ಅಜಿಂಕ್ಯ ರಹಾನೆ ಟಿ20 ಮಾದರಿಯಲ್ಲಿ ಹೆಚ್ಚಿನ ಯಶಸ್ಸು ಸಾಧಿಸಿಲ್ಲ. ಹೀಗಾಗಿ ಐಪಿಎಲ್ ಟೂರ್ನಿಯಲ್ಲೂ ಸತತ ಅವಕಾಶಪಡೆದಿಲ್ಲ. ಆದರೆ ಈ ಬಾರಿ ಚೆನ್ನೈ ತಂಡ ಸೇರಿಕೊಂಡಿರುವ ರಹಾನೆ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಮೂಲಕ ಮುಂಬೈ ವಿರುದ್ಧ ಗೆಲುವಿನ ರೂವಾರಿಯಾಗಿದ್ದಾರೆ.
ಮುಂಬೈ(ಏ.08): ಅಜಿಂಕ್ಯ ರಹಾನೆ ಟೆಸ್ಟ್ ಬ್ಯಾಟ್ಸ್ಮನ್ ಎಂದೇ ಗುರುತಿಸಿಕೊಂಡಿದ್ದಾರೆ.ಹೀಗಾಗಿ 2016ರಲ್ಲೇ ಟೀಂ ಇಂಡಿಯಾ ಪರ ಕೊನೆಯ ಟಿ20 ಪಂದ್ಯ ಆಡಿದ್ದಾರೆ. ಇತ್ತ 2018ರ ಬಳಿಕ ಏಕದಿನ ತಂಡದಲ್ಲೂ ಸ್ಥಾನ ಸಿಕ್ಕಿಲ್ಲ. ಈ ಬಾರಿ ಅಜಿಂಕ್ಯ ರಹಾನೆ ಕೊನೆಯ ಕ್ಷಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿಕೊಂಡಿದ್ದಾರೆ. ಆದರೆ ರಹಾನೆ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದೆಂದೂ ಕಾಣದ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ರಹಾನೆ ಅಬ್ಬರ, ರುತುರಾತ್ ಗಾಯಕ್ವಾಡ್ ಎಚ್ಚರಿಕೆ ಬ್ಯಾಟಿಂಗ್ನಿಂದ ಚೆನ್ನೈ ಸೂಪರ್ ಕಿಂಗ್ಸ್ 7 ವಿಕಟ್ ಭರ್ಜರಿ ಗೆಲುವು ದಾಖಲಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗೆ 158 ರನ್ ಟಾರ್ಗೆಟ್ ಪಡೆದಿತ್ತು. ಚೇಸಿಂಗ್ ಆರಂಭಿಸಿದ ಸಿಎಸ್ಕೆಗೆ ಆರಂಭದಲ್ಲೇ ಆಘಾತ. ಡೆವೋನ್ ಕಾನ್ವೇ ಶೂನ್ಯಕ್ಕೆ ಔಟಾದರು. ಮೊದಲ ಓವರ್ನ 4ನೇ ಎಸೆತದಲ್ಲಿ ಕಾನ್ವೇ ವಿಕೆಟ್ ಪತನಗೊಂಡಿತು. ಇತ್ತ ಚೆನ್ನೈ ಕೂಡ ರನ್ ಖಾತೆ ತೆರೆಯುವ ಮುನ್ನವೇ ವಿಕೆಟ್ ಕಳೆದುಕೊಂಡಿತು. ಆದರೆ ರುತುರಾಜ್ ಗಾಯಕ್ವಾಡ್ ಹಾಗೂ ಅಜಿಂಕ್ಯ ರಹಾನೆ ಜೊತೆಯಾಟದಿಂದ ಚೆನ್ನೈ ಚೇತರಿಸಿಕೊಂಡಿತು.
ಇತ್ತ ಅಜಿಂಕ್ಯ ರಹಾನೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. 225ರ ಸ್ಟ್ರೈಕ್ ರೇಟ್ನಲ್ಲಿ ರಹಾನೆ ಅಬ್ಬರಿಸಿದರು. ಅತೀ ವೇಗದಲ್ಲಿ ಅರ್ಧಶತಕ ಸಿಡಿಸಿ ಚೆನ್ನೈ ತಂಡದ ಹಾದಿ ಸುಗಮಗೊಳಿಸಿದರು. 7 ಬೌಂಡರಿ 3 ಸಿಕ್ಸರ್ ಮೂಲಕ 27 ಎಸೆತದಲ್ಲಿ 61 ರನ್ ಸಿಡಿಸಿದರು. ರಹಾನೆ ಅಟಕ್ಕೆ ಮುಂಬೈ ಇಂಡಿಯನ್ಸ್ ಮಾತ್ರವಲ್ಲ, ಚೆನ್ನೈ ಸೂಪರ್ ಕಿಂಗ್ಸ್ ಕೂಡ ಬೆಚ್ಚಿ ಬಿದ್ದಿತ್ತು. ಇತ್ತ ರುತುರಾಜ್ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು.
ಶಿವಂ ದುಬೆ 28 ರನ್ ಕಾಣಿಕೆ ನೀಡಿದರು. ಬಳಿಕ ರುತುರಾಜ್ ಹಾಗೂ ಅಂಬಾಟಿ ರಾಯುಡು ಚೆನ್ನೈ ಗೆಲುವು ಖಚಿತಪಡಿಸಿದರು. ಅಂಬಾಟಿ ಅಡೇಯ 20 ರನ್ ಸಿಡಿಸಿದರೆ, ರುತುರಾಜ್ ಗಾಯಕ್ವಾಡ್ ಅಜೇಯ 40 ರನ್ ಸಿಡಿಸಿದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ 18.1 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.