
ನವದೆಹಲಿ(ಅ.113): 14ನೇ ಆವೃತ್ತಿಯ ಐಪಿಎಲ್ (IPL 2021) ಟೂರ್ನಿ ಮಧ್ಯೆಯೇ ನಾಯಕತ್ವದಿಂದ ಕೆಳಗಿಳಿಸಿದ್ದಕ್ಕೆ ಸನ್ರೈಸರ್ಸ್ ಹೈದರಾಬಾದ್ (SunRisers Hyderabad) ತಂಡದ ಆಡಳಿತ ಕಾರಣವನ್ನೇ ನೀಡಲಿಲ್ಲ ಎಂದು ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್ (David Warner) ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ತಂಡಕ್ಕಾಗಿ 10 ವರ್ಷ ಆಡಿದ ನನ್ನನ್ನು ದಿಢೀರನೆ ನಾಯಕನ ಸ್ಥಾನದಿಂದ ಕೆಳಗಿಳಿಸಲಾಯಿತು. ತಂಡದ ನಿರ್ಧಾರವನ್ನು ನಾನು ಗೌರವಿಸುತ್ತೇನೆ, ಆದರೆ ಯಾಕೆ ನನ್ನನ್ನು ಕೈಬಿಡಲಾಯಿತು ಎನ್ನುವುದನ್ನು ಈವರೆಗೂ ತಿಳಿಸಿಲ್ಲ. ಇದು ಬಹಳ ಬೇಸರ ತರಿಸಿದೆ’ ಎಂದಿದ್ದಾರೆ. ಒಂದು ಫ್ರಾಂಚೈಸಿ ಪರ 100 ಪಂದ್ಯಗಳನ್ನಾಡಿದ ಆಟಗಾರನನ್ನು ಕೇವಲ 4 ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದಕ್ಕೆ ನನ್ನನ್ನು ತಂಡದಿಂದ ಕೈಬಿಟ್ಟರೇ ಎನ್ನುವುದು ಅರ್ಥವಾಗುತ್ತಿಲ್ಲ ಎಂದು 34 ವರ್ಷದ ಆಸೀಸ್ ಆರಂಭಿಕ ಬ್ಯಾಟ್ಸ್ಮನ್ ತಮ್ಮ ಬೇಸರವನ್ನು ಹೊರಹಾಕಿದ್ದಾರೆ.
ಮುಂದಿನ ಆವೃತ್ತಿಯಲ್ಲಿ ಕೂಡಾ ನಾನು ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಆಡಲು ಇಚ್ಚಿಸುತ್ತೇನೆ. ಆದರೆ ನನ್ನನ್ನು ನೀವು ಸನ್ರೈಸರ್ಸ್ ತಂಡದಲ್ಲಿ ಕಾಣಲಿದ್ದಿರೋ ಇಲ್ಲವೋ ಎನ್ನುವುದಕ್ಕೆ ಕಾಲವೇ ಉತ್ತರಿಸಲಿದೆ. ಐಪಿಎಲ್ 2022ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಪರವೇ ಆಡಲು ಬಯಸುತ್ತೇನೆ. ನಾನು ಡೆಲ್ಲಿ ತಂಡದ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್ ಆರಂಭಿಸಿದೆ. ಇದಾದ ಬಳಿಕ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದೇನೆ. ಮುಂದೆ ಅವಕಾಶ ಹೇಗೆ ಬರುತ್ತದೋ ಹಾಗೆ ಸಾಗುತ್ತೇನೆ. ಎಲ್ಲೇ ಇದ್ದರೂ 100% ಉತ್ತಮ ಪ್ರದರ್ಶನ ತೋರಲು ಎದುರು ನೋಡುತ್ತಿದ್ದೇನೆ ಎಂದು ಡೇವಿಡ್ ವಾರ್ನರ್ ಹೇಳಿದ್ದಾರೆ.
ಇನ್ನೇನಿದ್ದರೂ ಮುಂದಿನ ಆವೃತ್ತಿಯ ಐಪಿಎಲ್ನತ್ತ ಗಮನ ಹರಿಸುತ್ತೇನೆ. ಮತ್ತೆ ನಾನು ಸನ್ರೈಸರ್ಸ್ ಹೈದರಾಬಾದ್ ತಂಡದ ಪರವೇ ಆಡಲು ಇಷ್ಟ ಪಡುತ್ತೇನೆ. ಆದರೆ ಮಾಲೀಕರು ಏನು ನಿರ್ಧಾರಿಸುತ್ತಾರೋ ಗೊತ್ತಿಲ್ಲ. ಯಾವುದಕ್ಕೂ ತೀರ್ಮಾನ ನನ್ನ ಕೈನಲ್ಲಿ ಇಲ್ಲ ಎಂದು ವಾರ್ನರ್ ಹೇಳಿದ್ದಾರೆ. 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೇವಿಡ್ ವಾರ್ನರ್ ಸನ್ರೈಸರ್ಸ್ ಹೈದರಾಬಾದ್ ತಂಡದ ಪರ 8 ಪಂದ್ಯಗಳನ್ನಾಡಿ 2 ಬಾರಿ 50+ ರನ್ ಸಹಿತ ಒಟ್ಟು ಕೇವಲ 195 ರನ್ ಬಾರಿಸಿದ್ದರು. ಬ್ಯಾಟಿಂಗ್ ವೈಫಲ್ಯ ಹಾಗೂ ಕೋಚ್ ಸಿಬ್ಬಂದಿ ಜತೆಗಿನ ಕಿರಿಕ್ನಿಂದಾಗಿ ವಾರ್ನರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಕೇನ್ ವಿಲಿಯಮ್ಸನ್ಗೆ ನಾಯಕತ್ವ ಪಟ್ಟಕಟ್ಟಲಾಯಿತು. ಹೀಗಿದ್ದೂ ಸನ್ರೈಸರ್ಸ್ ಪರಿಸ್ಥಿತಿ ಬದಲಾಗಲಿಲ್ಲ. ಸನ್ರೈಸರ್ಸ್ ಹೈದರಾಬಾದ್ ತಂಡವು ಟೂರ್ನಿಯುದ್ದಕ್ಕೂ ತಮ್ಮ ದಯಾನೀಯ ಬ್ಯಾಟಿಂಗ್ ಹಾಗೂ ಬೌಲಿಂಗ್ ವೈಫಲ್ಯ ಅನುಭವಿಸುವ ಮೂಲಕ ನಿರಾಸೆ ಮೂಡಿಸಿತ್ತು.
IPL 2021 ಸನ್ರೈಸರ್ಸ್ ಹೈದರಾಬಾದ್ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದ ಡೇವಿಡ್ ವಾರ್ನರ್..!
ಸನ್ರೈಸರ್ಸ್ ಹೈದರಾಬಾದ್ ತಂಡವು 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 14 ಪಂದ್ಯಗಳನ್ನಾಡಿ ಕೇವಲ 3 ಪಂದ್ಯಗಳಲ್ಲಿ ಮಾತ್ರ ಗೆಲುವಿನ ನಗೆ ಬೀರಿತ್ತು. ಒಟ್ಟು 6 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಉಳಿಯುವ ಮೂಲಕ ಆರೆಂಜ್ ಆರ್ಮಿ ನಿರಾಸೆ ಅನುಭವಿಸಿತ್ತು. 2015ರ ಬಳಿಕ ಸನ್ರೈಸರ್ಸ್ ಹೈದರಾಬಾದ್ ತಂಡವು ಮೊದಲ ಬಾರಿಗೆ ಪ್ಲೇ ಆಫ್ಗೇರುವಲ್ಲಿ ವಿಫಲವಾಗಿತ್ತು. 2016ರ ಐಪಿಎಲ್ ಟೂರ್ನಿಯಲ್ಲಿ ಡೇವಿಡ್ ವಾರ್ನರ್ ನೇತೃತ್ವದ ಸನ್ರೈಸರ್ಸ್ ಹೈದರಾಬಾದ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವನ್ನು ಮಣಿಸುವ ಮೂಲಕ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.