
ಮುಂಬೈ(ಅ.26): ಭಾರತ ಮಹಿಳಾ ಕ್ರಿಕೆಟ್ ತಂಡದ ನೂತನ ಪ್ರಧಾನ ಕೋಚ್ ಆಗಿ ಮಾಜಿ ಕ್ರಿಕೆಟಿಗ ಅಮೋಲ್ ಮಜುಂದಾರ್ ನೇಮಕಗೊಂಡಿದ್ದಾರೆ. ಸುಲಕ್ಷಣ ನಾಯ್ಕ್, ಅಶೋಕ್ ಮಲ್ಹೋತ್ರಾ ಹಾಗೂ ಜತಿನ್ ಪರಂಜಪೆ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಹಲವು ತಿಂಗಳುಗಳ ಹಿಂದೆಯೇ ಅಮೋಲ್ರ ಸಂದರ್ಶನ ನಡೆಸಿ ಅವರ ಹೆಸರನ್ನು ಬಿಸಿಸಿಐಗೆ ಶಿಫಾರಸು ಮಾಡಿತ್ತು. ನೇಮಕ ಮಾಡುವುದನ್ನು ವಿಳಂಬ ಮಾಡಿದ್ದ ಬಿಸಿಸಿಐ, ಬುಧವಾರ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಕಳೆದ ಫೆಬ್ರವರಿಯಲ್ಲಿ ನಡೆದ ಟಿ20 ವಿಶ್ವಕಪ್ಗೂ ಮೊದಲೇ ರಮೇಶ್ ಪೊವಾರ್ರನ್ನು ಕೋಚ್ ಹುದ್ದೆಯಿಂದ ಕೆಳಗಿಳಿಸಿ, ಹೃಷಿಕೇಶ್ ಕಾನಿಟ್ಕರ್ರನ್ನು ಹಂಗಾಮಿ ಕೋಚ್ ಆಗಿ ನೇಮಿಸಲಾಗಿತ್ತು. ಅಮೋಲ್ 171 ಪ್ರ.ದರ್ಜೆ ಪಂದ್ಯಗಳಲ್ಲಿ 11000ಕ್ಕೂ ಹೆಚ್ಚು ರನ್ ಕಲೆಹಾಕಿದ್ದು, ಮುಂಬೈ ತಂಡದೊಂದಿಗೆ ಹಲವು ಬಾರಿ ರಣಜಿ ಟ್ರೋಫಿ ಗೆದ್ದಿದ್ದಾರೆ.
ಮುಷ್ತಾಕ್ ಅಲಿ ಟಿ20: ರಾಜ್ಯಕ್ಕೆ ಮತ್ತೆ ಸೋಲು
ಡೆಹ್ರಾಡೂನ್: 2023-24ರ ಮುಷ್ತಾಕ್ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಕರ್ನಾಟಕ 2ನೇ ಸೋಲು ಅನುಭವಿಸಿದ್ದು, ನಾಕೌಟ್ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದೆ. ಬುಧವಾರ ರಾಜ್ಯಕ್ಕೆ ಉತ್ತರ ಪ್ರದೇಶ ವಿರುದ್ಧ 40 ರನ್ ಸೋಲು ಎದುರಾಯಿತು. ಇದರೊಂದಿಗೆ ‘ಇ’ ಗುಂಪಿನಲ್ಲಿ 5 ಪಂದ್ಯಗಳೊಂದಿಗೆ 10 ಅಂಕ ಸಂಪಾದಿಸಿ 3ನೇ ಸ್ಥಾನದಲ್ಲೇ ಉಳಿದಿದೆ. ತಂಡಕ್ಕೆ ಇನ್ನೊಂದೇ ಪಂದ್ಯ ಬಾಕಿ ಇದ್ದು, ಗೆದ್ದರೂ ನಾಕೌಟ್ಗೇರುವುದು ಅನುಮಾನ.
World Cup 2023: ಆಸೀಸ್ ಪ್ರಹಾರಕ್ಕೆ ಬೆಚ್ಚಿದ ನೆದರ್ಲೆಂಡ್, ವಿಶ್ವಕಪ್ ಇತಿಹಾಸದಲ್ಲೇ ದೊಡ್ಡ ಗೆಲುವು!
ಮೊದಲು ಬ್ಯಾಟ್ ಮಾಡಿದ ಯುಪಿ 4 ವಿಕೆಟ್ಗೆ 196 ರನ್ ಗಳಿಸಿತು. ಅಭಿಷೇಕ್ ಗೋಸ್ವಾಮಿ 77, ನಿತೀಶ್ ರಾಣಾ 40 ರನ್ ಸಿಡಿಸಿದರು. ದೊಡ್ಡ ಗುರಿ ಬೆನ್ನತ್ತಿದ ರಾಜ್ಯ ತಂಡ 18.3 ಓವರಲ್ಲಿ 156ಕ್ಕೆ ಆಲೌಟಾಯಿತು.ಮಯಾಂಕ್ ಅಗರ್ವಾಲ್(59) ಏಕಾಂಗಿ ಹೋರಾಟ ವ್ಯರ್ಥವಾಯಿತು. ಭುವನೇಶ್ವರ್ ಕುಮಾರ್ 16ಕ್ಕೆ 5 ವಿಕೆಟ್ ಕಿತ್ತರು. ಕೊನೆ ಪಂದ್ಯದಲ್ಲಿ ಕರ್ನಾಟಕ ಶುಕ್ರವಾರ ತ್ರಿಪುರಾ ವಿರುದ್ಧ ಆಡಲಿದೆ.
ಏಕದಿನ ಶ್ರೇಯಾಂಕ: ಅಗ್ರಸ್ಥಾನದತ್ತ ಶುಭ್ಮನ್ ಗಿಲ್
ನವದೆಹಲಿ: ಭಾರತದ ತಾರಾ ಬ್ಯಾಟರ್ ಶುಭ್ಮನ್ ಗಿಲ್ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಮತ್ತಷ್ಟು ಹತ್ತಿರವಾಗಿದ್ದಾರೆ. ಬುಧವಾರ ಪ್ರಕಟಗೊಂಡ ನೂತನ ಶ್ರೇಯಾಂಕ ಪಟ್ಟಿಯಲ್ಲಿ 24 ವರ್ಷದ ಗಿಲ್ 823 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಪಾಕಿಸ್ತಾನದ ಬಾಬರ್ ಅಜಂ 829 ಅಂಕ ಸಂಪಾದಿಸಿ ಅಗ್ರಸ್ಥಾನದಲ್ಲಿದ್ದಾರೆ.
'ಬಾಬರ್ ಅಜಂರನ್ನು ನಾಯಕತ್ವದಿಂದ ಕೆಳಗಿಳಿಸಿ ಈತನಿಗೆ ಪಟ್ಟ ಕಟ್ಟಿ': ಪಾಕ್ ತಂಡದಲ್ಲಿ ಹೊಸ ಕಂಪನ
ಶುಭ್ಮನ್ ಗಿಲ್ ಸದ್ಯ ಬಾಬರ್ ಅಜಂ ಅವರಿಗಿಂತ ಕೇವಲ 6 ಅಂಕ ಹಿಂದಿದ್ದಾರೆ. ಇದೇ ವೇಳೆ ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ 3 ಸ್ಥಾನ ಮೇಲೇರಿ ಜಂಟಿ 5ನೇ ಸ್ಥಾನಪಡೆದಿದ್ದಾರೆ. ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ 8ನೇ ಸ್ಥಾನಕ್ಕೇರಿದ್ದಾರೆ.
ಶ್ರೀಲಂಕಾಕ್ಕೆ ಮ್ಯಾಥ್ಯೂಸ್, ಇಂಗ್ಲೆಂಡ್ ತಂಡಕ್ಕೆ ಕಾರ್ಸ್
ನವದೆಹಲಿ: ಗಾಯದಿಂದಾಗಿ ವಿಶ್ವಕಪ್ನಿಂದಲೇ ಹೊರಬಿದ್ದ ವೇಗಿ ಪತಿರನ ಬದಲು ಶ್ರೀಲಂಕಾ ತಂಡಕ್ಕೆ ಅನುಭವಿ ಆಲ್ರೌಂಡರ್ ಏಂಜೆಲೋ ಮ್ಯಾಥ್ಯೂಸ್ ಸೇರ್ಪಡೆಗೊಂಡಿದ್ದಾರೆ. ಮ್ಯಾಥ್ಯೂಸ್ರನ್ನು ದಿನಗಳ ಹಿಂದಷ್ಟೇ ಮೀಸಲು ತಂಡ ಸೇರಿಕೊಳ್ಳಲು ಬುಲಾವ್ ನೀಡಲಾಗಿತ್ತು. ಇದೇ ವೇಳೆ ಇಂಗ್ಲೆಂಡ್ ತಂಡಕ್ಕೆ ವೇಗಿ ಬ್ರೇಡನ್ ಕಾರ್ಸ್ ಸೇರ್ಪಡೆಯಾಗಿದ್ದಾರೆ. ಅವರು ವೇಗಿ ರೀಸ್ ಟಾಪ್ಲಿ ಸ್ಥಾನವನ್ನು ತುಂಬಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.