
ನವದೆಹಲಿ(ಮೇ.14): 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಲಖನೌ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರು, ಸೋಮವಾರ ತಮ್ಮ ತಂಡದ ನಾಯಕ ಕೆ ಎಲ್ ಅವರಿಗೆ ತಮ್ಮ ಮನೆಯಲ್ಲಿಯೇ ಡಿನ್ನರ್ ಪಾರ್ಟಿ ನೀಡಿದ್ದಾರೆ. ಈ ವೇಳೆ ಸಂಜೀವ್ ಗೋಯೆಂಕಾ ಅವರನ್ನು ರಾಹುಲ್ ಅಪ್ಪಿಕೊಂಡಿದ್ದಾರೆ. ಈ ಫೋಟೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು, ಕಳೆದ ವಾರ ಸನ್ರೈಸರ್ಸ್ ಹೈದರಾಬಾದ್ ಹಾಗೂ ಲಖನೌ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಲಖನೌ ಎದುರು ಆರೆಂಜ್ ಆರ್ಮಿ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಪ್ಲೇ ಆಫ್ ಪ್ರವೇಶಿಸುವ ನಿಟ್ಟಿನಲ್ಲಿ ಮಹತ್ವದ ಪಂದ್ಯ ಎನಿಸಿಕೊಂಡಿದ್ದ ಆ ಮ್ಯಾಚ್ನಲ್ಲಿ ಕೆ ಎಲ್ ರಾಹುಲ್ ನೇತೃತ್ವದ ಲಖನೌ ತವರಿನಲ್ಲಿಯೇ ದಯನೀಯ ಸೋಲು ಅನುಭವಿಸಿತ್ತು.
RCBಗೆ 5ನೇ ದಿಗ್ವಿಜಯ; ಚೆನ್ನೈ ಎದುರು ಕೇವಲ ಇಷ್ಟು ರನ್ ಅಂತರದಲ್ಲಿ ಗೆದ್ರೆ ಬೆಂಗಳೂರು ಪ್ಲೇ ಆಫ್ ಫಿಕ್ಸ್..!
ಇದರ ಬೆನ್ನಲ್ಲೇ ತಾಳ್ಮೆ ಕಳೆದುಕೊಂಡ ಲಖನೌ ತಂಡದ ಮಾಲೀಕ ಸಂಜೀವ್ ಗೋಯೆಂಕಾ, ಮೈದಾನದಲ್ಲಿಯೇ ನಾಯಕನ ಕೆಲವು ನಿರ್ಧಾರಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. 4 ಗೋಡೆಯೊಳಗೆ ನಡೆಯಬೇಕಿದ್ದ ಚರ್ಚೆಯನ್ನು, ಎಲ್ಲರೆದುರು ಸಿಟ್ಟಿನಲ್ಲಿ ಗೋಯೆಂಕಾ ಮಾತನಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದಷ್ಟೇ ಅಲ್ಲದೇ ಸಂಜೀವ್ ಗೋಯೆಂಕಾ ವರ್ತನೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕಟು ಟೀಕೆಗಳು ವ್ಯಕ್ತವಾಗಿದ್ದವು.
ಇನ್ನು ಇದೆಲ್ಲದರ ನಡುವೆ ಕೆ ಎಲ್ ರಾಹುಲ್ ಹಾಗೂ ಸಂಜೀವ್ ಗೋಯೆಂಕಾ ನಡುವೆ ಮನಸ್ತಾಪ ಏರ್ಪಟ್ಟಿದ್ದು, ಲೀಗ್ ಹಂತದಲ್ಲಿ ಲಖನೌ ಆಡಲಿರುವ ಎರಡು ಪಂದ್ಯಗಳಿಗೂ ಮುನ್ನ ನಾಯಕತ್ವದಿಂದ ಕೆಳೆಗಿಳಿಯಲಿದ್ದಾರೆ. ಹಾಗೂ ಮುಂದಿನ ಆವೃತ್ತಿಯಲ್ಲಿ ಲಖನೌ ಫ್ರಾಂಚೈಸಿಯು ಕೆ ಎಲ್ ರಾಹುಲ್ ಅವರನ್ನು ತಂಡದಿಂದ ಕೈಬಿಡಲಿದೆ ಎಂದೆಲ್ಲಾ ವರದಿಯಾಗಿತ್ತು.
ದಿಢೀರ್ ಐಪಿಎಲ್ ತೊರೆದ ಇಂಗ್ಲೆಂಡ್ ಸ್ಟಾರ್ ಪ್ಲೇಯರ್ಸ್; ಈ ಎರಡು ತಂಡಗಳಿಗೆ ಬಿಗ್ ಲಾಸ್..!
ಇನ್ನು ಲಖನೌ ತಂಡವು ಇಂದು ಡೆಲ್ಲಿ ಎದುರು ಮಾಡು ಇಲ್ಲವೇ ಮಡಿ ಪಂದ್ಯ ಆಡಲಿದೆ. ಆದರೆ ನಾಯಕ ಕೆ ಎಲ್ ರಾಹುಲ್ ತಂಡದ ಜತೆ ಡೆಲ್ಲಿಗೆ ಹೋಗಿರಲಿಲ್ಲ. ಇದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಇಷ್ಟೆಲ್ಲದರ ನಡುವೆ ಇದೀಗ ವೈರಲ್ ಆಗುತ್ತಿರುವ ಫೋಟೋದಲ್ಲಿ ರಾಹುಲ್ ನಗುಮೊಗದಲ್ಲೇ ಮಾಲೀಕ ಸಂಜೀವ್ ಗೋಯೆಂಕಾ ಅವರನ್ನು ಅಪ್ಪಿಕೊಂಡಿದ್ದಾರೆ. ಇದೀಗ ಲಖನೌ ಫ್ರಾಂಚೈಸಿಯ ಕಡೆಯಿಂದ ಈ ವಿವಾದಕ್ಕೆ ತೇಪೆ ಹಚ್ಚುವ ಪ್ರಯತ್ನವೇ ಅಥವಾ ನಿಜಕ್ಕೂ ಇಬ್ಬರೂ ಮುನಿಸು ಮರೆತು ಒಂದಾಗಿದ್ದಾರಾ ಎನ್ನುವುದಕ್ಕೆ ಕಾಲವೇ ಉತ್ತರ ಕೊಡಬೇಕಿದೆ.
ಲಖನೌ ಸೂಪರ್ ಜೈಂಟ್ಸ್ ತಂಡವು ಲೀಗ್ ಹಂತದಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಇದಾದ ಬಳಿಕ ತಮ್ಮ ಪಾಲಿನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಈ ಎರಡು ಪಂದ್ಯಗಳಲ್ಲಿ ಲಖನೌ ದೊಡ್ಡ ಅಂತರದಲ್ಲಿ ಜಯಿಸಿದರೆ, ಅನಾಯಾಸವಾಗಿ ಪ್ಲೇ ಆಫ್ಗೇರಲಿದೆ. ಒಂದು ವೇಳೆ ಒಂದು ಸೋಲು ಕಂಡರೂ ಬಹುತೇಕ ಲಖನೌ ಪಡೆಯ ಪ್ಲೇ ಆಫ್ ಕನಸು ನುಚ್ಚುನೂರಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.