KPL ಪಿಕ್ಸಿಂಗ್: ಭಾರತ ತಂಡದಲ್ಲಿ ಆಡುವ ಸಾಮರ್ಥ್ಯವಿದ್ದ ಗೌತಮ್..!

By Kannadaprabha NewsFirst Published Nov 8, 2019, 1:40 PM IST
Highlights

ಕರ್ನಾಟಕದ ಪ್ರತಿಭಾನ್ವಿತ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಿ.ಎಂ. ಗೌತಮ್ ಮ್ಯಾಚ್ ಫಿಕ್ಸಿಂಗ್ ನಡೆಸಿದ ಆರೋಪದಡಿ ಇದೀಗ ಬೆಂಗಳೂರಿನ ಸಿಸಿಬಿ ಪೊಲೀಸರ ಅತಿಥಿಯಾಗಿದ್ದಾರೆ. ಟೀಂ ಇಂಡಿಯಾ ಪ್ರತಿನಿಧಿಸುವ ಸಾಮರ್ಥ್ಯವಿದ್ದ ಗೌತಮ್ ಇದೀಗ ದುರಂತ ನಾಯಕನಾಗಿ ಬದಲಾಗಿದ್ದು ಮಾತ್ರ ವಿಪರ್ಯಾಸ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಬೆಂಗಳೂರು[ನ.08]: ಭಾರತೀಯ ದೇಸಿ ಕ್ರಿಕೆಟ್ ನಲ್ಲಿ ಸಿ.ಎಂ.ಗೌತಮ್ ದೊಡ್ಡ ಹೆಸರು. 2008ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಅವರು, 2013-14, 2014-15ರಲ್ಲಿ ಕರ್ನಾಟಕ ತಂಡದ ರಣಜಿ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ದ್ದರು. 9 ವರ್ಷಗಳ ಕಾಲ ರಾಜ್ಯ ತಂಡದಲ್ಲಿ ಆಡಿದ್ದ ಅವರು, 2013ರಲ್ಲಿ ತಂಡವನ್ನು 3 ಪಂದ್ಯಗಳಲ್ಲಿ ಮುನ್ನಡೆಸಿದ್ದರು. ಅವರ ನಾಯಕತ್ವದಲ್ಲಿ ರಾಬಿನ್ ಉತ್ತಪ್ಪ, ಕೆ.ಎಲ್. ರಾಹುಲ್, ಮಯಾಂಕ್ ಅಗರ್‌ವಾಲ್, ಮನೀಶ್ ಪಾಂಡೆಯಂತಹ ಆಟಗಾರರು ಆಡಿದ್ದರು.

ಗೌತಮ್ ಕಪಾಳಕ್ಕೆ ಬಾರಿಸಿ ಸತ್ಯ ಕಕ್ಕಿಸಿದ ಸಂದೀಪ್ ಪಾಟೀಲ್

ಭಾರತ ‘ಎ’ ಪರವೂ ಆಡಿದ್ದ ಗೌತಮ್, ಟೀಂ ಇಂಡಿಯಾಗೆ ಆಯ್ಕೆಯಾಗಬಲ್ಲ ಆಟಗಾರ ಎನಿಸಿದ್ದರು. ಎಂ.ಎಸ್. ಧೋನಿ, ವೃದ್ಧಿಮಾನ್ ಸಾಹ ನಂತರ ಭಾರತದ ಅತ್ಯುತ್ತಮ ವಿಕೆಟ್ ಕೀಪರ್ ಎಂದು ಗೌತಮ್ ಅವರನ್ನು ಪರಿಗಣಿಸಲಾಗಿತ್ತು. ಆದರೀಗ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ವಿಚಾರದಲ್ಲಿ ದುರಂತ ನಾಯಕನಾಗಿ ಹೊರಹೊಮ್ಮಿದ್ದಾರೆ.

KPL Fixing: 4ನೇ ಪ್ರಕರಣ ದಾಖಲು; ಪೊಲೀಸರ ಸುದ್ದಿಗೋಷ್ಠಿ!

94 ಪ್ರಥಮ  ದರ್ಜೆ ಪಂದ್ಯಗಳನ್ನು ಆಡಿರುವ ಗೌತಮ್ 10 ಶತಕ, 24 ಅರ್ಧ ಶತಕಗಳೊಂದಿಗೆ 4716 ರನ್ ಗಳಿಸಿದ್ದಾರೆ. ಅವರ ವೈಯಕ್ತಿಕ ಗರಿಷ್ಠ ಸ್ಕೋರ್ ಅಜೇಯ 264 ರನ್. ಲಿಸ್ಟ್ ‘ಎ’ ಮಾದರಿಯಲ್ಲಿ 58 ಪಂದ್ಯಗಳಿಂದ 1212 ರನ್, 48 ಟಿ20 ಪಂದ್ಯಗಳಲ್ಲಿ 511 ರನ್ ಗಳಿಸಿದ್ದಾರೆ. 2013ರಲ್ಲಿ RCB ತಂಡದ ಜತೆ ಒಪ್ಪಂದಕ್ಕೆ ಸಹಿ ಹಾಕಿ ಐಪಿಎಲ್’ಗೆ ಕಾಲಿಟ್ಟಿದ್ದ ಗೌತಮ್, ಬಳಿಕ ಡೆಲ್ಲಿ ಡೇರ್ ಡೆವಿಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡದಲ್ಲೂ ಆಡಿದ್ದರು. 3 ಆವೃತ್ತಿಗಳ ಐಪಿಎಲ್’ನಲ್ಲಿ ಒಟ್ಟು 13 ಪಂದ್ಯಗಳನ್ನು ಗೌತಮ್ ಆಡಿದ್ದರು.

ಇಂದು ಗೋವಾ ಟಿ20 ತಂಡ ಮುನ್ನಡೆಸಬೇಕಿತ್ತು:

ಸಿ.ಎಂ.ಗೌತಮ್ ಈ ವರ್ಷ ದೇಸಿ ಋತುವಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ (KSCA) ನಿರಾಕ್ಷೇಪಣಾ ಪತ್ರ ಪಡೆದು ಗೋವಾ ತಂಡವನ್ನು ಸೇರಿಕೊಂಡಿದ್ದರು. ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೌತಮ್ ಆಟ ಕಳಪೆಯಾಗಿತ್ತು. 7 ಪಂದ್ಯಗಳಲ್ಲಿ ಕೇವಲ 156 ರನ್ ಗಳಿಸಿದ್ದರು.

ಶುಕ್ರವಾರದಿಂದ ಆರಂಭಗೊಳ್ಳಲಿರುವ ಸಯ್ಯದ್ ಮುಷ್ತಾಕ್ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಗೋವಾ ತಂಡವನ್ನು ಗೌತಮ್ ಮುನ್ನಡೆಸಬೇಕಿತ್ತು. ತಂಡದೊಂದಿಗೆ ಅವರು ವಿಶಾಖಪಟ್ಟಣಕ್ಕೆ ತೆರಳಿದ್ದರು. ಆದರೆ ಬುಧವಾರ ತಂಡದ ಕೋಚ್ ದೊಡ್ಡ ಗಣೇಶ್’ಗೆ ತಾವು ತಕ್ಷಣ ಹೊರಡ ಬೇಕು ಎಂದು ತಿಳಿಸಿ ಬೆಂಗಳೂರಿಗೆ ವಾಪಸಾದರು. ಬುಧವಾರ ರಾತ್ರಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ, ಬಂಧನಕ್ಕೊಳಪಡಿಸಲಾಯಿತು. ಇದೀಗ ಗೋವಾ ತಂಡ ಗೌತಮ್ ಗುತ್ತಿಗೆಯನ್ನು ರದ್ದುಗೊಳಿಸಿದೆ.

ರಾಜ್ಯದಿಂದ ಈಶಾನ್ಯಕ್ಕೆ ವಲಸೆ ಹೋಗಿದ್ದ ಖಾಜಿ

2013ರಲ್ಲಿ ಪ್ರಥಮ  ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಆಲ್ರೌಂಡರ್ ಅಬ್ರಾರ್ ಖಾಜಿ, ಕರ್ನಾಟಕ ತಂಡದಲ್ಲಿ ಕಾಯಂ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಕಳೆದ ವರ್ಷ ನಾಗಾಲ್ಯಾಂಡ್ ತಂಡಕ್ಕೆ ವಲಸೆ ಹೋಗಿದ್ದರು.

click me!