
ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ 9 ವಿಕೆಟ್ ನಷ್ಟಕ್ಕೆ 460 ರನ್ಗಳ ಬೃಹತ್ ಮೊತ್ತ ಕಲೆಹಾಕಿ ಮೈದಾನದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದೆ. ದೇವದತ್ ಪಡಿಕ್ಕಲ್ ಅವರ ಭರ್ಜರಿ 167 ರನ್, ಕೆ.ಎಲ್. ರಾಹುಲ್ ಅವರ 82 ಹಾಗೂ ಧ್ರುವ್ ಜುರೆಲ್ ಅವರ 51 ರನ್ಗಳ ನೆರವಿನಿಂದ ತಂಡ ಬಲಿಷ್ಠ ಸ್ಥಿತಿಯಲ್ಲಿದೆ. ಆದರೆ, ಪಂದ್ಯದ ಈ ಗತ್ತಿನ ನಡುವೆಯೇ ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ಅಸಮಾಧಾನ ಸಾರ್ವಜನಿಕವಾಗಿ ಸ್ಫೋಟಗೊಂಡಿದೆ.
ತಂಡ ಬೃಹತ್ ಮೊತ್ತದತ್ತ ಧಾವಿಸುತ್ತಿದ್ದರೂ, ಡ್ರೆಸ್ಸಿಂಗ್ ರೂಮ್ ಒಳಗಿನ ತಾರತಮ್ಯ ಮತ್ತು ತಮ್ಮ ಬ್ಯಾಟಿಂಗ್ ಕ್ರಮಾಂಕದಲ್ಲಿ ನಡೆದ ಹಿನ್ನಡೆಯ ಬಗ್ಗೆ ಜಡೇಜಾ ನೀಡಿರುವ ಹೇಳಿಕೆ ಈಗ ಇಡೀ ಕ್ರಿಕೆಟ್ ಜಗತ್ತಿನಲ್ಲಿ ಭಾರೀ ಸಂಚಲನ ಮೂಡಿಸಿದೆ.
ತಂಡಕ್ಕೆ ನನ್ನ ಬ್ಯಾಟಿಂಗ್ ಸಾಮರ್ಥ್ಯದ ಮೇಲೆ ಸಂಪೂರ್ಣ ನಂಬಿಕೆ ಇರಲಿಲ್ಲವೇನೋ ಅನಿಸುತ್ತಿತ್ತು ಎಂದು ಜಡೇಜಾ ಬಹಿರಂಗವಾಗಿಯೇ ತಮ್ಮ ಮನದಾಳದ ಬೇಸರ ಹೊರಹಾಕಿದ್ದಾರೆ. ದೇಶಾವಳಿ ಕ್ರಿಕೆಟ್ನಲ್ಲಿ ಸಾಬೀತಾಗಿದ್ದರೂ, ಭಾರತೀಯ ತಂಡಕ್ಕೆ ಬಂದಾಗ ತಮ್ಮನ್ನು ಕಡೆಗಣಿಸಲಾಯಿತು ಎಂಬುದು ಅವರ ನೇರ ಆರೋಪ.
ಸಾಮರ್ಥ್ಯವಿದ್ದರೂ ಕೆಳಕ್ರಮಾಂಕ; ನಾನು ರಣಜಿ ಹಾಗೂ ದುಲೀಪ್ ಟ್ರೋಫಿ ಪಂದ್ಯಗಳಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದೆ. ಅಲ್ಲದೆ ನನ್ನ ಬ್ಯಾಟಿಂಗ್ ಸರಾಸರಿ 60 ಕ್ಕಿಂತ ಹೆಚ್ಚಿತ್ತು. ಅಷ್ಟಿದ್ದರೂ ಟೀಮ್ ಇಂಡಿಯಾಗೆ ಬಂದ ಮೇಲೆ ನನಗೇಕೆ ಆ ಸ್ಥಾನ ಸಿಗಲಿಲ್ಲ?" ಎಂದು ಅವರು ಪ್ರಶ್ನಿಸಿದ್ದಾರೆ.
ಅಶ್ವಿನ್ಗಿಂತಲೂ ಕೆಳಗೆ ತಳ್ಳಿದರು; ಆರಂಭದಲ್ಲಿ ನನ್ನನ್ನು 8 ಮತ್ತು 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿಸಲಾಯಿತು. ಕೊನೆಗೆ ರವಿಚಂದ್ರನ್ ಅಶ್ವಿನ್ ಅವರಿಗಿಂತಲೂ ಕೆಳಗಿನ ಕ್ರಮಾಂಕಕ್ಕೆ ನನ್ನನ್ನು ತಳ್ಳಿದ್ದು ನನ್ನ ಆತ್ಮವಿಶ್ವಾಸವನ್ನು ತೀವ್ರವಾಗಿ ಅಲುಗಾಡಿಸಿತು ಎಂದು ಜಡೇಜಾ ಹೇಳಿದ್ದಾರೆ.
ಆತ್ಮವಿಶ್ವಾಸಕ್ಕೆ ಧಕ್ಕೆ; "ನಾನು ಡ್ರೆಸ್ಸಿಂಗ್ ರೂಮ್ನಲ್ಲಿ ಪ್ಯಾಡ್ಗಳನ್ನು ಧರಿಸಿ ಸಿದ್ಧವಾಗಿ ಕುಳಿತಿದ್ದಾಗ, ನನ್ನನ್ನು ಬಿಟ್ಟು ವೇಗದ ಬೌಲರ್ಗಳು ಮುಂಚಿತವಾಗಿ ಬ್ಯಾಟಿಂಗ್ಗೆ ತೆರಳುತ್ತಿದ್ದರು. ಆ ಸಮಯದಲ್ಲಿ ‘ಇಲ್ಲೇನು ನಡೆಯುತ್ತಿದೆ? ತಂಡಕ್ಕೆ ನನ್ನ ಮೇಲೆ ನಂಬಿಕೆಯೇ ಇಲ್ಲವೇ?’ ಎಂಬ ಪ್ರಶ್ನೆಗಳು ನನ್ನನ್ನು ಕಾಡುತ್ತಿದ್ದವು" ಎಂದು ತಮ್ಮ ನೈತಿಕ ಸ್ಥೈರ್ಯ ಕುಸಿದಿದ್ದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಪಂದ್ಯದಲ್ಲಿ ಭಾರತ ಸುಲಭವಾಗಿ ಮೇಲುಗೈ ಸಾಧಿಸುತ್ತಿದ್ದರೂ, ಜಡೇಜಾ ಅವರ ಈ ಹೇಳಿಕೆ ಡ್ರೆಸ್ಸಿಂಗ್ ರೂಮ್ ಒಳಗಿನ ಭಿನ್ನಾಭಿಪ್ರಾಯ ಮತ್ತು ತಾರತಮ್ಯದ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.