
ಮುಂಬೈ: "ನನ್ನ ದೇಹದ ಆಕಾರ ಸರಿ ಇಲ್ಲದಿರಬಹುದು, ಆದರೆ ನನ್ನಲ್ಲಿರುವ ಎಲ್ಲವನ್ನೂ ನೀಡಿ ಹೋರಾಡುತ್ತೇನೆ," ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡಕ್ಕೆ ಮರಳುವ ಸ್ವಲ್ಪ ಮುಂಚೆ ಸರ್ಫರಾಜ್ ಖಾನ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡ ಮಾತುಗಳಿವು. ಸತತ ಕಡೆಗಣನೆ ನಡುವೆಯೂ ಛಲ ಬಿಡದ ಈ ಮುಂಬೈ ಆಟಗಾರನ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಗಾಯಗೊಂಡಿರುವ ಸಾಯಿ ಸುದರ್ಶನ್ ಬದಲಿಗೆ ಸರ್ಫರಾಜ್ಗೆ ಅವಕಾಶ ನೀಡಲಾಗಿದೆ. ಈ ಮೂಲಕ ಸುಮಾರು ಎರಡೂವರೆ ವರ್ಷಗಳ ಕಾಯುವಿಕೆ ಕೊನೆಗೊಂಡಿದೆ. ಆಗಸ್ಟ್ 15 ರಿಂದ ಗಾಲೆಯಲ್ಲಿ ಆರಂಭವಾಗುವ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಸರ್ಫರಾಜ್ ಆಯ್ಕೆಯಾಗಿದ್ದಾರೆ.
ದೇಶೀಯ ಕ್ರಿಕೆಟ್ನಲ್ಲಿ ಸತತವಾಗಿ ರನ್ ಗಳಿಸುತ್ತಿದ್ದರೂ, ಸರ್ಫರಾಜ್ ತಮ್ಮ ದೇಹದ ತೂಕ ಮತ್ತು ಫಿಟ್ನೆಸ್ ಇಲ್ಲದ ಕಾರಣಕ್ಕೆ ವೃತ್ತಿಜೀವನದುದ್ದಕ್ಕೂ ಟೀಕೆಗಳನ್ನು ಎದುರಿಸಿದ್ದರು. ಆದರೆ, ಕಳೆದ ಒಂದೂವರೆ ವರ್ಷದಲ್ಲಿ ಅವರು ಬರೋಬ್ಬರಿ 17 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಫಿಟ್ನೆಸ್ ಸುಧಾರಿಸಿಕೊಂಡು ಮತ್ತಷ್ಟು ಚುರುಕಾಗಿದ್ದಾರೆ, ಅವರ ಆಟದಲ್ಲೂ ಇನ್ನಷ್ಟು ಸುಧಾರಣೆ ಕಂಡಿದೆ. ಮುಂಬೈನಲ್ಲಿ ಭಾರೀ ಮಳೆಯಿಂದಾಗಿ ತರಬೇತಿಗೆ ಅಡ್ಡಿಯಾಗಬಾರದು ಎಂದು ಸರ್ಫರಾಜ್ ಕಾಶ್ಮೀರದ ಶೇರ್-ಇ-ಕಾಶ್ಮೀರ್ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸಿದ್ದರು. ಅಲ್ಲಿ ಸ್ಥಳೀಯ ಬೌಲರ್ಗಳೊಂದಿಗೆ ಗಂಟೆಗಟ್ಟಲೆ ನೆಟ್ಸ್ನಲ್ಲಿ ಬೆವರಿಳಿಸಿದ್ದರು. ಸ್ಪಿನ್ ಬೌಲಿಂಗ್ ವಿರುದ್ಧ ತಮ್ಮ ಹಿಡಿತವನ್ನು ಉಳಿಸಿಕೊಳ್ಳಲು, ಮುಂಬೈನ ಖಾಸಗಿ ಕೇಂದ್ರಗಳಲ್ಲಿ ರೆಡ್ ಸಾಯಿಲ್ ಟ್ರ್ಯಾಕ್ ಮತ್ತು ಆಸ್ಟ್ರೋ ಟರ್ಫ್ಗಳ ಮೇಲೆ ಗಂಟೆಗಟ್ಟಲೆ ಬ್ಯಾಟಿಂಗ್ ಅಭ್ಯಾಸ ಮಾಡಿದ್ದರು.
2024ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯ ನಂತರ ತಂಡದಿಂದ ಕೈಬಿಟ್ಟಿದ್ದು ಸರ್ಫರಾಜ್ಗೆ ದೊಡ್ಡ ಆಘಾತ ನೀಡಿತ್ತು. ಆ ಸರಣಿಯನ್ನು ಭಾರತ 0-3 ಅಂತರದಲ್ಲಿ ಸೋತಿತ್ತು. ನಂತರ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ತಂಡದಲ್ಲಿ ಸ್ಥಾನ ಪಡೆದರೂ, ಒಂದೇ ಒಂದು ಪಂದ್ಯದಲ್ಲೂ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಬಳಿಕ ಇಂಗ್ಲೆಂಡ್ನಲ್ಲಿ ಭಾರತ 'ಎ' ತಂಡದ ಪರ 92 ರನ್ ಮತ್ತು ಇಂಟ್ರಾ-ಸ್ಕ್ವಾಡ್ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದರೂ, ಟೆಸ್ಟ್ ತಂಡಕ್ಕೆ ಮರಳಲು ಸಾಧ್ಯವಾಗಿರಲಿಲ್ಲ.
ಶ್ರೀಲಂಕಾ ಪಿಚ್ಗಳಲ್ಲಿ ಪ್ರಭಾತ್ ಜಯಸೂರ್ಯ ಅವರಂತಹ ಸ್ಪಿನ್ನರ್ಗಳನ್ನು ಎದುರಿಸಲು ಸರ್ಫರಾಜ್ ಇರುವಿಕೆ ಭಾರತಕ್ಕೆ ನಿರ್ಣಾಯಕವಾಗಲಿದೆ. ನಾಯಕ ಶುಭಮನ್ ಗಿಲ್ ಮತ್ತು ರಿಷಭ್ ಪಂತ್ ಜೊತೆಗೆ, ಸ್ಪಿನ್ ಬೌಲಿಂಗ್ ಅನ್ನು ಅತ್ಯುತ್ತಮವಾಗಿ ಎದುರಿಸುವ ಆಟಗಾರರಲ್ಲಿ ಸರ್ಫರಾಜ್ ಕೂಡ ಒಬ್ಬರು. ಸ್ವೀಪ್ ಮತ್ತು ರಿವರ್ಸ್ ಸ್ವೀಪ್ ಶಾಟ್ಗಳನ್ನು ನಿಖರವಾಗಿ ಆಡುವ ಅವರ ಸಾಮರ್ಥ್ಯ, ಗಾಲೆಯ ಸ್ಪಿನ್ ಟ್ರ್ಯಾಕ್ಗಳಲ್ಲಿ ಭಾರತಕ್ಕೆ ದೊಡ್ಡ ಆಸ್ತಿಯಾಗಲಿದೆ.
ಯಶಸ್ವಿ ಜೈಸ್ವಾಲ್, ಕೆ ಎಲ್ ರಾಹುಲ್, ದೇವದತ್ ಪಡಿಕ್ಕಲ್, ಶುಭ್ಮನ್ ಗಿಲ್(ನಾಯಕ), ರಿಷಭ್ ಪಂತ್, ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ಸಾರಾನ್ಶ್ ಜೈನ್, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಗುರ್ನೂರ್ ಬ್ರಾರ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.