ವಿರುಷ್ಕಾ ಜೋಡಿಯನ್ನು ಭೇಟಿಯಾದ ಅನುಪಮ್ ಖೇರ್..! ಫೋಟೋ ವೈರಲ್

By Naveen KodaseFirst Published Nov 17, 2022, 3:05 PM IST
Highlights

ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಅವರನ್ನು ಭೇಟಿಯಾದ ಅನುಪಮ್ ಖೇರ್
ಮುಂಬೈ ಏರ್‌ಪೋರ್ಟ್‌ನಲ್ಲಿ ತಾರಾ ಜೋಡಿಯನ್ನು ಭೇಟಿಯಾದ ಖೇರ್

ಮುಂಬೈ(ನ.17): ಬಾಲಿವುಡ್‌ ಹಿರಿಯ ನಟ ಅನುಪಮ್ ಖೇರ್, ಇಲ್ಲಿನ ಮುಂಬೈ ಏರ್‌ಪೋರ್ಟ್‌ನಲ್ಲಿ 'ಜಬ್ ತಕ್ ಹೇ ಜಾನ್' ಖ್ಯಾತಿಯ ಸಹ ನಟಿ ಅನುಷ್ಕಾ ಶರ್ಮಾ ಹಾಗೂ ಅವರ ಪತಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಅಚಾನಕ್ ಆಗಿ ಭೇಟಿಯಾಗಿದ್ದಾರೆ. ವಿರುಷ್ಕಾ ಜೋಡಿಯನ್ನು ಭೇಟಿಯಾಗಿದ್ದಕ್ಕೆ ಅನುಪಮ್ ಖೇರ್, ಸಾಮಾಜಿಕ ಜಾಲತಾಣಗಳ ಮೂಲಕವೇ ಸಂತಸ ವ್ಯಕ್ತಪಡಿಸಿದ್ದಾರೆ. 

ಬುಧವಾರ, ಅನುಪಮ್ ಖೇರ್, ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ತಾವು ಹಾಗೂ ತಮ್ಮ ಜತೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜತೆಗಿರುವ ಫೋಟೋವನ್ನು ಹಂಚಿಕೊಂಡಿದ್ದು, " ಏರ್‌ಪೋರ್ಟ್‌ ಲಾಂಜ್‌ನಲ್ಲಿಂದು ನಾನು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರನ್ನು ಭೇಟಿ ಮಾಡಿದ್ದಕ್ಕೆ ತುಂಬಾ ಸಂತೋಷವಾಯಿತು. ಅವರ ಆಧರಾತಿಥ್ಯವು ಅತ್ಯಾದ್ಭುತವಾಗಿತ್ತು. ಇಬ್ಬರಿಗೂ ಶುಭವಾಗಲಿ" ಎಂದು ಬರೆದುಕೊಂಡಿದ್ದಾರೆ.

 
 
 
 
 
 
 
 
 
 
 
 
 
 
 

A post shared by Anupam Kher (@anupampkher)

ಅನುಪಮ್ ಖೇರ್ ಹಂಚಿಕೊಂಡ ಫೋಟೋವನ್ನು ವಿರಾಟ್ ಕೊಹ್ಲಿ ಸೆಲ್ಫಿ ತೆಗೆದುಕೊಂಡಿರುವುದಾಗಿದೆ. ಮೂವರು ಬಿಳಿ ಶರ್ಟ್‌ ತೊಟ್ಟು ನಗುನಗುತ್ತಾ ಫೋಟೋಗೆ ಫೋಸ್ ನೀಡಿದ್ದಾರೆ. ಈ ಫೋಟೋವು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

2012ರಲ್ಲಿ ತೆರೆಕಂಡ 'ಜಬ್ ತಕ್ ಹೈ ಜಾನ್' ಚಿತ್ರದಲ್ಲಿ ಅನುಪಮ್ ಖೇರ್ ಹಾಗೂ ಅನುಷ್ಕಾ ಶರ್ಮಾ ಒಟ್ಟಾಗಿ ನಟಿಸಿದ್ದರು. ಇದಕ್ಕೂ ಮುನ್ನ ಇವರಿಬ್ಬರು 2010ರಲ್ಲಿ ತೆರೆ ಕಂಡ ಬದ್ಮಾಶ್ ಕಂಪನಿ ಸಿನಿಮಾದಲ್ಲಿಯೂ ಇವರಿಬ್ಬರು ತಮ್ಮ ನಟನಾ ಪ್ರತಿಭೆ ಅನಾವರಣ ಮಾಡಿದ್ದರು. ಯಶ್ ಛೋಪ್ರಾ ನಿರ್ದೇಶನದ ಜಬ್ ತಕ್ ಹೈ ಜಾನ್ ಚಿತ್ರದಲ್ಲಿ ಬಾಲಿವುಡ್ ತಾರೆ ಶಾರುಕ್ ಖಾನ್ ಹಾಗೂ ಕತ್ರಿನಾ ಕೈಫ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಪರ್ವೀತ್ ಸೇಥಿ ನಿರ್ದೇಶನದ ಬದ್ಮಾಶ್ ಕಂಪನಿಯಲ್ಲಿ ಶಾಹೀದ್ ಕಪೂರ್ ಹಾಗೂ ಅನಿಷ್ಕಾ ಶರ್ಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Ind vs NZ 2024ರ ಟಿ20 ವಿಶ್ವಕಪ್ ಟೂರ್ನಿಗೆ ಸಿದ್ದತೆ ಶುರು: ಹಾರ್ದಿಕ್ ಪಾಂಡ್ಯ

ಅನುಪಮ್ ಖೇರ್, ಇತ್ತೀಚೆಗಷ್ಟೇ ತೆರೆ ಕಂಡ 'ದ ಕಾಶ್ಮೀರ್ ಫೈಲ್ಸ್' ಸಿನಿಮಾದಲ್ಲಿ ಮನೋಜ್ಞ ಅಭಿನಯದ ಮೂಲಕ ಗಮನ ಸೆಳೆದಿದ್ದರು. ಇನ್ನೊಂದೆಡೆ ಅನುಷ್ಕಾ ಶರ್ಮಾ, ಭಾರತ ಮಹಿಳಾ ಕ್ರಿಕೆಟ್ ತಂಡದ ದಿಗ್ಗಜ ಆಟಗಾರ್ತಿ ಜೂಲನ್ ಗೋಸ್ವಾಮಿ ಜೀವನಾಧಾರಿತ ಚಿತ್ರ 'ಚಕ್ಡಾ ಎಕ್ಸ್‌ಪ್ರೆಸ್‌'ನಲ್ಲಿ ಅಭಿನಯಿಸುತ್ತಿದ್ದಾರೆ.

ಇನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕೆಲದಿನಗಳ ಹಿಂದಷ್ಟೇ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ತಮ್ಮ ಅತ್ಯದ್ಭುತ ಬ್ಯಾಟಿಂಗ್ ಮೂಲಕ ವಿರಾಟ್ ಕೊಹ್ಲಿ ಟೀಂ ಇಂಡಿಯಾಗೆ ಆಸರೆಯಾಗಿದ್ದರು. ಹೀಗಿದ್ದೂ ಟೀಂ ಇಂಡಿಯಾ, ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ದ 10 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸುವ ಮೂಲಕ ತನ್ನ ಅಭಿಯಾನ ಮುಗಿಸಿತ್ತು. ಸದ್ಯ ಟೀಂ ಇಂಡಿಯಾ, ನ್ಯೂಜಿಲೆಂಡ್ ಪ್ರವಾಸದಲ್ಲಿದ್ದು, ಸೀಮಿತ ಓವರ್‌ಗಳ ಸರಣಿಗೆ ಸಜ್ಜಾಗಿದೆ. ಆದರೆ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಕ್ರಿಕೆಟಿಗರು ಟಿ20 ವಿಶ್ವಕಪ್ ಟೂರ್ನಿಯ ಬಳಿಕ ವಿಶ್ರಾಂತಿ ಪಡೆಯುವ ಉದ್ದೇಶದಿಂದ ತವರಿಗೆ ವಾಪಾಸ್ಸಾಗಿದ್ದು, ಕಿವೀಸ್ ಎದುರಿನ ಸರಣಿಯಿಂದ ಹೊರಗುಳಿದಿದ್ದಾರೆ.

click me!