IPL 2023 ರಿಂಕು ಸಿಂಗ್ ಭಾರತದ ಭವಿಷ್ಯದ ತಾರೆ ಎಂದು ಬಣ್ಣಿಸಿದ ಹರ್ಭಜನ್ ಸಿಂಗ್

By Naveen KodaseFirst Published May 20, 2023, 1:31 PM IST
Highlights

ಕೆಕೆಆರ್ ಎದುರು ಸ್ಪೋಟಕ ಬ್ಯಾಟಿಂಗ್ ನಡೆಸುತ್ತಿರುವ ರಿಂಕು ಸಿಂಗ್
ರಿಂಕು ಸಿಂಗ್ ಪರ ಬ್ಯಾಟ್ ಬೀಸಿದ ಹರ್ಭಜನ್ ಸಿಂಗ್
ರಿಂಕು ಸಿಂಗ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಎಕ್ಸ್‌-ಫ್ಯಾಕ್ಟರ್ ಆಟಗಾರ

ನವದೆಹಲಿ(ಮೇ.20): ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಹರ್ಭಜನ್‌ ಸಿಂಗ್, ಕೋಲ್ಕತಾ ನೈಟ್ ರೈಡರ್ಸ್‌ ತಂಡದ ಪ್ರತಿಭಾನ್ವಿತ ಬ್ಯಾಟರ್ ರಿಂಕು ಸಿಂಗ್ ಶೀಘ್ರದಲ್ಲಿಯೇ ಭಾರತ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಿಂಕು ಸಿಂಗ್ ಅವರಿಗೆ ಅಪರೂಪದ ಸಾಮರ್ಥ್ಯವಿದ್ದು, ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಿಂಕು ಸಿಂಗ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಎಕ್ಸ್‌-ಫ್ಯಾಕ್ಟರ್ ಆಟಗಾರ ಎನಿಸಿದ್ದಾರೆ ಎಂದು ಭಜ್ಜಿ ಅಭಿಪ್ರಾಯಪಟ್ಟಿದ್ದಾರೆ.

ಎರಡು ಬಾರಿಯ ಐಪಿಎಲ್ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್‌ ಪರ ರಿಂಕು ಸಿಂಗ್, ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅತ್ಯದ್ಭುತ ಪ್ರದರ್ಶನದ ಮೂಲಕ ಮಿಂಚಿದ್ದಾರೆ. ರಿಂಕು ಸಿಂಗ್‌ ಹಲವು ಪಂದ್ಯಗಳಲ್ಲಿ ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಅದರಲ್ಲೀ ಗುಜರಾತ್ ಟೈಟಾನ್ಸ್ ಎದುರಿನ ಪಂದ್ಯದಲ್ಲಿ ಯಶ್ ದಯಾಳ್ ಬೌಲಿಂಗ್‌ನಲ್ಲಿ ರಿಂಕು ಸಿಂಗ್ ಸತತ 5 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದು, ಯಾವ ಕ್ರಿಕೆಟ್‌ ಅಭಿಮಾನಿಯೂ ಸದ್ಯಕ್ಕಂತೂ ಮರೆಯಲು ಸಾಧ್ಯವಿಲ್ಲ.

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಿಂಕು ಸಿಂಗ್, 13 ಪಂದ್ಯಗಳನ್ನಾಡಿ 50.88ರ ಸರಾಸರಿಯಲ್ಲಿ 143.31ರ ಸ್ಟ್ರೈಕ್‌ರೇಟ್‌ನಲ್ಲಿ 407 ರನ್ ಸಿಡಿಸಿದ್ದಾರೆ. ರಿಂಕು ಸಿಂಗ್ ಅವರ ಈ ಸ್ಥಿರ ಪ್ರದರ್ಶದ ಬಗ್ಗೆ ಹಲವು ಕ್ರಿಕೆಟಿಗರು ರಿಂಕು ಸಿಂಗ್ ಭಾರತ ಕ್ರಿಕೆಟ್‌ ತಂಡಕ್ಕೆ ಪಾದಾರ್ಪಣೆ ಮಾಡಲು ಯೋಗ್ಯರಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

IPL 2023 ಲಖನೌಗೆ ಸತತ 2ನೇ ಪ್ಲೇ-ಆಫ್‌ ಗುರಿ; ಅಡ್ಡಗಾಲು ಹಾಕಲು ಕೆಕೆಆರ್ ರೆಡಿ

" ಈಗ ಕೋಲ್ಕತಾ ನೈಟ್ ರೈಡರ್ಸ್‌ ಪಾಲಿಗೆ ರಿಂಕು ಸಿಂಗ್ ಎಕ್ಸ್‌ ಫ್ಯಾಕ್ಟರ್ ಹೊರತು ಆಂಡ್ರೆ ರಸೆಲ್ ಅಲ್ಲ. ರಸೆಲ್‌ ಯುಗ ಮುಗಿದಿದೆ. ಈಗೇನಿದ್ದರೂ ಸಿಂಗ್ ಸಿಂಗ್‌ ಕಾಲ. ಒಂದು ವೇಳೆ ರಿಂಕು ಸಿಂಗ್ ಅವರನ್ನು ಇನ್ನೂ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕಳಿಸಿದರೂ ತಮ್ಮ ಸ್ಥಾನಕ್ಕೆ ನ್ಯಾಯ ಒದಗಿಸುತ್ತಾರೆ. ಅವರು ವಿಶೇಷವಾದ ಶಕ್ತಿ ಸಾಮರ್ಥ್ಯವನ್ನು ಹೊಂದಿರ ಆಟಗಾರರಾಗಿದ್ದು, ಸದ್ಯದಲ್ಲಿಯೇ ಅವರು ಭಾರತ ತಂಡ ಕೂಡಿಕೊಳ್ಳಲಿದ್ದಾರೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

ಕೋಲ್ಕತಾ ನೈಟ್ ರೈಡರ್ಸ್ ತಂಡದ ಪಾಲಿಗೆ ರಿಂಕು ಸಿಂಗ್ ಓರ್ವ ಹೀರೋ. ಅವರ ಬದ್ದತೆ ಸಾಕಷ್ಟು ದೃಢವಾಗಿದೆ. ಹೀಗಾಗಿ ಕಠಿಣ ಪರಿಸ್ಥಿತಿಯಲ್ಲಿಯೂ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಅವರೊಬ್ಬ ಕಠಿಣ ಹೋರಾಟಗಾರ. ರಿಂಕು ಸಿಂಗ್ ಕಠಿಣ ಪರಿಸ್ಥಿತಿಯಲ್ಲಿ ಅತ್ಯುತ್ತಮವಾಗಿ ಆಡುವುದರಿಂದಲೇ ಅವರು ಇತರ ಆಟಗಾರರಿಗಿಂತ ಬಿನ್ನವಾಗಿ ಕಾಣಿಸುತ್ತಾರೆ ಎಂದು ಟೀಂ ಇಂಡಿಯಾ ಮಾಜಿ ಹೆಡ್‌ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ಕೋಲ್ಕತಾ ನೈಟ್ ರೈಡರ್ಸ್ ತಂಡವು ತವರಿನ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ತನ್ನ ಪಾಲಿನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಬಲಿಷ್ಠ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಒಂದು ವೇಳೆ ಈ ಪಂದ್ಯದಲ್ಲಿ ಲಖನೌ ಎದುರು ಕೆಕೆಆರ್ ಭಾರೀ ಅಂತರದ ಗೆಲುವು ಸಾಧಿಸಿದರೆ, ಹಾಗೂ ಉಳಿದ ತಂಡಗಳ ಫಲಿತಾಂಶಗಳು ತಮ್ಮ ಪರವಾಗಿ ಬಂದರೆ, ಕೆಕೆಆರ್ ತಂಡವು ಅಂತಿಮ ನಾಲ್ಕರಘಟ್ಟ ಪ್ರವೇಶಿಸಲಿದೆ. ಒಂದು ವೇಳೆ ಈ ಪಂದ್ಯದಲ್ಲಿ ಕೆಕೆಆರ್ ಮುಗ್ಗರಿಸಿದರೆ, ಪ್ಲೇ ಆಫ್‌ ರೇಸ್‌ನಿಂದ ಹೊರಬೀಳಲಿದೆ.

click me!