ ಧೋನಿ ಕಳೆದುಕೊಂಡು ಟೀವಿಯನ್ನು ಒಡೆದು ಹಾಕಿದ್ದರು ಎನ್ನುವ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ಕ್ರಿಕೆಟ್ ವಿಶ್ಲೇಷಕ ಹರ್ಭಜನ್ ಸಿಂಗ್ ಬಿಚ್ಚಿಟ್ಟಿದ್ದಾರೆ.

17ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್‌ ಹಾಗೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಪಾಲಿಗೆ ಪ್ಲೇ ಆಫ್ ಪ್ರವೇಶಿಸುವ ನಿಟ್ಟಿನಲ್ಲಿ ಉಭಯ ತಂಡಗಳ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿತ್ತು. ಆ ಪಂದ್ಯದಲ್ಲಿ ಆರ್‌ಸಿಬಿ ರೋಚಕ ಗೆಲುವು ಸಾಧಿಸುವ ಮೂಲಕ 4ನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿದರೆ, ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಆಘಾತಕಾರಿ ಸೋಲು ಕಂಡು ಗ್ರೂಪ್ ಹಂತದಲ್ಲೇ ಹೊರಬಿದ್ದು ಮುಖಭಂಗ ಅನುಭವಿಸಿತ್ತು.

Latest Videos

ಬಾರ್ಡರ್‌-ಗವಾಸ್ಕರ್ ಸರಣಿಯಿಂದ ಮೊಹಮ್ಮದ್ ಶಮಿ ಔಟ್?: ಗಾಳಿ ಸುದ್ದಿ ಬಗ್ಗೆ ತುಟಿಬಿಚ್ಚಿದ ಟೀಂ ಇಂಡಿಯಾ ವೇಗಿ

ಕೊನೆಯ ಓವರ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಗೆಲ್ಲಲು 17 ರನ್‌ಗಳ ಅಗತ್ಯವಿತ್ತು. ಆಗ ಕೊನೆಯ ಓವರ್‌ ಮಾಡಲು ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಚೆಂಡನ್ನು ಯಶ್ ದಯಾಳ್ ಕೈಗಿತ್ತರು. ಯಶ್ ದಯಾಳ್ ಎಸೆದ ಮೊದಲ ಚೆಂಡನ್ನು ಧೋನಿ ಸಿಕ್ಸರ್‌ಗಟ್ಟಿದ್ದರು. ಆದರೆ ಮರು ಎಸೆತದಲ್ಲೇ ಧೋನಿಯನ್ನು ಬಲಿ ಪಡೆಯುವಲ್ಲಿ ಯಶ್ ದಯಾಳ್ ಯಶಸ್ವಿಯಾದರು. ಆ ಬಳಿಕ ಪಂದ್ಯ ಆರ್‌ಸಿಬಿ ಪಾಲಾಯಿತು. ಇದರ ಬೆನ್ನಲ್ಲೇ ಆರ್‌ಸಿಬಿ ಅಭಿಮಾನಿಗಳು ಪ್ಲೇ ಆಫ್ ಪ್ರವೇಶಿಸಿ ಮೈದಾನದಲ್ಲಿಯೇ ಭರ್ಜರಿ ಸಂಭ್ರಮಾಚರಣೆ ಮಾಡಿದರು.

ಇದೇ ಸಂಭ್ರಮಾಚರಣೆ ಕೊಂಚ ವಿವಾದಕ್ಕೂ ಕಾರಣವಾಯಿತು. ಸಿಎಸ್‌ಕೆ ತಂಡದ ಮಾಜಿ ನಾಯಕ ಧೋನಿ, ಎದುರಾಳಿ ಆರ್‌ಸಿಬಿ ತಂಡದ ಆಟಗಾರರ ಕೈಕುಲುಕದೇ ಮೈದಾನ ತೊರೆದಿದ್ದರು. ಈ ಪಂದ್ಯದ ವೇಳೆಯಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಹರ್ಭಜನ್ ಸಿಂಗ್, ಇದಾದ ಬಳಿಕ ನಡೆದ ಘಟನೆಯೊಂದನ್ನು ಖಾಸಗಿ ಮಾಧ್ಯಮವೊಂದರಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಅಶ್ವಿನ್ ಹಿಂದಿಕ್ಕಿ ಮತ್ತೆ ನಂ.1 ಸ್ಥಾನಕ್ಕೇರಿದ ಜಸ್ಪ್ರೀತ್ ಬುಮ್ರಾ; ಹೊಸ ಎತ್ತರಕ್ಕೇರಿದ ಯಶಸ್ವಿ ಜೈಸ್ವಾಲ್!

"ಆರ್‌ಸಿಬಿ ಗೆಲ್ಲುತ್ತಿದ್ದಂತೆಯೇ ದೊಡ್ಡದಾಗಿಯೇ ಸಂಭ್ರಮಾಚರಣೆ ಮಾಡಿದರು. ಯಾಕೆಂದರೆ ಅವರು ಪ್ಲೇ ಆಫ್ ಪ್ರವೇಶಿಸಿದ ಖುಷಿಯಲ್ಲಿದ್ದರು. ಪಂದ್ಯದ ವೀಕ್ಷಕ ವಿವರಣೆಗಾರನಾಗಿದ್ದ ನಾನು ಮೇಲೆ ಕುಳಿತು ಇಡೀ ಸನ್ನಿವೇಷವನ್ನು ನೋಡುತ್ತಾ ಇದ್ದೆ. ಒಂದು ಕಡೆ ಆರ್‌ಸಿಬಿ ಸಂಭ್ರಮಾಚರಣೆ ಮಾಡುತ್ತಿದ್ದರೇ, ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು, ಆರ್‌ಸಿಬಿ ಆಟಗಾರರ ಕೈಕುಲುಕಿ ಅಭಿನಂದಿಸಲು ಸಾಲಾಗಿ ನಿಂತಿದ್ದರು. ಆರ್‌ಸಿಬಿ ಆಟಗಾರರು ಸಂಭ್ರಮಾಚರಣೆ ಮಾಡಿ, ಕೊಂಚ ತಡವಾಗಿಯೇ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರ ಬಳಿ ಬಂದರು. ಅಷ್ಟರಲ್ಲಾಗಲೇ ಧೋನಿ ಮೈದಾನ ತೊರೆದು ಡ್ರೆಸ್ಸಿಂಗ್ ರೂಂನೊಳಗೆ ಹೋದರು. ಅಲ್ಲಿ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಟಿವಿಯನ್ನು ಸಿಟ್ಟಿನಲ್ಲಿ ಧೋನಿ ಒಡೆದು ಹಾಕಿದರು. ನಾನು ಅದನ್ನು ಮೇಲಿನಿಂದಲೇ ನೋಡುತ್ತಿದ್ದೆ. ಆದರೆ ಇದೆಲ್ಲ ಸಹಜ, ಎಲ್ಲಾ ಆಟಗಾರರು ತಮ್ಮದೇ ಆದ ಭಾವನೆಯನ್ನು ಹೊಂದಿರುತ್ತಾರೆ. ಇದೆಲ್ಲ ಸಹಜ ಬಿಡಿ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
 

click me!