
ದುಬೈ(ಜ.24): ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಗೆಲುವಿನೊಂದಿಗೆ ಶುರುವಾದ ಟೀಂ ಇಂಡಿಯಾ(Team India) ಅಭಿಯಾನ, ಸೋಲಿನೊಂದಿಗೆ ಅಂತ್ಯವಾಗಿದೆ. ದಕ್ಷಿಣ ಆಫ್ರಿಕಾ ಎದುರಿನ ಸೆಂಚೂರಿನ್ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿ ದಾಖಲೆ ಬರೆದಿದ್ದ ಭಾರತ ತಂಡವು ಹರಿಣಗಳ ನಾಡಿನ ಪ್ರವಾಸದ ಕೊನೆಯ ಪಂದ್ಯವಾದ ಕೇಪ್ಟೌನ್ ಟೆಸ್ಟ್ನಲ್ಲಿ ರೋಚಕ ಸೋಲು ಕಾಣುವುದರೊಂದಿಗೆ ಮುಕ್ತಾಯವಾಗಿದೆ. ಈ ಸೋಲಿನ ಶಾಕ್ನಿಂದ ಹೊರಬರುವ ಮುನ್ನವೇ ಭಾರತ ತಂಡಕ್ಕೆ ಐಸಿಸಿ (ICC) ಮತ್ತೊಂದು ಶಾಕ್ ನೀಡಿದೆ.
ಹೌದು, ಕೇಪ್ಟೌನ್ ಟೆಸ್ಟ್ (Cape Town Test) ಪಂದ್ಯದಲ್ಲಿ ಟೀಂ ಇಂಡಿಯಾ 4 ರನ್ಗಳ ರೋಚಕ ಸೋಲು ಕಂಡಿದೆ. ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಿಧಾನಗತಿಯ ಬೌಲಿಂಗ್ ಮಾಡಿದ ತಪ್ಪಿಗಾಗಿ ಐಸಿಸಿಯು ಪಂದ್ಯದ ಸಂಭಾವನೆಯ 40% ದಂಡ ವಿಧಿಸಿದೆ. ರಾಹುಲ್ ಪಡೆಯು ನಿಗದಿತ ಸಮಯಕ್ಕಿಂತ ಎರಡು ಓವರ್ ಹೆಚ್ಚಿಗೆ ಸಮಯವನ್ನು ಬಳಸಿಕೊಂಡಿತ್ತು. ಕೆ.ಎಲ್. ರಾಹುಲ್ (KL Rahul) ನೇತೃತ್ವದ ಟೀಂ ಇಂಡಿಯಾ ನಿಗದಿತ ಸಮಯದಲ್ಲಿ ಬೌಲಿಂಗ್ ಮಾಡುವಲ್ಲಿ ವಿಫಲವಾಗಿತ್ತು.
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ಪ್ರಕಾರ ಪಂದ್ಯದ ಸಂಭಾವನೆ ಪ್ರತಿ ಓವರ್ಗೆ 20% ದಂಡದಂತೆ ಎರಡು ಓವರ್ಗೆ ಒಟ್ಟು ಪಂದ್ಯದ ಸಂಭಾವನೆಯ 40% ದಂಡವನ್ನು ಐಸಿಸಿ ಮ್ಯಾಚ್ ರೆಫ್ರಿ ಆಂಡಿ ಫೈಕ್ರಾಫ್ಟ್ ವಿಧಿಸಿದ್ದಾರೆ. ರಾಹುಲ್ ರೆಫ್ರಿಯ ಶಿಕ್ಷೆಯನ್ನು ಒಪ್ಪಿಕೊಂಡಿದ್ದರಿಂದ ಹೆಚ್ಚಿನ ವಿಚಾರಣೆ ನಡೆಸಲಿಲ್ಲ.
ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಎದುರು ಟೀಂ ಇಂಡಿಯಾ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿತ್ತು. ಮೊದಲೆರಡು ಏಕದಿನ ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡವು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಇನ್ನು ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ (Quinton de Kock) ಬಾರಿಸಿದ ಶತಕದ ನೆರವಿನಿಂದ 287 ರನ್ ಬಾರಿಸಿತ್ತು.
Virat Kohli Trolled: ರಾಷ್ಟ್ರಗೀತೆಗೆ ಕೊಹ್ಲಿ ಅಗೌರವ, ನೆಟ್ಟಿಗರಿಂದ ತರಾಟೆ..!
ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಆರಂಭದಲ್ಲೇ ನಾಯಕ ಕೆ.ಎಲ್. ರಾಹುಲ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇದಾದ ಬಳಿಕ ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ಎರಡನೇ ವಿಕೆಟ್ಗೆ 98 ರನ್ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಇದಾದ ಬಳಿಕ ಟೀಂ ಇಂಡಿಯಾ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. 210 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ಕೊನೆಯಲ್ಲಿ ದೀಪಕ್ ಚಹರ್ ಸ್ಪೋಟಕ ಅರ್ಧಶತಕ ಚಚ್ಚುವ ಮೂಲಕ ತಂಡಕ್ಕೆ ಗೆಲುವಿನ ಆಸರೆ ಮೂಡಿಸಿದರು. ಆದರೆ ಗೆಲುವಿನ ಹೊಸ್ತಿಲಲ್ಲಿ ಚಹರ್, ಬುಮ್ರಾ ಹಾಗೂ ಚಹಲ್ ವಿಕೆಟ್ ಒಪ್ಪಿಸಿದ್ದರಿಂದ ಟೀಂ ಇಂಡಿಯಾ ಎದುರು ದಕ್ಷಿಣ ಆಫ್ರಿಕಾ ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿತು.
ಪಂದ್ಯ ಮುಕ್ತಾಯದ ಬಳಿಕ ಸೋಲಿನ ಕುರಿತಂತೆ ಮಾತನಾಡಿದ ಟೀಂ ಇಂಡಿಯಾ ಹಂಗಾಮಿ ನಾಯಕ ಕೆ.ಎಲ್. ರಾಹುಲ್, ದೀಪಕ್ ಚಹರ್ ಅದ್ಭುತ ಬ್ಯಾಟಿಂಗ್ ಮೂಲಕ ನಮ್ಮಲ್ಲಿ ಗೆಲುವಿನ ಆಸೆ ಮೂಡಿಸಿದ್ದರು. ಪಂದ್ಯವು ರೋಚಕತೆಯಿಂದ ಕೂಡಿತ್ತು. ಆದರೆ ಕೊನೆಯಲ್ಲಿ ಪಂದ್ಯ ಸೋತಿದ್ದು ನಮ್ಮಲ್ಲಿ ನಿರಾಸೆಯನ್ನುಂಟು ಮಾಡಿತು. ಈ ಸರಣಿಯಿಂದ ನಾವು ಸಾಕಷ್ಟು ಕಲಿಯಲು ಅವಕಾಶ ಸಿಕ್ಕಿತು. ಬ್ಯಾಟಿಂಗ್ನಲ್ಲಿ ವೈಫಲ್ಯದ ಜತೆಗೆ ಬೌಲಿಂಗ್ನಲ್ಲೂ ನಾವಂದುಕೊಂಡ ಕಡೆ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ ಎಂದು ರಾಹುಲ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.