Asia Cup: ಇಂಡೋ-ಪಾಕ್ ಪಂದ್ಯದ ವೇಳೆ ಭಾರತದ ಬಾವುಟ ಹಿಡಿದ ಅಫ್ರಿದಿ ಪುತ್ರಿ; ಈ ಬಗ್ಗೆ ಮಾಜಿ ಕ್ರಿಕೆಟಿಗ ಹೇಳಿದ್ದೇನು..?

By Naveen KodaseFirst Published Sep 12, 2022, 5:27 PM IST
Highlights

ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತದ ಬಾವುಟ ಹಿಡಿದು ಮೈದಾನಕ್ಕೆ ಬಂದಿದ್ದ ಅಫ್ರಿದಿ ಪುತ್ರಿ
ತಮ್ಮ ಪುತ್ರಿ ಭಾರತದ ಬಾವುಟ ಹಿಡಿದುಕೊಂಡಿದ್ದನ್ನು ಒಪ್ಪಿಕೊಂಡ ಅಫ್ರಿದಿ
ಪಾಕ್ ಎದುರಿನ ಪಂದ್ಯದ ವೇಳೆ ಭಾರತದ ಬಾವುಟ ಹಿಡಿದಿದ್ದೇಕೆ ಎನ್ನುವ ಬಗ್ಗೆ ಸ್ಪಷ್ಟನೆ ನೀಡಿದ ಮಾಜಿ ನಾಯಕ

ದುಬೈ(ಸೆ.12): ಯುಎಇನಲ್ಲಿ ನಡೆದ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಮಣಿಸಿದ ಶ್ರೀಲಂಕಾ ಆರನೇಯ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆದರೆ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಸೂಪರ್ 4 ಹಂತದ ಪಂದ್ಯದ ವೇಳೆಯಲ್ಲಿ ಶಾಹಿದ್ ಅಫ್ರಿದಿ ಪುತ್ರಿ, ದುಬೈ ಸ್ಟೇಡಿಯಂನಲ್ಲಿ ಭಾರತದ ತ್ರಿವರ್ಣ ಧ್ವಜದ ಬಾವುಟ ಹಿಡಿದು ಕಾಣಿಸಿಕೊಂಡ ವಿಡಿಯೋ ತಡವಾಗಿ ವೈರಲ್ ಆಗಿತ್ತು. ಆದರೆ ಆ ವಿಡಿಯೋ ಕುರಿತಂತೆ ಇದೀಗ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಕೊನೆಗೂ ಮೌನ ಮುರಿದಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಸಾಂಪ್ರದಾಯಿಕ ಎದುರಾಳಿಗಳೆಂದೇ ಬಿಂಬಿತವಾಗಿರುವುದು ಎಲ್ಲರಿಗೂ ತಿಳಿದೇ ಇದೆ. ಉಭಯ ತಂಡಗಳು ಕೇವಲ ಐಸಿಸಿ ಟೂರ್ನಿ ಹಾಗೂ ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುವುದರಿಂದ ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿರುತ್ತಾರೆ. ಏಷ್ಯಾಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಎದುರು ಟೀಂ ಇಂಡಿಯಾ 5 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಹೀಗಾಗಿ ಸೂಪರ್ 4 ಹಂತದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಗೆ ದುಬೈ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ ವಹಿಸಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನ ಮಾಜಿ ನಾಯಕ ಶಾಹಿದ್ ಅಫ್ರಿದಿ ಪುತ್ರಿ ಭಾರತದ ಬಾವುಟ ಹಿಡಿದು ಕೈ ಬೀಸಿದ್ದು ಕೆಲ ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗಿತ್ತು.

ಈ ಕುರಿತಂತೆ ಪಾಕಿಸ್ತಾನ ಮಾಧ್ಯಮಗಳಲ್ಲಿ ಕೂಡಾ ಈ ಬಗ್ಗೆ ಚರ್ಚೆಗಳು ಆರಂಭವಾಗಿದ್ದು. ಹೀಗಾಗಿ ಸಮಾ ಮಾಧ್ಯಮದಲ್ಲಿ ಭಾಗವಹಿಸಿದ ಶಾಹೀದ್ ಅಫ್ರಿದಿ, ತಮ್ಮ ಮಗಳು ಭಾರತದ ಬಾವುಟ ಹಿಡಿದುಕೊಂಡಿದ್ದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

''ದುಬೈ ಮೈದಾನದಲ್ಲಿ ಹೆಚ್ಚೆಂದರೇ ಪಾಕಿಸ್ತಾನದ ಅಭಿಮಾನಿಗಳು ಕೇವಲ 10% ಇರಬಹುದು. ಇನ್ನುಳಿದ 90% ಮಂದಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿರುತ್ತಾರೆ ಎಂದು ನನ್ನ ಪತ್ನಿ ಹೇಳಿದರು. ಇನ್ನು ಅಲ್ಲಿ ಪಾಕಿಸ್ತಾನದ ಬಾವುಟಗಳು ಸಿಗಲಿಲ್ಲ, ಹೀಗಾಗಿ ನನ್ನ ಕಿರಿಯ ಮಗಳು ಭಾರತದ ಬಾವುಟ ಹಿಡಿದು ಪಂದ್ಯ ವೀಕ್ಷಿಸಿದಳು. ನಾನೂ ಕೂಡಾ ಈ ವಿಡಿಯೋವನ್ನು ನೋಡಿದೆ. ಆದರೆ ಇದು ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ಬಗ್ಗೆ ನನಗ್ಯಾವ ಮಾಹಿತಿಯು ಇಲ್ಲ ಎಂದು ಶಾಹಿದ್ ಅಫ್ರಿದಿ ಹೇಳಿದ್ದಾರೆ.

'ಭಾರತೀಯರು ಖುಷಿ ಆಗಿರಬಹುದು' ಪಾಕ್‌ ಸೋಲಿನ ಬಳಿಕ ಪಿಸಿಬಿ ಚೇರ್ಮನ್‌ ರಮೀಜ್‌ ರಾಜಾ ಕಿಡಿ!

ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಸೂಪರ್ 4 ಹಂತದ ಪಂದ್ಯದಲ್ಲಿ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು ರೋಚಕ ಗೆಲುವು ಸಾಧಿಸಿತ್ತು. ಇದಾದ ಬಳಿಕ ಆಫ್ಘಾನಿಸ್ತಾನ ವಿರುದ್ದವೂ ರೋಚಕ ಜಯ ಸಾಧಿಸುವ ಮೂಲಕ ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು.

ಫೈನಲ್‌ನಲ್ಲಿ ಮುಗ್ಗರಿಸಿದ ಪಾಕಿಸ್ತಾನ:

ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡವು ಆರಂಭಿಕ ಆಘಾತದ ನಡುವೆಯೂ ಭನುಕಾ ರಾಜಪಕ್ಸಾ ಹಾಗು ವನಿಂದು ಹಸರಂಗ ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ ಕಳೆದುಕೊಂಡು 170 ರನ್ ಬಾರಿಸಿತ್ತು.

ಇನ್ನು ಸವಾಲಿನ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಆರಂಭದಲ್ಲೇ ಬಾಬರ್ ಅಜಂ ಹಾಗೂ ಫಖರ್ ಜಮಾನ್ ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಮೊಹಮ್ಮದ್ ರಿಜ್ವಾನ್(55) ಹಾಗೂ ಇಫ್ತಿಕರ್ ಅಹಮ್ಮದ್(32) ಜೋಡಿ 71 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತಾದರೂ, ವನಿಂದು ಹಸರಂಗ ಅವರ ಬೌಲಿಂಗ್‌ನ ಒಂದೇ ಓವರ್‌ನಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಳ್ಳುವ ಮೂಲಕ ನಾಟಕೀಯ ಕುಸಿತ ಕಂಡಿತು. ಪರಿಣಾಮ ಪಾಕಿಸ್ತಾನ ತಂಡವು 147 ರನ್‌ ಗಳಿಸಿ ಆಲೌಟ್ ಆಗುವ ಮೂಲಕ ಮೂರನೇ ಬಾರಿಗೆ ಏಷ್ಯಾಕಪ್ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತು.

click me!