IPL 2026: ಹರ್ಷಿತ್ ರಾಣಾ ಬದಲಿಗೆ ಈ ಚೆನ್ನೈ ಸೂಪರ್ ಕಿಂಗ್ಸ್‌ ಮಾಜಿ ವೇಗಿಗಳ ಮೇಲೆ ಕಣ್ಣಿಟ್ಟ ಕೆಕೆಆರ್!

Published : Mar 19, 2026, 12:10 PM IST
KKR

ಸಾರಾಂಶ

ಐಪಿಎಲ್ 2026ಕ್ಕೂ ಮುನ್ನ ಕೆಕೆಆರ್ ತಂಡವು ಪ್ರಮುಖ ವೇಗಿ ಹರ್ಷಿತ್ ರಾಣಾ ಅವರ ಗಾಯದಿಂದ ಸಂಕಷ್ಟದಲ್ಲಿದೆ. ಅವರ ಬದಲಿಗೆ ಸಿಮರ್‌ಜೀತ್ ಸಿಂಗ್, ಕೆ.ಎಂ. ಆಸಿಫ್ ಅವರಂತಹ ಆಟಗಾರರನ್ನು ಪರಿಗಣಿಸುತ್ತಿದ್ದು, ಪತಿರಾಣಾ ಲಭ್ಯತೆಯ ಬಗ್ಗೆಯೂ ಅನಿಶ್ಚಿತತೆ ಇದೆ.  

ಕೋಲ್ಕತಾ: ಐಪಿಎಲ್ 2026 ಸೀಸನ್‌ಗೂ ಮುನ್ನ, ಮೂರು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡಕ್ಕೆ ದೊಡ್ಡ ತಲೆನೋವು ಶುರುವಾಗಿದೆ. ತಂಡದ ಪ್ರಮುಖ ವೇಗಿ ಹರ್ಷಿತ್ ರಾಣಾ ಗಾಯಗೊಂಡಿದ್ದು, ಅವರ ಬದಲಿಗೆ ಸೂಕ್ತ ಆಟಗಾರನನ್ನು ಹುಡುಕಲು ತಂಡದ ಮ್ಯಾನೇಜ್‌ಮೆಂಟ್ ಕಸರತ್ತು ನಡೆಸುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್‌ನ ಮಾಜಿ ಆಟಗಾರರಾದ ಸಿಮರ್‌ಜೀತ್ ಸಿಂಗ್, ಕೆ.ಎಂ. ಆಸಿಫ್ ಹಾಗೂ ಅನುಭವಿ ಸಂದೀಪ್ ವಾರಿಯರ್ ಅವರನ್ನು ಕೆಕೆಆರ್ ಟಾರ್ಗೆಟ್ ಮಾಡಿದೆ.

ಟಿ20 ವಿಶ್ವಕಪ್‌ನ ಅಭ್ಯಾಸ ಪಂದ್ಯದ ವೇಳೆ ಹರ್ಷಿತ್ ರಾಣಾ ಅವರ ಬಲ ಮೊಣಕಾಲಿಗೆ ಗಾಯವಾಗಿತ್ತು. ಸದ್ಯ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ. ರಾಣಾ ಮತ್ತೆ ಯಾವಾಗ ಕಣಕ್ಕಿಳಿಯುತ್ತಾರೆ ಎಂಬ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಇದೇ ಕಾರಣಕ್ಕೆ ಕೆಕೆಆರ್ ಹೊಸ ಬೌಲರ್‌ಗಳತ್ತ ಗಮನ ಹರಿಸಿದೆ.

ಗಂಟೆಗೆ 140 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವಿರುವ ಸಿಮರ್‌ಜೀತ್ ಸಿಂಗ್, ಮುಂಬೈನಲ್ಲಿ ನಡೆದ ಟ್ರಯಲ್ಸ್‌ನ ಮೊದಲ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು 2022ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಮಿಂಚಿದ್ದರು. ಇನ್ನು, ಕೇರಳದ ಆಟಗಾರ ಕೆ.ಎಂ. ಆಸಿಫ್ ಇತ್ತೀಚೆಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೇವಲ 24 ರನ್‌ಗಳಿಗೆ 5 ವಿಕೆಟ್ ಪಡೆದು ಭರ್ಜರಿ ಫಾರ್ಮ್‌ನಲ್ಲಿದ್ದರು. ವೇಗವಿದ್ದರೂ, ಗಾಯದ ಸಮಸ್ಯೆ ಆಸಿಫ್‌ಗೆ ಪದೇ ಪದೇ ಕಾಡುತ್ತಿದೆ. 2019ರಲ್ಲಿ ಕೆಕೆಆರ್ ಮೂಲಕವೇ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದ ಸಂದೀಪ್ ವಾರಿಯರ್‌ಗೆ ಫ್ರಾಂಚೈಸಿ ಜೊತೆಗಿನ ಹಳೆಯ ನಂಟು ಪ್ಲಸ್ ಪಾಯಿಂಟ್ ಆಗಬಹುದು. ಕಳೆದ ಬುಧವಾರ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಟ್ರಯಲ್ಸ್‌ನಲ್ಲಿ ಆಸಿಫ್ ಜೊತೆ ಸಂದೀಪ್ ಕೂಡ ಭಾಗವಹಿಸಿದ್ದರು.

ಪತಿರಾಣಾ ಲಭ್ಯತೆ ಬಗ್ಗೆ ಗ್ಯಾರಂಟಿ ಇಲ್ಲ

ಶ್ರೀಲಂಕಾದ ಆಟಗಾರ ಮತೀಶ ಪತಿರಾಣಾ ಲಭ್ಯತೆ ಬಗ್ಗೆಯೂ ಕೆಕೆಆರ್‌ಗೆ ಚಿಂತೆ ಶುರುವಾಗಿದೆ. 18 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ ಪತಿರಾಣಾಗೆ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಇನ್ನೂ ಕ್ಲಿಯರೆನ್ಸ್ ನೀಡಿಲ್ಲ. ವಿಶ್ವಕಪ್ ವೇಳೆ ಆದ ಗಾಯದಿಂದ ಅವರು ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಪತಿರಾಣಾ ಬರುವಿಕೆ ತಡವಾಗುತ್ತಿರುವುದರಿಂದ, ಅವರಿಗಾಗಿ ಪ್ರತಿದಿನ ಫ್ಲೈಟ್ ಟಿಕೆಟ್ ಬುಕ್ ಮಾಡಿ, ನಂತರ ರದ್ದು ಮಾಡುವ ಪರಿಸ್ಥಿತಿ ಇದೆ ಎಂದು ತಂಡದ ಮೂಲಗಳು ತಿಳಿಸಿವೆ.

ಮುಜರಬಾನಿ ಮೇಲೆ ಹೊಸ ನಿರೀಕ್ಷೆ

ಮುಸ್ತಫಿಜುರ್ ರೆಹಮಾನ್ ಬದಲಿಗೆ ತಂಡಕ್ಕೆ ಬಂದಿರುವ ಜಿಂಬಾಬ್ವೆ ಆಟಗಾರ ಬ್ಲೆಸ್ಸಿಂಗ್ ಮುಜರಬಾನಿ ಮೇಲೆ ಈಗ ಅಭಿಮಾನಿಗಳ ಕಣ್ಣಿದೆ. ವಿಶ್ವಕಪ್‌ನಲ್ಲಿ 13 ವಿಕೆಟ್‌ಗಳನ್ನು ಪಡೆದು ಮಿಂಚಿದ್ದ ಮುಜರಬಾನಿ, ಆಸ್ಟ್ರೇಲಿಯಾ ವಿರುದ್ಧದ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರಲ್ಲದೆ, ವೈಭವ್ ಅರೋರಾ, ಆಕಾಶ್ ದೀಪ್, ಕಾರ್ತಿಕ್ ತ್ಯಾಗಿ ಮತ್ತು ಉಮ್ರಾನ್ ಮಲಿಕ್ ಅವರಂತಹ ವೇಗಿಗಳು ಕೆಕೆಆರ್ ತಂಡದಲ್ಲಿದ್ದಾರೆ.

ಕೆಕೆಆರ್ ತಂಡಕ್ಕೆ ಅಜಿಂಕ್ಯ ರಹಾನೆ ಕ್ಯಾಪ್ಟನ್:

ಮೂರು ಬಾರಿಯ ಐಪಿಎಲ್ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮತ್ತೊಮ್ಮೆ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿಯೂ ರಹಾನೆ ಅವರೇ ಕೆಕೆಆರ್ ತಂಡವನ್ನು ಮುನ್ನಡೆಸಿದ್ದರು. ಆದರೆ ಕೆಕೆಆರ್ ತಂಡವು ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಹೀಗಿದ್ದೂ ಕೆಕೆಆರ್ ಫ್ರಾಂಚೈಸಿಯು ಮುಂಬೈ ಮೂಲದ ಅನುಭವಿ ಬ್ಯಾಟರ್‌ಗೆ ಮತ್ತೊಮ್ಮೆ ವಿಶ್ವಾಸವಿಟ್ಟು ನಾಯಕತ್ವ ಜವಾಬ್ದಾರಿ ನೀಡಿದೆ. ಈ ಬಾರಿ ಕೆಕೆಆರ್ ಹಲವು ಸಮಸ್ಯೆಗಳನ್ನು ಮೆಟ್ಟಿನಿಂತು ಚಾಂಪಿಯನ್ ಪಟ್ಟಕ್ಕೇರುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಪಿಎಲ್‌ನಲ್ಲಿ ಫ್ರಾಂಚೈಸಿ ಸೇಲ್‌ ಬಿಸಿ: ರಾಜಸ್ಥಾನ ರಾಯಲ್ಸ್‌ ₹12,000 ಕೋಟಿಗೆ ಬಿಡ್?
Dhoni Jersey: ನಂ.7 ಜೆರ್ಸಿ ಬಿಟ್ಟು ನಂ.8ಕ್ಕೆ ಶಿಫ್ಟ್? ಧೋನಿಯ ಹೊಸ ಪ್ಲ್ಯಾನ್ ಏನು?