ಟೀಂ ಹೋಟೆಲ್‌ನಲ್ಲಿ ಕಗಿಸೋ ರಬಾಡ...? ಗುಜರಾತ್ ಟೈಟಾನ್ಸ್ ಆಟಗಾರನ ವಿವಾದಾತ್ಮಕ ವಿಡಿಯೋ ವೈರಲ್

Published : Apr 22, 2026, 04:38 PM IST
Kagiso Rabada Smoking

ಸಾರಾಂಶ

ಗುಜರಾತ್ ಟೈಟಾನ್ಸ್ ತಂಡದ ವೇಗಿ ಕಗಿಸೋ ರಬಾಡ ಅವರು ಧೂಮಪಾನ ಮಾಡುತ್ತಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ವಿವಾದ ಸೃಷ್ಟಿಸಿದೆ. ಈ ವಿಡಿಯೋದ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲವಾದರೂ, ಈ ಘಟನೆಯು ಪ್ಲೇಆಫ್ ರೇಸ್‌ನಲ್ಲಿರುವ ತಂಡದ ಮನೋಸ್ಥೈರ್ಯದ ಮೇಲೆ ಪರಿಣಾಮ ಬೀರುವ ಆತಂಕವನ್ನು ಹುಟ್ಟುಹಾಕಿದೆ.

ಅಹಮದಾಬಾದ್: ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಹೀನಾಯ ಸೋಲು ಕಂಡ ಬೆನ್ನಲ್ಲೇ ಗುಜರಾತ್ ಟೈಟಾನ್ಸ್ ತಂಡಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ತಂಡದ ಸ್ಟಾರ್ ವೇಗಿ ಕಗಿಸೋ ರಬಾಡ ಅವರ ವಿವಾದಾತ್ಮಕ ವಿಡಿಯೋವೊಂದು ಈಗ ಎಲ್ಲೆಡೆ ಹರಿದಾಡುತ್ತಿದೆ. ರಬಾಡ ಟೀಂ ಹೋಟೆಲ್‌ನಲ್ಲಿ ಕುಳಿತು ಧೂಮಪಾನ ಮಾಡುತ್ತಿರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ವಿಡಿಯೋದ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲವಾದರೂ, ಅಭಿಮಾನಿಗಳಲ್ಲಿ ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕಗಿಸೋ ರಬಾಡ ಅವರದ್ದು ಎನ್ನಲಾದ ವಿಡಿಯೋ ವೈರಲ್

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ರಬಾಡ ಜೊತೆ ಗುಜರಾತ್ ಟೈಟಾನ್ಸ್ ಮ್ಯಾನೇಜ್‌ಮೆಂಟ್‌ಗೆ ಸಂಬಂಧಿಸಿದ ಕೆಲವರು ಇರುವುದನ್ನು ಕಾಣಬಹುದು. ಆದರೆ, ಈ ವಿಡಿಯೋವನ್ನು ಯಾವಾಗ ಮತ್ತು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಈ ಘಟನೆ ಬಗ್ಗೆ ರಬಾಡ ಆಗಲಿ, ಗುಜರಾತ್ ತಂಡದ ಆಡಳಿತ ಮಂಡಳಿಯಾಗಲಿ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಈ ಹಿಂದೆ ಯುಜುವೇಂದ್ರ ಚಹಲ್ ಅವರದ್ದು ಎನ್ನಲಾದ ಸ್ಮೋಕಿಂಗ್ ವಿಡಿಯೋವೊಂದು ಇದೇ ರೀತಿ ವಿವಾದ ಸೃಷ್ಟಿಸಿತ್ತು. ಹಾಗಾಗಿ, ರಬಾಡ ಅವರ ವಿಡಿಯೋ ಕೂಡ ಎಡಿಟ್ ಮಾಡಿರುವ ಸಾಧ್ಯತೆ ಇದೆ ಎಂದು ಕೆಲವರು ವಾದಿಸುತ್ತಿದ್ದಾರೆ.

 

ಕಳೆದ ಬಾರಿಯೂ ಸಂಕಷ್ಟಕ್ಕೆ ಸಿಲುಕಿದ್ದ ರಬಾಡ

ಈ ಹೊಸ ವಿವಾದದ ಜೊತೆಗೆ, ರಬಾಡ ಅವರ ಕಳೆದ ವರ್ಷದ ನಿಷೇಧದ ಪ್ರಕರಣವೂ ಮತ್ತೆ ಮುನ್ನೆಲೆಗೆ ಬಂದಿದೆ. ಕಳೆದ ಸೀಸನ್‌ನಲ್ಲಿ ಡೋಪಿಂಗ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸೌತ್ ಆಫ್ರಿಕನ್ ಇನ್‌ಸ್ಟಿಟ್ಯೂಟ್ ಫಾರ್ ಡ್ರಗ್ ಫ್ರೀ ಸ್ಪೋರ್ಟ್ಸ್, ರಬಾಡ ಮೇಲೆ ಒಂದು ತಿಂಗಳ ನಿಷೇಧ ಹೇರಿತ್ತು. ಇದರಿಂದಾಗಿ ಅವರು ಸೀಸನ್ ಮಧ್ಯದಲ್ಲೇ ತವರಿಗೆ ಮರಳಬೇಕಾಗಿತ್ತು. ಈ ಹಿನ್ನೆಲೆಯಲ್ಲಿ, ಈಗ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಹುದೇ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಈ ಸೀಸನ್‌ನಲ್ಲಿ ಗುಜರಾತ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ ರಬಾಡ ಮುಂಚೂಣಿಯಲ್ಲಿದ್ದಾರೆ. ಅವರು 6 ಪಂದ್ಯಗಳಿಂದ 10 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ರೇಸ್‌ನಲ್ಲಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲೂ ರಬಾಡ 3 ಪ್ರಮುಖ ವಿಕೆಟ್‌ಗಳನ್ನು ಪಡೆದು ಮಿಂಚಿದ್ದರು. ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ಗುಜರಾತ್ ತಂಡಕ್ಕೆ ಪ್ಲೇಆಫ್ ಪ್ರವೇಶಿಸಲು ಮುಂದಿನ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಏಪ್ರಿಲ್ 24 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೆಣಸಾಡಲಿದ್ದು, ಇಂತಹ ಸಮಯದಲ್ಲಿ ಈ ವಿವಾದ ತಂಡದ ಮನೋಸ್ಥೈರ್ಯವನ್ನು ಕುಗ್ಗಿಸಬಹುದು ಎಂದು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಸೋಲಿಗೆ ಕನ್ನಡಿಗನ ಮೇಲೆ ಬೊಟ್ಟು ಮಾಡಿದ ಡೆಲ್ಲಿ ಕ್ಯಾಪ್ಟನ್!
'L' ಸೆಲೆಬ್ರೇಷನ್ ಬಿಟ್ಟು ಅಭಿಷೇಕ್ ಶರ್ಮಾ ಕೈಕಟ್ಟಿ ನಿಂತಿದ್ದೇಕೆ? ಕೊನೆಗೂ ಕೋಚ್ ಕೊಟ್ಟ ಚಾಲೆಂಜ್ ಸೀಕ್ರೆಟ್ ಬಿಚ್ಚಿಟ್ಟ ಡ್ಯಾಶಿಂಗ್ ಓಪನ್ನರ್!