IPL 2021 ಬಲಿಷ್ಠ ಕೆಕೆಆರ್‌ಗೆ ಗೇಟ್‌ ಪಾಸ್‌ ಕೊಡುತ್ತಾ ಆರ್‌ಸಿಬಿ..?

Kannadaprabha News   | Asianet News
Published : Oct 11, 2021, 10:00 AM IST
IPL 2021 ಬಲಿಷ್ಠ ಕೆಕೆಆರ್‌ಗೆ ಗೇಟ್‌ ಪಾಸ್‌ ಕೊಡುತ್ತಾ ಆರ್‌ಸಿಬಿ..?

ಸಾರಾಂಶ

* ಶಾರ್ಜಾ ಮೈದಾನದಲ್ಲಿಂದು ಆರ್‌ಸಿಬಿ ವರ್ಸಸ್ ಕೆಕೆಆರ್ ಹೈವೋಲ್ಟೇಜ್ ಕದನ * ಬಲಿಷ್ಠ ಕೆಕೆಆರ್‌ಗೆ ಶಾಕ್‌ ನೀಡಲು ಸಜ್ಜಾದ ವಿರಾಟ್ ಕೊಹ್ಲಿ ಪಡೆ * ಎಲಿಮಿನೇಟರ್‌ ಪಂದ್ಯದಲ್ಲಿ ಸೋತ ತಂಡ ಟೂರ್ನಿಯಿಂದಲೇ ಔಟ್

ಶಾರ್ಜಾ(ಅ.11): ಈ ಐಪಿಎಲ್‌ ಮುಗಿದ ಬಳಿಕ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿರುವ ವಿರಾಟ್‌ ಕೊಹ್ಲಿ (Virat Kohli), ಆರ್‌ಸಿಬಿಗೆ ಚೊಚ್ಚಲ ಕಪ್‌ ಗೆದ್ದುಕೊಡಲು ಪಣತೊಟ್ಟಿದ್ದಾರೆ. ಟ್ರೋಫಿ ಗೆಲ್ಲಲು ಆರ್‌ಸಿಬಿ ಇನ್ನೂ 3 ಪಂದ್ಯಗಳನ್ನು ಗೆಲ್ಲಬೇಕಿದ್ದು, ಈ ಹಾದಿಯಲ್ಲಿ ಕೋಲ್ಕತ ನೈಟ್‌ರೈಡ​ರ್ಸ್‌ (Kolkata Knight Riders) ಮೊದಲ ಎದುರಾಳಿ ಆಗಿದೆ. ಸೋಮವಾರ ನಡೆಯಲಿರುವ ಎಲಿಮಿನೇಟರ್‌ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ ಗೆದ್ದರಷ್ಟೇ ಫೈನಲ್‌ಗೇರುವ ಆಸೆ ಜೀವಂತವಾಗಿ ಉಳಿಯಲಿದೆ. ಈ ಪಂದ್ಯದಲ್ಲಿ ಸೋಲುವ ತಂಡ ಟೂರ್ನಿಯಿಂದ ಹೊರಬೀಳಲಿದೆ.

2016ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು(Royal Challengers Bangalore) ತಂಡವನ್ನು ಫೈನಲ್‌ಗೇರಿಸಿದ್ದ ವಿರಾಟ್‌, 2015 ಹಾಗೂ 2020ರಲ್ಲಿ ಪ್ಲೇ-ಆಫ್‌ ವರೆಗೂ ಕರೆದೊಯ್ದಿದ್ದರು. ತಮ್ಮ ಅಂತಿಮ ಯತ್ನದಲ್ಲಿ ಟ್ರೋಫಿ ಗೆಲ್ಲಲು ಕೊಹ್ಲಿ ಉತ್ಸುಕರಾಗಿದ್ದಾರೆ. ಮತ್ತೊಂದೆಡೆ ನಾಯಕನಾಗಿ ಇಯಾನ್‌ ಮೊರ್ಗನ್‌ ಕೆಕೆಆರ್‌ಗೆ ಹೆಚ್ಚಿನ ಯಶಸ್ಸು ತಂದುಕೊಟ್ಟಿಲ್ಲ. ಗೌತಮ್‌ ಗಂಭೀರ್‌ ನಾಯಕತ್ವದಲ್ಲಿ ಕೆಕೆಆರ್‌ 2 ಬಾರಿ ಚಾಂಪಿಯನ್‌ ಆಗಿತ್ತು.

IPL 2021: ಡೆಲ್ಲಿ ವಿರುದ್ಧ ಧೋನಿ ಸ್ಫೋಟ ಕಂಡ ಕೊಹ್ಲಿ ಹೇಳಿದ್ದು ಒಂದೇ ಮಾತು!

ಕಾಗದದ ಮೇಲೆ ಎರಡೂ ತಂಡಗಳು ಸಮಬಲ ಸಾಧಿಸುತ್ತವೆ. ಆದರೆ ಒಟ್ಟು ಮುಖಾಮುಖಿಯನ್ನು ಗಮನಿಸಿದಾಗ 28 ಪಂದ್ಯಗಳಲ್ಲಿ 15ರಲ್ಲಿ ಆರ್‌ಸಿಬಿ (RCB) ವಿರುದ್ಧ ಕೆಕೆಆರ್‌ ಮೇಲುಗೈ ಸಾಧಿಸಿದೆ. ಅಲ್ಲದೇ ಈ ವರ್ಷ ಯುಎಇ ಚರಣದಲ್ಲಿ ಮೊದಲ ಪಂದ್ಯವನ್ನೇ ಕೆಕೆಆರ್‌ ವಿರುದ್ಧ ಆಡಿದ್ದ ಆರ್‌ಸಿಬಿ ಕೇವಲ 92 ರನ್‌ಗೆ ಆಲೌಟ್‌ ಆಗಿ, ಬೃಹತ್‌ ಅಂತರದಲ್ಲಿ ಸೋಲುಂಡಿತ್ತು. ಕೊಹ್ಲಿ ಪಡೆಯ ನೆಟ್‌ ರನ್‌ರೇಟ್‌ ಕುಸಿಯಲು ಕೆಕೆಆರ್‌ ವಿರುದ್ಧದ ಸೋಲೇ ಕಾರಣ.

ಆದರೂ, ಹಿಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ ಕೊನೆ ಬಾಲ್‌ನಲ್ಲಿ ಸಿಕ್ಸರ್‌ ಬಾರಿಸಿ ಗೆಲುವು ಸಾಧಿಸಿದ ಆರ್‌ಸಿಬಿ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ. ಅತ್ಯುತ್ತಮ ಲಯದಲ್ಲಿರುವ ಗ್ಲೆನ್‌ ಮ್ಯಾಕ್ಸ್‌ವೆಲ್‌ (Glenn Maxwell), ಶ್ರೀಕರ್‌ ಭರತ್‌ ಮೇಲೆ ಆರ್‌ಸಿಬಿ ಹೆಚ್ಚು ವಿಶ್ವಾಸವಿರಿಸಿದೆ. ಸ್ಥಿರತೆ ಕಾಪಾಡಿಕೊಳ್ಳದ ಕೊಹ್ಲಿ ಹಾಗೂ ಪಡಿಕ್ಕಲ್‌, ಜಾದೂ ಪ್ರದರ್ಶಿಸದ ಎಬಿ ಡಿ ವಿಲಿಯರ್ಸ್‌ ತಂಡದ ತಲೆಬಿಸಿ ಹೆಚ್ಚಿಸಿದ್ದಾರೆ. ಆರ್‌ಸಿಬಿ ಪ್ಲೇ-ಆಫ್‌ಗೇರುವಲ್ಲಿ ಬೌಲರ್‌ಗಳು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಹರ್ಷಲ್‌ ಪಟೇಲ್‌ ಪ್ರಚಂಡ ಲಯದಲ್ಲಿದ್ದಾರೆ. ಮೊಹಮದ್‌ ಸಿರಾಜ್‌ ಹಾಗೂ ಯಜುವೇಂದ್ರ ಚಹಲ್‌ ಟ್ರಂಪ್‌ ಕಾರ್ಡ್ಸ್ ಎನಿಸಿದ್ದಾರೆ.

ಬಲಿಷ್ಠವಾಗಿದೆ ಕೆಕೆಆರ್‌: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಕೆಕೆಆರ್‌ ಬಲಿಷ್ಠವಾಗಿದೆ. ಶುಭ್‌ಮನ್‌ ಗಿಲ್‌, ವೆಂಕಟೇಶ್‌ ಅಯ್ಯರ್‌, ರಾಹುಲ್‌ ತ್ರಿಪಾಠಿ ಹಾಗೂ ನಿತೀಶ್‌ ರಾಣಾ ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದುಕೊಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಲಾಕಿ ಫಗ್ರ್ಯೂಸನ್‌ ಹಾಗೂ ಶಿವಂ ಮಾವಿ ಸರಿಯಾದ ಸಮಯದಲ್ಲಿ ಲಯ ಕಂಡುಕೊಂಡಿದ್ದು, ಈ ಇಬ್ಬರಿಗೆ ಸ್ಪಿನ್ನರಗಳಾದ ಸುನಿಲ್‌ ನರೇನ್‌, ವರುಣ್‌ ಚಕ್ರವರ್ತಿ ಹಾಗೂ ಶಕೀಬ್‌ ಅಲ್‌ ಹಸನ್‌ರಿಂದ ಬೆಂಬಲ ದೊರೆಯಲಿದೆ. ಕೆಕೆಆರ್‌ನ ಬಲಿಷ್ಠ ಬೌಲಿಂಗ್‌ ದಾಳಿ ಎದುರು ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ತಮ್ಮ ಉತ್ಕೃಷ್ಟ ಆಟವಾಡಿದರಷ್ಟೇ ರನ್‌ ಹೊಳೆ ಹರಿಸಲು ಸಾಧ್ಯ.

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ವಿರಾಟ್‌ ಕೊಹ್ಲಿ(ನಾಯಕ), ದೇವದತ್ ಪಡಿಕ್ಕಲ್‌, ಶ್ರೀಕರ್ ಭರತ್‌, ಗ್ಲೆನ್ ಮ್ಯಾಕ್ಸ್‌ವೆಲ್‌, ಎಬಿ ಡಿ ವಿಲಿಯ​ರ್ಸ್‌, ಡೇನಿಯಲ್ ಕ್ರಿಶ್ಚಿಯನ್,ಶಾಬಾಜ್ ಅಹಮ್ಮದ್‌, ಜಾರ್ಜ್‌ ಗಾರ್ಟನ್‌, ಹರ್ಷಲ್ ಪಟೇಲ್‌, ಮೊಹಮ್ಮದ್ ಸಿರಾಜ್‌, ಯುಜುವೇಂದ್ರ ಚಹಲ್‌.

ಕೋಲ್ಕತ ನೈಟ್ ರೈಡರ್ಸ್‌‌: ವೆಂಕಟೇಶ್‌ ಅಯ್ಯರ್‌, ಶುಭ್‌ಮನ್‌ ಗಿಲ್‌, ರಾಹುಲ್‌ ತ್ರಿಪಾಠಿ, ನಿತೀಶ್‌ ರಾಣಾ, ಇಯಾನ್ ಮೊರ್ಗನ್‌(ನಾಯಕ), ದಿನೇಶ್ ಕಾರ್ತಿಕ್‌, ಶಕೀಬ್ ಅಲ್ ಹಸನ್‌, ಸುನಿಲ್ ನರೇನ್‌, ಲಾಕಿ ಫಗ್ರ್ಯೂಸನ್‌, ವರುಣ್ ಚಕ್ರವರ್ತಿ‌, ಶಿವಂ ಮಾವಿ.

ಸ್ಥಳ: ಶಾರ್ಜಾ

ಪಂದ್ಯ ಆರಂಭ: ಸಂಜೆ 7.30ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಜಯ್‌ ಹಜಾರೆ ಟ್ರೋಫಿ: ಒಂದೂವರೆ ದಶಕದ ಬಳಿಕ ಡೆಲ್ಲಿ ಪರ ವಿರಾಟ್ ಕೊಹ್ಲಿ ಮೈದಾನಕ್ಕೆ! ಬೆಂಗಳೂರಲ್ಲಿ ನಡೆಯುತ್ತೆ ಮ್ಯಾಚ್‌
ಬೆಂಗಳೂರಲ್ಲಿ ಐಪಿಎಲ್‌ ನಡೆಸಲು ಸಂಪುಟ ಅಸ್ತು