ಈ ಬೌಲಿಂಗ್ ಪಡೆ ಇಟ್ಟುಕೊಂಡು RCB ಈ ಸಲ ಐಪಿಎಲ್ ಕಪ್ ಗೆಲ್ಲೋದು ಸಾಧ್ಯವೇ ಇಲ್ಲ

By Naveen KodaseFirst Published Mar 30, 2024, 12:20 PM IST
Highlights

ತವರಿನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ವಿರಾಟ್ ಕೊಹ್ಲಿ ಅಜೇಯ ಅರ್ಧಶತಕದ ಹೊರತಾಗಿಯೂ ನಿಗದಿತ 20 ಓವರ್‌ಗಳಲ್ಲಿ 182 ರನ್ ಕಲೆಹಾಕಿತ್ತು. ಈ ಸವಾಲಿನ ಗುರಿ ಕಾಪಾಡಿಕೊಳ್ಳುವಲ್ಲಿ ಅರ್‌ಸಿಬಿ ಬೌಲರ್‌ಗಳು ಸಫಲರಾಗಲಿಲ್ಲ.

ಬೆಂಗಳೂರು(ಮಾ.30): 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡನೇ ಸೋಲು ಅನುಭವಿಸಿದೆ. ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ಎದುರು 7 ವಿಕೆಟ್ ಹೀನಾಯ ಸೋಲು ಅನುಭವಿಸಿದೆ. ಈ ಮೂಲಕ ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ತವರಿನಲ್ಲಿ ಸೋಲು ಕಂಡ ಮೊದಲ ತಂಡ ಎನ್ನುವ ಕುಖ್ಯಾತಿಗೆ ಆರ್‌ಸಿಬಿ ತಂಡವು ಪಾತ್ರವಾಗಿದೆ. ಇದರ ಬೆನ್ನಲ್ಲೇ ಆರ್‌ಸಿಬಿ ತಂಡದ ಬೌಲಿಂಗ್ ಪ್ರದರ್ಶನದ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ.

ತವರಿನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ವಿರಾಟ್ ಕೊಹ್ಲಿ ಅಜೇಯ ಅರ್ಧಶತಕದ ಹೊರತಾಗಿಯೂ ನಿಗದಿತ 20 ಓವರ್‌ಗಳಲ್ಲಿ 182 ರನ್ ಕಲೆಹಾಕಿತ್ತು. ಈ ಸವಾಲಿನ ಗುರಿ ಕಾಪಾಡಿಕೊಳ್ಳುವಲ್ಲಿ ಅರ್‌ಸಿಬಿ ಬೌಲರ್‌ಗಳು ಸಫಲರಾಗಲಿಲ್ಲ. ಸುನಿಲ್ ನರೈನ್, ವೆಂಕಟೇಶ್ ಅಯ್ಯರ್ ವಿಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಕೇವಲ 3 ವಿಕೆಟ್ ಕಳೆದುಕೊಂಡು ಇನ್ನೂ 19 ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು.

ಕೆಕೆಆರ್ ಬ್ಯಾಟಿಂಗ್ ಆರ್ಭಟಕ್ಕೆ ಆರ್‌ಸಿಬಿ ಸೈಲೆಂಟ್..! ಚಿನ್ನಸ್ವಾಮಿಯಲ್ಲಿ ಕೋಲ್ಕತಾಗೆ ಮತ್ತೊಂದು ಜಯ

ಇನ್ನು ಆರ್‌ಸಿಬಿ ತಂಡದ ಈ ಬೌಲಿಂಗ್ ಪ್ರದರ್ಶನವನ್ನು ಗಮನಿಸಿದ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್, ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಈ ರೀತಿಯ ಬೌಲಿಂಗ್ ಪಡೆಯನ್ನು ಇಟ್ಟುಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಕಪ್ ಗೆಲ್ಲುವುದು ಅಸಾಧ್ಯ" ಎಂದು ಷರಾ ಬರೆದಿದ್ದಾರೆ.

Impossible for to win the IPL with this bowling attack ..

— Michael Vaughan (@MichaelVaughan)

ಇನ್ನು ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಕೂಡಾ ಆರ್‌ಸಿಬಿ ಬೌಲಿಂಗ್ ಪಡೆಯ ಬಗ್ಗೆ ತುಟಿಬಿಚ್ಚಿದ್ದಾರೆ. "ಆರ್‌ಸಿಬಿ ತಂಡವು ನಿಜಕ್ಕೂ ತನ್ನ ಬೌಲಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ" ಎಂದು 'ಎಕ್ಸ್‌'ನಲ್ಲಿ ಬರೆದುಕೊಂಡಿದ್ದಾರೆ.

RCB really need to sort their bowling.

— Irfan Pathan (@IrfanPathan)

ಕೆಕೆಆರ್ ಎದುರು ಆರ್‌ಸಿಬಿಯ ಮೂವರು ಪ್ರಮುಖ ವೇಗದ ಬೌಲರ್‌ಗಳಾದ ಮೊಹಮ್ಮದ್ ಸಿರಾಜ್, ಅಲ್ಜಾರಿ ಜೋಸೆಫ್ ಹಾಗೂ ಯಶ್ ದಯಾಳ್ ಸಾಕಷ್ಟು ದುಬಾರಿ ಎನಿಸಿದರು. ಸಿರಾಜ್ ಮೂರು ಓವರ್‌ನಲ್ಲಿ 46 ರನ್ ನೀಡಿದರೆ, ಜೋಸೆಫ್ ಎರಡು ಓವರ್‌ನಿಂದ 34 ರನ್ ಚಚ್ಚಿಸಿಕೊಂಡರು. ಇನ್ನು ಎಡಗೈ ವೇಗಿ ಯಶ್ ದಯಾಳ್ ಮೂರು ಓವರ್‌ನಲ್ಲಿ 45 ರನ್ ಬಿಟ್ಟುಕೊಟ್ಟರು. ಕನ್ನಡಿಗ ವೈಶಾಕ್ ವಿಜಯ್‌ಕುಮಾರ್ ಮಾತ್ರ ಶಿಸ್ತುಬದ್ಧ ದಾಳಿ ನಡೆಸಿ ಗಮನ ಸೆಳೆದರು.

RCB ಏನನ್ನೂ ಗೆದ್ದಿಲ್ಲ ಆದ್ರೆ ಎಲ್ಲವನ್ನೂ ಗೆದ್ದಂತೆ ವರ್ತಿಸುತ್ತಾರೆ: ಗೌತಮ್ ಗಂಭೀರ್

ಕೆಕೆಆರ್ ಎದುರು ಸೋಲಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದೀಗ ಲಖನೌ ಸೂಪರ್ ಜೈಂಟ್ಸ್ ಎದುರಿನ ಸವಾಲಿಗೆ ಸಜ್ಜಾಗಿದೆ. ಏಪ್ರಿಲ್ 02ರಂದು ಆರ್‌ಸಿಬಿ ತಂಡವು ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಲಖನೌ ಮಣಿಸಿ ಗೆಲುವಿನ ಹಳಿಗೆ ಮರಳಲು ಫಾಫ್ ಡು ಪ್ಲೆಸಿಸ್ ಪಡೆ ಸಜ್ಜಾಗುತ್ತಿದೆ.

click me!