
ಪುಣೆ(ಮಾ.27): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಅಂಪೈರ್ ಮಾಡಿದ ಒಂದು ಎಡವಟ್ಟು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಪುಣೆಯ ಎಂಸಿಎ ಮೈದಾನದಲ್ಲಿ ಶುಕ್ರವಾರ(ಮಾ.26) ನಡೆದ ಎರಡನೇ ಏಕದಿನ ಪಂದ್ಯದ 40ನೇ ಓವರ್ನಲ್ಲಿ ಟಾಮ್ ಕರ್ರನ್ ಎಸೆತದಲ್ಲಿ ರಿಷಭ್ ಪಂತ್ ರಿವರ್ಸ್ ಸ್ಕೂಪ್ ಯತ್ನ ನಡೆಸಿದಾಗ ಚೆಂಡು ಪ್ಯಾಡ್ಸ್ಗೆ ಬಡಿಯಿದು ಎಂದು ಭಾವಿಸಿ ಅಂಪೈರ್ ಔಟ್ ಎಂದು ಘೋಷಿಸಿದರು. ಆದರೆ ಪಂತ್ ತಕ್ಷಣ ಮೇಲ್ಮನವಿ ಸಲ್ಲಿಸಿದರು. ಚೆಂಡು ಬೌಂಡರಿ ತಲುಪಿತ್ತು.
ಡಿಆರ್ಎಸ್ ಸೌಲಭ್ಯ ಬಳಕೆ ಮಾಡಿದಾಗ ಚೆಂಡು ಬ್ಯಾಟ್ಗೆ ತಗುಲಿದ್ದು ಸ್ಪಷ್ಟವಾಯಿತು. ಆದರೆ ಅಂಪೈರ್ ಔಟ್ ನೀಡಿದ್ದರಿಂದ ಆ ಎಸೆತವನ್ನು ಡೆಡ್ ಬಾಲ್ ಎಂದು ಪರಿಗಣಿಸಿ ರನ್ ನಿರಾಕರಿಸಲಾಯಿತು. ಇದರಿಂದ ಪಂತ್ ಹಾಗೂ ಭಾರತಕ್ಕೆ 4 ರನ್ ನಷ್ಟವಾಯಿತು. ಐಸಿಸಿಯ ಈ ನಿಯಮಕ್ಕೆ ಸಾಮಾಜಿಕ ತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.
2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಆಘಾತ, ಸರಣಿ ಸಮಬಲಗೊಳಿಸಿದ ಇಂಗ್ಲೆಂಡ್!
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಟ್ವೀಟ್ ಮಾಡಿದ್ದು, ಅಂಪೈರ್ ತಪ್ಪಿನಿಂದಾಗಿ ರಿಷಭ್ ಪಂತ್ 4 ರನ್ ವಂಚಿತರಾದರು. ಈ ರೀತಿಯ ಪ್ರಮಾದಗಳು 101010364 ಬಾರಿ ನಡೆದಿವೆ. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ಟೀಂ ಗೆಲ್ಲಲು 2 ರನ್ ಅಗತ್ಯವಿದ್ದಾಗ ಈ ರೀತಿ ಘಟನೆ ಸಂಭವಿಸಿದರೆ ಏನಾಗುತ್ತೆ. ಇನ್ನಾದರೂ ಯೋಚಿಸಿ ಎಂದು ಚೋಪ್ರಾ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ.
ಕೆ.ಎಲ್ ರಾಹುಲ್ ರಾಹುಲ್ ಶತಕ ಹಾಗೂ ರಿಷಭ್ ಪಂತ್ 40 ಎಸೆತಗಳಲ್ಲಿ 77 ರನ್ಗಳ ನೆರವಿನಿಂದ ಭಾರತ 6 ವಿಕೆಟ್ ಕಳೆದುಕೊಂಡು 336 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಜಾನಿ ಬೇರ್ಸ್ಟೋವ್ ಮಿಂಚಿನ ಶತಕ ಹಾಗೂ ಬೆನ್ ಸ್ಟೋಕ್ಸ್ 99 ಶತಕ ವಂಚಿತ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ಕೇವಲ 43.3 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿದೆ. ಇದೀಗ ಮೂರನೇ ಹಾಗೂ ನಿರ್ಣಾಯಕ ಪಂದ್ಯ ಮಾರ್ಚ್ 28ರಂದು ಪುಣೆಯ ಎಂಸಿಎ ಮೈದಾನದಲ್ಲೇ ನಡೆಯಲಿದ್ದು, ಸರಣಿ ಯಾರ ಪಾಲಾಗಲಿದೆ ಎನ್ನುವ ಕುತೂಹಲ ಜೋರಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.