
-ಸುದರ್ಶನ್, ಸುವರ್ಣ ನ್ಯೂಸ್
ಬೆಂಗಳೂರು: ಕ್ರಿಕೆಟ್ ಸಿಟಿ ಹುಡುಗರ ಆಟ ಎಂಬ ಮಾತನ್ನು ಹಳ್ಳಿ ಹುಡುಗರು ಪದೇ ಪದೇ ಸುಳ್ಳಾಗಿಸುತ್ತಲೇ ಬಂದಿದ್ದಾರೆ. ಹಳ್ಳಿ ಹುಡುಗರ ತಾಕತ್ತು ಎಂಥದ್ದು ಎಂಬುದಕ್ಕೆ ರಾಂಚಿಯಿಂದ ಬಂದ ಧೋನಿ ಭಾರತಕ್ಕೆ ಎರಡೆರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ಸಾಧನೆಯೇ ಸಾಕು.
ಗದಗದಿಂದ ಬಂದ ಸುನೀಲ್ ಜೋಶಿ ಭಾರತ ಪರ 84 ಅಂತರಾಷ್ಟ್ರೀಯ ಪಂದ್ಯಗಳನ್ನಾಡುತ್ತಾರೆ. ದಾವಣಗೆರೆಯ ಆಟೋ ರಿಕ್ಷಾ ಚಾಲಕರೊಬ್ಬರ ಮಗ ವಿನಯ್ ಕುಮಾರ್ ಕರ್ನಾಟಕದ ಸರ್ವಶ್ರೇಷ್ಠ ರಣಜಿ ಹೀರೋ ಆಗಿ ಹೆಸರು ಮಾಡುತ್ತಾರೆ. ಅಷ್ಟೇ ಅಲ್ಲ, ದೇಶವನ್ನೂ ಪ್ರತಿನಿಧಿಸುತ್ತಾರೆ. ಇದು ನಮ್ಮ ಹಳ್ಳಿ ಹುಡುಗರ ಶಕ್ತಿ ಮತ್ತು ತಾಕತ್ತು. ಅಂಥಾ ತಾಕತ್ತಿನ ಮತ್ತೊಬ್ಬ ಹಳ್ಳಿ ಪ್ರತಿಭೆ ಎದ್ದು ಬಂದಿದ್ದಾನೆ. ಸದ್ದು ಮಾಡುತ್ತಿದ್ದಾನೆ.. ಅವಕಾಶವನ್ನೇ ನೀಡದೆ ಖಾಲಿ ಕೂರಿಸಿ ಸದ್ದೇ ಇಲ್ಲದಂತೆ ಮಾಡಿದವರಿಗೆ ಆಟದಿಂದಲೇ ಉತ್ತರ ಕೊಡುತ್ತಿದ್ದಾನೆ.
ಹೆಸರು ಮನೋಜ್ ಭಾಂಡಗೆ. ರಾಯಚೂರಿನ ಹುಡುಗ. Pocket dynamo. ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್’ನಂತೆ ಬಲಗೈ ಮಧ್ಯಮ ವೇಗಿ, ಎಡಗೈ ದಾಂಡಿಗ. ದೊಡ್ಡ ದೊಡ್ಡ ಸಿಕ್ಸರ್’ಗಳನ್ನು ಬಾರಿಸುವ ಸಿಡಿಲ ಹೊಡೆತಗಳ ಆಟಗಾರ. He is one of the clean strikers of the cricket ball.
ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಆಡಿದ ಮೊದಲ ಎರಡೂ ಪಂದ್ಯಗಳಲ್ಲಿ ಭಾಂಡಗೆ ಆಟವನ್ನು ನೋಡಿದವರು, ಆರ್’ಸಿಬಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಶಿವಮೊಗ್ಗ ವಿರುದ್ಧ 16 ಎಸೆತಗಳಲ್ಲಿ 42 ನಾಟೌಟ್. ಬೆಂಗಳೂರು ವಿರುದ್ಧ 33 ಎಸೆತಗಳಲ್ಲಿ ಅಜೇಯ 58. ಈ ಆರ್’ಸಿಬಿಯವರು ಇಡೀ 2 ವರ್ಷ ತಂಡದಲ್ಲಿಟ್ಟುಕೊಂಡು ಒಂದೂ ಅವಕಾಶ ನೀಡಲಿಲ್ಲವಲ್ಲಾ ಈ ಹುಡುಗನಿಗೆ..?
ಮನೋಜ್ ಭಾಂಡಗೆಗೆ ಐಪಿಎಲ್’ನಲ್ಲಿ ಬೆಂಚ್ ಕಾಯಿಸುವುದನ್ನು ಬಿಟ್ಟು ಒಂದೆರಡು ಅವಕಾಶ ನೀಡಿದ್ದರೆ, rcb ತಂಡ ಕಳೆದುಕೊಳ್ಳುವಂಥದ್ದೇನಿತ್ತು..? ಅದ್ಯಾರೋ ಪ್ರಭುದೇಸಾಯಿ, ಅನುಜ್ ರಾವತ್’ನಂಥ ಯಾರೋ ಕೆಲಸಕ್ಕೆ ಬಾರದ ಆಟಗಾರರನ್ನು ಬೆಳೆಸುವ ಬದಲು ನಮ್ಮ ಈ ಹುಡುಗನನ್ನು ಬೆಳೆಸಿದ್ದರೆ ಆರ್’ಸಿಬಿ ತಂಡಕ್ಕೆ ಆಸ್ತಿಯಾಗುತ್ತಿದ್ದ.
ಒಂದು ಓವರ್ನಲ್ಲಿ 39 ರನ್: ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ 17 ವರ್ಷದ ಯುವರಾಜ್ ಸಿಂಗ್ ರೆಕಾರ್ಡ್ ನುಚ್ಚುನೂರು..!
ಆರ್’ಸಿಬಿ ಟೀಮ್ ಮ್ಯಾನೇಜ್ಮೆಂಟ್’ಗೆ ಒಂದೇ ಒಂದು ಮನವಿ. ದಯವಿಟ್ಟು ಈ ಮನೋಜ್ ಭಾಂಡಗೆಯನ್ನು ತಂಡದಲ್ಲಿ ಉಳಿಸಿಕೊಳ್ಳಬೇಡಿ.. ನೀವು ಅವನನ್ನು ತಂಡದಿಂದ ರಿಲೀಸ್ ಮಾಡಿದರೆ, ಇನ್ಯಾವುದೋ ತಂಡವನ್ನು ಸೇರಿಕೊಳ್ಳುತ್ತಾನೆ. ಅಲ್ಲಿ ಆತನ ಪ್ರತಿಭೆಗೆ ಬೆಲೆ ಸಿಕ್ಕೇ ಸಿಗುತ್ತದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೂ ಒಂದು ಮನವಿ.. ಈ ಹುಡುಗನನ್ನು ಈ ಬಾರಿ ರಣಜಿ ಟ್ರೋಫಿಯಲ್ಲಿ ಆಡಿಸಿ ಪುಣ್ಯ ಕಟ್ಟಿಕೊಳ್ಳಿ. ಇಲ್ಲವಾದರೆ, ಮತ್ತೊಬ್ಬ ಪ್ರತಿಭಾವಂತನನ್ನು ಕರ್ನಾಟಕ ಕಳೆದುಕೊಳ್ಳಬೇಕಾಗುತ್ತದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.