ಮನೆಯಲ್ಲಿರುವುದೇ ಕೊರೋನಾಗೆ ಮದ್ದು: ಕೊಪ್ಪಳದ ಗವಿಸಿದ್ಧೇಶ್ವರ ಶ್ರಿಗಳ ಸಂದೇಶ

By Kannadaprabha NewsFirst Published Mar 28, 2020, 7:55 AM IST
Highlights

ತನ್ನ ಬುದ್ಧಿಶಕ್ತಿಯಿಂದ ವಿಶ್ವವನ್ನೇ ಕಟ್ಟಿಹಾಕಿದ್ದ ಮನುಷ್ಯನನ್ನು ಇಂದು ಕಣ್ಣಿಗೆ ಕಾಣದ ಕೊರೋನಾ ವೈರಸ್‌ ಮನೆಯಲ್ಲೇ ಕಟ್ಟಿಹಾಕಿದೆ| ಕೊರೋನಾ ವೈರಸ್‌ಗೆ ಔಷಧಿಯೆಂದರೆ, ಎಲ್ಲರೂ ಸಹಕರಿಸಿ ಮನೆಯಲ್ಲಿಯೇ ಇದ್ದರೆ, ಕೊರೋನಾ ವೈರಸ್‌ಗೆ ಇದುವೇ ಮದ್ದು|

ಕೊಪ್ಪಳ(ಮಾ.28): ಮಹಾಮಾರಿ ಕೊರೋನಾವನ್ನು ತಡೆಗಟ್ಟಲು ಪ್ರತಿಯೊಬ್ಬರೂ ಪಣತೊಡಬೇಕಾಗಿದೆ. ಮನೆಯಲ್ಲಿದ್ದುಕೊಂಡು ಕೊರೋನಾ ತಡೆಗಟ್ಟಿಎಂದು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಮನವಿ ಮಾಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ತನ್ನ ಬುದ್ಧಿಶಕ್ತಿಯಿಂದ ವಿಶ್ವವನ್ನೇ ಕಟ್ಟಿಹಾಕಿದ್ದ ಮನುಷ್ಯನನ್ನು ಇಂದು ಕಣ್ಣಿಗೆ ಕಾಣದ ಕೊರೋನಾ ವೈರಸ್‌ ಮನೆಯಲ್ಲೇ ಕಟ್ಟಿಹಾಕಿದೆ. ಜಗತ್ತಿನಲ್ಲಿ ಇಂದು ಸುಮಾರು 5 ಲಕ್ಷ ಜನ ಸೋಂಕಿತರಿದ್ದು, 22 ಸಾವಿರ ಜನರು ಮರಣ ಹೊಂದಿದ್ದಾರೆ. ಚೀನಾ, ಅಮೆರಿಕ, ಸ್ಪೇನ್‌, ಇಟಲಿಗಳಂತಹ ಮುಂದುವರಿದ ರಾಷ್ಟ್ರಗಳಲ್ಲಿಯೇ ಇದನ್ನು ಹತೋಟಿಗೆ ತರುವುದು ದುಸ್ತರವಾಗುತ್ತಿದೆ.

ಕೊರೋನಾ ವೈರಸ್ ಭೀತಿ: ಕೇವಲ ನಾಲ್ಕೇ ನಿಮಿಷದಲ್ಲಿ ನಡೆದ ಮದುವೆ!

ಇಟಲಿಯಲ್ಲಿ ಈಗಾಗಲೇ 7000 ಸಾವಿರ ಜನರು ಮರಣ ಹೊಂದಿದ್ದಾರೆ. ಚೀನಾದಂತಹ ದೇಶಗಳಲ್ಲಿ ಜನ ಹೊರಗೆ ಬರದ ಹಾಗೆ ಮನೆಯಲ್ಲಿ ಜನರನ್ನು ಕೂಡಿ ಹಾಕಿ, ಹೊರಗೆ ಕೀಲಿ ಹಾಕುತ್ತಿರುವ ದೃಶ್ಯಗಳು ಈ ವೈರಸ್ಸಿನ ತೀವ್ರತೆ ಮತ್ತು ಭಯಾನಕತೆಯನ್ನು ತೋರಿಸುತ್ತವೆ. ಜನಸಂಖ್ಯೆ ಹೆಚ್ಚಿರುವ ಭಾರತದಲ್ಲಿ ಒಂದು ವೇಳೆ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ಕಷ್ಟದ ದಿನಗಳು ಎದುರಿಸಬೇಕಾಗುತ್ತದೆ. ಹಾಗಾಗಿ ಸಾರ್ವಜನಿಕರು ಸರ್ಕಾರ ಕೊಡುವ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು. ಜತೆಗೆ ಯಾವುದೇ ಊಹಾಪೋಹ, ವದಂತಿಗಳಿಗೆ ಕಿವಿಗೊಡಬಾರದು.

ರಾಜ್ಯದ ಮೊದಲ ಕೊರೋನಾ ಸೋಂಕಿತ ಗುಣಮುಖ!

ಅವಿರತವಾಗಿ ಶ್ರಮವಹಿಸುತ್ತಿರುವ ಪೊಲೀಸರಿಗೆ, ವೈದ್ಯರಿಗೆ, ನರ್ಸ್‌ಗಳಿಗೆ, ಪೌರಕಾರ್ಮಿಕರಿಗೆ, ಪತ್ರಕರ್ತರಿಗೆ ನಾವು ಕೇವಲ ಚಪ್ಪಾಳೆ ತಟ್ಟಿದರೆ ಗೌರವ ಸಲ್ಲಿಸಿದಂತಾಗುವುದಿಲ್ಲ. ಸಾರ್ವಜನಿಕರು ಮನೆಬಿಟ್ಟು ಹೊರಗೆ ಬರದೇ ಮನೆಯಲ್ಲಿದ್ದು ಅವರು ಕೊಡುವ ಸೂಚನೆಗಳನ್ನು ಪಾಲಿಸೋಣ. ಇದು ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ, ಇದರಲ್ಲಿ ನಿಮ್ಮ ಹಿತ, ಕುಟುಂಬದ ದೇಶದ ಹಿತವಿದೆ. ಕೊರೋನಾ ವೈರಸ್‌ಗೆ ಔಷಧಿಯೆಂದರೆ, ಎಲ್ಲರೂ ಸಹಕರಿಸಿ ಮನೆಯಲ್ಲಿಯೇ ಇದ್ದರೆ, ಕೊರೋನಾ ವೈರಸ್‌ಗೆ ಇದುವೇ ಮದ್ದು ಎಂದು ಹೇಳಿದ್ದಾರೆ.
 

click me!