T20 World Cup: ಟೀಮ್‌ ಇಂಡಿಯಾ ವೇಗಿಗಳಿಗೆ ಬ್ಯುಸಿನೆಸ್‌ ಕ್ಲಾಸ್‌ ಟಿಕೆಟ್‌ ನೀಡಿದ ಕೊಹ್ಲಿ, ದ್ರಾವಿಡ್‌, ರೋಹಿತ್‌!

By Santosh NaikFirst Published Nov 8, 2022, 9:47 PM IST
Highlights

ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿರುವ ಟೀಮ್‌ ಇಂಡಿಯಾ ಸೋಮವಾರ ಮೆಲ್ಬೋರ್ನ್‌ನಿಂದ ಅಡಿಲೇಡ್‌ಗೆ ಆಗಮಿಸಿತು. ವಿಮಾನ ಪ್ರಯಾಣದ ವೇಳೆ ಕೋಚ್ ರಾಹುಲ್‌ ದ್ರಾವಿಡ್‌, ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮ, ವೇಗಿಗಳಿಗೆ ಹೆಚ್ಚಿನ ವಿಶ್ರಾಂತಿ ಸಿಗಬೇಕು. ಅವರ ಕಾಲುಗಳಿಗೆ ಯಾವುದೇ ಸಮಸ್ಯೆ ಆಗಬಾರದು ಎಂದು ತಮ್ಮ ಬ್ಯುಸಿನೆಸ್‌ ಕ್ಲಾಸ್‌ ಟಿಕೆಟ್‌ಅನ್ನು ಅವರಿಗೆ ನೀಡಿದ್ದಾರೆ.
 

ಅಡಿಲೇಡ್‌ (ನ.8): ಟಿ20 ವಿಶ್ವಕಪ್‌ನ ಸೆಮಿಫೈನಲ್‌ಗಾಗಿ ಟೀಮ್‌ ಇಂಡಿಯಾ ಸೋಮವಾರ ಮೆಲ್ಬೋರ್ನ್‌ನಿಂದ ಅಡಿಲೇಡ್ ಪ್ರಯಾಣ ಬೆಳೆಸಿತು. ಈ ವೇಳೆ ತಂಡದ ಹಿರಿಯ ಆಟಗಾರರು ಹಾಗೂ ಕೋಚಿಂಗ್‌ ಸ್ಟಾಫ್‌ ತಮ್ಮ ಬೌಲರ್‌ಗಳ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ ಎನ್ನುವ ವಿಚಾರ ಗಮನಕ್ಕೆ ಬಂದಿದೆ. ನಾಯಕ ರೋಹಿತ್‌ ಶರ್ಮ ಅಲ್ಲದೆ, ತಂಡದ ಹಿರಿಯ ಆಟಗಾರ ವಿರಾಟ್‌ ಕೊಹ್ಲಿ, ಕೋಚ್‌ ರಾಹುಲ್‌ ದ್ರಾವಿಡ್‌ ತಮ್ಮ ಬ್ಯುಸಿನೆಸ್‌ ಕ್ಲಾಸ್ ಟಿಕೆಟ್‌ಗಳನ್ನು ವೇಗದ ಬೌಲರ್‌ಗಳಿಗೆ ನೀಡಿ ಅವರ ಎಕಾನಮಿ ಕ್ಲಾಸ್‌ ಟಿಕೆಟ್‌ನಲ್ಲಿ ತಾವು ಪ್ರಯಾಣ ಬೆಳೆಸಿದ್ದಾರೆ. ಬ್ಯುಸಿನೆಸ್‌ ಕ್ಲಾಸ್‌ ಟಿಕೆಟ್‌ನಲ್ಲಿ ವ್ಯಕ್ತಿಗಳು ಆರಾಮವಾಗಿ ಕಾಲುಗಳನ್ನು ಚಾಚಿ ಕುಳಿತುಕೊಳ್ಳಲು ಸಾಧ್ಯವಾಗುತ್ತದೆ. ಆದರೆ, ಈ ಅವಕಾಶ ಎಕಾನಮಿ ಕ್ಲಾಸ್‌ ಟಿಕೆಟ್‌ನ ಪ್ರಯಾಣಿಕರಿಗೆ ಇರುವುದಿಲ್ಲ. ಇಂಗ್ಲೆಂಡ್‌ ವಿರುದ್ಧದ ಸೆಮಿಫೈನಲ್‌ ಪಂದ್ಯಕ್ಕೂ ಮುನ್ನ ವೇಗದ ಬೌಲರ್‌ಗಳ ಕಾಲುಗಳಿಗೆ ಯಾವುದೇ ಸಮಸ್ಯೆ ಅಥವಾ ಒತ್ತಡವಾಗಬಾರದು ಎನ್ನುವ ಕಾರಣಕ್ಕೆ ತಂಡದ ಕ್ಯಾಪ್ಟನ್‌ ಹಾಗೂ ಹಿರಿಯ ಆಟಗಾರು ವೇಗಿಗಳಿಗೆ ತಮ್ಮ ಟಿಕೆಟ್‌ ಬಿಟ್ಟುಕೊಟ್ಟಿದ್ದಾರೆ. ನವೆಂಬರ್‌ 10 ರಂದು ಭಾರತ ತಂಡ ಇಂಗ್ಲೆಂಡ್‌ ವಿರುದ್ಧ ಸೆಮಿಫೈನಲ್‌ನಲ್ಲಿ ಕಾದಾಟ ನಡೆಸಲಿದ್ದು, ಈ ಪಂದ್ಯ ಅಡಿಲೇಡ್‌ನಲ್ಲಿ ನಡೆಯಲಿದೆ.

ಮೆಲ್ಬೋರ್ನ್‌ ಹಾಗೂ ಅಡಿಲೇಡ್‌ ನಡುವಿನ ಎರಡು ನಗರಗಳ ನಡುವಿನ ವಿಮಾನ ಪ್ರಯಾಣವು ಸುಮಾರು 3 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರು ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ಅವರಿಗೆ ತಮ್ಮ ಬ್ಯುಸಿನೆಸ್‌ ಕ್ಲಾಸ್‌ ಟಿಕೆಟ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ವೇಗದ ಬೌಲರ್‌ಗಳಿಗೆ ಯಾವುದೇ ಸಮಸ್ಯೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಈ ಮೂವರು ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ವೇಗದ ಬೌಲರ್‌ಗಳು ತಮ್ಮ ಸೀಟ್‌ಗಳಲ್ಲಿ ಕಾಲುಗಳನ್ನು ಚಾಚಿಕೊಂಡು ವಿಶ್ರಾಂತಿ ಪಡೆಯಬೇಕು ಎನ್ನುವ ಉದ್ದೇಶದಲ್ಲಿ ಹಿರಿಯ ಆಟಗಾರರು ಹಾಗೂ ಸಿಬ್ಬಂದಿ ಈ ರೀತಿ ಮಾಡಿದ್ದಾರೆ. ಟೀಮ್‌ ಇಂಡಿಯಾ ಸೂಪರ್‌ 12 ಹಂತದ ತನ್ನ ಕೊನೆಯ ಪಂದ್ಯವನ್ನು ಜಿಂಬಾಬ್ವೆ ವಿರುದ್ಧ ಮೆಲ್ಬೋರ್ನ್‌ನಲ್ಲಿ ನವೆಂಬರ್‌ 6 ರಂದು ಆಡಿತ್ತು. ಆ ಪಂದ್ಯದಲ್ಲಿ 71 ರನ್‌ಗಳ ಗೆಲುವು ಸಾಧಿಸಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿತ್ತು.

ಊರ್ವಶಿ ಕರೀತಾ ಇದಾಳೆ ಎಂದು ಪಂತ್ ಕಾಲೆಳೆದ ಫ್ಯಾನ್ಸ್‌..! ರಿಷಭ್ ನೀಡಿದ ಖಡಕ್ ರಿಪ್ಲೇ ವೈರಲ್‌..!

ತಂಡದ ನಾಲ್ವರಿಗೆ ಮಾತ್ರ ಬ್ಯುಸಿನೆಸ್‌ ಕ್ಲಾಸ್‌ ಟಿಕೆಟ್‌: ಐಸಿಸಿ ನಿಯಮಗಳ ಪ್ರಕಾರ, ಪ್ರತಿ ತಂಡವು ಕೇವಲ 4 ಬಿಸಿನೆಸ್ ಕ್ಲಾಸ್ ಸೀಟುಗಳನ್ನು ಪಡೆಯುತ್ತದೆ. ಸಾಮಾನ್ಯವಾಗಿ ಈ ಸ್ಥಾನಗಳು ಕೋಚ್, ನಾಯಕ, ಉಪನಾಯಕ ಅಥವಾ ಹಿರಿಯ ಆಟಗಾರನಿಗೆ ಮಾತ್ರ ಲಭ್ಯವಿರುತ್ತವೆ. ವೇಗದ ಬೌಲರ್‌ಗಳಿಗೆ ಹೆಚ್ಚಿನ ವಿಶ್ರಾಂತಿ ಬೇಕು ಎಂದು ಟೀಮ್ ಮ್ಯಾನೇಜ್‌ಮೆಂಟ್ ಭಾವಿಸಿದಾಗ ಇವರೆಲ್ಲರೂ ತಮ್ಮ ಸೀಟ್‌ಗಳನ್ನು ವೇಗಿಗಳಿಗೆ ನೀಡಿದ್ದಾರೆ. ಟೀಮ್‌ ಅಡಿಲೇಡ್ ತಲುಪಿದ ನಂತರ, ಟೀಮ್ ಇಂಡಿಯಾದ ಸಹಾಯಕ ಸಿಬ್ಬಂದಿ ಈ ಮಾಹಿತಿ ನೀಡಿದ್ದಾರೆ. 'ವೇಗದ ಬೌಲರ್‌ಗಳಿಗೆ ಹೆಚ್ಚಿನ ವಿಶ್ರಾಂತಿ ಬೇಕು ಎಂದು ನಾವು ನಿರ್ಧರಿಸಿದ್ದೇವೆ. ಪ್ರಯಾಣದ ಸಮಯದಲ್ಲಿ ಅವರು ಆರಾಮವಾಗಿ ಕುಳಿತುಕೊಳ್ಳಲು, ನಾಯಕ, ಕೋಚ್ ಮತ್ತು ವಿರಾಟ್ ತಮ್ಮ ಬಿಸಿನೆಸ್ ಕ್ಲಾಸ್ ಸೀಟನ್ನು ಬಿಟ್ಟುಕೊಡಲು ನಿರ್ಧಾರ ಮಾಡಿದ್ದರು' ಎಂದು ಅವರು ತಿಳಿಸಿದ್ದಾರೆ.

T20 World Cup: ರೋಹಿತ್‌ ಶರ್ಮ ಮಣಿಕಟ್ಟಿಗೆ ಗಾಯ, ಸೆಮಿಫೈ

ನವೆಂಬರ್ 6 ರಂದು ಮೆಲ್ಬೋರ್ನ್‌ನಲ್ಲಿ ಕೊನೆಯ ಲೀಗ್ ಪಂದ್ಯವನ್ನು ಆಡಿದ ನಂತರ, ತಂಡವು ಮರುದಿನವೇ ಅಡಿಲೇಡ್‌ಗೆ ತೆರಳಿತು. ಅನೇಕ ಆಟಗಾರರು ಸರಿಯಾಗಿ ನಿದ್ರೆ ಮಾಡಲು ಕೂಡ ಸಾಧ್ಯವಾಗಿರಲಿಲ್ಲ. ಫಿಸಿಯೋಗಳು ಮತ್ತು ತರಬೇತುದಾರರು ಬೌಲರ್‌ಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನಿರಂತರ ಪ್ರಯಾಣವು ನಮ್ಮ ವೇಗದ ಬೌಲರ್‌ಗಳ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ಅವರು ಪೂರ್ಣ ಚೇತರಿಕೆಯ ಸಮಯವನ್ನು ಪಡೆದಿದ್ದಾರೆ ಎಂದು ಟೀಮ್‌ ಮ್ಯಾನೇಜ್‌ಮೆಂಟ್‌ ಹೇಳಿದೆ.

click me!