
ಡೆಲ್ಲಿ(ಫೆ.19): ಟೀಂ ಇಂಡಿಯಾ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಮತ್ತು ಅನುಭವಿ ಆಫ್ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮಾರಕ ದಾಳಿಗೆ ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್ನಲ್ಲಿ ಅಕ್ಷರಶಃ ತತ್ತರಿಸಿ ಹೋಗಿದೆ. ಮೂರನೇ ದಿನದಾಟದಲ್ಲಿ ಈ ಸ್ಪಿನ್ ಜೋಡಿ ಎದುರು ವಿಕೆಟ್ ಉಳಿಸಿಕೊಳ್ಳಲು ಪರದಾಡಿದ ಕಾಂಗರೂ ಪಡೆ ಕೇವಲ 113 ರನ್ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ರೋಹಿತ್ ಶರ್ಮಾ ಪಡೆ ಗೆಲ್ಲಲು ಕೇವಲ 114 ರನ್ಗಳ ಸಾಧಾರಣ ಗುರಿ ಪಡೆದಿದೆ. ಆಸ್ಟ್ರೇಲಿಯಾ ತಂಡವು ಮೂರನೇ ದಿನದಲ್ಲಿ 53 ರನ್ ಗಳಿಸುವಷ್ಟರಲ್ಲಿ 9 ವಿಕೆಟ್ ಕಳೆದುಕೊಂಡಿದೆ.
ಹೌದು, ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಂತ್ಯದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು 61 ರನ್ ಕಲೆಹಾಕಿತ್ತು. ಆದರೆ ಎರಡನೇ ದಿನ ದೊಡ್ಡ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿದ್ದ ಆಸ್ಟ್ರೇಲಿಯಾಗೆ ಆರಂಭದಲ್ಲೇ ರವಿಚಂದ್ರನ್ ಅಶ್ವಿನ್ ಆಘಾತ ನೀಡಿದರು. ಚುರುಕಿನ ಬ್ಯಾಟಿಂಗ್ ನಡೆಸುತ್ತಿದ್ದ ಟ್ರಾವಿಸ್ ಹೆಡ್ 46 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 43 ರನ್ ಬಾರಿಸಿ ರವಿಚಂದ್ರನ್ ಅಶ್ವಿನ್ಗೆ ವಿಕೆಟ್ ಒಪ್ಪಿಸಿದರು. ಇನ್ನು ಅನುಭವಿ ಬ್ಯಾಟರ್ ಸ್ಟೀವ್ ಸ್ಮಿತ್ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಅಶ್ವಿನ್ ಯಶಸ್ವಿಯಾದರು.
ಜಡೇಜಾ ಖಾತೆಗೆ 7 ವಿಕೆಟ್: ಎರಡನೇ ದಿನದಾಟದಲ್ಲಿ ಒಂದು ವಿಕೆಟ್ ಉರುಳಿಸಿದ್ದ ರವೀಂದ್ರ ಜಡೇಜಾ, ಮೂರನೇ ದಿನದಾಟದಲ್ಲಿ ಪ್ರಮುಖ 6 ವಿಕೆಟ್ಗಳನ್ನು ಕಬಳಿಸುವಲ್ಲಿ ಯಶಸ್ವಿಯಾದರು. 85 ರನ್ಗಳವರೆಗೆ ಕೇವಲ 2 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ಇದಾದ 10 ಸೇರಿಸುವಷ್ಟರಲ್ಲಿ ಮತ್ತೆ 5 ವಿಕೆಟ್ ಕಳೆದುಕೊಂಡಿತು. ಜಡೇಜಾ ಸ್ಪಿನ್ ಅಸ್ತ್ರಕ್ಕೆ ಆಸ್ಟ್ರೇಲಿಯಾ ಬಳಿ ಉತ್ತರವೇ ಇರಲಿಲ್ಲ. ಜಡೇಜಾ ಕೇವಲ 12.1 ಓವರ್ ಬೌಲಿಂಗ್ ಮಾಡಿ 42 ರನ್ ನೀಡಿ 7 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಜಡೇಜಾಗೆ ಉತ್ತಮ ಸಾಥ್ ನೀಡಿದ ರವಿಚಂದ್ರನ್ ಅಶ್ವಿನ್, ತಮ್ಮ ಖಾತೆಗೆ 3 ವಿಕೆಟ್ ಸೇರ್ಪಡೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.
ಸ್ಮೃತಿ ಮಂಧನಾಗೆ ಆರ್ಸಿಬಿ ಮಹಿಳಾ ತಂಡದ ನಾಯಕಿ ಪಟ್ಟ; ಶುಭ ಕೋರಿದ ಕೊಹ್ಲಿ, ಫಾಫ್ ಡು ಪ್ಲೆಸಿಸ್
ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ 8 ಬ್ಯಾಟರ್: ಆಸ್ಟ್ರೇಲಿಯಾ ಪರ ಎರಡನೇ ಇನಿಂಗ್ಸ್ನಲ್ಲಿ ಟ್ರಾವಿಸ್ ಹೆಡ್(43) ಹಾಗೂ ಮಾರ್ನಸ್ ಲಬುಶೇನ್(35) ಹೊರತುಪಡಿಸಿ ಉಳಿದ್ಯಾವ ಬ್ಯಾಟರ್ಗಳು ಕೂಡಾ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. ಜಡೇಜಾ ಹಾಗೂ ಅಶ್ವಿನ್ ದಾಳಿಗೆ ತತ್ತರಿಸಿದ ಆಸೀಸ್ನ ಎಂಟು ಬ್ಯಾಟರ್ಗಳು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
ವೃತ್ತಿಜೀವನದ ಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರಿದ ಜಡ್ಡು: ಗಾಯದ ಬಳಿಕ ಟೀಂ ಇಂಡಿಯಾಗೆ ಭರ್ಜರಿ ಕಮ್ಬ್ಯಾಕ್ ಮಾಡಿರುವ ರವೀಂದ್ರ ಜಡೇಜಾ, ನಾಗ್ಪುರ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 5 ವಿಕೆಟ್ ಕಬಳಿಸಿದ್ದರು. ಇದೀಗ ಎರಡನೇ ಟೆಸ್ಟ್ನಲ್ಲಿ 43 ರನ್ ನೀಡಿ 7 ವಿಕೆಟ್ ಕಬಳಿಸುವ ಮೂಲಕ, ಟೆಸ್ಟ್ ವೃತ್ತಿಜೀವನದ ಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.