ಪಾಕ್‌ಗೆ ಮತ್ತೆ ಮಣ್ಣು ಮುಕ್ಕಿಸಿದ ಭಾರತ; ಪಠಾಣ್ ವ್ಯಂಗ್ಯದ ಟ್ವೀಟ್ ಭಾರೀ ವೈರಲ್

Published : Sep 06, 2026, 04:12 PM IST
irfan pathan

ಸಾರಾಂಶ

ಮಹಿಳಾ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದಲ್ಲಿ, ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಮಣಿಸಿದೆ. ಭಾರತೀಯ ಬೌಲರ್‌ಗಳ ಮಾರಕ ದಾಳಿಗೆ ಪಾಕಿಸ್ತಾನ ಕೇವಲ 55 ರನ್‌ಗಳಿಗೆ ಆಲೌಟ್ ಆಯಿತು. ಈ ಭರ್ಜರಿ ಗೆಲುವಿನೊಂದಿಗೆ ಭಾರತವು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಪಾರುಪತ್ಯ ಮುಂದುವರಿದಿದೆ. ಭಾನುವಾರ ನಡೆದ ಮಹಿಳಾ ಏಷ್ಯಾ ಕಪ್ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಟೀಮ್ ಇಂಡಿಯಾ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಧೂಳೀಪಟ ಮಾಡಿದೆ.

ಕೇವಲ 55 ರನ್‌ಗಳಿಗೆ ಪಾಕ್ ಆಲೌಟ್!

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನ ತಂಡದ ನಿರ್ಧಾರ ಅಕ್ಷರಶಃ ಮುಳುವಾಯಿತು. ಭಾರತೀಯ ಸ್ಪಿನ್ನರ್‌ಗಳ ಸ್ಪಿನ್ ಜಾಲಕ್ಕೆ ಸಿಲುಕಿದ ಪಾಕಿಸ್ತಾನದ ಬ್ಯಾಟಿಂಗ್ ಲೈನಪ್ ಪೆವಿಲಿಯನ್‌ಗೆ ಪರೇಡ್ ನಡೆಸಿತು. ಭಾರತದ ಪರ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಶ್ರೀ ಚರಣಿ ಮತ್ತು ಪ್ರೇಮಾ ರಾವತ್ ತಲಾ 3 ವಿಕೆಟ್ ಕಬಳಿಸಿ ಪಾಕ್ ತಂಡವನ್ನು ಕೇವಲ 55 ರನ್‌ಗಳಿಗೆ ಕಟ್ಟಿಹಾಕಿದರು.

ಸುಲಭ ಗುರಿ ಬೆನ್ನಟ್ಟಿದ ಭಾರತ

ಅಲ್ಪ ಮೊತ್ತದ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಕೇವಲ 8.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಜಯದ ಸಂಭ್ರಮ ಆಚರಿಸಿತು. ನಾಯಕಿ ಹರ್ಮನ್‌ಪ್ರೀತ್ ಕೌರ್ (18*) ಮತ್ತು ದೀಪ್ತಿ ಶರ್ಮಾ (12*) ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಗೆಲುವಿನೊಂದಿಗೆ ಭಾರತ ಗುಂಪು ಹಂತದ ಮೂರೂ ಪಂದ್ಯಗಳನ್ನು ಗೆದ್ದು, ಒಟ್ಟು 6 ಅಂಕಗಳೊಂದಿಗೆ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಪಠಾಣ್ ಸಂಡೇ ಕಾಲೆಳೆತ!

ಭಾರತದ ಈ ಅದ್ಭುತ ಗೆಲುವಿನ ಬೆನ್ನಲ್ಲೇ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಸಾಮಾಜಿಕ ಜಾಲತಾಣ 'X' ನಲ್ಲಿ ಪಾಕಿಸ್ತಾನದ ಕಾಲೆಳೆದಿದ್ದಾರೆ. ಆಜ್ ಸಂಡೇ ಹೈ ಕ್ಯಾ? (ಇಂದು ಭಾನುವಾರವೇ?) ಎಂದು ಪೋಸ್ಟ್ ಮಾಡುವ ಮೂಲಕ ವ್ಯಂಗ್ಯವಾಡಿದ್ದಾರೆ.

2025ರ ಪುರುಷರ ಏಷ್ಯಾ ಕಪ್ ವೇಳೆ ಸತತ ಮೂರು ಭಾನುವಾರಗಳಂದು ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಆಗ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿದಾಗ ಪಠಾಣ್, ಸಂಡೇ ಕೈಸಾ ರಹಾ ಪಡೋಸಿಯೋ? (ನೆರೆಯವರೇ, ನಿಮ್ಮ ಭಾನುವಾರ ಹೇಗಿತ್ತು?) ಎಂದು ಕೇಳಿದ್ದರು. ಈಗ ಅದೇ ಮಾದರಿಯಲ್ಲಿ ಮಹಿಳಾ ತಂಡದ ಗೆಲುವನ್ನು ಅವರು ಸಂಭ್ರಮಿಸಿದ್ದಾರೆ.

ನಾಯಕಿ ಹರ್ಮನ್‌ಪ್ರೀತ್ ಹರ್ಷ

ಪಂದ್ಯದ ಬಳಿಕ ಮಾತನಾಡಿದ ನಾಯಕಿ ಹರ್ಮನ್‌ಪ್ರೀತ್ ಕೌರ್, ಇದು ನಮಗೆ ಬಹಳ ಪ್ರಮುಖವಾದ ಪಂದ್ಯವಾಗಿತ್ತು. ತಂಡದ ಪ್ರದರ್ಶನದಿಂದ ನನಗೆ ತುಂಬಾ ಸಂತೋಷವಾಗಿದೆ. ನಮ್ಮ ಬೌಲರ್‌ಗಳು ಪಿಚ್ ಅನ್ನು ಸರಿಯಾಗಿ ಅರ್ಥಮಾಡಿಕೊಂಡು ಯೋಜನೆಯಂತೆ ಬೌಲಿಂಗ್ ಮಾಡಿದರು. ಮೈದಾನದಲ್ಲಿ ನಾವು ತೋರಿದ ಶಿಸ್ತು ಗೆಲುವಿಗೆ ಕಾರಣವಾಯಿತು ಎಂದು ತಿಳಿಸಿದರು.

ಭಾರತದ ವಿರುದ್ಧ ಸೋತ ಪಾಕಿಸ್ತಾನ ತಂಡಕ್ಕೆ ಈಗ ಸೆಮಿಫೈನಲ್ ಪ್ರವೇಶಿಸಲು ಹಾಂಕಾಂಗ್ ವಿರುದ್ಧದ ಕೊನೆಯ ಪಂದ್ಯ ಅತ್ಯಂತ ನಿರ್ಣಾಯಕವಾಗಿದೆ. ಈ ಪಂದ್ಯದಲ್ಲಿ ಪಾಕ್ ಕಡ್ಡಾಯವಾಗಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Vaibhav Sooryavanshi: ಆನ್‌ಫೀಲ್ಡ್‌ನಲ್ಲಿಯೇ ವೈಭವ್ ಸೂರ್ಯವಂಶಿ ಮೇಲೆ ಕೈ ಮಾಡಿದ ತಿಲಕ್ ವರ್ಮಾ, ವಿಡಿಯೋ ನೋಡಿ!
Duleep Trophy Final: ಸ್ಪೋಟಕ ಆರಂಭ ಕೊಟ್ಟ ವೈಭವ್ ಸೂರ್ಯವಂಶಿಗೆ ಭಾರೀ ನಿರಾಸೆ, ಈಶ್ವರನ್ ಅರ್ಧ ಶತಕ