
ಬೆಂಗಳೂರು: ದುಲೀಪ್ ಟ್ರೋಫಿಯ ಪೂರ್ವ ವಲಯದ ವಿರುದ್ಧ ಫೈನಲ್ನಲ್ಲಿ ದಕ್ಷಿಣ ವಲಯದ ಪರ ಆಡುವ 11ರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲವಾಗಿದ್ದ ಕರ್ನಾಟಕದ ಕರುಣ್ ನಾಯರ್ ಅವರು, ಕೆಎಸ್ಸಿಎ ಆಯೋಜಿಸುತ್ತಿರುವ ಕ್ಯಾಪ್ಟನ್ ಕೆ.ತಿಮ್ಮಪ್ಪಯ್ಯ ಸ್ಮರಣಾರ್ಥ ಟೂರ್ನಿಯಲ್ಲಿ ಕೆಎಸ್ಸಿಎ ಸೆಕ್ರೆಟರಿ ಇಲೆವೆನ್ ಪರ ಶತಕ ಸಿಡಿಸಿದ್ದಾರೆ. ಇದರ ಬೆನ್ನಲ್ಲೇ ದಕ್ಷಿಣ ವಲಯ ತಂಡದ ನಾಯಕ ತಿಲಕ್ ವರ್ಮಾ ಅವರನ್ನು ಕರುಣ್ ನಾಯಕ ಸೋಷಿಯಲ್ ಮೀಡಿಯಾ ಮೂಲಕ ಪರೋಕ್ಷವಾಗಿ ಟ್ರೋಲ್ ಮಾಡಿದ್ದಾರೆ.
ಅವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ಛತ್ತೀಸ್ಗಢ ವಿರುದ್ಧ 183 ಎಸೆತಗಳಲ್ಲಿ 104 ರನ್ ಗಳಿಸಿದರು. ಕರುಣ್ ದುಲೀಪ್ ಟ್ರೋಫಿಯಲ್ಲಿ ದಕ್ಷಿಣ ವಲಯ ತಂಡದಲ್ಲಿದ್ದರು. ಇದರ ಫೈನಲ್ ಪಂದ್ಯ ಚೆನ್ನೈನಲ್ಲಿ ನಡೆಯುತ್ತಿದೆ. ಆದರೆ ಆಡುವ 11ರ ಬಳಗದಲ್ಲಿ ಕರುಣ್ಗೆ ಸ್ಥಾನ ಸಿಕ್ಕಿರಲಿಲ್ಲ. ಹೀಗಾಗಿ ‘ವೈಯಕ್ತಿಕ ಕಾರಣ’ ನೀಡಿ ಬೆಂಗಳೂರಿಗೆ ಆಗಮಿಸಿದ್ದ ಅವರು, ಈಗ ಕೆಎಸ್ಸಿಎ ಟೂರ್ನಿಯಲ್ಲಿ ಮಿಂಚಿದ್ದಾರೆ.
ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣವಾದ ಎಕ್ಸ್ನಲ್ಲಿ ದುಲೀಪ್ ಟ್ರೋಫಿ ಫೈನಲ್ನಲ್ಲಿ ತಮ್ಮನ್ನು ಆಯ್ಕೆ ಮಾಡದ ನಾಯಕ ತಿಲಕ್ ವರ್ಮಾ ಅವರನ್ನು ಟ್ರೋಲ್ ಮಾಡಿದ್ದಾರೆ. 'ವಿವರಿಸಲಾಗದ' ಎನ್ನುವುದು ತೀರಾ ಸೌಮ್ಯವಾದ ಮಾತು ಎನಿಸುತ್ತದೆ. ಎಂದು ಸ್ಮೈಲಿ ಎಮೋಜಿ ಹಾಕಿದ್ದಾರೆ.
Inexplicable would be an understatement🤣 https://t.co/kPtzds8r6f
— Karun Nair (@karun126) September 7, 2026
ಈ ಪಂದ್ಯಕ್ಕೆ ಅನುಭವಿ ಕರುಣ್ ನಾಯರ್ ಅವರನ್ನು ಏಕೆ ಆಯ್ಕೆ ಮಾಡಲಾಗಿಲ್ಲ ಎಂಬುದನ್ನು ದಕ್ಷಿಣ ವಲಯವು ವಿವರಿಸಿಲ್ಲ. ನಾರ್ತ್ ಝೋನ್ (ಉತ್ತರ ವಲಯ) ವಿರುದ್ಧದ ಹಿಂದಿನ ಪಂದ್ಯಕ್ಕೂ ಮುನ್ನ, ಎದುರಾಳಿ ತಂಡದ ಎಡಗೈ ಸ್ಪಿನ್ನರ್ಗಳನ್ನು ಎದುರಿಸಲು ಹೈದರಾಬಾದ್ನ ಎಡಗೈ ಬ್ಯಾಟರ್ ಕೋಡಿಮೆಲ ಹಿಮತೇಜ ಅವರನ್ನು ಆಯ್ಕೆ ಮಾಡಿದ್ದರಿಂದ ನಾಯರ್ 'ದುರದೃಷ್ಟವಶಾತ್' ತಂಡದಿಂದ ಹೊರಗುಳಿಯಬೇಕಾಯಿತು ಎಂದು ನಾಯಕ ತಿಲಕ್ ವರ್ಮಾ ಹೇಳಿದ್ದರು. "ಕರುಣ್ ದುರದೃಷ್ಟವಶಾತ್ ಅವಕಾಶ ಕಳೆದುಕೊಂಡಿದ್ದಾರೆ. ಅವರು ದೇಶೀಯ ಋತುಗಳಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ," ಎಂದು CoEನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಾ ತಿಲಕ್ ಹೇಳಿದರು. "ಅವರು ಉತ್ತಮ ಎಡಗೈ ಸ್ಪಿನ್ನರ್ಗಳನ್ನು ಹೊಂದಿರುವುದರಿಂದ, ನಾನು ಕರುಣ್ ಬದಲಿಗೆ ಹಿಮತೇಜ ಅವರನ್ನು ಆಯ್ಕೆ ಮಾಡಿದ್ದೇನೆ. ಹೀಗಾಗಿ, ಮಧ್ಯಮ ಕ್ರಮಾಂಕದಲ್ಲಿ ನಮಗೆ ಒಬ್ಬ ಎಡಗೈ ಬ್ಯಾಟರ್ನ ಅಗತ್ಯವಿತ್ತು." ಎಂದು ತಿಲಕ್ ವರ್ಮಾ ಹೇಳಿದ್ದರು.
ಹಿಮತೇಜ ಅವರು ಎದುರಿಸಿದ ಮೊದಲ ಎರಡು ಎಸೆತಗಳಲ್ಲೇ ಔಟ್ (ಡಕ್) ಆದರು ಮತ್ತು ಅವರನ್ನು ಅಂತಿಮ ಪಂದ್ಯದಿಂದ ಕೈಬಿಡಲಾಯಿತು. ಅವರ ಬದಲಿಗೆ, ಮತ್ತೊಬ್ಬ ಎಡಗೈ ಆಟಗಾರ ದೇವದತ್ತ ಪಡಿಕ್ಕಲ್ ಅವರನ್ನು ಆಡುವ ಹನ್ನೊಂದರ ಬಳಗಕ್ಕೆ ಸೇರಿಸಿಕೊಳ್ಳಲಾಯಿತು. ಸದ್ಯ ದುಲೀಪ್ ಟ್ರೋಫಿ ಫೈನಲ್ನಲ್ಲಿ ಬರೋಬ್ಬರಿ 708 ರನ್ಗಳ ಸವಾಲಿನ ಗುರಿ ಬೆನ್ನತ್ತಿರುವ ದಕ್ಷಿಣ ವಲಯ ಸಂಕಷ್ಟದಲ್ಲಿದ್ದು, ಮೂರನೇ ದಿನದಾಟದಂತ್ಯಕ್ಕೆ ದಕ್ಷಿಣ ವಲಯ ತಂಡವು 6 ವಿಕೆಟ್ ನಷ್ಟಕ್ಕೆ 242 ರನ್ ಗಳಿಸಿದೆ. ನಾಯಕ ತಿಲಕ್ ವರ್ಮಾ 56 ರನ್ ಗಳಿಸಿ ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.