
ಕೊಲೊಂಬೊ(ಜು.6): ಆತ ಅಂತಿಂಥ ವೇಗಿಯಲ್ಲ. ಭಾರತೀಯರು ಸದಾಕಾಲ ನೆನಪಿನಲ್ಲಿಟ್ಟುಕೊಂಡ ಫಾಸ್ಟ್ ಬೌಲರ್. ಏಕದಿನ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದ ಇಲ್ಲಿಯವರೆಗಿನ ಅತ್ಯಂತ ಕೆಟ್ಟ ದಾಖಲೆಗೆ ಕಾರಣರಾದ ಮಹಾನ್ ವೇಗಿ ಆತ. 2000 ಇಸವಿಯಲ್ಲಿ ಶಾರ್ಜಾದಲ್ಲಿ ನಡೆದ ಕೊಕಾ ಕೋಲಾ ಕಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಕೇವಲ 54 ರನ್ಗೆ ಆಲೌಟ್ ಆಗಿತ್ತು. ಇಂದಿಗೂ ಕೂಡ ಏಕದಿನ ಕ್ರಿಕೆಟ್ನಲ್ಲಿ ಭಾರತದ ಅತ್ಯಂತ ಕಡಿಮೆ ಸ್ಕೋರ್ ಇದು. ಇದಕ್ಕೆ ಕಾರಣರಾದವರು ಶ್ರೀಲಂಕಾದ ವೇಗಿ ಚಾಮಿಂಡ ವಾಸ್. ಈ ಪಂದ್ಯದಲ್ಲಿ ವಾಸ್ ಕೇವಲ 14 ರನ್ ಗೆ 5 ವಿಕೆಟ್ ಉರುಳಿಸಿ ಸೌರವ್ ಗಂಗೂಲಿ, ಸಚಿನ್ ತೆಂಡುಲ್ಕರ್ ಇದ್ದ ಭಾರತದ ಬ್ಯಾಟಿಂಗ್ ಪಡೆಯನ್ನು ಬರೀ 54 ರನ್ಗೆ ಗಂಟುಮೂಟೆ ಕಟ್ಟುವಂತೆ ಮಾಡಿದ್ದರು. ಬರೋಬ್ಬರಿ 245 ರನ್ಗಳ ಗೆಲುವಿನೊಂದಿಗೆ ಶ್ರೀಲಂಕಾ ಈ ಟ್ರೋಫಿ ಗೆದ್ದಿತ್ತು.
ಈ ಗೆಲುವಿಗೆ ಕಾರಣರಾದ, ಶ್ರೀಲಂಕಾ ಕ್ರಿಕೆಟ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್ಗಳಲ್ಲಿ ಒಬ್ಬರಾದ ಚಮಿಂಡಾ ವಾಸ್ (Chaminda Vaas) ಅವರ ಕುಟುಂಬದಲ್ಲಿ ಈಗ ಹೆಮ್ಮೆಯ ಮತ್ತು ಸಂಭ್ರಮದ ವಾತಾವರಣ ಮನೆಮಾಡಿದೆ. ಅವರ ಪುತ್ರಿ ನೇತಾರಾ ವಾಸ್ (Nethara Vaas) ಅವರು ಅಧಿಕೃತವಾಗಿ ಕಾನೂನು ಪದವಿ ಮುಗಿಸಿ, ವಕೀಲ ವೃತ್ತಿಗೆ ಪ್ರವೇಶಿಸಲು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ವಾಸ್ ಕುಟುಂಬದ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಶೈಕ್ಷಣಿಕ ಗರಿ ಸೇರ್ಪಡೆಯಾಗಿದೆ.
ಜೂ.25 ರಂದು ಚಾಸ್ ಫೋಟೋ ಹಂಚಿಕೊಂಡಿದ್ದು, ನೇತಾರಾ ವಾಸ್ ಅವರು ವಕೀಲೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಖುಷಿ ಹಂಚಿಕೊಂಡಿದ್ದಾರೆ. ಚಮಿಂಡಾ ವಾಸ್ ಅವರು ತಮ್ಮ ಮಗಳ ಜೊತೆ ಹೆಮ್ಮೆಯಿಂದ ನಿಂತಿರುವ ಸುಂದರವಾದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೃತ್ತಿಪರ ಕ್ರಿಕೆಟ್ನಿಂದ ನಿವೃತ್ತರಾಗಿರುವ ಈ ಮಾಜಿ ವೇಗಿ, ಕಪ್ಪು ಗೌನ್ ಧರಿಸಿದ ತಮ್ಮ ಮಗಳ ಅತ್ಯುನ್ನತ ಸಾಧನೆಯನ್ನು ಸಂಭ್ರಮಿಸುತ್ತಿರುವ ಅಪರೂಪದ ಕ್ಷಣ ಆ ಚಿತ್ರದಲ್ಲಿ ಮನಮೋಹಕವಾಗಿ ಮೂಡಿಬಂದಿದೆ. ಈ ಪೋಸ್ಟ್ಗೆ ವಿಶ್ವದಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳು ಮತ್ತು ಹಿತೈಷಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ನೇತಾರಾ ಅವರು ಕಾನೂನು ವೃತ್ತಿಗೆ (Legal Profession) ಕಾಲಿಟ್ಟಿರುವುದು ಅವರ ವೈಯಕ್ತಿಕ ಜೀವನದ ಅತ್ಯಂತ ಮಹತ್ವದ ಸಾಧನೆಯಾಗಿದೆ. ಚಮಿಂಡಾ ವಾಸ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ತಮ್ಮದೇ ಆದ ವಿಶಿಷ್ಟ ಹಾಗೂ ಗೌರವಾನ್ವಿತ ಪರಂಪರೆಯನ್ನು ನಿರ್ಮಿಸಿದವರು. ಈಗ ಅವರ ಮಗಳು ಕ್ರಿಕೆಟ್ ಪ್ರಪಂಚದಿಂದ ಹೊರತಾಗಿ, ಸಂಪೂರ್ಣ ಭಿನ್ನವಾದ ಕಾನೂನು ರಂಗದಲ್ಲಿ ತಮ್ಮದೇ ಆದ ಹೊಸ ಅಧ್ಯಾಯವನ್ನು ಬರೆಯಲು ಮೊದಲ ಹೆಜ್ಜೆ ಇಟ್ಟಿರುವುದು ಇಡೀ ಕುಟುಂಬಕ್ಕೆ ಹೆಮ್ಮೆಯ ವಿಷಯವಾಗಿದೆ.
ಶ್ರೀಲಂಕಾ ತಂಡದ ಪರ ಸುದೀರ್ಘ ಕಾಲ ಅತ್ಯುತ್ತಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಮುನ್ನಡೆಸಿದ್ದ ಚಮಿಂಡಾ ವಾಸ್, ನಿವೃತ್ತಿಯ ನಂತರವೂ ಲಂಕಾ ಕ್ರಿಕೆಟ್ನಲ್ಲಿ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿ ಉಳಿದಿದ್ದಾರೆ. ನೇತಾರಾ ಅವರ ಈ ಅಪರೂಪದ ಸಾಧನೆಗೆ ಚಮಿಂಡಾ ವಾಸ್ ಅವರ ಹಳೆಯ ಸಹ ಆಟಗಾರರು, ಮಾಜಿ ಕ್ರಿಕೆಟಿಗರು ಹಾಗೂ ನೆಟ್ಟಿಗರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅಲ್ಲದೆ, ನೇತಾರಾ ಅವರ ಭವಿಷ್ಯದ ಕಾನೂನು ವೃತ್ತಿಜೀವನವು ಯಶಸ್ಸಿನಿಂದ ಕೂಡಿರಲಿ ಎಂದು ಹಾರೈಸಿದ್ದಾರೆ.
ಒಟ್ಟಾರೆಯಾಗಿ, ಕ್ರೀಡಾ ಕ್ಷೇತ್ರದ ಯಶಸ್ಸಿನ ಹಿನ್ನೆಲೆಯುಳ್ಳ ವಾಸ್ ಕುಟುಂಬದಲ್ಲಿ ಮೂಡಿಬಂದಿರುವ ಈ ಶೈಕ್ಷಣಿಕ ಮೈಲಿಗಲ್ಲು, ಕ್ರೀಡಾ ಪರಂಪರೆ ಮತ್ತು ಶೈಕ್ಷಣಿಕ ಸಾಧನೆ ಎರಡರ ಸಮನ್ವಯಕ್ಕೆ ಸಾಕ್ಷಿಯಾಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.