
ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಜೋಸ್ ಬಟ್ಲರ್, ಭಾರತದ ಅಂಡರ್-19 ತಂಡದ ಹಾಗೂ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುವ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಬಾಯ್ತುಂಬ ಹೊಗಳಿದ್ದಾರೆ. ಕೇವಲ 14 ವರ್ಷದ ವೈಭವ್, ತಾನು ಇಲ್ಲಿಯವರೆಗೆ ನೋಡಿದ ಅತ್ಯುತ್ತಮ ಯುವ ಆಟಗಾರ ಎಂದು ಬಟ್ಲರ್ ಗುಣಗಾನ ಮಾಡಿದ್ದಾರೆ. 'ಫಾರ್ ದಿ ಲವ್ ಆಫ್ ಕ್ರಿಕೆಟ್' ಎಂಬ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಅವರು, ಅಂಡರ್-19 ವಿಶ್ವಕಪ್ ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ವೈಭವ್ ಆಡಿದ ರೀತಿ ನಿಜಕ್ಕೂ ಬೆರಗುಗೊಳಿಸಿತ್ತು ಎಂದಿದ್ದಾರೆ.
ಫೆಬ್ರವರಿ 6 ರಂದು ಹರಾರೆಯಲ್ಲಿ ನಡೆದ ಅಂಡರ್-19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬಿಹಾರ ಮೂಲದ 14 ವರ್ಷದ ವೈಭವ್, ಇಂಗ್ಲೆಂಡ್ ವಿರುದ್ಧ ಕೇವಲ 80 ಎಸೆತಗಳಲ್ಲಿ 175 ರನ್ ಚಚ್ಚಿದ್ದರು. ಅವರ ಈ ಭರ್ಜರಿ ಇನ್ನಿಂಗ್ಸ್ನಲ್ಲಿ 15 ಬೌಂಡರಿ ಮತ್ತು 15 ಸಿಕ್ಸರ್ಗಳು ಸೇರಿದ್ದವು. "ನಾನು ಆ ಮ್ಯಾಚ್ ಟಿವಿಯಲ್ಲಿ ನೋಡುತ್ತಿದ್ದೆ. ಆತ ಆಡಿದ ಒಂದೊಂದು ಶಾಟ್ ಕೂಡ ನಂಬಲು ಅಸಾಧ್ಯವಾಗಿತ್ತು. 14ನೇ ವಯಸ್ಸಿನಲ್ಲಿ ಯಾರಾದರೂ ಹೀಗೆ ಆಡುತ್ತಾರೆಂದು ಊಹಿಸಲೂ ಸಾಧ್ಯವಿಲ್ಲ. ಈಗಲೇ ಹೀಗಿದ್ದರೆ, 16 ಅಥವಾ 20ನೇ ವಯಸ್ಸಿಗೆ ಆತ ಏನಾಗಬಹುದು? ಸಚಿನ್ ತೆಂಡೂಲ್ಕರ್ 16ನೇ ವಯಸ್ಸಿಗೆ ಪದಾರ್ಪಣೆ ಮಾಡಿದ್ದರು. ಆಗ ಇಷ್ಟೊಂದು ಸೋಶಿಯಲ್ ಮೀಡಿಯಾ ಇರಲಿಲ್ಲ. ಆದರೆ ವೈಭವ್ ಈಗಲೇ ಎಲ್ಲರ ಗಮನ ಸೆಳೆದಿದ್ದಾನೆ" ಎಂದು ಬಟ್ಲರ್ ಹೇಳಿದ್ದಾರೆ.
ಅಂಡರ್-19 ವಿಶ್ವಕಪ್ ಮಾತ್ರವಲ್ಲ, ಐಪಿಎಲ್ನಲ್ಲೂ ವೈಭವ್ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾನೆ. 2025ರ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಪದಾರ್ಪಣೆ ಮಾಡಿದ ವೈಭವ್, ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದ. ಐಪಿಎಲ್ ಇತಿಹಾಸದಲ್ಲಿ ಭಾರತೀಯ ಆಟಗಾರನೊಬ್ಬ ಗಳಿಸಿದ ಅತಿ ವೇಗದ ಶತಕ ಇದಾಗಿತ್ತು. ಅಶ್ವಿನ್, ಜಡೇಜಾರಂತಹ ಸೀನಿಯರ್ ಸ್ಪಿನ್ನರ್ಗಳನ್ನು ಒಬ್ಬ ಅನುಭವಿ ಆಟಗಾರನಂತೆ ವೈಭವ್ ಎದುರಿಸಿದ ರೀತಿ ನೋಡಿ ತನಗೆ ಆಶ್ಚರ್ಯವಾಯಿತು ಎಂದು ಬಟ್ಲರ್ ಸೇರಿಸಿದ್ದಾರೆ.
ಭಾರತ ಆರನೇ ಬಾರಿಗೆ ಅಂಡರ್-19 ವಿಶ್ವಕಪ್ ಗೆದ್ದಾಗ, ವೈಭವ್ 'ಸರಣಿಶ್ರೇಷ್ಠ ಆಟಗಾರ' ಪ್ರಶಸ್ತಿ ಪಡೆದಿದ್ದರು. ಅವರು ಏಳು ಇನ್ನಿಂಗ್ಸ್ಗಳಿಂದ ಒಟ್ಟು 439 ರನ್ ಗಳಿಸಿದ್ದರು. ಇದರಲ್ಲಿ ಫೈನಲ್ನಲ್ಲಿ ಗಳಿಸಿದ 175 ರನ್, ವಿಶ್ವಕಪ್ ಫೈನಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಆಗಿದೆ.
* ಐಪಿಎಲ್: ಗುಜರಾತ್ ಟೈಟನ್ಸ್ ವಿರುದ್ಧ 38 ಎಸೆತಗಳಲ್ಲಿ 101 ರನ್
* ಅಂಡರ್-19 ಯೂತ್ ಟೆಸ್ಟ್: ಆಸ್ಟ್ರೇಲಿಯಾ ವಿರುದ್ಧ 62 ಎಸೆತಗಳಲ್ಲಿ 104 ರನ್
* ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟಿ20: 42 ಎಸೆತಗಳಲ್ಲಿ 144 ರನ್
* ಅಂಡರ್-19 ಏಷ್ಯಾ ಕಪ್: ಯುಎಇ ವಿರುದ್ಧ 95 ಎಸೆತಗಳಲ್ಲಿ 171 ರನ್
* ಸೈಯದ್ ಮುಷ್ತಾಕ್ ಅಲಿ ಟಿ20: ಮಹಾರಾಷ್ಟ್ರ ವಿರುದ್ಧ 61 ಎಸೆತಗಳಲ್ಲಿ 108* ರನ್
* ವಿಜಯ್ ಹಜಾರೆ ಟ್ರೋಫಿ: ಅರುಣಾಚಲ ಪ್ರದೇಶ ವಿರುದ್ಧ 84 ಎಸೆತಗಳಲ್ಲಿ 190 ರನ್
* ಅಂಡರ್-19 ವಿಶ್ವಕಪ್ ಫೈನಲ್: ಇಂಗ್ಲೆಂಡ್ ವಿರುದ್ಧ 80 ಎಸೆತಗಳಲ್ಲಿ 175 ರನ್
ಬಿಸಿಸಿಐ ನಿಯಮಾವಳಿಗಳ ಪ್ರಕಾರ, ಒಮ್ಮೆ ಅಂಡರ್-19 ವಿಶ್ವಕಪ್ ಆಡಿದ ಆಟಗಾರ ಮತ್ತೊಮ್ಮೆ ಅಂಡರ್-19 ವಿಶ್ವಕಪ್ ಆಡಲು ಅವಕಾಶವಿಲ್ಲ. ಹೊಸ ಹೊಸ ಯುವ ಆಟಗಾರರಿಗೆ ಅವಕಾಶ ಒದಗಿಸಲು ಹಾಗೂ ಯುವ ಆಟಗಾರರು ಕೇವಲ ಅಂಡರ್-19 ಆಟಗಾರರಾಗಿ ಉಳಿಯದೇ ಸೀನಿಯರ್ ಲೆವೆಲ್ಗೆ ಏರಲು ಪ್ರೋತ್ಸಾಹಿಸುವ ಉದ್ದೇಶದಿಂದ ಈ ರೂಲ್ಸ್ ತಂದಿದೆ. 2016ರಲ್ಲಿ ರಾಹುಲ್ ದ್ರಾವಿಡ್ ಅವರ ಸಲಹೆಯ ಮೇರೆಗೆ ಬಿಸಿಸಿಐ ಈ ನಿಯಮಾವಳಿ ರೂಪಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.