
ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಕ್ರಿಕೆಟ್ ಜಗತ್ತು ಕಂಡು ಚಾಣಾಕ್ಷ ನಾಯಕರಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ತಮ್ಮ ಒಂದೂವರೆ ದಶಕದ ನಾಯಕತ್ವದಲ್ಲಿ ಅದ್ಭುತ ತಂತ್ರಗಾರಿಕೆಯ ಮೂಲಕವೇ ತಮ್ಮ ತಂಡಕ್ಕೆ ಹಲವು ಅವಿಸ್ಮರಣೀಯ ಗೆಲುವು ತಂದುಕೊಟ್ಟಿದ್ದಾರೆ. ನಾವಿಂದು ಈ ಆರ್ಟಿಕಲ್ನಲ್ಲಿ ಕಲ್ಲಿನ ಮುದ್ದೆಯಂತಿದ್ದ ಧೋನಿಯನ್ನು ಕೆತ್ತಿ ಸುಂದರ ಮೂರ್ತಿಯನ್ನಾಗಿ ರೂಪಿಸಿದ ಆ ಕಾಣದ ಕೈಯನ್ನು ಪರಿಚಯಿಸುತ್ತಿದ್ದೇವೆ ನೋಡಿ.
ಹೌದು, ಮಹೇಂದ್ರ ಸಿಂಗ್ ಧೋನಿ ಎನ್ನುವ ಹುಡುಗನಿಗೆ ಕ್ರಿಕೆಟ್ ಕ್ರೇಜ್ ಬರುವಂತೆ ಮಾಡಿದ್ದೇ ಅವರ ಮೊದಲ ಬಾಲ್ಯದ ಕೋಚ್ ಕೇಶವ್ ರಂಜನ್ ಬ್ಯಾನರ್ಜಿ. ಅವರೇ ಧೋನಿಯಲ್ಲಿ ಹುದುಗಿರುವ ಕ್ರಿಕೆಟ್ ಪ್ರತಿಭೆಯನ್ನು ಮೊದಲು ಪತ್ತೆಹಚ್ಚಿದ್ದು. ರಾಂಚಿಯ ಜವಾಹರ್ ವಿದ್ಯಾಮಂದಿರದಲ್ಲಿ ಧೋನಿ ಓದುತ್ತಿರುವಾಗ ಅವರಿಗೆ ಕ್ರಿಕೆಟ್ನತ್ತ ಒಲವು ಮೂಡುವಂತೆ ಮಾಡಿದ್ದು ಇದೇ ಕೇಶವ್ ರಂಜನ್ ಬ್ಯಾನರ್ಜಿ.
Happy Birthday SKY: ಬರ್ತ್ ಡೇ ಬಾಯ್ ಸೂರ್ಯಕುಮಾರ್ ಯಾದವ್ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು
ಎಂ ಎಸ್ ಧೋನಿ ತಾವು ಓರ್ವ ಫುಟ್ಬಾಲ್ ಗೋಲ್ ಕೀಪರ್ ಆಗಬೇಕು ಎನ್ನುವ ಆಸೆಯನ್ನು ಹೊಂದಿದ್ದರು ಎನ್ನುವುದು ಮಹಿ ಅಭಿಮಾನಿಗಳಿಗೆಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಆದರೆ ಶಾಲೆಯಲ್ಲಿ ಅವರ ಟೀಚರ್ ಆಗಿದ್ದ ಇದೇ ಕೇಶವ್ ಬ್ಯಾನರ್ಜಿ, ಧೋನಿಗೆ ವಿಕೆಟ್ ಕೀಪರ್ ಆಗುವಂತೆ ಸಲಹೆ ನೀಡಿದರು. ಇದಾದ ಬಳಿಕವೇ ಧೋನಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ತಮ್ಮ ಕೌಶಲಗಳನ್ನು ಬೆಳೆಸಿಕೊಳ್ಳುತ್ತಾ ಹೋದರು. ಕೇಶವ್ ಬ್ಯಾನರ್ಜಿ ನೀಡಿದ ಸಂದರ್ಶನವೊಂದರಲ್ಲಿ, ಧೋನಿ ಯಾವಗೆಲ್ಲಾ ತಮ್ಮನ್ನು ಭೇಟಿಯಾಗಲು ಬರುತ್ತಾರೋ, ಆಗೆಲ್ಲಾ ತಮ್ಮ ಕ್ರಿಕೆಟ್ ಆಟದ ಬಗ್ಗೆ ಮಾತನಾಡುವುದಿಲ್ಲ, ಇದಕ್ಕೆ ಬದಲಾಗಿ ಶಾಲೆಯಲ್ಲಿ ನಡೆಯುತ್ತಿರುವ ಕ್ರೀಡಾ ಚಟುವಟಿಕೆಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಆಸಕ್ತರಾಗಿರುತ್ತಾರೆ ಎಂದು ಹೇಳಿದ್ದರು.
ಎಂ ಎಸ್ ಧೋನಿ ಜೀವನಾಧಾರಿತ ಚಿತ್ರ MS Dhoni: The Untold Story ಸಿನಿಮಾದಲ್ಲಿಯೂ ಈ ಬ್ಯಾನರ್ಜಿ ಪಾತ್ರ ಚೆನ್ನಾಗಿ ಮೂಡಿ ಬಂದಿದೆ. ಕೇಶವ್ ಬ್ಯಾನರ್ಜಿ ಅವರ ಪಾತ್ರಕ್ಕೆ ರಾಜೇಶ್ ಶರ್ಮಾ ಜೀವ ತುಂಬಿ ಅಭಿನಯಿಸಿದ್ದರು. ಥೇಟ್ ಬಂಗಾಳಿ ಉಚ್ಛಾರಣೆಯಲ್ಲೇ ರಾಜೇಶ್ ಶರ್ಮಾ ಚಿತ್ರದಲ್ಲಿ ಸಂಭಾಷಣೆ ನಡೆಸಿದ್ದು, ಸಿನಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇನ್ನು ತುಂಬಾ ಇಂಟ್ರೆಸ್ಟಿಂಗ್ ಸಂಗತಿಯೆಂದರೆ, ಕೇಶವ್ ರಂಜನ್ ಬ್ಯಾನರ್ಜಿ ಈಗಲೂ ತಮ್ಮ ವಿದ್ಯಾರ್ಥಿಗಳಿಗೆ ಕ್ರಿಕೆಟ್ ಕೋಚಿಂಗ್ ಮಾಡುತ್ತಾ ಬಂದಿದ್ದಾರೆ ಹಾಗೂ ರಾಂಚಿಯಲ್ಲಿ 'ಬ್ಯಾನರ್ಜಿ ಸರ್' ಎಂದೇ ಪ್ರಖ್ಯಾತರಾಗಿದ್ದಾರೆ.
"ನಾನು ನಿನ್ನನ್ನು ಕೊಲ್ಲುತ್ತೇನೆ": ಶೋಯೆಬ್ ಅಖ್ತರ್ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ?
"ಮೊದಲಿಗೆ ನಾನು ಉನ್ನತ ಕ್ಲಾಸ್ ಮಕ್ಕಳಿಗೆ ಮಾತ್ರ ಕ್ರಿಕೆಟ್ ತರಬೇತಿ ನೀಡುತ್ತಿದ್ದೆ. ಆದರೆ ಈಗ 6ನೇ ತರಗತಿಯ ಮಕ್ಕಳಿಂದಲೇ ತರಬೇತಿ ಆರಂಭಿಸುತ್ತಿದ್ದೇನೆ. ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ತುಂಬಾ ಒಳ್ಳೆಯ ಅವಕಾಶವಿದೆ. ಆದರೆ ಧೋನಿಯಂತಹ ಆಟಗಾರರು ಸಿಗುವುದು ತುಂಬಾ ವಿರಳ. ನಾನು ಮತ್ತೊಂದು ಧೋನಿಯನ್ನು ಹುಟ್ಟುಹಾಕಲು ಸಾಧ್ಯವಿಲ್ಲ. ಈಗಿನ ಹುಡುಗರು ತುಂಬಾ ಪ್ರತಿಭಾನ್ವಿತರಾಗಿದ್ದಾರೆ, ಆದರೆ ಅವರ ಬಹುತೇಕ ಪೋಷಕರು ತಮ್ಮ ಮಗನನ್ನು ಮತ್ತೊಬ್ಬ ಧೋನಿಯನ್ನಾಗಿಸಲು ಬಯಸುತ್ತಾರೆ. ನನ್ನ ಬಳಿ ಹೀಗೆ ಮಾಡಲು ಯಾವುದೇ ಮಂತ್ರದಂಡವಿಲ್ಲ. ಆದರೆ ಈಗಿನ ಮಕ್ಕಳು ಧೋನಿಯಿಂದ ಸ್ಪೂರ್ತಿ ಪಡೆದು ಕಠಿಣ ಪರಿಶ್ರಮ ಹಾಕುತ್ತಾರೆ. ಈ ಮಕ್ಕಳು ಕೂಡಾ ಯಶಸ್ವಿಯಾಗುತ್ತಾರೆ ಎನ್ನುವ ವಿಶ್ವಾಸವಿದೆ" ಎಂದು ಸಂದರ್ಶನವೊಂದರಲ್ಲಿ ಕೇಶವ್ ರಂಜನ್ ಬ್ಯಾನರ್ಜಿ ಹೇಳಿದ್ದಾರೆ.
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಐಸಿಸಿಯ ಮೂರು ಟ್ರೋಫಿ ಗೆದ್ದ ಜಗತ್ತಿನ ಏಕೈಕ ನಾಯಕ ಎನಿಸಿಕೊಂಡಿದ್ದಾರೆ. ಧೋನಿ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ, 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಹಾಗೂ 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾಗಿ ಕಳೆದೊಂದು ದಶಕದಲ್ಲಿ ಟೀಂ ಇಂಡಿಯಾ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಇನ್ನು ಧೋನಿ ನೇತೃತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 5 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬಾಲ್ಯದಲ್ಲಿ ಬ್ಯಾನರ್ಜಿ ಸರ್ ಅವರಂತ ಗುರುಗಳಿಂದ ಪಡೆದುಕೊಂಡ ಕೋಚಿಂಗ್ ಹಾಗೂ ಶಿಸ್ತಿನಿಂದಾಗಿಯೇ ಇಂದು ಧೋನಿ, ಜಗತ್ತಿನ ದಿಗ್ಗಜ ನಾಯಕರಾಗಿ ಗುರುತಿಸಿಕೊಂಡಿರುವುದು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.