ಐಪಿಎಲ್ 2021: ಕೆಕೆಆರ್ ಎದುರು ಜಯದ ಕನವರಿಕೆಯಲ್ಲಿ ಆರ್‌ಸಿಬಿ

Kannadaprabha News   | Asianet News
Published : May 03, 2021, 10:23 AM IST
ಐಪಿಎಲ್ 2021: ಕೆಕೆಆರ್ ಎದುರು ಜಯದ ಕನವರಿಕೆಯಲ್ಲಿ ಆರ್‌ಸಿಬಿ

ಸಾರಾಂಶ

ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಿಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೋಲ್ಕತ ನೈಟ್ ರೈಡರ್ಸ್‌ ಸವಾಲನ್ನು ಎದುರಿಸಲಿದ್ದು, ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಅಹಮದಾಬಾದ್(ಮೇ.03)‌: ತಾರಾ ಆಟಗಾರರಿಂದ ಕೂಡಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ಲಯ ಕಂಡುಕೊಳ್ಳುವ ತವಕದಲ್ಲಿದ್ದು, ಸೋಮವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೋಲ್ಕತ ನೈಟ್‌ರೈಡರ್ಸ್ ವಿರುದ್ಧದ ಸೆಣಸಲಿದೆ. ಉಭಯ ತಂಡಗಳ ನಡುವೆ ಈ ಆವೃತ್ತಿಯಲ್ಲಿ ಇದು 2ನೇ ಮುಖಾಮುಖಿ. ಮೊದಲ ಪಂದ್ಯದಲ್ಲಿ 38 ರನ್‌ಗಳಿಂದ ಗೆದ್ದಿದ್ದ ಕೊಹ್ಲಿ ಪಡೆ, ಮತ್ತೊಂದು ಭರ್ಜರಿ ಗೆಲುವು ಸಾಧಿಸಲು ಕಾಯುತ್ತಿದೆ.

ಮೊದಲ 4 ಪಂದ್ಯಗಳ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಆರ್‌ಸಿಬಿ ಕಳೆದ 3 ಪಂದ್ಯಗಳಲ್ಲಿ 2ರಲ್ಲಿ ಸೋತಿದೆ. ಮೊಹಮದ್‌ ಸಿರಾಜ್‌ ಡೆಲ್ಲಿ ವಿರುದ್ಧ ಕೊನೆ ಓವರಲ್ಲಿ 14 ರನ್‌ ರಕ್ಷಿಸಿಕೊಳ್ಳದೆ ಹೋಗಿದ್ದರೆ ಸತತ 3 ಸೋಲುಗಳನ್ನು ಕಾಣುತ್ತಿತ್ತು. ತಂಡದ ಸೋಲಿಗೆ ಬ್ಯಾಟ್ಸ್‌ಮನ್‌ಗಳ ವೈಫಲ್ಯವೇ ಪ್ರಮುಖ ಕಾರಣ ಎನ್ನುವುದು ಎದ್ದು ಕಾಣುತ್ತಿದೆ. ಹೀಗಾಗಿ ಕೊಹ್ಲಿ, ದೇವದತ್‌ ಪಡಿಕ್ಕಲ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ಎಬಿ ಡಿ ವಿಲಿಯ​ರ್ಸ್ ಮೇಲೆ ಭಾರೀ ನಿರೀಕ್ಷೆ ಇದೆ. ಆರ್‌ಸಿಬಿ ಬೌಲರ್‌ಗಳು ಸ್ಥಿರತೆ ಕಾಯ್ದುಕೊಳ್ಳಬೇಕಿದ್ದು, ಕುಗ್ಗಿರುವ ಕೆಕೆಆರ್‌ ವಿರುದ್ಧದ ಪಂದ್ಯ ಆರ್‌ಸಿಬಿ ಬೌಲರ್‌ಗಳಿಗೆ ಉತ್ತಮ ಅವಕಾಶ ಎನಿಸಿದೆ.

ಧವನ್ ಆಟಕ್ಕೆ ಶರಣಾದ ಪಂಜಾಬ್ ಕಿಂಗ್ಸ್, ಡೆಲ್ಲಿಗೆ 7 ವಿಕೆಟ್ ಭರ್ಜರಿ ಗೆಲುವು!

ಒತ್ತಡದಲ್ಲಿ ಕೆಕೆಆರ್‌: ಕಳೆದ 5 ಪಂದ್ಯಗಳಲ್ಲಿ 4ರಲ್ಲಿ ಸೋತಿರುವ ಕೆಕೆಆರ್‌, ಆಡಿರುವ ಒಟ್ಟು 7 ಪಂದ್ಯಗಳಲ್ಲಿ 5ರಲ್ಲಿ ಸೋತು ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ತಂಡ ಪ್ಲೇ-ಆಫ್‌ಗೇರುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ ಸತತವಾಗಿ ಗೆಲ್ಲಬೇಕಿದೆ. ಪ್ಲೇ-ಆಫ್‌ಗೇರಲು ಕನಿಷ್ಠ 7ರಿಂದ 8 ಪಂದ್ಯಗಳಲ್ಲಿ ಗೆಲ್ಲಬೇಕಿದೆ. ಹೀಗಾಗಿ, ಕೇವಲ 2 ಗೆಲುವು ಕಂಡಿರುವ ಕೆಕೆಆರ್‌, ಬಾಕಿ ಇರುವ 7 ಪಂದ್ಯಗಳಲ್ಲಿ ಕನಿಷ್ಠ 5ರಿಂದ 6ರಲ್ಲಿ ಗೆಲ್ಲಲೇಬೇಕಿದೆ.

ಎಲ್ಲಾ ಮೂರೂ ವಿಭಾಗಗಳಲ್ಲಿ ಕೆಕೆಆರ್‌ ವೈಫಲ್ಯ ಕಾಣುತ್ತಿದೆ. ಸೂಕ್ತ ಆಡುವ ಹನ್ನೊಂದರ ಬಳಗದ ಆಯ್ಕೆಯಲ್ಲಿ ಎಡವುತ್ತಿರುವ ತಂಡ, ಬ್ಯಾಟಿಂಗ್‌ ಕ್ರಮಾಂಕದಲ್ಲೂ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಿದೆ.

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ಪಡಿಕ್ಕಲ್‌, ಕೊಹ್ಲಿ(ನಾಯಕ), ರಜತ್‌, ಮ್ಯಾಕ್ಸ್‌ವೆಲ್‌, ಡಿ ವಿಲಿಯ​ರ್ಸ್, ಶಾಬಾಜ್‌, ಜೇಮಿಸನ್‌, ಸ್ಯಾಮ್ಸ್‌, ಹರ್ಷಲ್‌, ಸಿರಾಜ್‌, ಚಹಲ್‌.

ಕೆಕೆಆರ್‌: ಗಿಲ್‌, ನಿತೀಶ್‌ ರಾಣಾ, ತ್ರಿಪಾಠಿ, ಮೊರ್ಗನ್‌(ನಾಯಕ), ಕಾರ್ತಿಕ್‌, ರಸೆಲ್‌, ಶಕೀಬ್‌, ಕಮಿನ್ಸ್‌, ವರುಣ್‌, ಶಿವಂ ಮಾವಿ, ಪ್ರಸಿದ್ಧ್ ಕೃಷ್ಣ.

ಸ್ಥಳ: ಅಹಮದಾಬಾದ್‌
ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?