
ತರೌಬ(ಟ್ರಿನಿಡಾಡ್): ಟೆಸ್ಟ್ ಹಾಗೂ ಏಕದಿನ ಸರಣಿ ಗೆಲುವಿನ ಬೆನ್ನಲ್ಲೇ ವೆಸ್ಟ್ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಟೀಂ ಇಂಡಿಯಾ ಸಜ್ಜಾಗಿದ್ದು, ಗುರುವಾರ ಆತಿಥೇಯರ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಏಕದಿನ ಸರಣಿಯಲ್ಲಿ ಹಲವು ಪ್ರಯೋಗಗಳನ್ನು ನಡೆಸಿ ಮಿಶ್ರ ಫಲ ಅನುಭವಿಸಿದ್ದ ಭಾರತ, ಈ ಬಾರಿ ಯುವ ಪ್ರತಿಭೆಗಳೊಂದಿಗೆ ಸ್ಪರ್ಧಿಸಲಿದೆ. ಅತ್ತ ಟೆಸ್ಟ್, ಏಕದಿನ ಸರಣಿ ಸೋತರೂ ಟಿ20ಗೆ ಹೇಳಿ ಮಾಡಿಸಿದ ತಂಡದಂತಿರುವ ವಿಂಡೀಸ್, ಭಾರತಕ್ಕೆ ತವರಿನಲ್ಲೇ ಶಾಕ್ ನೀಡಲು ಕಾಯುತ್ತಿದೆ.
ಮುಂದಿನ ವರ್ಷ ಟಿ20 ವಿಶ್ವಕಪ್ ನಡೆಯಲಿರುವ ಕಾರಣ ಈಗಿಂದಲೇ ಬಲಿಷ್ಠ ತಂಡ ಕಟ್ಟುವ ಕೆಲಸ ನಡೆಯಬೇಕಿದ್ದು, ಇದಕ್ಕಾಗಿ ಐಪಿಎಲ್ ಹಾಗೂ ದೇಸಿ ಕ್ರಿಕೆಟ್ನಲ್ಲಿ ಮಿಂಚಿರುವ ಯುವ ಕ್ರಿಕೆಟಿಗರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಕಲ್ಪಿಸಲಾಗಿದೆ. ಹಾರ್ದಿಕ್ ಪಾಂಡ್ಯ ತಂಡ ಮುನ್ನಡೆಸಲಿದ್ದು, ತಿಲಕ್ ವರ್ಮಾ, ಟೆಸ್ಟ್ ಸರಣಿಯಲ್ಲಿ ಅಬ್ಬರಿಸಿದ್ದ ಯಶಸ್ವಿ ಜೈಸ್ವಾಲ್ ಟಿ20ಯಲ್ಲೂ ಮಿಂಚಲು ಕಾಯುತ್ತಿದ್ದಾರೆ. ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ನಿರೀಕ್ಷೆ ಉಳಿಸಿಕೊಳ್ಳಬೇಕಿದೆ.
ತಿರುಪತಿ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟ ವೇಗಿ ಶ್ರೀಶಾಂತ್..!
ಬೌಲಿಂಗ್ ವಿಭಾಗದಲ್ಲಿ ಅರ್ಶ್ದೀಪ್, ಉಮ್ರಾನ್ ಮಲಿಕ್ ಇದ್ದರೂ ಮುಕೇಶ್ ಕುಮಾರ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ತಾರಾ ಸ್ಪಿನ್ನರ್ ಚಹಲ್ ಟಿ20 ಸರಣಿಯಲ್ಲಾದರೂ ಅವಕಾಶ ಪಡೆಯುವ ಕಾತರದಲ್ಲಿದ್ದು, ರವಿ ಬಿಷ್ಣೋಯ್, ಕುಲ್ದೀಪ್ ಯಾದವ್ ಕೂಡಾ ಚಹಲ್ ಜೊತೆ ತಂಡದಲ್ಲಿ ಸ್ಥಾನ ಗಿಟ್ಟಿಸಲು ಪೈಪೋಟಿ ನಡೆಸುತ್ತಿದ್ದಾರೆ.
ಪುಟಿದೇಳುತ್ತಾ ವಿಂಡೀಸ್?: ತವರಿನಲ್ಲೇ ಎರಡು ಸರಣಿ ಸೋತಿರುವ ವಿಂಡೀಸ್ ಟಿ20ಯಲ್ಲಿ ಪುಟಿದೇಳಲು ಕಾಯುತ್ತಿದೆ. ಟಿ20 ತಜ್ಞರು, ಸ್ಫೋಟಕ ಬ್ಯಾಟರ್ಗಳು ತಂಡದಲ್ಲಿದ್ದು, ತಂಡಕ್ಕೆ ಗೆಲುವಿನ ಕಾಣಿಗೆ ನೀಡುವ ಕಾತರದಲ್ಲಿದ್ದಾರೆ. ರೋವ್ಮನ್ ಪೊವೆಲ್ ನಾಯಕತ್ವದ ತಂಡದಲ್ಲಿ ಹೆಟ್ಮೇಯರ್, ನಿಕೋಲಸ್ ಪೂರನ್, ಕೈಲ್ ಮೇಯರ್ಸ್ರಂತಹ ಅಬ್ಬರದ ಬ್ಯಾಟರ್ಗಳಿದ್ದು, ಭಾರತೀಯ ಬೌಲರ್ಗಳಿಗೆ ಸವಾಲಾಗಿ ಪರಿಣಮಿಸಬಹುದು.
"ಟೀಂ ಇಂಡಿಯಾ ಆಟಗಾರನಾಗುವುದು....": ಫಿಫ್ಟಿ ಬಾರಿಸಿ ಅಚ್ಚರಿಯ ಹೇಳಿಕೆ ನೀಡಿದ ಸಂಜು ಸ್ಯಾಮ್ಸನ್..!
ಮುಖಾಮುಖಿ 25
ಭಾರತ: 17
ವಿಂಡೀಸ್: 07
ಫಲಿತಾಂಶವಿಲ್ಲ: 01
ಸಂಭವನೀಯ ಆಟಗಾರರ ಪಟ್ಟಿ
ಭಾರತ: ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್/ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ(ನಾಯಕ), ತಿಲಕ್ ವರ್ಮಾ, ಅಕ್ಷರ್ ಪಟೇಲ್, ಯುಜುವೇಂದ್ರ ಚಹಲ್/ಕುಲ್ದೀಪ್ ಯಾದವ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್, ಮುಕೇಶ್ ಕುಮಾರ್.
ವಿಂಡೀಸ್: ಕೈಲ್ ಮೇಯರ್ಸ್, ಚಾರ್ಲ್ಸ್, ಶಾಯ್ ಹೋಪ್, ಶಿಮ್ರೊನ್ ಹೆಟ್ಮೇಯರ್, ರೋವ್ಮನ್ ಪೋವೆಲ್(ನಾಯಕ), ನಿಕೋಲಸ್ ಪೂರನ್, ಜೇಸನ್ ಹೋಲ್ಡರ್, ಮೆಕಾಯ್, ರೊಮಾರಿಯೊ ಶೆಫರ್ಡ್, ಒಡೆಯನ್ ಸ್ಮಿತ್, ಒಶಾನೆ ಥಾಮಸ್,
ಪಂದ್ಯ ಆರಂಭ: ಸಂಜೆ 8ಕ್ಕೆ
ನೇರ ಪ್ರಸಾರ: ಜಿಯೋ ಸಿನಿಮಾ, ಡಿಡಿ ಸ್ಪೋರ್ಟ್ಸ್, ಫ್ಯಾನ್ಕೋಡ್ ಆ್ಯಪ್
ಪಿಚ್ ರಿಪೋರ್ಟ್
ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ಈ ಮೊದಲು ಏಕೈಕ ಟಿ20 ಪಂದ್ಯ ನಡೆದಿದೆ. ಕಳೆದ ವರ್ಷ ಭಾರತ-ವಿಂಡೀಸ್ ನಡುವೆಯೇ ಇಲ್ಲಿ ಟಿ20 ಪಂದ್ಯ ನಡೆದಿತ್ತು. ಇದು ಬ್ಯಾಟಿಂಗ್ ಸ್ನೇಹಿಯಾಗಿದ್ದು, ದೊಡ್ಡ ಮೊತ್ತ ನಿರೀಕ್ಷಿಸಬಹುದು. ಸ್ಪಿನ್ನರ್ಗಳಿಗೂ ನೆರವು ನೀಡುವ ಸಾಧ್ಯತೆ ಇದೆ.
ಟೀಂ ಇಂಡಿಯಾಕ್ಕೆ 7ನೇ ಸರಣಿ ಜಯದ ನಿರೀಕ್ಷೆ
ಭಾರತ-ವಿಂಡೀಸ್ ಈವರೆಗೆ 8 ಟಿ20 ಸರಣಿಗಳನ್ನಾಡಿವೆ. ಈ ಪೈಕಿ ಭಾರತ 6ರಲ್ಲಿ ಗೆದ್ದಿದ್ದು, 2 ಸರಣಿಯನ್ನು ವಿಂಡೀಸ್ ಕೈವಶಪಡಿಸಿಕೊಂಡಿತ್ತು. ಉಭಯ ತಂಡಗಳ ಕೊನೆ 5 ಸರಣಿಗಳಲ್ಲೂ ಭಾರತ ಗೆದ್ದಿದೆ. 2017ರಲ್ಲಿ ಕೊನೆ ಬಾರಿ ವಿಂಡೀಸ್ ಸರಣಿ ಜಯಿಸಿದ್ದು, 6 ವರ್ಷಗಳ ಬಳಿಕ ಮತ್ತೆ ಸರಣಿ ಜಯಿಸಲು ಕಾತರಿಸುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.