'ನಾನೂ ಒಬ್ಬ ಟಿ20 ಪ್ಲೇಯರ್ ಅಂತ ಯಾರೂ ನೋಡ್ಲೇ ಇಲ್ಲ, ಟೆಸ್ಟ್ ಸ್ಪೆಷಲಿಸ್ಟ್ ಅಂದ್ರು' - ರಾಹುಲ್ ನೋವಿನ ಮಾತು

Published : May 05, 2026, 10:21 PM IST
KL Rahul IPL

ಸಾರಾಂಶ

ದೆಹಲಿ ಕ್ಯಾಪಿಟಲ್ಸ್ ಓಪನರ್ ಕೆ.ಎಲ್. ರಾಹುಲ್, ತಮ್ಮನ್ನು 'ಟೆಸ್ಟ್ ಸ್ಪೆಷಲಿಸ್ಟ್' ಎಂದು ಕರೆಯುತ್ತಿದ್ದ ದಿನಗಳ ಬಗ್ಗೆ ಮಾತನಾಡಿದ್ದಾರೆ. ತಂದೆಯಾದ ನಂತರ ತಮ್ಮ ದೃಷ್ಟಿಕೋನ ಬದಲಾಗಿದ್ದು, ವೈಯಕ್ತಿಕ ದಾಖಲೆಗಳಿಗಿಂತ ತಂಡಕ್ಕಾಗಿ ಟ್ರೋಫಿ ಗೆಲ್ಲುವುದೇ ತಮ್ಮ ಗುರಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮುಂಬೈ: ಭಾರತೀಯ ಕ್ರಿಕೆಟ್ ಜಗತ್ತಿನಲ್ಲಿ ತಮ್ಮನ್ನು ಕೇವಲ 'ಟೆಸ್ಟ್ ಸ್ಪೆಷಲಿಸ್ಟ್' ಎಂದು ಮುದ್ರೆ ಒತ್ತಿದ್ದ ದಿನಗಳ ಬಗ್ಗೆ ದೆಹಲಿ ಕ್ಯಾಪಿಟಲ್ಸ್ ಓಪನರ್ ಕೆ.ಎಲ್. ರಾಹುಲ್ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ತಮ್ಮ ವೃತ್ತಿ ಬದುಕಿನ ಆರಂಭದಲ್ಲಿ ಯಾರೂ ತಮ್ಮನ್ನು ಒಬ್ಬ ಉತ್ತಮ ಟಿ20 ಆಟಗಾರ ಅಥವಾ ವೈಟ್-ಬಾಲ್ ಪ್ಲೇಯರ್ ಅಂತ ಪರಿಗಣಿಸಿರಲಿಲ್ಲ ಎಂದು ಜಿಯೋ ಸ್ಟಾರ್‌ನ 'ಸೂಪರ್‌ಸ್ಟಾರ್ಸ್' ಶೋನಲ್ಲಿ ರಾಹುಲ್ ಹೇಳಿಕೊಂಡಿದ್ದಾರೆ. "ಹತ್ತು ವರ್ಷಗಳ ಹಿಂದೆ, ಒಂದು ಟಿ20 ತಂಡದಲ್ಲಿ ಜಾಗ ಸಿಗುವುದಕ್ಕೆ ನಾನು ಏನು ಬೇಕಾದರೂ ಕೊಡಲು ಸಿದ್ಧನಿದ್ದೆ. ನನ್ನನ್ನು ಯಾರೂ ಟಿ20 ಆಟಗಾರ ಅಂತ ಅಂದ್ಕೊಂಡೇ ಇರಲಿಲ್ಲ. ಆ 'ಟೆಸ್ಟ್ ಪ್ಲೇಯರ್' ಅನ್ನೋ ಹಣೆಪಟ್ಟಿಯಿಂದ ಹೊರಬಂದು, ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಇಷ್ಟು ದೂರ ಬಂದಿದ್ದಕ್ಕೆ ನನಗೆ ಹೆಮ್ಮೆ ಇದೆ," ಅಂತಾನೂ ರಾಹುಲ್ ಹೇಳಿದ್ದಾರೆ.

ಪ್ರತಿ ಕಷ್ಟದ ಸಂದರ್ಭದಲ್ಲೂ 100% ಶ್ರಮ

ತಮ್ಮ ವೃತ್ತಿಜೀವನದಲ್ಲಿ ಹಲವು ತಪ್ಪುಗಳನ್ನು ಮಾಡಿರಬಹುದು, ಆದರೆ ಪ್ರತಿಯೊಂದು ಕಷ್ಟದ ಸಂದರ್ಭದಲ್ಲೂ ತಮ್ಮ 100% ಶ್ರಮ ಹಾಕಿದ್ದೇನೆ ಎಂದು ರಾಹುಲ್ ತಿಳಿಸಿದ್ದಾರೆ. 2022ರ ನಂತರ ರಾಹುಲ್ ಭಾರತ ತಂಡಕ್ಕೆ ಟಿ20 ಆಡಿಲ್ಲ. ಆದರೂ, ಐಪಿಎಲ್‌ನಲ್ಲಿ ತಮ್ಮ ಪ್ರದರ್ಶನದ ಮೂಲಕವೇ ಟೀಕಾಕಾರರ ಬಾಯಿ ಮುಚ್ಚಿಸುತ್ತಿದ್ದಾರೆ. ಈ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಹುಲ್ ಗಳಿಸಿದ 152* ರನ್ (67 ಎಸೆತಗಳಲ್ಲಿ) ಟಿ20ಯಲ್ಲಿ ಭಾರತೀಯ ಆಟಗಾರನೊಬ್ಬ ಗಳಿಸಿದ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಆಗಿದೆ. ಈ ಮೂಲಕ, ಐಪಿಎಲ್‌ನಲ್ಲಿ ಮೂರು ಬೇರೆ ಬೇರೆ ತಂಡಗಳ ಪರ ಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ರಾಹುಲ್ ಪಾತ್ರರಾಗಿದ್ದಾರೆ.

ಪಾಸಿಟಿವ್ ಪರಿಣಾಮ

ಮಗಳ ಹುಟ್ಟು, ಕ್ರಿಕೆಟ್ ಬಗ್ಗೆ ತಮ್ಮ ದೃಷ್ಟಿಕೋನವನ್ನೇ ಬದಲಾಯಿಸಿತು ಅಂತ ರಾಹುಲ್ ಹೇಳಿದ್ದಾರೆ. ಕಳೆದ ವರ್ಷ (ಮಾರ್ಚ್ 2025 ರಲ್ಲಿ) ರಾಹುಲ್ ಮತ್ತು ನಟಿ ಆಥಿಯಾ ಶೆಟ್ಟಿ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ‘ಅಪ್ಪನಾದದ್ದು ನನ್ನ ಜೀವನದ ಅತ್ಯಂತ ಸುಂದರ ಅನುಭವ. ನನ್ನ ಮಗಳ ನಗು ನೋಡಿದಾಗ, ನನ್ನೆಲ್ಲಾ ನೋವು, ಚಿಂತೆಗಳನ್ನು ಮರೆತುಬಿಡುತ್ತೇನೆ. ಇದು ನನ್ನ ಕ್ರಿಕೆಟ್ ಮೇಲೂ ಪಾಸಿಟಿವ್ ಪರಿಣಾಮ ಬೀರಿದೆ. ಈಗ ನಾನು ಆಟದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆ 4-5 ಗಂಟೆಗಳ ಕಾಲ, ನಾನು ಆಟವನ್ನು ಎಂಜಾಯ್ ಮಾಡಲು ಮಾತ್ರ ಪ್ರಯತ್ನಿಸುತ್ತೇನೆ’ ಎಂದು ರಾಹುಲ್ ವಿವರಿಸಿದ್ದಾರೆ.

ತಂಡಕ್ಕಾಗಿ ಇನ್ನಷ್ಟು ಪ್ರಶಸ್ತಿ

ಐಪಿಎಲ್‌ನ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎಂ.ಎಸ್. ಧೋನಿಯನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೇರಿದ್ದರೂ, ತಮ್ಮ ಗಮನ ಇರುವುದು ದಾಖಲೆಗಳ ಮೇಲಲ್ಲ, ಟ್ರೋಫಿಗಳ ಮೇಲೆ ಎಂದು ರಾಹುಲ್ ಸ್ಪಷ್ಟಪಡಿಸಿದ್ದಾರೆ. ‘ರನ್‌ಗಳ ವಿಚಾರದಲ್ಲಿ ಧೋನಿ ಭಾಯ್ ಅವರನ್ನು ನಾನು ಹಿಂದಿಕ್ಕಿದ್ದು ನನಗೆ ಗೊತ್ತೇ ಇರಲಿಲ್ಲ. ಆದರೆ ಅವರ ಹಾಗೆ ಐದು ಐಪಿಎಲ್ ಟ್ರೋಫಿಗಳನ್ನು ಗೆಲ್ಲಬೇಕು ಎಂಬ ಆಸೆ ನನಗಿದೆ. ವೈಯಕ್ತಿಕ ಸಾಧನೆಗಳಿಗಿಂತ ತಂಡದ ಗೆಲುವಿಗೆ ನಾನು ಹೆಚ್ಚು ಪ್ರಾಮುಖ್ಯತೆ ಕೊಡುತ್ತೇನೆ’ ಎಂದು ರಾಹುಲ್ ಹೇಳಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಇನ್ನೂ ಹಲವು ವರ್ಷಗಳು ಬಾಕಿ ಇವೆ ಮತ್ತು ದೇಶಕ್ಕಾಗಿ ಹಾಗೂ ತಂಡಕ್ಕಾಗಿ ಇನ್ನಷ್ಟು ಪ್ರಶಸ್ತಿಗಳನ್ನು ಗೆಲ್ಲುವುದೇ ತಮ್ಮ ಗುರಿ ಎಂದು ರಾಹುಲ್ ತಿಳಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

15 ವರ್ಷದ ನೋವು, ಜೈ ಶ್ರೀರಾಮ್ ನೋಟ್ ಬರೆದು ಮೊದಲ ವಿಕೆಟ್ ಸಂಭ್ರಮಿಸಿದ ಮುಂಬೈ ಸ್ಪಿನ್ನರ್
ಐಪಿಎಲ್ ಮಹತ್ವದ ಘಟ್ಟದಲ್ಲೇ ಆರ್‌ಸಿಬಿ ಶಾಕ್, ತವರಿಗೆ ಮರಳಿದ ಆರಂಭಿಕ ಫಿಲ್ ಸಾಲ್ಟ್