
ಲಂಡನ್(ಸೆ.08): ನೀವು ವಿರಾಟ್ ಕೊಹ್ಲಿಯನ್ನು ಪ್ರೀತಿಸಬಹುದು ಇಲ್ಲವೇ ದ್ವೇಷಿಸಬಹುದು ಆದರೆ ನಿರ್ಲಕ್ಷ್ಯವನ್ನಂತೂ ಮಾಡಲು ಸಾಧ್ಯವಿಲ್ಲ. ತಮ್ಮ ಆಕ್ರಮಣಕಾರಿ ರಣತಂತ್ರಗಳ ಮೂಲಕ ವಿಶ್ವದ ಬಲಿಷ್ಠ ತಂಡಗಳನ್ನು ಬಗ್ಗುಬಡಿದಿರುವ ವಿರಾಟ್ ಕೊಹ್ಲಿ ತಮ್ಮನ್ನು ಕೆಣಕಿದವರನ್ನು ಸುಮ್ಮನೆ ಬಿಟ್ಟಿಲ್ಲ. ಇದೀಗ ಓವಲ್ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಾಡಿದ್ದ ಪೀಪಿ ಊದುವ ಭಂಗಿಗೆ ಸಾಕಷ್ಟು ಪರ-ವಿರೋಧ ವ್ಯಕ್ತವಾಗಿವೆ. ಇದೀಗ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೆನ್ನಿಗೆ ನಿಂತಿದ್ದಾರೆ.
ಓವಲ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 157 ರನ್ಗಳ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತ್ತು. ಇದರ ಬೆನ್ನಲ್ಲೇ ಇಂಗ್ಲೆಂಡ್ ಪ್ರೇಕ್ಷಕರತ್ತ ವಿರಾಟ್ ಕೊಹ್ಲಿ ಪೀಪಿ ಊದುವ ರೀತಿ ಆಂಗಿಕ ಪ್ರದರ್ಶನ ತೋರಿ ಕಾಲೆಳೆದಿದ್ದರು. ಇದಾದ ಮೇಲೆ ಇಂಗ್ಲೆಂಡ್ ಕ್ರಿಕೆಟ್ ಆಟಗಾರರಿಗೆ ಬೆಂಬಲವಾಗಿ ನಿಲ್ಲುವ Barmy Army ಟ್ವಿಟರ್ ಮೂಲಕ ಒಂದು ಏಟನ್ನು ಕೊಟ್ಟಿತ್ತು. ಕೊಹ್ಲಿಯ ಅವತಾರವನ್ನು ಕ್ಲಾಸ್ ಲೆಸ್ ಎಂದು Barmy Army ಕರೆದಿತ್ತು. ಇಂಗ್ಲೆಂಡಿನ ಪತ್ರಕರ್ತರು ಕೊಹ್ಲಿ ಕಾಲೆಳೆದಿದ್ದರು.
ಕೊಹ್ಲಿ ಕಾಲೆಳೆದಿದ್ದ 'Barmy Army' ನಮಗೆ ಗೊತ್ತು ಕೊಹ್ಲಿಯವರೇ, ನೀವು ಆರ್ಮಿಯಲ್ಲಿರಬೇಕಿತ್ತು. ಅದಕ್ಕೆ ಬೇಕಾದ ಹಿಂಟ್ ಕೊಟ್ಟಿದ್ದೀರಿ ಎನ್ನುತ್ತ ಕೊಹ್ಲಿಯ 'ಪೀಪಿ ಊದುವ' ಪೋಟೋ ಶೇರ್ ಮಾಡಿಕೊಂಡಿತ್ತು. ಇದೀಗ ಈ ಘಟನೆಯ ಕುರಿತಂತೆ ಪ್ರತಿಕ್ರಿಯಿಸಿರುವ ಇಂಗ್ಲೆಂಡ್ ಮಾಜಿ ನಾಯಕ ಮೈಕೆಲ್ ವಾನ್, ವಿರಾಟ್ ಕೊಹ್ಲಿ ಅವರೊಬ್ಬ ಅದ್ಭುತ ನಾಯಕ. ಮೈದಾನದಲ್ಲಿ ಅವರು ಉತ್ಸಾಹದಿಂದ ತುಂಬಿ ತುಳುಕುತ್ತಿರುತ್ತಾರೆ. Barmy Army ಉದ್ದೇಶಿಸಿ ಕೊಹ್ಲಿ ಪೀಪಿ ಊದಿದ ರೀತಿ ಇಷ್ಟವಾಯಿತು ಎಂದು ವಾನ್ ಹೇಳಿದ್ದಾರೆ.
ಟ್ರೋಲ್ಗಳನ್ನೇ ಟ್ರೋಲ್ ಮಾಡಿದ ವಿರಾಟ್ ಪೀಪಿ.. ನೀವು ಇಲ್ಲಿರಬಾರದಿತ್ತು!
ವಿರಾಟ್ ಕೊಹ್ಲಿ ಮೈದಾನದಲ್ಲಿ ಕೇವಲ ಮಿಮಿಕ್ ಮಾತ್ರ ಮಾಡಲಿಲ್ಲ, ಉತ್ತಮ ರಣತಂತ್ರ ಹೆಣೆಯುವ ಮೂಲಕ ಆತಿಥೇಯ ತಂಡದ ಮೇಲೆ ಒತ್ತಡ ಹೇರಿದರು. 5ನೇ ದಿನದಾಟದ ಲಂಚ್ ಬ್ರೇಕ್ ಬಳಿಕ ಬುಮ್ರಾ ಅವರನ್ನು ದಾಳಿಗಿಳಿಸಿ ಪೋಪ್ ಹಾಗೂ ಬೇರ್ಸ್ಟೋವ್ ಅವರನ್ನು ಬಲಿ ಪಡೆದಿದ್ದು ಪಂದ್ಯದ ದಿಕ್ಕನ್ನೇ ಬದಲಿಸಿತು ಎಂದು ವಾನ್ ಅಭಿಪ್ರಾಯಪಟ್ಟಿದ್ದಾರೆ.
ವಿರಾಟ್ ಕೊಹ್ಲಿ ತೆಗೆದುಕೊಂಡ ಕೆಲವು ಮಾಸ್ಟರ್ ಕ್ಲಾಸ್ ತೀರ್ಮಾನಗಳು ಓವಲ್ ಟೆಸ್ಟ್ ಪಂದ್ಯ ಟೀಂ ಇಂಡಿಯಾ ಪಾಲಾಗುವಂತೆ ಮಾಡಿತು. ಕೊಹ್ಲಿ ಮೇಲಿನ ದೂರುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅವರಿಗೆಲ್ಲಾ ಮನರಂಜನೆಯ ಅರ್ಥ ತಿಳಿದಿಲ್ಲ ಎಂದು ವಿರಾಟ್ ಪರ ವಾನ್ ಬ್ಯಾಟ್ ಬೀಸಿದ್ದಾರೆ.
ಟಿ20 ಕ್ರಿಕೆಟ್ ಪರಿಚಯವಾದ ಬಳಿಕ ಟೆಸ್ಟ್ ಕ್ರಿಕೆಟ್ ಜನಪ್ರಿಯತೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಲೇ ಇದೆ. ನಮ್ಮದು ಮನರಂಜನೆ ಕ್ಷೇತ್ರ, ಹೀಗಾಗಿ ಕೊಹ್ಲಿ ಅವರಂತಹ ಆಟಗಾರರು ಹೆಚ್ಚು ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಬೇಕು ಎಂದು ವಾನ್ ಅಭಿಪ್ರಾಯಪಟ್ಟಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.