
ಬೆಂಗಳೂರು(ಮಾ.30): ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ತಂಡವು ರೋಚಕ ಗೆಲುವು ಸಾಧಿಸಿತು. ಇನ್ನು ಇದೇ ಪಂದ್ಯದ ವೇಳೆಯಲ್ಲಿ ಒಂದು ಅಪರೂಪದ ಸನ್ನಿವೇಷಕ್ಕೂ ಸಾಕ್ಷಿಯಾಯಿತು.
ಕಳೆದ ವರ್ಷ ಮೈದಾನದಲ್ಲಿ ಕಚ್ಚಾಡಿಕೊಂಡಿದ್ದ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್, ಶುಕ್ರವಾರ ಪಂದ್ಯದ ಮೊದಲ ಇನ್ನಿಂಗ್ಸ್ನ ಮೊದಲ ಸ್ಟ್ರಾಟರ್ಜಿಕ್ ಟೈಮ್ ಔಟ್ ವೇಳೆ ದೋಸ್ತಿ ಪ್ರದರ್ಶಿಸಿದರು. ತಮ್ಮ ಆಟಗಾರರಿಗೆ ಸಲಹೆ ನೀಡುವ ಸಲುವಾಗಿ ಮೈದಾನಕ್ಕಿಳಿದಿದ್ದ ಕೆಕೆಆರ್ನ ಮೆಂಟರ್ ಗಂಭೀರ್, ಕೊಹ್ಲಿಯ ಬಳಿ ಬಂದು ಅವರನ್ನು ತಬ್ಬಿಕೊಂಡು ಅಭಿನಂದಿಸಿದರು. ಇವರಿಬ್ಬರ ಮಾತುಕತೆಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಕೆಕೆಆರ್ ಬ್ಯಾಟಿಂಗ್ ಆರ್ಭಟಕ್ಕೆ ಆರ್ಸಿಬಿ ಸೈಲೆಂಟ್..! ಚಿನ್ನಸ್ವಾಮಿಯಲ್ಲಿ ಕೋಲ್ಕತಾಗೆ ಮತ್ತೊಂದು ಜಯ
ಕಳೆದೊಂದು ದಶಕದಿಂದಲೂ ವಿರಾಟ್ ಕೊಹ್ಲಿ ವಿರುದ್ದ ಗೌತಮ್ ಗಂಭೀರ್ ಕಿಡಿಕಾರುತ್ತಲೇ ಬಂದಿದ್ದರು. ಹಲವು ಬಾರಿ ಆರ್ಸಿಬಿ ನಾಯಕರಾಗಿದ್ದ ವಿರಾಟ್ ಕೊಹ್ಲಿಯನ್ನು ಅವಕಾಶ ಸಿಕ್ಕಾಗಲೆಲ್ಲಾ ಕೆಣಕುತ್ತಲೇ ಬಂದಿದ್ದರು. ಅದರಲ್ಲೂ ಕಳೆದ ವರ್ಷ ಗೌತಮ್ ಗಂಭೀರ್ ಲಖನೌ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದಾಗ, ನವೀನ್ ಉಲ್ ಹಕ್ ಹಾಗೂ ವಿರಾಟ್ ಕೊಹ್ಲಿ ನಡುವಿನ ಮಾತಿನ ಚಕಮಕಿಗೆ ಗೌತಿ ತುಪ್ಪ ಸುರಿದಿದ್ದರು.
ಇನ್ನು ಆರ್ಸಿಬಿ ಹಾಗೂ ಕೆಕೆಆರ್ ನಡುವಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಭರ್ಜರಿ ಗೆಲುವು ಸಾಧಿಸಿತು. 2015ರಿಂದಲೂ ತವರು ಅಂಗಳದಲ್ಲಿ ಕೆಕೆಆರ್ ವಿರುದ್ಧ ಗೆಲ್ಲದ ಆರ್ಸಿಬಿ ಈ ಬಾರಿ 7 ವಿಕೆಟ್ಗಳಿಂದ ಪರಾಭವಗೊಂಡಿತು. ಕೆಕೆಆರ್ 2 ಜಯದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರೆ, ಆರ್ಸಿಬಿ 3ರಲ್ಲಿ 2 ಸೋಲಿನೊಂದಿಗೆ 6ನೇ ಸ್ಥಾನದಲ್ಲೇ ಉಳಿದಿದೆ.
08ನೇ ಜಯ
ಕೆಕೆಆರ್ಗೆ ಇದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ವಿರುದ್ಧ 12 ಪಂದ್ಯಗಳಲ್ಲಿ 8ನೇ ಜಯ. 2010, 2011, 2013, 2015ರಲ್ಲಿ ಆರ್ಸಿಬಿ ಗೆದ್ದಿದ್ದರೆ, 2008, 20012, 2016, 2017, 2018, 2019, 2023 ಮತ್ತು 2024ರಲ್ಲಿ ಕೆಕೆಆರ್ ಜಯಗಳಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.