
ಕೊಲಂಬೊ(ಜು.09): ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ ಮತ್ತೊಮ್ಮೆ ಮೇಜರ್ ಸರ್ಜರಿಯಾಗಿದ್ದು, ಜುಲೈ 13ರಿಂದ ತವರಿನಲ್ಲಿ ಭಾರತ ವಿರುದ್ದ ಆರಂಭವಾಗಲಿರುವ ಸೀಮಿತ ಓವರ್ಗಳ ಸರಣಿಗೆ ಕುಸಾಲ್ ಪರೆರಾ ಅವರನ್ನು ಕೆಳಗಿಳಿಸಿ ಆಲ್ರೌಂಡರ್ ದಸುನ್ ಶನಕಗೆ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ಪಟ್ಟ ಕಟ್ಟಲಾಗಿದೆ ಎಂದು ವರದಿಯಾಗಿದೆ.
ಕಳೆದ ನಾಲ್ಕು ವರ್ಷದೊಳಗೆ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕತ್ವ ಪಟ್ಟ ಅಲಂಕರಿಸುತ್ತಿರುವ ಆರನೇ ಕ್ಯಾಪ್ಟನ್ ಎನಿಸಿದ್ದಾರೆ ಶನಕ. 2018ರ ಬಳಿಕ ದಿನೇಶ್ ಚಾಂಡಿಮಲ್, ಏಂಜಲೋ ಮ್ಯಾಥ್ಯೂಸ್, ಲಸಿತ್ ಮಾಲಿಂಗ, ದೀಮುತ್ ಕರುಣರತ್ನೆ ಹಾಗೂ ಕುಸಾಲ್ ಪೆರೆರಾ ಲಂಕಾ ಕ್ರಿಕೆಟ್ ತಂಡವನ್ನು ನಾಯಕರಾಗಿ ಮುನ್ನಡೆಸಿದ್ದಾರೆ.
2019ರಲ್ಲಿ ಶನಕ ಪಾಕಿಸ್ತಾನ ವಿರುದ್ದ ಟಿ20 ಸರಣಿಯಲ್ಲಿ ಶ್ರೀಲಂಕಾ ತಂಡವನ್ನು ಮುನ್ನಡೆಸಿದ್ದರು. ಪಾಕಿಸ್ತಾನ ಕ್ರಿಕೆಟ್ ತಂಡವು 3 ಪಂದ್ಯಗಳ ಆ ಸರಣಿಯನ್ನು ಕ್ಲೀನ್ಸ್ವೀಪ್ ಮಾಡಿಕೊಂಡಿತ್ತು.
ಕುಸಾಲ್ ಪೆರೆರಾ ನಾಯಕತ್ವದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡವು ಕಳೆದ ಮೂರು ಸೀಮಿತ ಓವರ್ಗಳ ಸರಣಿಯನ್ನು ಸೋತಿದೆ. ಪೆರೆರಾ ತಲೆದಂಡಕ್ಕೆ ಲಂಕಾ ತಂಡದ ಪ್ರದರ್ಶನ ಮಾತ್ರ ಕಾರಣವಲ್ಲ, ಬದಲಾಗಿ ಆಟಗಾರರ ಕೇಂದ್ರೀಯ ಗುತ್ತಿಗೆ ಲಂಕಾ ಕ್ರಿಕೆಟ್ ಮಂಡಳಿ ಹಾಗೂ ಆಟಗಾರರ ನಡುವಿನ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಪೆರೆರಾ ಆಟಗಾರರ ಗುಂಪು ಕಟ್ಟಿಕೊಂಡಿದ್ದಾರೆ ಎಂದು ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ಮಾಡಿದೆ.
ಟೀಂ ಇಂಡಿಯಾ ಲಂಕಾ ಪ್ರವಾಸ; 90 ಕೋಟಿ ರೂ ಗಳಿಸಲಿದೆ ಲಂಕಾ ಕ್ರಿಕೆಟ್ ಮಂಡಳಿ
ಕೇಂದ್ರೀಯ ಗುತ್ತಿಗೆ ವಿಚಾರದಲ್ಲಿ ಶ್ರೀಲಂಕಾ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಮಂಡಳಿ ಜತೆ ವಿವಾದ ನಡೆಯುತ್ತಲೇ ಇದೆ. 30 ಆಟಗಾರರ ಪೈಕಿ 29 ಆಟಗಾರರು ಲಂಕಾ ಕ್ರಿಕೆಟ್ ಮಂಡಳಿಯ ಗುತ್ತಿಗೆ ಪ್ರಸ್ತಾಪಕ್ಕೆ ಸಹಿ ಹಾಕಿಲ್ಲ ಎಂದು ವರದಿಯಾಗಿದೆ.
ಭಾರತ ಕ್ರಿಕೆಟ್ ತಂಡವು ಮೊದಲಿಗೆ ಜುಲೈ 13, 16 ಹಾಗೂ 18ರಂದು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಇದಾದ ಬಳಿಕ ಜುಲೈ 21,23 ಹಾಗೂ 25ರಂದು 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಈ ಎಲ್ಲಾ ಪಂದ್ಯಗಳು ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.