
ಬೆಂಗಳೂರು: ಕಳೆದ ಜೂನ್ನಲ್ಲಿ ಕಾಲ್ತುಳಿತದ ಭೀಕರ ಘಟನೆಗೆ ಸಾಕ್ಷಿಯಾಗಿದ್ದ ಚಿನ್ನಸ್ವಾಮಿ ಕ್ರೀಡಾಂಗಣ ಈಗ ಐಪಿಎಲ್ಗೆ ಸಜ್ಜಾಗುತ್ತಿದೆ. ಆದರೆ ಲೀಗ್ಗೆ ಕ್ರೀಡಾಂಗಣವನ್ನು ಸಜ್ಜುಗೊಳಿಸಲು ಕೆಎಸ್ಸಿಎ ಕಳೆದ 3 ತಿಂಗಳಲ್ಲಿ ಅವಿರತ ಶ್ರಮ ಪಟ್ಟಿದ್ದು, ತನ್ನ ಕಾರ್ಯದಲ್ಲಿ ಕೊನೆಗೂ ಯಶಸ್ಸು ಸಾಧಿಸಿದೆ.
ಹಿಂದಿನ ಸಮಿತಿಯ ಅವಧಿ ಸೆಪ್ಟೆಂಬರ್ನಲ್ಲಿ ಕೊನೆಗೊಂಡು, ವೆಂಕಟೇಶ್ ಪ್ರಸಾದ್ ನಾಯಕತ್ವದ ಹೊಸ ಸಮಿತಿ ಡಿಸೆಂಬರ್ನಲ್ಲಿ ಅಧಿಕಾರಕ್ಕೆ ಬಂದಿತ್ತು. ಆಡಳಿತ ಕೈಗೆತ್ತಿಕೊಂಡ ಕೆಲ ದಿನಗಳಲ್ಲೇ ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಹಾಗೂ ಐಪಿಎಲ್ ಪಂದ್ಯಗಳನ್ನು ಮರಳಿತರುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿತ್ತು.
ಮೊದಲಿಗೆ ಸರ್ಕಾರದ ಅನುಮತಿಗಾಗಿ ಸತತ ಪ್ರಯತ್ನಪಟ್ಟ ಕೆಎಸ್ಸಿಎ, ಹಲವು ಇಲಾಖೆಗಳ ಜೊತೆ ನಿರಂತರ ಸಭೆ, ಪರಿಶೀಲನೆ ಬಳಿಕ ಷರತ್ತುಬದ್ಧ ಅನುಮತಿ ಗಿಟ್ಟಿಸಿಕೊಂಡಿತ್ತು. ಇದಾದ ಬಳಿಕ, ಬೆಂಗಳೂರಿನಲ್ಲಿ ಆಡುವಂತೆ ಆರ್ಸಿಬಿಯನ್ನು ಮನವೊಲಿಸಲು ಸಾಕಷ್ಟು ಶ್ರಮವಹಿಸಿತ್ತು. ಈ ನಡುವೆ, ಐಪಿಎಲ್ಗೆ ಷರತ್ತಿಲ್ಲದ ಅನುಮತಿ ನೀಡಬೇಕಿದ್ದರೆ ಹಲವು ಸುರಕ್ಷತಾ ಕ್ರಮಗಳನ್ನು ಕೆಎಸ್ಸಿಎ ಕೈಗೊಳ್ಳಬೇಕಿತ್ತು. ಆದರೆ ಸೀಮಿತ ಅವಧಿಯಲ್ಲಿ ಬೃಹತ್ ಪ್ರವೇಶದ್ವಾರ, ಟಿಕೆಟ್ ಪರಿಶೀಲನಾ ಗೇಟ್, ಹೋಲ್ಡಿಂಗ್ ಏರಿಯಾ ಸೇರಿದಂತೆ ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸಿದೆ. ಈ ಹಿಂದೆ ಎನ್ಸಿಎ ಇದ್ದ ಜಾಗವನ್ನು ಖಾಲಿ ಬಿಡಲಾಗಿದ್ದು, ಬೃಹತ್ ಗೇಟ್ಗಳ ಒಳಗೆ ಏರ್ಪೋರ್ಟ್ ರೀತಿಯ ಟಿಕೆಟ್ ಸ್ಕ್ಯಾನಿಂಗ್ ಕೌಂಟರ್ಗಳನ್ನು ಅಳವಡಿಸಲಾಗಿದೆ. ಕೆಲ ಮರಗಳನ್ನು ಕತ್ತರಿಸಿ, ಕಾಂಕ್ರೀಟ್ ಹಾಕಿ ಜಾಗವನ್ನು ಸಮತಟ್ಟು ಮಾಡಲಾಗಿದೆ. ಕ್ರೀಡಾಂಗಣದ ಸುತ್ತಲೂ ಸಿಸಿ ಕ್ಯಾಮರಾ ಅಳವಡಿಸಿ, ಆಯಕಟ್ಟಿನ ಜಾಗಗಳನ್ನು ಕಾಂಕ್ರೀಟ್ ಹಾಕಿ ಸರಿಪಡಿಸಲಾಗಿದೆ.
ಸರ್ಕಾರದಿಂದ ಅನುಮತಿಗಾಗಿ ನಿರಂತರ ಪ್ರಯತ್ನ
ವಿವಿಧ ಇಲಾಖೆ ಜತೆ ಹಲವು ಸುತ್ತಿನ ಸಭೆ, ಪರಿಶೀಲನೆ
ಕ್ರೀಡಾಂಗಣದಲ್ಲಿ ಸುರಕ್ಷತಾ ಕ್ರಮಗಳ ಅಳವಡಿಕೆ
ಬೆಂಗಳೂರಿನಲ್ಲಿ ಆಡುವಂತೆ ಆರ್ಸಿಬಿಯ ಮನವೊಲಿಕೆ
ಹಲವು ಬೃಹತ್ ಗೇಟ್ಗಳ ಅಳವಡಿಕೆ ಕಾರ್ಯ ಪೂರ್ಣ
ಕ್ರೀಡಾಂಗಣದ ಸುತ್ತಲೂ ಹಲವು ಕಾಮಗಾರಿ
ಕಾರ್ಮಿಕರಿಂದಲೂ ಹಗಲು-ರಾತ್ರಿ ನಿರಂತರ ಕೆಲಸ
ಕಾಲ್ತುಳಿತದಲ್ಲಿ ಮೃತಪಟ್ಟ 11 ಅಭಿಮಾನಿಗಳಿಗಾಗಿ ಕ್ರೀಡಾಂಗಣದಲ್ಲಿ 11 ವಿಶೇಷ ಸೀಟುಗಳನ್ನು ಕಾಯ್ದಿರಿಸಲಾಗಿದ್ದು, ಹೂವಿನ ಅಲಂಕಾರ ಮಾಡಿ ಅವುಗಳನ್ನು ಖಾಲಿ ಬಿಡಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.