
ಕೋಲ್ಕತಾ(ಮೇ.08): 16ನೇ ಆವೃತ್ತಿ ಐಪಿಎಲ್ ಲೀಗ್ ಪಂದ್ಯಗಳು ನಿರ್ಣಾಯಕ ಹಂತ ತಲುಪಿದ್ದು, ಇನ್ನು ಪ್ರತಿ ತಂಡಗಳ ಸೋಲು-ಗೆಲುವು ಪ್ಲೇ-ಆಫ್ ರೇಸ್ನಲ್ಲಿ ಅಳಿವು, ಉಳಿವನ್ನು ನಿರ್ಧರಿಸಿದೆ. ಸೋಮವಾರ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್್ಸ ತಂಡಗಳು ಪರಸ್ಪರ ಸೆಣಸಾಡಲಿದ್ದು, ಸೋಲುವ ತಂಡದ ಪ್ಲೇ-ಆಫ್ ಹಾದಿ ಬಂದ್ ಆಗುವ ಸಾಧ್ಯತೆಯಿದೆ. 10ರಲ್ಲಿ 5 ಪಂದ್ಯ ಗೆದ್ದಿರುವ ಪಂಜಾಬ್ ಕಿಂಗ್ಸ್ ಸೋತರೆ ರೇಸ್ನಿಂದ ಬಹುತೇಕ ಹೊರಬೀಳಲಿದ್ದು, 4 ಪಂದ್ಯ ಗೆದ್ದಿರುವ ಕೆಕೆಆರ್ ಈ ಪಂದ್ಯದಲ್ಲಿ ಸೋತರೆ ಪ್ಲೇ-ಆಫ್ ಬಾಗಿಲು ಖಚಿತವಾಗಿ ಮುಚ್ಚಲಿದೆ.
ಟೂರ್ನಿಯಲ್ಲಿ ಈ ಬಾರಿ ಎರಡೂ ತಂಡಗಳು ಹೇಳಿಕೊಳ್ಳುವಂಥ ಪ್ರದರ್ಶನ ನೀಡಿಲ್ಲ. ಕೆಕೆಆರ್ನ ಬ್ಯಾಟರ್ಗಳು ಒಂದಷ್ಟು ಪಂದ್ಯಗಳಲ್ಲಿ ಮಿಂಚಿದ್ದರೂ ತನ್ನ ಸ್ಪಿನ್ನರ್ಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ಟೂರ್ನಿಯಲ್ಲಿ ತಂಡದ ಸ್ಪಿನ್ನರ್ಗಳು 35 ವಿಕೆಟ್ ಪಡೆದಿದ್ದು, ಯಾವುದೇ ತಂಡಗಳ ಪೈಕಿ ಗರಿಷ್ಠ ಎನಿಸಿದೆ. ಕೋಲ್ಕತಾ ನೈಟ್ ರೈಡರ್ಸ್ ಗೆಲುವು ಸಾಧಿಸಬೇಕಿದ್ದರೇ, ಜೇಸನ್ ರಾಯ್, ವೆಂಕಟೇಶ್ ಅಯ್ಯರ್, ನಾಯಕ ನಿತೀಶ್ ರಾಣಾ ಹಾಗೂ ರಿಂಕು ಸಿಂಗ್ ಅಬ್ಬರಿಸಬೇಕಿದೆ. ಇನ್ನು ಬೌಲರ್ಗಳಾದ ವೆಂಕಟೇಶ್ ಅಯ್ಯರ್, ಸುನಿಲ್ ನರೈನ್ ಜತೆಗೆ ಸುಯಾಶ್ ಶರ್ಮಾ ಮತ್ತೊಮ್ಮೆ ಜಾದೂ ಮಾಡಬೇಕಿದೆ. ರಸೆಲ್ ಆಲ್ರೌಂಡ್ ಆಟವಾಡಿದರೆ, ಪಂಜಾಬ್ಗೆ ಗೆಲುವು ಕಷ್ಟವಾಗುವ ಸಾಧ್ಯತೆಯಿದೆ.
ಮತ್ತೊಂದೆಡೆ ಪಂಜಾಬ್ ಸ್ಪಿನ್ನರ್ಗಳು ಕನಿಷ್ಠ ಅಂದರೆ 12 ವಿಕೆಟ್ ಮಾತ್ರ ಪಡೆದಿದ್ದು, ತನ್ನ ವೇಗಿಗಳ ಮೇಲೆ ಹೆಚ್ಚಿನ ಭರವಸೆ ಇರಿಸಿದೆ. ಹೀಗಾಗಿ ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಉಭಯ ತಂಡಗಳಲ್ಲಿರುವ ಸ್ಫೋಟಕ ಬ್ಯಾಟರ್ಗಳ ನಡುವೆ ಸ್ಪರ್ಧೆ ಏರ್ಪಡುವ ನಿರೀಕ್ಷೆ ಇದೆ. ಪಂಜಾಬ್ ಕಿಂಗ್ಸ್ ತಂಡವು ಪ್ರಭ್ಸಿಮ್ರನ್ ಸಿಂಗ್, ಶಿಖರ್ ಧವನ್, ಮ್ಯಾಥ್ಯೂ ಶಾರ್ಟ್, ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ ಅವರು ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿದ್ದಾರೆ. ಇನ್ನು ಆರ್ಶದೀಪ್ ಸಿಂಗ್, ಸ್ಯಾಮ್ ಕರ್ರನ್ ಮಾರಕ ದಾಳಿ ನಡೆಸಿ ಕೆಕೆಆರ್ ಬ್ಯಾಟರ್ಗಳನ್ನು ಕಟ್ಟಿಹಾಕುವ ಮಹತ್ವದ ಜವಾಬ್ದಾರಿಯಿದೆ.
IPL 2023 ಅಂತಿಮ ಎಸೆತ ನೋ ಬಾಲ್, ಫ್ರೀ ಹಿಟ್ನಲ್ಲಿ ಹೈದರಾಬಾದ್ ತಂಡಕ್ಕೆ ರೋಚಕ ಗೆಲುವು!
ಒಟ್ಟು ಮುಖಾಮುಖಿ: 31
ಕೆಕೆಆರ್: 20
ಪಂಜಾಬ್: 11
ಸಂಭವನೀಯ ಆಟಗಾರರ ಪಟ್ಟಿ
ಕೆಕೆಆರ್: ರೆಹಮಾನುಲ್ಲಾ ಗುರ್ಬಾಜ್, ಜೇಸನ್ ರಾಯ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ(ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೇನ್, ಶಾರ್ದೂಲ್ ಠಾಕೂರ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಸುಯಶ್ ಶರ್ಮಾ.
ಪಂಜಾಬ್: ಶಿಖರ್ ಧವನ್(ನಾಯಕ), ಪ್ರಭ್ಸಿಮ್ರನ್ ಸಿಂಗ್, ಮ್ಯಾಥ್ಯೂ ಶಾರ್ಟ್, ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ, ಸಿಕಂದರ್ ರಾಜಾ, ಶಾರುಖ್ ಖಾನ್, ಸ್ಯಾಮ್ ಕರ್ರನ್, ರಿಷಿ ಧವನ್, ಹಪ್ರೀತ್ ಬ್ರಾರ್, ರಾಹುಲ್ ಚಹಾರ್, ಆರ್ಶದೀಪ್ ಸಿಂಗ್.
ಪಂದ್ಯ: ಸಂಜೆ 7.30ರಿಂದ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಪಿಚ್ ರಿಪೋರ್ಟ್
ಈಡನ್ ಗಾರ್ಡನ್ಸ್ ಕ್ರೀಡಾಂಗಣ ಬ್ಯಾಟರ್ಗಳ ಪಾಲಿಗೆ ಸ್ವರ್ಗ. ಈ ಬಾರಿ ಟೂರ್ನಿಯ ಸರಾಸರಿ ಮೊತ್ತ 192. ನಾಲ್ಕು ಪಂದ್ಯಗಳಲ್ಲಿ ಮೊದಲು ಬ್ಯಾಟ್ ತಂಡಗಳು 3 ಬಾರಿ 200+ ರನ್ ಕಲೆಹಾಕಿವೆ. ಆದರೆ ಇಲ್ಲಿ ಚೇಸಿಂಗ್ ಅಷ್ಟುಸುಲಭವಲ್ಲ. ಹೀಗಾಗಿ ಟಾಸ್ ಮತ್ತೆ ನಿರ್ಣಾಯಕ ಪಾತ್ರ ವಹಿಸಬಹುದು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.