
ಇಂದೋರ್(ಮಾ.01): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಉಭಯ ತಂಡಗಳಲ್ಲಿ ತಲಾ ಎರಡು ಬದಲಾವಣೆ ಮಾಡಲಾಗಿದೆ.
ಇಲ್ಲಿನ ಹೋಳ್ಕರ್ ಮೈದಾನ ಮೂರನೇ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಿದೆ. ಭಾರತ ತಂಡದಲ್ಲಿ ನಿರೀಕ್ಷೆಯಂತೆಯೇ ಕೆ ಎಲ್ ರಾಹುಲ್ ಅವರನ್ನು ಕೈಬಿಡಲಾಗಿದ್ದು, ಶುಭ್ಮನ್ ಗಿಲ್ ತಂಡ ಕೂಡಿಕೊಂಡಿದ್ದಾರೆ. ಇನ್ನು ಅನುಭವಿ ವೇಗಿ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದ್ದು, ಉಮೇಶ್ ಯಾದವ್ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಾಗಿದೆ. ಇನ್ನು ಆಸ್ಟ್ರೇಲಿಯಾ ತಂಡದಲ್ಲೂ ಕೂಡಾ ಎರಡು ಬದಲಾವಣೆ ಮಾಡಲಾಗಿದೆ. ಡೇವಿಡ್ ವಾರ್ನರ್ ಬದಲಿಗೆ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಹಾಗೂ ಪ್ಯಾಟ್ ಕಮಿನ್ಸ್ ಬದಲಿಗೆ ಮಿಚೆಲ್ ಸ್ಟಾರ್ಕ್ ತಂಡ ಕೂಡಿಕೊಂಡಿದ್ದಾರೆ.
ಈ ಪಂದ್ಯವು ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೇರುವ ವಿಚಾರದಲ್ಲಿ ಟೀಂ ಇಂಡಿಯಾಗೆ ಸಾಕಷ್ಟು ಮಹತ್ವದ್ದೆನಿಸಿದೆ. ಈಗಾಗಲೇ ಮೊದಲೆರಡು ಟೆಸ್ಟ್ ಪಂದ್ಯವನ್ನು ಜಯಿಸಿರುವ ಟೀಂ ಇಂಡಿಯಾ, ಮೂರನೇ ಟೆಸ್ಟ್ ಪಂದ್ಯವನ್ನು ಜಯಿಸಿ ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೇರಲು ಎದುರು ನೋಡುತ್ತಿದೆ.
Indore Test: ಇಂದಿನಿಂದ ಭಾರತ vs ಆಸ್ಟ್ರೇಲಿಯಾ ಮೂರನೇ ಟೆಸ್ಟ್ ಕದನ
ಹೇಗಿದೆ ಟೆಸ್ಟ್ ವಿಶ್ವಕಪ್ ಫೈನಲ್ ರೇಸ್?
ಭಾರತ ಸದ್ಯ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಶೇ.64.06 ಗೆಲುವಿನ ಪ್ರತಿಶತದೊಂದಿಗೆ 2ನೇ ಸ್ಥಾನದಲ್ಲಿದ್ದು, ಆಸೀಸ್(ಶೇ.66.67) ಅಗ್ರಸ್ಥಾನ ಕಾಯ್ದುಕೊಂಡಿದೆ. ಭಾರತಕ್ಕೆ ಫೈನಲ್ ಸ್ಥಾನ ಖಚಿತಪಡಿಸಿಕೊಳ್ಳಲು ಇನ್ನುಳಿದ 2 ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದರೂ ಸಾಕು. ಎರಡರಲ್ಲೂ ಗೆದ್ದರೆ ಅಗ್ರಸ್ಥಾನಕ್ಕೇರಲಿದೆ. ಅತ್ತ ಆಸೀಸ್ ಉಳಿದೆರಡು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದರೂ ಅಗ್ರ 2ರಲ್ಲೇ ಉಳಿಯಲಿದೆ. ಎರಡರಲ್ಲೂ ಸೋತರೆ ಆಗ ಶ್ರೀಲಂಕಾ-ನ್ಯೂಜಿಲೆಂಡ್ ನಡುವಿನ 2 ಪಂದ್ಯಗಳ ಸರಣಿ ಆಸೀಸ್ ಭವಿಷ್ಯ ನಿರ್ಧರಿಸಲಿದೆ. ಆಸೀಸ್ 0-4ರಲ್ಲಿ ಸೋತು, ಅತ್ತ ಲಂಕಾ 2-0 ಗೆದ್ದರೆ ಆಸೀಸ್ ಹೊರಬೀಳಲಿದೆ.
ತಂಡಗಳು ಹೀಗಿವೆ ನೋಡಿ:
ಭಾರತ: ರೋಹಿತ್ ಶರ್ಮಾ(ನಾಯಕ), ಶುಭ್ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಕೆ ಎಸ್ ಭರತ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್.
ಆಸ್ಪ್ರೇಲಿಯಾ: ಉಸ್ಮಾನ್ ಖವಾಜ, ಟ್ರಾವಿಸ್ ಹೆಡ್, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್(ನಾಯಕ), ಪೀಟರ್ ಹ್ಯಾಂಡ್ಸ್ಕಂಬ್, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕೇರ್ರಿ, ಮಿಚೆಲ್ ಸ್ಟಾರ್ಕ್, ನೇಥನ್ ಲಯನ್, ಟೋಡ್ ಮರ್ಫಿ, ಮ್ಯಾಥ್ಯೂ ಕುಹ್ನೆಮಾನ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.