ಕೊರೋನಾ ಭೀತಿ: ಸಾಮಾಜಿಕ ಅಂತರ ಗೊತ್ತೇ ಇಲ್ಲ ಇವರಿಗೆ, ತರಕಾರಿಗಾಗಿ ಮುಗಿಬಿದ್ದ ಜನತೆ!

By Kannadaprabha NewsFirst Published Mar 28, 2020, 9:11 AM IST
Highlights

ಎಪಿಎಂಸಿ ಮಾರುಕಟ್ಟೆಗೆ ತರಾಕರಿ ತರುವುದರಿಂದ ಹೆಚ್ಚಿನ ಜನಸಂದಣಿ| ಕೋವಿಡ್‌-19 ಹರಡದಂತೆ ಹಲವಾರು ಕ್ರಮ|ರೈತರು ತರಕಾರಿ ಮತ್ತಿತರ ಕೃಷಿ ಉತ್ಪನ್ನಗಳನ್ನು ಜಿಲ್ಲಾ ಎಪಿಎಂಸಿ ಪ್ರಾಂಗಣಕ್ಕೆ ತರುತ್ತಿರುವುದರಿಂದ ಇಲ್ಲಿ ವಿಪರೀತ ಜನಸಂದಣಿ|

ಬೆಳಗಾವಿ(ಮಾ.28): ಜಿಲ್ಲೆಯ ರೈತರು ತರಕಾರಿ ಸೇರಿದಂತೆ ಇತರೆ ಕೃಷಿ ಉತ್ಪನ್ನಗಳನ್ನು ಜಿಲ್ಲಾ ಎಪಿಎಂಸಿ ಮಾರುಕಟ್ಟೆಗೆ ತರುವುದರಿಂದ ಹೆಚ್ಚಿನ ಜನಸಂದಣಿ ಉಂಟಾಗುತ್ತಿದೆ. ಆದ ಕಾರಣ ರೈತರು ಆಯಾ ತಾಲೂಕಿನ ಎಪಿಎಂಸಿ ಅಥವಾ ಸ್ಥಳೀಯ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್‌.ಬಿ.ಬೊಮ್ಮನಹಳ್ಳಿ ರೈತರಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೋವಿಡ್‌-19 ಹರಡದಂತೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ ರೈತರು ತರಕಾರಿ ಮತ್ತಿತರ ಕೃಷಿ ಉತ್ಪನ್ನಗಳನ್ನು ಜಿಲ್ಲಾ ಎಪಿಎಂಸಿ ಪ್ರಾಂಗಣಕ್ಕೆ ತರುತ್ತಿರುವುದರಿಂದ ಇಲ್ಲಿ ವಿಪರೀತ ಜನಸಂದಣಿ ಉಂಟಾಗುತ್ತಿದೆ. ಆದ್ದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ರೈತರು ಜಿಲ್ಲಾ ಕೇಂದ್ರ ಸ್ಥಾನಕ್ಕೆ ಆಗಮಿಸದೇ ಆಯಾ ತಾಲೂಕಿನ ಮಾರುಕಟ್ಟೆಗೆ ತಮ್ಮ ಉತ್ಪನ್ನಗಳನ್ನು ಸಾಗಿಸಬೇಕು ಎಂದು ತಿಳಿಸಿದ್ದಾರೆ.

ಮಾರಾಟಗಾರರಿಗೆ ನಿರ್ದಿಷ್ಟ ಸ್ಥಳ ನಿಗದಿ:

ಜಿಲ್ಲಾ ಮುಖ್ಯ ಎಪಿಎಂಸಿ ಪ್ರಾಂಗಣದಲ್ಲಿ ಮಾರಾಟಗಾರರಿಗೆ ನಿರ್ದಿಷ್ಟಸ್ಥಳಗಳನ್ನು ಒದಗಿಸಲಾಗಿದೆ. ಮಾರಾಟಗಾರರು ತಮಗೆ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ವ್ಯಾಪಾರ ನಡೆಸಬೇಕು. ಇದನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಕೂಡ ನಿಯಮಾವಳಿ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದ್ದಾರೆ.

ಕೊರೋನಾ ಲಕ್ಷಣ ಇದೆ, ಚಿಕಿತ್ಸೆ ಕೊಡಿ: ಸಿಎಂಗೆ CRPF ಯೋಧನ ಮನವಿ

ಅದೇ ರೀತಿ ಸಾರ್ವಜನಿಕರು ನೇರವಾಗಿ ಎಪಿಎಂಸಿ ಪ್ರವೇಶಿಸುವುದನ್ನು ಕೂಡ ನಿಷೇಧಿಸಲಾಗಿದೆ. ಹಾಪ್‌ಕಾಮ್ಸ್ ಹಾಗೂ ವರ್ತಕರ ಸಂಘದಿಂದ ತರಕಾರಿ ಮಾರಾಟಗಾರರಿಗೆ ಗಾಡಿ ವ್ಯವಸ್ಥೆ ಮಾಡಲಾಗಿದೆ. ಎಪಿಎಂಸಿ ಪ್ರಾಂಗಣದಿಂದ ತಳ್ಳುಗಾಡಿ ಮತ್ತಿತರ ವಾಹನಗಳ ಮೂಲಕ ತಮ್ಮ ತಮ್ಮ ಬಡಾವಣೆಗೆ ಬರುವ ವ್ಯಾಪಾರಿಗಳಿಂದಲೇ ಸಾರ್ವಜನಿಕರು ತರಕಾರಿಗಳನ್ನು ಖರೀದಿಸಬೇಕು ಎಂದು ಅವರು ತಿಳಿಸಿದ್ದಾರೆ.
 

click me!