IPL 2026 ಸತತ ಎರಡು ಪಂದ್ಯ ಗೆದ್ದ ಪಂಜಾಬ್ ಕಿಂಗ್ಸ್, ಆದ್ರೆ ಬ್ಯಾನ್ ಆಗೋ ಭೀತಿಗೆ ಸಿಲುಕಿದ ಶ್ರೇಯಸ್ ಅಯ್ಯರ್! BCCI ಖಡಕ್ ವಾರ್ನಿಂಗ್

Published : Apr 04, 2026, 01:07 PM IST
Shreyas Iyer-Ruturaj Gaikwad

ಸಾರಾಂಶ

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದ ಖುಷಿಯಲ್ಲಿದ್ದ ಪಂಜಾಬ್ ಕಿಂಗ್ಸ್‌ಗೆ ಬಿಸಿಸಿಐ ದಂಡದ ಬಿಸಿ ಮುಟ್ಟಿಸಿದೆ. ನಿಧಾನಗತಿಯ ಓವರ್ ರೇಟ್‌ಗಾಗಿ ನಾಯಕ ಶ್ರೇಯಸ್ ಅಯ್ಯರ್‌ಗೆ 24 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಮತ್ತೊಮ್ಮೆ ಇದೇ ತಪ್ಪು ಪುನರಾವರ್ತನೆಯಾದರೆ ಅವರು ಒಂದು ಪಂದ್ಯದ ನಿಷೇಧ ಎದುರಿಸಲಿದ್ದಾರೆ.

ಚೆನ್ನೈ: ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅವರದ್ದೇ ತವರಾದ ಚೆಪಾಕ್‌ನಲ್ಲಿ ಐದು ವಿಕೆಟ್‌ಗಳಿಂದ ಸೋಲಿಸಿ ಪಂಜಾಬ್ ಕಿಂಗ್ಸ್ ಸತತ ಎರಡನೇ ಗೆಲುವು ಸಾಧಿಸಿದೆ. ಈ ಗೆಲುವಿನ ಖುಷಿ ಮಾಸುವ ಮುನ್ನವೇ ಬಿಸಿಸಿಐ, ಪಂಜಾಬ್ ತಂಡಕ್ಕೆ ದೊಡ್ಡ ಶಾಕ್ ನೀಡಿದೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ನಾಯಕ ಶ್ರೇಯಸ್ ಅಯ್ಯರ್ ಮತ್ತು ತಂಡದ ಇತರ ಸದಸ್ಯರಿಗೆ ಬಿಸಿಸಿಐ ಭಾರಿ ದಂಡ ವಿಧಿಸಿದೆ. ಇದಷ್ಟೇ ಅಲ್ಲದೇ ಮತ್ತದೇ ತಪ್ಪು ಎಸಗಿದರೇ ಶ್ರೇಯಸ್ ಅಯ್ಯರ್ ಬ್ಯಾನ್ ಆಗುವ ಭೀತಿಗೆ ಸಿಲುಕಿದ್ದಾರೆ.

ಪಂಜಾಬ್ ತಂಡಕ್ಕೆ ಬಿಸಿ ಮುಟ್ಟಿಸಿದ ಬಿಸಿಸಿಐ!

ಈ ಸೀಸನ್‌ನಲ್ಲಿ ಶ್ರೇಯಸ್ ಅಯ್ಯರ್ ಎರಡನೇ ಬಾರಿಗೆ ನಿಧಾನಗತಿಯ ಓವರ್ ರೇಟ್‌ಗಾಗಿ ದಂಡನೆಗೆ ಒಳಗಾಗಿದ್ದಾರೆ. ಹೀಗಾಗಿ, ಅವರಿಗೆ 24 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಇದಕ್ಕೂ ಮುನ್ನ ಗುಜರಾತ್ ವಿರುದ್ಧದ ಪಂದ್ಯದಲ್ಲೂ ಶ್ರೇಯಸ್ ಇದೇ ತಪ್ಪಿಗಾಗಿ ದಂಡನೆಗೆ ಗುರಿಯಾಗಿದ್ದರು. ಅದು ಸೀಸನ್‌ನ ಮೊದಲ ತಪ್ಪಾಗಿದ್ದರಿಂದ, ಅವರಿಗೆ 12 ಲಕ್ಷ ರೂಪಾಯಿ ದಂಡ ಹಾಕಲಾಗಿತ್ತು. ಈಗ ಎರಡನೇ ಬಾರಿಯೂ ಅದೇ ತಪ್ಪು ಪುನರಾವರ್ತನೆಯಾಗಿದ್ದರಿಂದ ದಂಡದ ಮೊತ್ತ ದುಪ್ಪಟ್ಟಾಗಿದೆ. ಇನ್ನು, ತಂಡದ ಇತರ ಆಟಗಾರರಿಗೆ (ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ) 6 ಲಕ್ಷ ರೂಪಾಯಿ ಅಥವಾ ಪಂದ್ಯದ ಶುಲ್ಕದ ಶೇ. 25ರಷ್ಟು (ಯಾವುದು ಕಡಿಮೆಯೋ ಅದು) ದಂಡ ಕಟ್ಟುವಂತೆ ಶಿಸ್ತು ಸಮಿತಿ ಆದೇಶಿಸಿದೆ.

ನಿಧಾನಗತಿಯ ಬೌಲಿಂಗ್ ಬಗ್ಗೆ ಬಿಸಿಸಿಐ ನಿಯಮವೇನು?

ಐಪಿಎಲ್ ನೀತಿ ಸಂಹಿತೆಯ ಪ್ರಕಾರ, ಒಂದು ತಂಡ ನಿಗದಿತ ಸಮಯದಲ್ಲಿ ಓವರ್‌ಗಳನ್ನು ಪೂರ್ಣಗೊಳಿಸದಿದ್ದರೆ, ಮೊದಲ ಬಾರಿಗೆ ನಾಯಕನಿಗೆ ಮಾತ್ರ 12 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿ ತಪ್ಪು ಮಾಡಿದರೆ, ನಾಯಕನಿಗೆ 24 ಲಕ್ಷ ರೂ. ಮತ್ತು ತಂಡದ ಇತರ 11 ಸದಸ್ಯರಿಗೆ (ಇಂಪ್ಯಾಕ್ಟ್ ಪ್ಲೇಯರ್ ಸೇರಿ) 6 ಲಕ್ಷ ರೂ. ಅಥವಾ ಪಂದ್ಯದ ಶುಲ್ಕದ ಶೇ. 25ರಷ್ಟು ದಂಡ ಬೀಳುತ್ತದೆ. ಮೂರನೇ ಬಾರಿಯೂ ಇದೇ ತಪ್ಪು ಪುನರಾವರ್ತನೆಯಾದರೆ, ನಾಯಕನಿಗೆ 30 ಲಕ್ಷ ರೂ. ದಂಡದ ಜೊತೆಗೆ ಒಂದು ಪಂದ್ಯದ ನಿಷೇಧವನ್ನೂ ಹೇರಲಾಗುತ್ತದೆ. ತಂಡದ ಇತರ ಸದಸ್ಯರು 12 ಲಕ್ಷ ರೂ. ಅಥವಾ ಪಂದ್ಯದ ಶುಲ್ಕದ ಶೇ. 50ರಷ್ಟು ದಂಡ ಕಟ್ಟಬೇಕಾಗುತ್ತದೆ. ಚೆನ್ನೈ ಇನ್ನಿಂಗ್ಸ್ ವೇಳೆ ಪಂಜಾಬ್ ತಂಡ ನಿಗದಿತ ಸಮಯಕ್ಕಿಂತ ಎರಡು ಓವರ್‌ ನಿಧಾನವಾಗಿ ಬೌಲಿಂಗ್ ಮಾಡಿತ್ತು. ಇದರಿಂದಾಗಿ ಕೊನೆಯ ಎರಡು ಓವರ್‌ಗಳಲ್ಲಿ ಬೌಂಡರಿ ಲೈನ್‌ನಲ್ಲಿ ಕೇವಲ ನಾಲ್ಕು ಫೀಲ್ಡರ್‌ಗಳನ್ನು ಮಾತ್ರ ನಿಯೋಜಿಸಲು ಪಂಜಾಬ್‌ಗೆ ಸಾಧ್ಯವಾಯಿತು. ಆದರೆ, ಚೆನ್ನೈ ತಂಡಕ್ಕೆ ಇದರ ಲಾಭ ಪಡೆಯಲು ಆಗಲಿಲ್ಲ.

ಬ್ಯಾನ್ ಆಗುವ ಭೀತಿಯಲ್ಲಿ ಶ್ರೇಯಸ್ ಅಯ್ಯರ್

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ, 210 ರನ್‌ಗಳ ಗುರಿ ನೀಡಿತ್ತು. ಈ ಗುರಿಯನ್ನು ಪಂಜಾಬ್ ತಂಡ 8 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಚೆನ್ನೈ ವಿರುದ್ಧದ ಗೆಲುವನ್ನು ಸಂಭ್ರಮಿಸುತ್ತಿರುವಾಗಲೇ, ಮುಂದಿನ ಪಂದ್ಯದಲ್ಲಿ ಇನ್ನಷ್ಟು ಜಾಗರೂಕರಾಗಿರದಿದ್ದರೆ ನಾಯಕ ಶ್ರೇಯಸ್ ಅಯ್ಯರ್ ನಿಷೇಧ ಎದುರಿಸಬೇಕಾಗಬಹುದು ಎಂಬ ಆತಂಕ ಪಂಜಾಬ್ ಕ್ಯಾಂಪ್ ಅನ್ನು ಕಾಡುತ್ತಿದೆ. ಪಂಜಾಬ್ ಕಿಂಗ್ಸ್ ತಂಡವು ತನ್ನ ಪಾಲಿನ ಮೂರನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಈ ಹೈವೋಲ್ಟೇಜ್ ಮ್ಯಾಚ್ ಐತಿಹಾಸಿಕ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ಮಾರ್ಚ್ 06ರಂದು ನಡೆಯಲಿದೆ. ಈ ಪಂದ್ಯದಲ್ಲೂ ಪಂಜಾಬ್ ತಂಡವು ನಿಧಾನಗತಿಯ ಬೌಲಿಂಗ್ ಮಾಡಿದರೆ, ಸನ್‌ರೈಸರ್ಸ್ ಎದುರು ಮಾರ್ಚ್ 11ರಂದು ನಡೆಯಲಿರುವ ಫೈನಲ್ ಪಂದ್ಯದಿಂದ ಶ್ರೇಯಸ್ ಅಯ್ಯರ್ ಬ್ಯಾನ್ ಆಗಬೇಕಾಗುತ್ತದೆ.

ಸದ್ಯ ಪಂಜಾಬ್ ಕಿಂಗ್ಸ್ ತಂಡವು ಆಡಿದ ಎರಡೂ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಕಳೆದ ಬಾರಿ ಫೈನಲ್‌ನಲ್ಲಿ ಮುಗ್ಗರಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಶ್ರೇಯಸ್ ಅಯ್ಯರ್ ಪಡೆ ಈ ಬಾರಿ ಶತಾಯಗತಾಯ ಐಪಿಎಲ್ ಟ್ರೋಫಿ ಬರ ನೀಗಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನ್ನ ಸಕ್ಸಸ್ ನೋಡಿ ಕೆಲವರಿಗೆ ಹೊಟ್ಟೆಕಿಚ್ಚು! ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಹೀಗಂದಿದ್ದೇಕೆ?
IPL 2026: ಸತತ ಎರಡನೇ ಗೆಲುವಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ ಹೋರಾಟ!