ಕಪಿಲ್‌ ದೇವ್‌ಗೆ ಸಿಗುವ ಗೌರವ, ಕ್ಯಾಪ್ಟನ್ ಕೂಲ್ ಧೋನಿಗೇಕಿಲ್ಲ..?

By Suvarna NewsFirst Published Jun 28, 2023, 4:07 PM IST
Highlights

1983ರ ಭಾರತ ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿಗೆ 40 ವರ್ಷ ಭರ್ತಿ
1983ರ ವಿಶ್ವಕಪ್ ಗೆಲುವಿನ ಶ್ರೇಯ ಕಪಿಲ್ ದೇವ್ ಮಡಿಲಿಗೆ
ಕಪಿಲ್​ಗೆ ಕೊಡ್ತಾರೆ ಕ್ರೆಡಿಟ್..! ಧೋನಿಗೇಕೆ ಕೊಡ್ತಿಲ್ಲ ಕ್ರೆಡಿಟ್..? 
 

ನವದೆಹಲಿ(ಜೂ.28): 1983ರ ಜೂನ್​ 25. ಟೀಂ ಇಂಡಿಯಾ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದ ದಿನ. ಈ ದಿನವನ್ನ ಭಾರತೀಯ ಕ್ರಿಕೆಟ್ ಸುವರ್ಣಾಕ್ಷರದಲ್ಲಿ ಬರೆದಿಟ್ಟಿದೆ. ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ತಂಡವನ್ನ ಸೋಲಿಸಿ, ಮೊದಲ ಸಲ ಏಕದಿನ ವಿಶ್ವಕಪ್ ಗೆದ್ದು ಸಂಭ್ರಮಿಸಿತು. ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಒನ್​ಡೇ ವರ್ಲ್ಡ್​ಕಪ್ ಎತ್ತಿ ಹಿಡಿದು ಮೊನ್ನೆಗೆ ಬರೋಬ್ಬರಿ 40 ವರ್ಷಗಳಾಗಿವೆ. ಆ ಸಂಭ್ರಮವನ್ನೂ ಮಾಜಿ ಕ್ರಿಕೆಟರ್ಸ್ ಆಚರಿಸಿದ್ರು.

2007ರ ಸೆಪ್ಟೆಂಬರ್​ 24. ಭಾರತ ತಂಡ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ದಿನ. ಈ ದಿನವೂ ಸಹ ಭಾರತೀಯ ಕ್ರಿಕೆಟ್​ಗೆ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ದಿನ. ಎಂ ಎಸ್ ಧೋನಿ (MS Dhoni) ನಾಯಕತ್ವದಲ್ಲಿ ಭಾರತ ತಂಡ ಚೊಚ್ಚಲ ಟಿ20 ವರ್ಲ್ಡ್​ಕಪ್ ಗೆದ್ದ ದಿನ. ಫೈನಲ್​ನಲ್ಲಿ ಬದ್ಧವೈರಿ ಪಾಕಿಸ್ತಾನವನ್ನ ಕೊನೆ ಓವರ್​ನಲ್ಲಿ ಸೋಲಿಸಿ, ಟಿ20 ವಿಶ್ವಕಪ್ ಎತ್ತಿ ಹಿಡಿದಿತ್ತು. ಆ ದಿನಕ್ಕೆ ಬರುವ ಸೆಪ್ಟೆಂಬರ್​ಗೆ ಬರೋಬ್ಬರಿ 15 ವರ್ಷ ತುಂಬಲಿದೆ.

ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದವರ ಬಳಿಯಿದೆ ಒಗ್ಗಟ್ಟು..!

1983ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರರೆಲ್ಲಾ ಒಗ್ಗಟ್ಟಾಗಿದ್ದಾರೆ. 83ರ ವರ್ಲ್ಡ್​ಕಪ್ ಕುರಿತ ಯಾವುದೇ ಸಮಾರಂಭ ನಡೆಯಲಿ, ಒಟ್ಟಿಗೆ ಸೇರಿ ಸಂಭ್ರಮಿಸುತ್ತಾರೆ. 2008ರಲ್ಲಿ 25 ವರ್ಷದ ಸಂಭ್ರಮವನ್ನು ಒಟ್ಟಿಗೆ ಆಚರಿಸಿದ್ದವರು, 2013ರಲ್ಲಿ 30ರ ಸಂಭ್ರಮವನ್ನೂ ಆಚರಿಸಿದ್ದರು. ಮೊನ್ನೆ 40ರ ಸಂಭ್ರಮವನಂತೆ ಅದ್ದೂರಿಯಾಗಿ ಆಚರಿಸಿದ್ರು. ಎಲ್ಲರೂ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದ ಕ್ರೆಡಿಟ್ ಅನ್ನ ಕಪಿಲ್ ದೇವ್​ಗೆ (Kapil Dev) ಕೊಟ್ಟರು. ಕಪಿಲ್​ ಇಲ್ಲದಿದ್ದರೆ ನಾವು ವರ್ಲ್ಡ್​ಕಪ್ ಗೆಲ್ಲುತ್ತಿರಲಿಲ್ಲ ಅನ್ನೋ ಹಾಗೆ ಮಾತನಾಡಿದ್ರು. ಕಪಿಲ್ ದೇವ್ ರಿಯಲ್ ಹೀರೋ. ಅವರೊಬ್ಬರ ಅದ್ಭುತ ನಾಯಕ ಎಂದು ಬಣ್ಣಿಸಿದ್ದೂ ಉಂಟು.

ಈ ದಿಗ್ಗಜ ನಾಯಕನನ್ನು ನಿಜವಾದ 'ಕ್ಯಾಪ್ಟನ್ ಕೂಲ್' ಎಂದು ಕರೆದ ಸುನಿಲ್ ಗವಾಸ್ಕರ್..!

ಚೊಚ್ಚಲ ಟಿ20 ವಿಶ್ವಕಪ್ ಗೆದ್ದವರ ಬಳಿ ಒಗ್ಗಟ್ಟೇಕಿಲ್ಲ..?

83ರ ಟೀಮ್​ನಲ್ಲಿರುವವರೆಲ್ಲಾ ಲೆಜೆಂಡ್ ಕ್ರಿಕೆಟರ್ಸ್ ಆದ್ರೂ ಕಪಿಲ್​ ದೇವ್​​ಗೆ ಗೆಲುವಿನ ಕ್ರೆಡಿಟ್ ಕೊಡ್ತಿದ್ದಾರೆ. ಆದ್ರೆ 2007ರಲ್ಲಿ ಚೊಚ್ಚಲ ವಿಶ್ವಕಪ್ ಗೆಲ್ಲಿಸಿಕೊಟ್ಟ ಎಂ ಎಸ್ ಧೋನಿಗೆ ಮಾತ್ರ ಆ ಕ್ರೆಡಿಟ್ ಸಿಗ್ತಿಲ್ಲ. ತಂಡದ ಆಟಗಾರರಾಗಿದ್ದ ಗೌತಮ್ ಗಂಭೀರ್(Gautam Gambhir), ಹರ್ಭಜನ್ ಸಿಂಗ್ (Harbhajan Singh), ಯುವರಾಜ್ ಸಿಂಗ್ (Yuvraj Singh), ವೀರೇಂದ್ರ ಸೆಹ್ವಾಗ್ (Virender Sehwag)​ ಹೀಗೆ ಎಲ್ಲರೂ ಸಮಯ ಸಿಕ್ಕಾಗಲೆಲ್ಲಾ ಧೋನಿ ವಿರುದ್ಧ ಟೀಕಾಸ್ತ್ರಗಳನ್ನ ಬಿಡ್ತಿರುತ್ತಾರೆ. ಟಿ20 ವಿಶ್ವಕಪ್ ಗೆಲ್ಲಲು ಧೋನಿ ಮಾತ್ರ ಕಾರಣರಲ್ಲ. ಉಳಿದ 10 ಮಂದಿಯೂ ಕಾರಣ ಅಂತ ಹೇಳಿದ್ದು ಇದೆ.

40 ವರ್ಷಗಳ ಹಿಂದೆ ಏಕದಿನ ವಿಶ್ವಕಪ್ ಗೆದ್ದವರೆಲ್ಲಾ ಈಗ 60 ವರ್ಷ ದಾಟಿದ್ದಾರೆ. ಆದ್ರೆ 15 ವರ್ಷಗಳ ಹಿಂದೆ ಟಿ20 ವರ್ಲ್ಡ್​ಕಪ್ ಗೆದ್ದವರು ಇನ್ನೂ 40ರ ಗಡಿಯನ್ನೂ ದಾಟಿಲ್ಲ. ಹೀಗಾಗಿ ಅವರಿಗೆ ಇನ್ನೂ ಅಹಂ ಅನ್ನೋದು ಇದೆ. ನಾನು, ನನ್ನಿಂದಲೇ ಅನ್ನೋದನ್ನೆಲ್ಲಾ ಅವರು ಬಿಟ್ಟಿಲ್ಲ. ಅದಕ್ಕಾಗಿಯೇ ಟಿ20 ವಿಶ್ವಕಪ್ ಗೆದ್ದಿರುವ ಕ್ರಿಡಿಟ್ ಅನ್ನ ಧೋನಿಗೆ ಕೊಡ್ತಿಲ್ಲ. ನಾವೆಲ್ಲರೂ ಆಡಿ ಗೆದ್ದಿದ್ದೇವೆ ಅಂತ ಹೇಳ್ತಾರೆ. ಧೋನಿ ನಾಯಕತ್ವದಲ್ಲಿ ಎರಡು ವಿಶ್ವಕಪ್ ಗೆದ್ದ ಬಳಿಕ ಭಾರತ ಮತ್ತೆ ವಿಶ್ವಕಪ್ ಗೆದ್ದಿಲ್ಲ. ಅಲ್ಲಿಗೆ ಮಹಿ ಚಾಣಾಕ್ಷ ನಾಯಕತ್ವದಿಂದಲೇ ಭಾರತ ಆ ಎರಡು ವರ್ಲ್ಡ್​ಕಪ್ ಗೆದ್ದಿದ್ದು ಅನ್ನೋದನ್ನ ಒಪ್ಪಿಕೊಳ್ಳಲೇಬೇಕು. ಆದ್ರೆ ಕ್ರೆಡಿಟ್ ಮಾತ್ರ ಕೊಡ್ತಿಲ್ಲ. ಇದೇ ಎಂಎಸ್ ಧೋನಿ ಬ್ಯಾಡ್​ಲಕ್.

click me!