IPL retention: ಚಹಾಲ್, ಕನ್ನಡಿಗರ ಕೈಬಿಟ್ಟು, ಕೊಹ್ಲಿ ಸೇರಿ ಮೂವರ ಉಳಿಸಿಕೊಂಡ RCB!

By Suvarna NewsFirst Published Nov 30, 2021, 9:51 PM IST
Highlights
  • ದೇವದತ್ ಪಡಿಕ್ಕಲ್ ಸೇರಿ ಇಬ್ಬರು ಕನ್ನಡಿಗರು ಔಟ್
  • ಕೊಹ್ಲಿ, ಮ್ಯಾಕ್ಸ್‌ವೆಲ್ ಸೇರಿ ಮೂವರ ರಿಟೈನ್ ಮಾಡಿದ ಆರ್‌ಸಿಬಿ
  • ತಂಡ ಉಳಿಸಿಕೊಂಡ, ಕೈಬಿಟ್ಟ ಆಟಗಾರರ ಸಂಪೂರ್ಣ ವಿವರ ಇಲ್ಲಿದೆ

ಬೆಂಗಳೂರು(ನ.30):  ಚೊಚ್ಚಲ ಐಪಿಎಲ್(IPL) ಪ್ರಶಸ್ತಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ ತನ್ನ ಸ್ಟಾಟರ್ಜಿ ಬದಲಾಯಿಸಿದೆ. ಐಪಿಎಲ್ 2022(IPL 2022) ಟೂರ್ನಿಗಾಗಿ ಬಲಿಷ್ಠ ತಂಡ ಕಟ್ಟಲು ಸಜ್ಜಾಗಿದೆ. ಐಪಿಎಲ್ 2022ರ ಮೆಘಾ ಹರಾಜಿಗೂ(IPL AUCTION) ಮುನ್ನ ನಾಲ್ವರು ಆಟಗಾರರ ರಿಟೈನ್ ಮಾಡಿಕೊಳ್ಳುವ ಅವಕಾಶವಿದ್ದರೂ, ಆರ್‌ಸಿಬಿ ಮೂವರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಮಾಜಿ ನಾಯಕ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ವೇಗಿ ಮೊಹಮ್ಮದ್ ಸಿರಾಜ್ ತಂಡದಲ್ಲಿ ಉಳಿಸಿಕೊಂಡಿದೆ.

ವಿರಾಟ್ ಕೊಹ್ಲಿಗೆ 15 ಕೋಟಿ ರೂಪಾಯಿ ನೀಡಿ ಆರ್‌ಸಿಬಿ ತಂಡ ತನ್ನಲ್ಲೇ ಉಳಿಸಿಕೊಂಡಿದೆ. ಇನ್ನು ಗ್ಲೆನ್ ಮ್ಯಾಕ್ಸ್‌ವೆಲ್‌ಗೆ 11 ಕೋಟಿ ರೂಪಾಯಿ ನೀಡಲಾಗಿದ್ದರೆ, ಮೊಹಮ್ಮದ್ ಸಿರಾಜ್‌ಗೆ 7 ಕೋಟಿ ರೂಪಾಯಿ ನೀಡಲಾಗಿದೆ. ಮುಂದಿನ ಹರಾಜಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಳಿ 57 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಈ ಹಣದಲ್ಲಿ ಇತರ ಎಲ್ಲಾ ಆಟಗಾರರನ್ನು ಖರೀದಿಸಬೇಕಿದೆ.

ಆರ್‌ಸಿಬಿ ಕೊಹ್ಲಿ, ಮ್ಯಾಕ್ಸ್‌ವೆಲ್ ಜೊತೆಗೆ ಸ್ಪೋಟಕ ಆರಂಭಿಕ ದೇವದತ್ ಪಡಿಕ್ಕಲ್ ಹಾಗೂ ಸ್ಪನ್ನರ್ ಯಜುವೇಂದ್ರ ಚಹಾಲ್ ಉಳಿಸಿಕೊಳ್ಳುವ ಮಾತುಗಳು ಕೇಳಿಬಂದಿತ್ತು. ಆದರೆ ಪಡಿಕ್ಕಲ್ ಹಾಗೂ ಚಹಾಲ್ ಕೈಬಿಟ್ಟು,  ಅಚ್ಚರಿ ಎಂಬಂತೆ ವೇಗಿ ಮೊಹಮ್ಮದ್ ಸಿರಾಜ್ ಉಳಿಸಿಕೊಂಡಿದೆ. ಸುದೀರ್ಘ ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದ ಸ್ಪಿನ್ನರ್ ಯಜುವೇಂದ್ರ ಚಹಾಲ್ ಇದೀಗ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಆರ್‌ಸಿಬಿ ತಂಡದಲ್ಲಿದ್ದ ಕನ್ನಡಿಗರಾದ ದೇವದತ್ ಪಡಿಕ್ಕಲ್ ಹಾಗೂ ಪವನ್ ದೇಶಪಾಂಡೆ ಇಬ್ಬರನ್ನು ಆರ್‌ಸಿಬಿ ತಂಡದಿಂದ ಕೈಬಿಡಲಾಗಿದೆ. ಈ ಇಬ್ಬರು ಆಟಗಾರರು ಈ ತಿಂಗಳು ನಡೆಯಲಿರುವ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. 

RCB ಉಳಿಸಿಕೊಂಡ ಆಟಗಾರರ ಪಟ್ಟಿ:
ವಿರಾಟ್ ಕೊಹ್ಲಿ (15 ಕೋಟಿ ರೂಪಾಯಿ)
ಗ್ಲೆನ್ ಮ್ಯಾಕ್ಸ್‌ವೆಲ್( 11 ಕೋಟಿ ರೂಪಾಯಿ)
ಮೊಹಮ್ಮದ್ ಸಿರಾಜ್ ( 7 ಕೋಟಿ ರೂಪಾಯಿ)

ಆರ್‌ಸಿಬಿ ಕೈಬಿಟ್ಟ ಆಟಗಾರರು:
ದೇವದತ್ ಪಡಿಕ್ಕಲ್, ಯಜುವೇಂದ್ರ ಚಹಾಲ್,  ಹರ್ಷಲ್ ಪಟೇಲ್, ಸಚಿನ್ ಬೇಬಿ, ಪವನ್ ದೇಶಪಾಂಡೆ, ಮೊಹಮ್ಮದ್ ಅಜರುದ್ದೀನ್, ವಾವಿಂಡು ಹಸರಂಗ, ಜಾರ್ಜ್ ಗಾರ್ಟನ್, ಶಹಬಾಜ್ ಅಹಮ್ಮದ್, ಕೈಲ್ ಜ್ಯಾಮಿನ್ಸನ್, ಎಸ್ ಪ್ರಭುದೇಸಾಯಿ, ಕೆ ಶ್ರೀಕಾಂತ್ ಭಟ್, ಟಿಮ್ ಡೇವಿಡ್, ಅಕ್ಷದೀಪ್, ನವದೀಪ್ ಸೈನಿ, ಡೇನಿಯಲ್ ಕ್ರಿಶ್ಟಿಯನ್, ರಜತ್ ಪಾಟಿದಾರ್, ದುಷ್ಮಂತ್ ಚಮೀರಾ.

 

RCB Player Retention Announcement: Virat Kohli, Glenn Maxwell and Mohammed Siraj are retained for the Vivo IPL 2022 season. pic.twitter.com/NMKMyd24xb

— Royal Challengers Bangalore (@RCBTweets)

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ನಾಯಕನ ಹುಡುಕಾಟದಲ್ಲಿದೆ. 2021ರ ಐಪಿಎಲ್ ಟೂರ್ನಿ ಬಳಿಕ ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಗುಡ್‌ಬೈ ಹೇಳಿದ್ದಾರೆ. ಕೊಹ್ಲಿ ಆಟಗಾರನಾಗಿ ಬೆಂಗಳೂರು ತಂಡದಲ್ಲಿ ಮುಂದುವರಿಯಲಿದ್ದಾರೆ. ಈ ಮೂಲಕ ತಮ್ಮ ಮೇಲಿದ್ದ ಹೆಚ್ಚಿನ ಜವಾಬ್ದಾರಿ ಹಾಗೂ ಒತ್ತಡದಿಂದ ಮುಕ್ತರಾಗಿದ್ದಾರೆ. ಆದರೆ ಈ ಆವೃತ್ತಿಯಲ್ಲಿ ಆರ್‌ಸಿಬಿ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಅನ್ನೋ ಚರ್ಚೆ ಜೋರಾಗಿದೆ.

ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ನಾಯಕತ್ವ ನೀಡಲಾಗುತ್ತದೆ ಅನ್ನೋ ಮಾತುಗಳು ಕೇಳಿಬಂದಿದೆ. ಇನ್ನು ಈ ತಿಂಗಳು ನಡೆಯಲಿರುವ ಹರಾಜಿನಲ್ಲಿ ತಂಡವನ್ನು ಮುನ್ನಡೆಸಬಲ್ಲ ಆಟಗಾರರನ್ನು ಆರ್‌ಸಿಬಿ ಖರೀದಿಸಲಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಅದೇನೇ ಆದರೂ ಹೊಸ ನಾಯಕತ್ವದಲ್ಲಿ ಆರ್‌ಸಿಬಿ ಮುನ್ನಡೆಯಲಿದೆ. ಇಷ್ಟೇ ಅಲ್ಲ ಹೊಸ ನಾಯಕತ್ವದಲ್ಲಿ ಪ್ರಶಸ್ತಿ ಒಲಿದು ಬರಲಿ ಅನ್ನೋದು ಅಭಿಮಾನಿಗಳ ಆಶಯವಾಗಿದೆ.

click me!