
ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನೂತನ ಅಧ್ಯಕ್ಷರಾಗಿ ದೆಹಲಿಯ ಮಾಜಿ ಕ್ರಿಕೆಟಿಗ ಮಿಥುನ್ ಮನ್ಹಾಸ್ ಆಯ್ಕೆ ಖಚಿತವಾಗಿದೆ. ಶನಿವಾರ ಸಂಜೆ ಬಿಜೆಪಿ ಹಿರಿಯ ನಾಯಕರು ಹಾಗೂ ಬಿಸಿಸಿಐ ಅಧಿಕಾರಿಗಳು ಸಭೆ ಸೇರಿ, ಒಮ್ಮತದ ಅಭ್ಯರ್ಥಿಯನ್ನಾಗಿ ಮನ್ಹಾಸ್ರನ್ನು ಆಯ್ಕೆ ಮಾಡಿದ್ದಾರೆ. ಅಲ್ಲದೆ, ಅಧ್ಯಕ್ಷ ಸ್ಥಾನಕ್ಕೆ ಮನ್ಹಾಸ್ ಮಾತ್ರ ನಾಮಪತ್ರ ಸಲ್ಲಿಸಿದ್ದು, ಇದರೊಂದಿಗೆ ಅವರು ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ.
ದೆಹಲಿ, ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಿದಂತೆ ಕೇಂದ್ರ ಬಿಜೆಪಿಯು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೂ ಅಚ್ಚರಿಯ ಆಯ್ಕೆಗೆ ನಿರ್ಧರಿಸಿತು. ಅವರ ಆಯ್ಕೆಯನ್ನು ಉಪಾಧ್ಯಕ್ಷ ರಾಜೀವ್ ಶುಕ್ಲಾ ಕೂಡಾ ಖಚಿತಪಡಿಸಿದ್ದಾರೆ. ಸಮಿತಿ ಆಯ್ಕೆ 'ಮುಂದಿನ ಅವಧಿಗೆ ಹೊಸ ಮಾಡಲಾಗಿದೆ. ಮಾಜಿ ಕ್ರಿಕೆಟಿಗ ಮಿಥುನ್ ಮನಾಸ್ ರನ್ನು ಅಧ್ಯಕ್ಷರನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ. ಅರುಣ್ ಧುಮಾಲ್ ಐಪಿಎಲ್ ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ' ಎಂದು ಹೇಳಿದ್ದಾರೆ.
ಈಗ ಬಿಸಿಸಿಐ ಕಾರ್ಯದರ್ಶಿಯಾಗಿರುವ ದೇವಜಿತ್ ಸೈಕಿಯಾ ಅದೇ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಖಜಾಂಚಿಯಾಗಿದ್ದ ಪ್ರಭತೇಜ್ ಭಾಟಿಯಾ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. 2022ರಿಂದ ಕರ್ನಾಟಕದ ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷರಾಗಿದ್ದರು. ಅವರಿಗೆ 70 ವರ್ಷ ತುಂಬಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೊಸ ಸಮಿತಿಗೆ ಸೆ.28ರಂದು ಚುನಾವಣೆ ನಡೆಯಲಿದೆ. ಭಾನುವಾರ ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿತ್ತು. ಎಲ್ಲಾ ಹುದ್ದೆಗೂ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದಾರೆ ಎನ್ನಲಾಗಿದ್ದು, ಎಲ್ಲರೂ ಅವಿರೋಧ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಜಮ್ಮುವಿನ ಮಿಥುನ್ ಮನಾಸ್, ದೇಸಿ ಕ್ರಿಕೆಟ್ನಲ್ಲಿ ಡೆಲ್ಲಿ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರು 157 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, 27 ಶತಕ ಒಳಗೊಂಡ 9714 ರನ್ ಕಲೆಹಾಕಿದ್ದಾರೆ. 130 ಲಿಸ್ಟ್ 'ಎ' ಪಂದ್ಯಗಳಲ್ಲಿ4126 ರನ್, 91 ಟಿ20 ಪಂದ್ಯಗಳಲ್ಲಿ 1170 ರನ್ ಸಿಡಿಸಿದ್ದಾರೆ. ಐಪಿಎಲ್ನಲ್ಲಿ ಚೆನ್ನೈ, ಪುಣೆ ವಾರಿಯರ್ಸ್ ಹಾಗೂ ಡೆಲ್ಲಿ ತಂಡಗಳಲ್ಲಿದ್ದ ಅವರು, ಒಟ್ಟು 55 ಪಂದ್ಯಗಳನ್ನಾಡಿದ್ದಾರೆ. 2015-16ರಲ್ಲಿ ಜಮ್ಮು-ಕಾಶ್ಮೀರ ತಂಡ ಸೇರ್ಪಡೆಗೊಂಡಿದ್ದ ಮಿಥುನ್, 2017ರಲ್ಲಿ ಐಪಿಎಲ್ನ ಪಂಜಾಬ್ ತಂಡ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದರು. 2019ರಲ್ಲಿ ಆರ್ಸಿಬಿ, 2022ರಲ್ಲಿ ಗುಜರಾತ್ ಸಹಾಯಕ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಜಮ್ಮು-ಕಾಶ್ಮೀರ ಕ್ರಿಕೆಟ್ ಸಂಸ್ಥೆಯ ಆಡಳಿತಾಧಿಕಾಯಾಗಿದ್ದಾರೆ.
ಯಾವ ಸ್ಥಾನಕ್ಕೆ ಯಾರು?
ಅಧ್ಯಕ್ಷ: ಮಿಥುನ್ ಮನ್ಹಾಸ್
ಕಾರ್ಯದರ್ಶಿ: ದೇವಜಿತ್ ಸೈಕಿಯಾ
ಉಪಾಧ್ಯಕ್ಷ: ರಾಜೀವ್ ಶುಕ್ಲಾ
ಖಜಾಂಚಿ: ರಘುರಾಮ್ ಭಟ್
ಜಂಟಿ ಕಾರ್ಯದರ್ಶಿ: ಪ್ರಭ್ತೇಜ್
ಐಪಿಎಲ್ ಮುಖ್ಯಸ್ಥ: ಅರುಣ್ ಧುಮಾಲ್
ಅಧ್ಯಕ್ಷ ಸ್ಥಾನ ರೇಸಲ್ಲಿದ್ದ ರಘುರಾಮ್ ಖಜಾಂಚಿ
ಸದ್ಯ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿರುವ ರಘುರಾಮ್ ಭಟ್ ಬಿಸಿಸಿಐ ಖಜಾಂಚಿಯಾಗಿ ಆಯ್ಕೆಯಾ ಗಲಿದ್ದಾರೆ. ಕೆಲ ದಿನಗಳಿಂದ ರಘುರಾಮ್ ಅವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿದ್ದವು. ಶನಿವಾರದ ಸಭೆಯ ನಡೆದ ಬಳಿಕ ಮೊದಲಿಗೆ ರಘುರಾಮ್ ಅವರೇ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲಿದ್ದಾರೆ ಎಂದು ಸುದ್ದಿ ಹರಿದಾಡಿದ್ದವು. ಆದರೆ ಅವರು ಖಜಾಂಚಿಯಾಗಿ ಆಯ್ಕೆಯಾಗಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.