
ಚೆನ್ನೈ(ಅ.25): ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವು 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಪಾಕಿಸ್ತಾನ ಕ್ರಿಕೆಟ್ ತಂಡದ ಇನ್ನೊಂದು ಸೋಲು, ವಿಶ್ವಕಪ್ ಸೆಮೀಸ್ ರೇಸ್ನಿಂದಲೇ ಹೊರಬೀಳುವಂತೆ ಮಾಡಲಿದೆ. ಹೀಗಿರುವಾಗಲೇ ಬಾಬರ್ ಅಜಂ ಅವರ ತಲೆದಂಡಕ್ಕೆ ಒತ್ತಡಗಳು ಹೆಚ್ಚಾಗ ತೊಡಗಿವೆ.
ಈ ಬಾರಿಯ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಸೆಮೀಸ್ ಪ್ರವೇಶಿಸಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಪಾಕಿಸ್ತಾನ ತಂಡವು ಭಾರತ, ಆಸ್ಟ್ರೇಲಿಯಾ ಹಾಗೂ ಆಫ್ಘಾನಿಸ್ತಾನ ಎದುರು ಸತತ ಸೋಲು ಕಾಣುವ ಮೂಲಕ ತಮ್ಮ ಸೆಮೀಸ್ ಹಾದಿಯನ್ನು ದುರ್ಗಮ ಮಾಡಿಕೊಂಡಿದೆ. ಪಾಕಿಸ್ತಾನ ತಂಡದ ಇನ್ನೊಂದು ಸೋಲು ಸೆಮೀಸ್ ಹಾದಿಯನ್ನು ಅಧಿಕೃತವಾಗಿ ಭಗ್ನಗೊಳಿಸಲಿದೆ. ಅದರಲ್ಲೂ ನೆರೆಯ ಆಫ್ಘಾನಿಸ್ತಾನ ಎದುರಿನ ಆಘಾತಕಾರಿ ಸೋಲು ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಕುಸಿಯುವಂತೆ ಮಾಡಿದೆ.
ಇದರ ಬೆನ್ನಲ್ಲೇ ಪಾಕಿಸ್ತಾನ ತಂಡದ ನಾಯಕನ ಮೇಲೆ ಮಾಜಿ ಕ್ರಿಕೆಟಿಗರು ಮುಗಿಬಿದ್ದಿದ್ದಾರೆ. ಪಾಕಿಸ್ತಾನ ನಾಯಕ ಬಾಬರ್ ಅಜಂ ಹಾಗೂ ಅವರ ತಂಡದ ಮೇಲೆ ಮಾಜಿ ಕ್ರಿಕೆಟಿಗರಾದ ವಾಸೀಂ ಅಕ್ರಂ, ಮಿಸ್ಬಾ ಉಲ್ ಹಕ್, ರಮೀಜ್ ರಾಜಾ, ರಶೀದ್ ಲತೀಫ್, ಆಕೀಬ್ ಜಾವೇದ್, ಮೋಯಿನ್ ಖಾನ್ ಹಾಗೂ ಶೋಯೆಬ್ ಅಖ್ತರ್ ಸೇರಿದಂತೆ ಬಹುತೇಕ ಮಂದಿ ಬಾಬರ್ ಪಡೆಯ ಮೇಲೆ ಕೆಂಡಕಾರಲಾರಂಭಿಸಿದ್ದಾರೆ.
'ದಿನಕ್ಕೆ 8 ಕೆಜಿ ಮಟನ್ ತಿಂದ್ರೆ ಫಿಟ್ನೆಸ್ ಎಲ್ಲಿಂದ ಬರುತ್ತೆ?': ಪಾಕ್ ಕ್ರಿಕೆಟಿಗರ ಮೇಲೆ ವಾಸೀಂ ಅಕ್ರಂ ಸಿಡಿಮಿಡಿ
ಇದೀಗ ಪಾಕಿಸ್ತಾನ ನಾಯಕ ಬಾಬರ್ ಅಜಂ ಮೇಲೆ ಕಿಡಿಕಾರಿರುವ ಮಾಜಿ ಕ್ರಿಕೆಟಿಗ ಆಕೀಬ್ ಜಾವೇದ್, "ಶಾಹೀನ್ ಅಫ್ರಿದಿ ಭವಿಷ್ಯದ ದೃಷ್ಟಿಯಿಂದ ನಾಯಕರಾಗಲು ಯೋಗ್ಯರಾಗಿದ್ದಾರೆ. ಸೀಮಿತ ಓವರ್ಗಳ ಕ್ರಿಕೆಟ್ ಮಾದರಿಯಲ್ಲಿ ನಾಯಕರಾಗಿ ಯಶಸ್ವಿಯಾಗಲು ವಿಫಲವಾಗಿದ್ದಾರೆ" ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು ಈಗಾಗಲೇ 5 ಪಂದ್ಯಗಳನ್ನಾಡಿ 2 ಗೆಲುವು ಹಾಗೂ ಮೂರು ಸೋಲು ಕಂಡಿದೆ. ಪಾಕ್ ಇನ್ನು ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ವಿರುದ್ದ ಆಡಲಿದ್ದು, ಈ ಎಲ್ಲಾ ಪಂದ್ಯಗಳಲ್ಲಿ ಗೆಲುವು ಸಾಧಿಸಿದರಷ್ಟೇ ಸೆಮೀಸ್ಗೇರಲು ಸಾಧ್ಯವಾಗಲಿದೆ.
"ಆಫ್ಘಾನಿಸ್ತಾನ ಎದುರಿನ ಪಂದ್ಯದಲ್ಲಿ ಫೀಲ್ಡಿಂಗ್ ಹಾಗೂ ಬಾಡಿ ಲಾಂಗ್ವೇಜ್ ತುಂಬಾ ಕಳಪೆಯಾಗಿತ್ತು. 283 ಸಣ್ಣ ಮೊತ್ತವೇನು ಆಗಿರಲಿಲ್ಲ. ಆದರೆ ಪಾಕಿಸ್ತಾನ ತಂಡದ ಬೌಲಿಂಗ್ ತೀರಾ ಸಾಧಾರಣವಾಗಿತ್ತು ಹಾಗೂ ಕ್ಷೇತ್ರರಕ್ಷಣೆ ಕೂಡಾ ಕಳೆಪೆಯಾಗಿತ್ತು" ಎಂದು ಮಾಜಿ ನಾಯಕ ವಾಸೀಂ ಅಕ್ರಂ ಹೇಳಿದ್ದರು.
ಆಫ್ಘಾನ್ಗೆ ಶರಣಾದ ಪಾಕಿಸ್ತಾನವನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ ವಾಸೀಂ ಜಾಫರ್..!
"ಪಾಕಿಸ್ತಾನ ತಂಡದಲ್ಲಿ ಫಿಟ್ನೆಸ್ ಟೆಸ್ಟ್ ಎನ್ನುವುದೇ ಇಲ್ಲ. ವೃತ್ತಿಪರವಾಗಿ ನೀವು ನಿಮ್ಮ ದೇಶವನ್ನು ಪ್ರತಿನಿಧಿಸುತ್ತಿದ್ದೀರ. ನಿಮಗೆ ಸಂಬಳವನ್ನು ನೀಡಲಾಗುತ್ತಿದೆ. ಈ ವಿಚಾರದಲ್ಲಿ ನಾನು ಮಿಸ್ಬಾ ಪರ ವಹಿಸುತ್ತೇನೆ. ಅವರು ಪಾಕಿಸ್ತಾನ ತಂಡದ ಕೋಚ್ ಆಗಿದ್ದಾಗ ಫಿಟ್ನೆಸ್ಗೆ ಒತ್ತು ನೀಡುತ್ತಿದ್ದರು. ಹೀಗಾಗಿ ಕ್ರಿಕೆಟಿಗರು ಅವರನ್ನು ದ್ವೇಷಿಸುತ್ತಿದ್ದರು. ಆದರೆ ಅದು ತಂಡಕ್ಕೆ ಅನುಕೂಲವಾಗುತ್ತಿತ್ತು. ಫೀಲ್ಡಿಂಗ್, ಆಟಗಾರರ ಫಿಟ್ನೆಸ್ ಅವಲಂಭಿಸಿದೆ, ಅದು ಮೈದಾನದಲ್ಲೂ ಕಾಣ ಸಿಗುತ್ತದೆ" ಎಂದು ವಾಸೀಂ ಅಕ್ರಂ ಹೇಳಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.